ಸಿದ್ದರಾಮಯ್ಯ ಎಂದೂ ದ್ವೇಷ ರಾಜಕಾರಣ ಮಾಡಿದವರಲ್ಲ: ಯತ್ನಾಳ್

ಸಿದ್ದರಾಮಯ್ಯ/ಬಸನಗೌಡ ಪಾಟೀಲ್ ಯತ್ನಾಳ್
ವಿಜಯಪುರ : ಮುಖ್ಯಮಂತ್ರಿಯಾಗಿದ್ದ ಸಿದ್ದರಾಮಯ್ಯ ಎಂದೂ ದ್ವೇಷ ರಾಜಕಾರಣ ಮಾಡಿದವರಲ್ಲ. ಆದರೆ, ಈಗ ಬರುವವರು ಆ ರೀತಿ ಇಲ್ಲ. ಆದುದರಿಂದ, ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಹಾಗೂ ವಿಪಕ್ಷ ನಾಯಕ ಆರ್.ಅಶೋಕ್ ಏನಾದರೂ ಮಾತನಾಡುವ ಮುನ್ನ ಎಚ್ಚರಿಕೆ ಇರಲಿ ಎಂದು ಬಿಜೆಪಿ ಉಚ್ಛಾಟಿತ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಸಲಹೆ ನೀಡಿದ್ದಾರೆ.
ರವಿವಾರ ವಿಜಯಪುರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾನು ಸಿದ್ದರಾಮಯ್ಯನವರ ಬಗ್ಗೆ ಕೀಳಾಗಿ ಮಾತನಾಡುವುದಿಲ್ಲ. ಅವರೊಬ್ಬ ಹಿರಿಯ ನಾಯಕ, ಸುದೀರ್ಘ ಅವಧಿಗೆ ಮುಖ್ಯಮಂತ್ರಿಯಾಗಿದ್ದವರು, ಅತೀ ಹೆಚ್ಚು ಬಜೆಟ್ಗಳನ್ನು ಮಂಡಿಸಿದ ಅನುಭವಿ. ನಾವು ವಿಧಾನಸಭೆಯ ಒಳಗೆ ಎಷ್ಟೇ ಟೀಕೆ ಮಾಡಿದರೂ ಅವರು ಎಂದಿಗೂ ಹಳೆಯ ಫೈಲ್ಗಳನ್ನು ತೆಗೆದು ವೈಯಕ್ತಿಕ ದ್ವೇಷ ಸಾಧಿಸಲಿಲ್ಲ ಎಂದು ಹೇಳಿದರು.
ಆದರೆ, ಈಗ ಬರುವವರು ಆ ಕೆಲಸ ಮಾಡುತ್ತಾರೆ. ಡಿ.ಕೆ.ಶಿವಕುಮಾರ್ ಮುಖ್ಯಮಂತ್ರಿ ಆದರೆ ಅವರಿಗಿಂತ ಹೆಚ್ಚು ಖುಷಿ ಪಡುವುದು ನಮ್ಮ ಬಿಜೆಪಿ ರಾಜ್ಯಾಧ್ಯಕ್ಷರು. ಏಕೆಂದರೆ ಅವರಿಬ್ಬರೂ ವ್ಯವಹಾರಿಕ ಪಾಲುದಾರರು(ಬ್ಯುಸಿನೆಸ್ ಪಾರ್ಟ್ನರ್ ಗಳು) ಎಂದು ಬಸನಗೌಡ ಪಾಟೀಲ್ ಯತ್ನಾಳ್ ವಾಗ್ದಾಳಿ ನಡೆಸಿದರು.




