ಅಲ್ಪಸಂಖ್ಯಾತರ ಕಲ್ಯಾಣ: 200 ಕೋ.ರೂ. ಖರ್ಚು ಮಾಡಲು ಅವಕಾಶವಿದ್ದರೂ ನಿರ್ದೇಶನಾಲಯವು ಖರ್ಚು ಮಾಡಿಲ್ಲ

ಬೆಂಗಳೂರು: ಅಲ್ಪಸಂಖ್ಯಾತರ ಕಲ್ಯಾಣಕ್ಕಾಗಿ ಸರಕಾರವು ಬಿಡುಗಡೆ ಮಾಡಿದ್ದ ಅನುದಾನದಲ್ಲಿ ಸುಮಾರು 200 ಕೋಟಿ ರೂ. ಖರ್ಚು ಮಾಡಲು ಅವಕಾಶವಿದ್ದರೂ ಸಹ ಅಲ್ಪಸಂಖ್ಯಾತರ ನಿರ್ದೇಶನಾಲಯವು ಖರ್ಚು ಮಾಡಿಲ್ಲ.
ಅನುದಾನವನ್ನು ಖರ್ಚು ಮಾಡಲು ಅಲ್ಪಸಂಖ್ಯಾತರ ನಿರ್ದಶನಾಲಯವು ಯಾವುದೇ ಕ್ರಮವನ್ನೂ ವಹಿಸಿಲ್ಲ ಎಂದು ಇಲಾಖೆಯ ಸರಕಾರದ ಕಾರ್ಯದರ್ಶಿ, ನಿರ್ದೇಶಕರಿಗೆ ಪತ್ರ ಬರೆದಿದ್ದಾರೆ. 2025ರ ಜೂನ್ 23ರಂದು ನಿರ್ದೇಶಕರಿಗೆ ಬರೆದಿರುವ ಪತ್ರವು ‘ the-file.in’ಗೆ ಲಭ್ಯವಾಗಿದೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಆರ್ಥಿಕ ವರ್ಷದ ಬಜೆಟ್ನಲ್ಲಿ ಅಲ್ಪಸಂಖ್ಯಾತರಿಗಾಗಿ ಘೋಷಿಸಿದ್ದ ವಿವಿಧ ಕಲ್ಯಾಣ ಯೋಜನೆಗಳನ್ನು ಪ್ರತಿಪಕ್ಷ ಬಿಜೆಪಿಯು ಟೀಕಿಸಿತ್ತು. ಇದು ಅಲ್ಪಸಂಖ್ಯಾತರ ತುಷ್ಟೀಕರಣವೆಂದು ಜರಿದಿತ್ತು. ಇದರ ಬೆನ್ನಲ್ಲೇ ಅಲ್ಪಸಂಖ್ಯಾತರ ನಿರ್ದೇಶನಾಲಯವು 200 ಕೋಟಿ ರೂ.ಗಳನ್ನು ಖರ್ಚು ಮಾಡಲು ಅವಕಾಶವಿದ್ದರೂ ಸಹ ಖರ್ಚೇ ಮಾಡಿಲ್ಲ ಎಂಬ ಸಂಗತಿಯು ಮುನ್ನೆಲೆಗೆ ಬಂದಿದೆ. ಈ ಕುರಿತು ಅಧಿಕಾರಿಗಳು ಸಚಿವ ಝಮೀರ್ ಅಹ್ಮದ್ ಖಾನ್ ಅವರೊಂದಿಗೆ ಚರ್ಚಿಸಿದ್ದಾರೆ ಎಂದು ತಿಳಿದು ಬಂದಿದೆ.
ಅಲ್ಪಸಂಖ್ಯಾತರ ನಿರ್ದೇಶನಾಲಯಕ್ಕೆ ಅನುದಾನ ಮಂಜೂರು, ಬಿಡುಗಡೆ ಕುರಿತು ಸರಕಾರದ ಮುಖ್ಯ ಕಾರ್ಯದರ್ಶಿ ಅಧ್ಯಕ್ಷತೆಯಲ್ಲಿ 2025ರ ಜೂನ್ 21ರಂದು ಸಭೆ ನಡೆದಿತ್ತು. ಪ್ರಸಕ್ತ ಸಾಲಿನಲ್ಲಿ ಬಿಡುಗಡೆಯಾಗಿದ್ದ ಅನುದಾನ ಖರ್ಚು ಮಾಡಲು ಹಾಗೂ ಹಿಂದಿನ ಆಯವ್ಯಯ ವರ್ಷದ ಬಾಕಿ ಇರುವ ಬಿಲ್ಗಳನ್ನು ಪಾವತಿಸಲು ಕೂಡಲೇ ಕ್ರಮ ಕೈಗೊಳ್ಳಬೇಕು ಎಂದು ಸಭೆಯಲ್ಲಿ ಸೂಚಿಸಲಾಗಿತ್ತು.
