ವಿಜಯನಗರ | ‘ಸಿಯೆಂಟ್ ವಿಜಯಪಥ’ ಪ್ರಾಜೆಕ್ಟ್ಗೆ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಚಾಲನೆ

ವಿಜಯನಗರ (ಹೊಸಪೇಟೆ), ಡಿ.20 : ಕೃತಕ ಬುದ್ಧಿಮತ್ತೆ (ಎಐ), ಸ್ಟೆಮ್, ರೊಬೊಟಿಕ್ಸ್, ಕೋಡಿಂಗ್ ಹಾಗೂ ಡಿಜಿಟಲ್ ನಾವೀನ್ಯತೆಯಂತಹ ಭವಿಷ್ಯೋನ್ಮುಖ ಕೌಶಲ್ಯಗಳೊಂದಿಗೆ ಸರ್ಕಾರಿ ಶಾಲೆಗಳ ವಿದ್ಯಾರ್ಥಿಗಳನ್ನು ಸಜ್ಜುಗೊಳಿಸಲು ‘ಸಿಯೆಂಟ್ ವಿಜಯಪಥ’ ಉಪಕ್ರಮ ಸಹಕಾರಿಯಾಗಲಿದೆ ಎಂದು ಕೇಂದ್ರ ಹಣಕಾಸು ಮತ್ತು ಕಾರ್ಪೊರೇಟ್ ವ್ಯವಹಾರಗಳ ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದರು.
ನಗರದ ಅಮರಾವತಿಯಲ್ಲಿರುವ ಸರ್ಕಾರಿ ಬಾಲಕಿಯರ ಪ್ರೌಢಶಾಲೆಯಲ್ಲಿ ಸಿಯೆಂಟ್ ಫೌಂಡೇಶನ್ ಹಾಗೂ ಕರ್ನಾಟಕ ಸರ್ಕಾರದ ಸಹಯೋಗದಲ್ಲಿ ‘ಸಿಯೆಂಟ್ ವಿಜಯಪಥ’ ಕೃತಕ ಬುದ್ಧಿಮತ್ತೆ ಉಪಕ್ರಮಕ್ಕೆ ಶನಿವಾರ ಚಾಲನೆ ನೀಡಿ ಅವರು ಮಾತನಾಡಿದರು.
ವಿಜಯನಗರ ಜಿಲ್ಲೆಯ ಹೊಸಪೇಟೆ ತಾಲೂಕಿನ ಐದು ಸರ್ಕಾರಿ ಶಾಲೆಗಳಲ್ಲಿ ಈ ಪ್ರಾಯೋಗಿಕ ಯೋಜನೆ ಜಾರಿಗೊಳಿಸಲಾಗಿದ್ದು, 6ರಿಂದ 10ನೇ ತರಗತಿಯ 2,000ಕ್ಕೂ ಹೆಚ್ಚು ವಿದ್ಯಾರ್ಥಿಗಳನ್ನು ಸಬಲೀಕರಣಗೊಳಿಸುವ ಗುರಿ ಹೊಂದಿದೆ. ಜೊತೆಗೆ ಸಮಗ್ರ ಸಾಮರ್ಥ್ಯ ವೃದ್ಧಿ ಕಾರ್ಯಕ್ರಮಗಳ ಮೂಲಕ 100ಕ್ಕೂ ಹೆಚ್ಚು ಶಿಕ್ಷಕರಿಗೆ ತರಬೇತಿ ನೀಡಲಾಗುತ್ತದೆ ಎಂದು ಹೇಳಿದರು.
ಈ ಯೋಜನೆಯಡಿ ಐದು ಸಂಪೂರ್ಣ ಸುಸಜ್ಜಿತ ಎಐ–ಸ್ಟೆಮ್ ಪ್ರಯೋಗಾಲಯಗಳನ್ನು ಸ್ಥಾಪಿಸಲಾಗುತ್ತಿದ್ದು, ಇದರಿಂದ ಸುಮಾರು 6,000 ಮನೆಗಳಿಗೆ ಸಕಾರಾತ್ಮಕ ಪರಿಣಾಮ ಬೀರುವ ನಿರೀಕ್ಷೆಯಿದೆ. ಪ್ರತಿ ಶಾಲೆಯಲ್ಲೂ ಕಂಪ್ಯೂಟರ್ಗಳು, ಐಒಟಿ ಸಕ್ರಿಯಗೊಳಿಸಿದ ಸಾಧನಗಳು, ಸ್ಟೆಮ್ ಹಾಗೂ ರೊಬೊಟಿಕ್ಸ್ ಕಿಟ್ಗಳು ಮತ್ತು ಬ್ರಾಡ್ಬ್ಯಾಂಡ್ ಸಂಪರ್ಕ ಹೊಂದಿದ ಸಂಪೂರ್ಣ ಕ್ರಿಯಾತ್ಮಕ ಎಐ ಲ್ಯಾಬ್ ಸ್ಥಾಪಿಸಲಾಗುತ್ತದೆ. ದೀರ್ಘಕಾಲೀನ ಪರಿಣಾಮ ಹಾಗೂ ಸುಸ್ಥಿರತೆಯನ್ನು ಖಚಿತಪಡಿಸಿಕೊಳ್ಳಲು 200ಕ್ಕೂ ಹೆಚ್ಚು ಶಿಕ್ಷಕರಿಗೆ ರಚನಾತ್ಮಕ ತರಬೇತಿ ನೀಡಲಾಗುತ್ತದೆ ಎಂದರು.
