ಯತ್ನಾಳ್ ಅವರಿಗೆ ಸ್ವಾಭಿಮಾನ, ಮಾನ ಮರ್ಯಾದೆ ಇದ್ದರೆ, ಬಿಜೆಪಿ ಅಭ್ಯರ್ಥಿಗಳನ್ನು ಸೋಲಿಸಲಿ: ಸಚಿವ ಎಂ.ಬಿ. ಪಾಟೀಲ್ ಸವಾಲು

ವಿಜಯಪುರ : ಬಿಜೆಪಿ ಉಚ್ಚಾಟಿತ ಶಾಸಕ ಬಸನಗೌಡ ಪಾಟೀಲ ಯತ್ನಾಳ್ ಅವರು, ಮಾತು ಎತ್ತಿದರೆ ಸಾಕು ಯಡಿಯೂರಪ್ಪ ಕುಟುಂಬ, ವಿಜಯೇಂದ್ರ ಎಂದು ವಾಗ್ದಾಳಿ ನಡೆಸುವ ಅವರು ಈಗ ವಿಜಯೇಂದ್ರ ನೇತೃತ್ವದಲ್ಲಿ ಬಿಜೆಪಿ ಚುನಾವಣೆಗೆ ಹೇಗೆ ಬೆಂಬಲ ನೀಡುತ್ತಾರೆ? ಈ ಯತ್ನಾಳರಿಗೆ ಸ್ವಾಭಿಮಾನ, ಮಾನ ಮರ್ಯಾದೆ ಇದ್ದರೆ ಬಿಜೆಪಿ ಅಭ್ಯರ್ಥಿಗಳನ್ನು ಸೋಲಿಸಲಿ ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಡಾ.ಎಂ.ಬಿ. ಪಾಟೀಲ್ ವಾಗ್ದಾಳಿ ನಡೆಸಿದ್ದಾರೆ.
ನಗರದಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಶಾಸಕ ಯತ್ನಾಳ್ ಅವರು ಸ್ವಾಭಿಮಾನ, ಮರ್ಯಾದೆ ಇದ್ದರೆ ಬಿಜೆಪಿ ಅಭ್ಯರ್ಥಿಗಳನ್ನು ಸೋಲಿಸಲಿ, ವಿಜಯೇಂದ್ರ ನೇತೃತ್ವದಲ್ಲಿ ಬಿಜೆಪಿ ಚುನಾವಣೆ ಎದುರಿಸುತ್ತಿದೆ. ವಿಜಯೇಂದ್ರ ಉಳಿಸೋ ಕೆಲಸ ಮಾಡುತ್ತಾರೆಂದರೆ ಮಾಡಲಿ, ಆದರೆ ಯತ್ನಾಳ ಏನೇ ಮಾಡಿದರೂ ನಾವೇ ಗೆಲ್ಲುತ್ತೇವೆ, ದಾವಣಗೆರೆ ಹಾಗೂ ಬಾಗಲಕೋಟೆ ಉಪ ಚುನಾವಣೆಗಳಲ್ಲಿ ಬಿಜೆಪಿ ಅಭ್ಯರ್ಥಿಗಳು ಸೋತರೆ ವಿಜಯೇಂದ್ರ ಬಿಜೆಪಿ ರಾಜ್ಯಾದ್ಯಕ್ಷ ಸ್ಥಾನದಿಂದ ನಿಶ್ಚಿತವಾಗಿ ಬದಲಾಗುತ್ತಾರೆ. ವಿಜಯೇಂದ್ರ ಬದಲಾವಣೆ ಆಗೋದು ಯತ್ನಾಳಗೆ ಬೇಕಾಗಿದೆಯೋ, ಇಲ್ಲವೋ? ಅವರು ಅರ್ಥ ಮಾಡಿಕೊಳ್ಳಲಿ ಯತ್ನಾಳ್ ಉದ್ದೇಶ ವಿಜಯೇಂದ್ರ ಉಳಿಸುವುದೇ ಆಗಿದ್ದರೆ ಮಾತು ಮಾತಿಗೆ ಯಡಿಯೂರಪ್ಪ ಮಗ ಎಂದು ಹೇಳುವುದೇಕೆ ಎಂದು ಪ್ರಶ್ನಿಸಿದರು.
ಉಪಚುನಾವಣೆಯಲ್ಲಿ ಪ್ರಚಾರ ಮಾಡಿ ವಾಪಸ್ ಬಿಜೆಪಿ ಹೋಗುವ ಯೋಚನೆ ಯತ್ನಾಳರಲ್ಲಿದೆ, ಈ ಉಪ ಚುನಾವಣೆಯಲ್ಲಿ ಬಿಜೆಪಿ ಪರವಾಗಿ ಪ್ರಚಾರ ಮಾಡಿದ್ದೇನೆ ಎಂದು ಹೇಳಿ ಮತ್ತೆ ಬಿಜೆಪಿ ನಾಯಕರಿಗೆ ಕೈವೊಡ್ಡಿ ಪಕ್ಷಕ್ಕೆ ಮರಳುವ ಪ್ಲಾನ್ ಮಡುತ್ತಿದ್ದಾರೆ ಅಷ್ಟೇ ಎಂದು ಹೇಳಿದರು.