‘ನಿರ್ದೇಶನಾಲಯದಲ್ಲಿ ಅನದಾನವನ್ನು ಖರ್ಚು ಮಾಡಲು ಯಾವುದೇ ಕ್ರಮವಹಿಸದೇ ಇರುವ ಬಗ್ಗೆ ಹಾಗೂ ಪ್ರಗತಿಯನ್ನು ಸಾಧಿಸದಿರುವ ಬಗ್ಗೆ ಮತ್ತು ಬಾಕಿಯಿರುವ ಬಿಲ್ಗಳ ಬಾಬ್ತುಗಳನ್ನು ಪಾವತಿಸಲು ಯಾವುದೇ ಕ್ರಮವಹಿಸದೇ ಇರುವುದನ್ನು ಗಂಭೀರವಾಗಿ ಪರಿಗಣಿಸಲಾಗಿದೆ’ ಎಂದು ಎಚ್ಚರಿಸಿರುವುದು ಪತ್ರದಿಂದ ಗೊತ್ತಾಗಿದೆ.
ಆದರೂ ಅಲ್ಪಸಂಖ್ಯಾತರ ನಿರ್ದೇಶನಾಲಯವು ಈ ಕುರಿತು ಕ್ರಮಗಳನ್ನು ಕೈಗೊಂಡಿಲ್ಲ. ಹೀಗಾಗಿ 2025ರ ಜೂನ್ 23ರಂದು ಮತ್ತೊಂದು ಪತ್ರವನ್ನು ಬರೆಯಲಾಗಿದೆ.
ಸಭೆಯಲ್ಲಿ ನೀಡಿದ್ದ ಸೂಚನೆಗಳೇನು?
ವಿವಿಧ ಯೋಜನೆಗಳಿಗೆ ಸಂಬಂಧಿಸಿದಂತೆ ಸುಮಾರು 200 ಕೋಟಿ ರೂ.ಗಳನ್ನು ಖರ್ಚು ಮಾಡಲು ಅವಕಾಶವಿದ್ದರೂ ಸಹ ಅನುದಾನವನ್ನು ಖರ್ಚು ಮಾಡಿರುವುದಿಲ್ಲ. ಆದ್ದರಿಂದ 15 ದಿನದೊಳಗಾಗಿ ಅನುದಾನವನ್ನು ಖರ್ಚು ಮಾಡಿ ವರದಿಯನ್ನು ಸರಕಾರಕ್ಕೆ ಸಲ್ಲಿಸಬೇಕು ಎಂದು ಸಭೆಯಲ್ಲಿ ಸೂಚಿಸಲಾಗಿತ್ತು.
ವಿದ್ಯಾರ್ಥಿ ವೇತನಕ್ಕೆ ಸಂಬಂಧಿಸಿದಂತೆ ಬಿಡುಗಡೆ ಮಾಡಿದ್ದ ಅನುದಾನವನ್ನೂ ಸಹ ಕೂಡಲೇ ಖರ್ಚು ಮಾಡಲು ಅಗತ್ಯ ಕ್ರಮವಹಿಸಬೇಕು. ಮೌಲಾನಾ ಆಝಾದ್ ಶಾಲೆ, ಕಾಲೇಜುಗಳು ಹಾಗೂ ಅಲ್ಪಸಂಖ್ಯಾತರ ವಿದ್ಯಾರ್ಥಿನಿಲಯ ಯೋಜನೆಯ (ಲೆಕ್ಕ ಶೀರ್ಷಿಕೆಯ ಉಪ ಶೀರ್ಷಿಕೆ 051 ಮತ್ತು 059) ಯಡಿ ಅನುದಾನ ಒದಗಿಸಿತ್ತು. ಈ ಅನುದಾನಕ್ಕೆ ಸಂಬಂಧಿಸಿದಂತೆ ಕೈಗೊಂಡಿದ್ದ ನಿರ್ವಹಣಾ ಕಾಮಗಾರಿಗಳ ವಿವರಗಳನ್ನು ಪ್ರತ್ಯೇಕವಾಗಿ ಸಲ್ಲಿಸಬೇಕು ಎಂದು ಸಭೆಯಲ್ಲಿ ನಿರ್ದೇಶನ ನೀಡಲಾಗಿತ್ತು.