ಎನ್ಇಪಿ–2020, ಡಿಜಿಟಲ್ ಇಂಡಿಯಾ ಹಾಗೂ ವಿಕಸಿತ ಭಾರತ್–2047 ಗುರಿಗಳೊಂದಿಗೆ ಹೊಂದಾಣಿಕೆಯಾಗಿರುವ ಸಿಯೆಂಟ್ ಎಐ ಲ್ಯಾಬ್ಸ್ ಯೋಜನೆ, ಗ್ರಾಮೀಣ ವಿದ್ಯಾರ್ಥಿಗಳಲ್ಲಿ ಡಿಜಿಟಲ್ ಸನ್ನದ್ಧತೆಯನ್ನು ಬಲಪಡಿಸುವುದು ಹಾಗೂ ಹಿಂದುಳಿದ ಸಮುದಾಯಗಳಲ್ಲಿ ತಂತ್ರಜ್ಞಾನದ ಲಭ್ಯತೆಯ ಅಂತರವನ್ನು ಕಡಿಮೆ ಮಾಡುವ ಗುರಿಯನ್ನು ಹೊಂದಿದೆ ಎಂದು ಹೇಳಿದರು.
ಸಿಯೆಂಟ್ ಲಿಮಿಟೆಡ್ ಸಂಸ್ಥಾಪಕ ಅಧ್ಯಕ್ಷ ಡಾ. ಬಿ.ವಿ.ಆರ್. ಮೋಹನ್ ರೆಡ್ಡಿ ಮಾತನಾಡಿ, ತಂತ್ರಜ್ಞಾನ ಚಾಲಿತ ಶಿಕ್ಷಣವೇ ಸಮಾನ ಮತ್ತು ಭವಿಷ್ಯಕ್ಕೆ ಸಿದ್ಧವಾದ ಭಾರತದ ಅಡಿಪಾಯವಾಗಿದೆ ಎಂದು ಹೇಳಿದರು.
ಕಾರ್ಯಕ್ರಮದ ನಂತರ ಸಚಿವೆ ನಿರ್ಮಲಾ ಸೀತಾರಾಮನ್ ಅವರು ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿದರು.
ಈ ಸಂದರ್ಭದಲ್ಲಿ ಶಾಸಕ ಎಚ್.ಆರ್.ಗವಿಯಪ್ಪ, ಜಿಲ್ಲಾಧಿಕಾರಿ ಕವಿತಾ ಎಸ್.ಮನ್ನಿಕೇರಿ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ನೋಂಗ್ಜಾಯ್ ಮುಹಮ್ಮದ್ ಅಕ್ರಮ್ ಅಲಿ ಷಾ, ಅಪರ ಜಿಲ್ಲಾಧಿಕಾರಿ ಇ.ಬಾಲಕೃಷ್ಣಪ್ಪ, ಸಹಾಯಕ ಆಯುಕ್ತ ಪಿ.ವಿವೇಕಾನಂದ, ಶಾಲಾ ಶಿಕ್ಷಣ ಇಲಾಖೆ ಉಪನಿರ್ದೇಶಕ ವೆಂಕಟೇಶ್ ರಾಮಚಂದ್ರಪ್ಪ, ಪಿಯು ಶಿಕ್ಷಣ ಇಲಾಖೆ ಉಪನಿರ್ದೇಶಕ ನಾಗರಾಜ ಹವಾಲ್ದಾರ್, ಬಿಇಒ ಶೇಖರಪ್ಪ ಹೊರಪೇಟೆ ಸೇರಿದಂತೆ ಇತರರು ಉಪಸ್ಥಿತರಿದ್ದರು.







