ವಿಜಯಪುರ | ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷನಿಗೆ ಗುಂಡಿಕ್ಕಿ ಹತ್ಯೆ : ನಾಲ್ವರ ಬಂಧನ

ವಿಜಯಪುರ, ಸೆ.3: ಜಿಲ್ಲೆಯ ಭೀಮಾತೀರದ ಚಡಚಣ ತಾಲೂಕಿನ ದೇವರ ನಿಂಬರಗಿ ಗ್ರಾಮ ಪಂಚಾಯತ್ನ ಮಾಜಿ ಅಧ್ಯಕ್ಷರನ್ನು ಗುಂಡಿಕ್ಕಿ ಹತ್ಯೆ ಮಾಡಿರುವ ಘಟನೆ ವರದಿಯಾಗಿದೆ.
ಮೃತರನ್ನು ದೇವರನಿಂಬರಗಿ ಅಧ್ಯಕ್ಷ ಭೀಮನಗೌಡ ಬಿರಾದಾರ ಎಂದು ಗುರುತಿಸಲಾಗಿದೆ.
ಚಡಚಣ ತಾಲೂಕಿನ ದೇವರ ನಿಂಬರಗಿ ಗ್ರಾಮದ ಗ್ರಾಮ ಪಂಚಾಯತ್ ಕಾರ್ಯಾಲಯದ ಬಳಿ ಹೆರ್ ಕಟಿಂಗ್ ಮಾಡಿಕೊಳ್ಳಲು ಬಂದಿದ್ದ ಭೀಮನಗೌಡ ಬಿರಾದಾರ ಅವರ ಕಣ್ಣಿಗೆ ಖಾರದ ಪುಡಿ ಎರಚಿ ದುಷ್ಕರ್ಮಿಗಳು ಐದು ಸುತ್ತು ಗುಂಡು ಹಾರಿಸಿ, ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿದ್ದಾರೆ ಎನ್ನಲಾಗಿದೆ.
ಬಳಿಕ ಅವರನ್ನು ನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಿದರೂ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ. ಈ ಸಂಬಂಧ ಚಡಚಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಕಳೆದ ಕೆಲವು ದಿನಗಳ ಹಿಂದಷ್ಟೇ ಭೀಮಾತೀರದ ಭಾಗಪ್ಪ ಹರಿಜನ ಎಂಬಾತನ ಹತ್ಯೆ ನಡೆದಿತ್ತು. ಇದರ ಬೆನ್ನಲ್ಲೇ ಮತ್ತೆ ಭೀಮಾತೀರದಲ್ಲಿ ಗುಂಡಿನ ಸದ್ದು ಕೇಳಿ ಬಂದಿದೆ.
ಆರೋಪಿಗಳ ಬಂಧನ :
ಪ್ರಕರಣಕ್ಕೆ ಸಂಬಂಧಿಸಿದಂತೆ 24 ಗಂಟೆಯೊಳಗಾಗಿ ನಾಲ್ವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಬಂಧಿತರನ್ನು ರಝೀಯುಲ್ಲಾ ಮಕಾನದಾರ, ವಸೀಮ್ ಮನಿಯಾರ, ಫಿರೋಝ್ ಶೇಕ್, ಮೌಲಾಲಿ ಲಾಡಲೇಸಾಬ್ ಎಂದು ಗುರುತಿಸಲಾಗಿದೆ. ಕೊಲೆಗೆ ಹಣಕಾಸು ವಿಷಯ ಹಾಗೂ ಆಶ್ರಯ ಮನೆ ಹಂಚಿಕೆಗೆ ಸಂಬಂಧಿಸಿದ ವಿವಾದವೇ ಕಾರಣ ಎಂಬುದು ವಿಚಾರಣೆಯಲ್ಲಿ ತಿಳಿದು ಬಂದಿದೆ. ಈ ಬಗ್ಗೆ ತನಿಖೆ ಪ್ರಗತಿ ಯಲ್ಲಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲಕ್ಷ್ಮಣ ನಿಂಬರಗಿ ಮಾಹಿತಿ ನೀಡಿದ್ದಾರೆ.
ಘಟನೆ ಹಿನ್ನೆಲೆ?:
ಘಟನೆಗೆ ಸಂಬಂಧಿಸಿದಂತೆ ಕೊಲೆಯಾದ ಭೀಮನಗೌಡ ಅವರ ಪತ್ನಿ ಪೊಲೀಸ್ ಠಾಣೆಗೆ ನೀಡಿದ ದೂರು ಆಧರಿಸಿ ತನಿಖೆ ನಡೆಸಿದಾಗ ಹಳೆಯ ವೈಷಮ್ಯವೇ ಕಾರಣವೆಂದು ತಿಳಿದು ಬಂದಿದೆ. ದೇವರನಿಂಬರಗಿ ಗ್ರಾಮದಲ್ಲಿ ಝಾಕಿರ್ ಮನಿಯಾರ ಮತ್ತು ಪಿಡಿಒ ರಾಠೋಡ ಅವರ ನಡುವೆ ಸರಕಾರಿ ಕೆಲಸದ ವಿಷಯವಾಗಿ ಜಗಳ ನಡೆದಿತ್ತು. ಈ ವಿಷಯವಾಗಿ ರಾಠೋಡ ಅವರು ಜಾತಿನಿಂದನೆ ಕೇಸು ದಾಖಲಿಸಿದ ಪರಿಣಾಮ ಜಾಕೀರ್ ಮನಿಯಾರ ಕಾರಾಗೃಹಕ್ಕೆ ಹೋಗುವಂತಾಗಿತ್ತು. ಝಾಕೀರ್ ತಮ್ಮಂದಿರು ಈ ಎಲ್ಲ ಘಟನೆಗೆ ಭೀಮನಗೌಡ ಕಾರಣ ಎಂದು ದ್ವೇಷದಿಂದ ಕೊಲೆ ಮಾಡಿದ್ದಾರೆ ಎಂದು ದೂರಿನಲ್ಲಿ ವಿವರವಾಗಿ ಹೇಳಿದ್ದಾರೆ.