ಅಲ್ಲದೆ ಇದೇ ಲೆಕ್ಕ ಶೀರ್ಷಿಕೆಯ ಉಪ ಶೀರ್ಷಿಕೆಯಡಿಯಲ್ಲಿ ಬಿಡುಗಡೆ ಮಾಡಿದ್ದ ಅನುದಾನದ ಹಾಗೂ ಖರ್ಚು ಮಾಡಲಾದ ವಿವರವನ್ನು ಸಹ ಒದಗಿಸಬೇಕು ಎಂದು ಸಭೆಯು ಸೂಚಿಸಿತ್ತು ಎಂಬುದು ತಿಳಿದುಬಂದಿದೆ.
ಅಲ್ಪಸಂಖ್ಯಾತರ ಸಮುದಾಯದಲ್ಲಿ ಸರಳ ವಿವಾಹಗಳನ್ನು ಬೆಂಬಲಿಸಲು ಸರಕಾರೇತರ ಸಂಸ್ಥೆಗಳಿಗೆ ಪ್ರತೀ ದಂಪತಿಗೆ 50,000 ರೂ.ಗಳು ಮತ್ತು ಮುಖ್ಯಮಂತ್ರಿಗಳ ಅಲ್ಪಸಂಖ್ಯಾತ ವಸಾಹತು ಅಭಿವೃದ್ಧಿ ಕಾರ್ಯಕ್ರಮದಡಿಯಲ್ಲಿ 1,000 ಕೋಟಿ ರೂ.ಗಳು ಸೇರಿದ್ದವು.
250 ಮೌಲಾನಾ ಆಝಾದ್ ಮಾದರಿ ಇಂಗ್ಲಿಷ್ ಮಾಧ್ಯಮ ಶಾಲೆಗಳಲ್ಲಿ ಪೂರ್ವ ಪ್ರಾಥಮಿಕದಿಂದ ಪಿಯುವರೆಗೆ ತರಗತಿಗಳನ್ನು ಹಂತ ಹಂತವಾಗಿ ಪರಿಚಯಿಸಿತ್ತು. ಒಟ್ಟು 500 ಕೋಟಿ ರೂ. ವೆಚ್ಚವಾಗಲಿದೆ. ಈ ಉದ್ದೇಶಕ್ಕಾಗಿ ಪ್ರಸಕ್ತ ವರ್ಷದಲ್ಲಿ 100 ಕೋಟಿ ರೂ.ಗಳನ್ನು ಹಂಚಿಕೆ ಮಾಡಲಾಗಿದ್ದು, ಶಾಲಾ ಶಿಕ್ಷಣ ಇಲಾಖೆಯ ಸಹಯೋಗದೊಂದಿಗೆ ಈ ಕಾರ್ಯಕ್ರಮವನ್ನು ಜಾರಿಗೆ ತರಲಾಗುವುದು ಎಂದು ಆಯವ್ಯಯದಲ್ಲಿ ಘೋಷಿಸಲಾಗಿತ್ತು.
ಹೆಚ್ಚುವರಿಯಾಗಿ, ಶಿಕ್ಷಣ ಇಲಾಖೆಯಿಂದ ನಿರ್ವಹಿಸಲ್ಪಡುವ ಅತಿ ಹೆಚ್ಚು ದಾಖಲಾತಿ ಹೊಂದಿರುವ 100 ಉರ್ದು ಮಾಧ್ಯಮ ಶಾಲೆಗಳನ್ನು ಬಲಪಡಿಸಲಾಗುವುದು. ಅಗತ್ಯ ಸೌಲಭ್ಯಗಳನ್ನು ಒದಗಿಸಲು ಒಟ್ಟು 400 ಕೋಟಿ ರೂ.ಗಳ ಮೇಲ್ದರ್ಜೆ ಯೋಜನೆಯ ಭಾಗವಾಗಿ ಈ ವರ್ಷ 100 ಕೋಟಿ ರೂ.ಗಳನ್ನು ಹಂಚಿಕೆ ಮಾಡಲಾಗಿದೆ ಎಂದು ಬಜೆಟ್ನಲ್ಲಿ ಹೇಳಲಾಗಿತ್ತು.







