ಬಲ್ಡೋಟಾ ಸಮೂಹದ ಎಂಎಸ್ಪಿಎಲ್ ಕಂಪೆನಿಗೆ ಪವನ ವಿದ್ಯುತ್ ಯೋಜನೆ: ವಿಜಯನಗರದಲ್ಲಿ 22.73 ಎಕರೆ ಸರಕಾರಿ ಜಮೀನು

ಬೆಂಗಳೂರು: ಉದ್ದೇಶಿತ ಕಬ್ಬಿಣದ ಅದಿರು ಸಂಸ್ಕರಿಸುವ ಘಟಕಕ್ಕೆ ಬಲ್ಡೋಟಾ ಸಮೂಹದ ಎಂಎಸ್ಪಿಎಲ್ ಕಂಪೆನಿಗೆ ಬಳ್ಳಾರಿಯಲ್ಲಿ 191.73 ಎಕರೆ ವಿಸ್ತೀರ್ಣದ ಸರಕಾರಿ ಜಾಗ ಮಂಜೂರು ಮಾಡುವ ಪ್ರಕ್ರಿಯೆಯು ಇನ್ನೂ ಚಾಲ್ತಿಯಲ್ಲಿರುವಾಗಲೇ ಇದೇ ಕಂಪೆನಿಯ ಪವನ ವಿದ್ಯುತ್ ಯೋಜನೆಗಾಗಿ ರಾಜ್ಯ ಸರಕಾರವು ವಿಜಯನಗರ ಜಿಲ್ಲೆಯಲ್ಲಿ 22.73 ಎಕರೆ ವಿಸ್ತೀರ್ಣದ ಸರಕಾರಿ ಜಮೀನನನ್ನು ಖಾಯಂ ಆಗಿ ಮಂಜೂರು ಮಾಡಲು ಸಚಿವ ಸಂಪುಟಕ್ಕೆ ಕಡತ ಮಂಡನೆಯಾಗಿದೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಆದೇಶದ ಮೇರೆಗೆ ಕಂದಾಯ ಇಲಾಖೆಯು ಸಚಿವ ಸಂಪುಟಕ್ಕೆ ಕಡತ ಮಂಡಿಸಿದೆ. ಇದೇ ಫೆಬ್ರವರಿಯಲ್ಲಿ ನಡೆಯಲಿರುವ ಸಚಿವ ಸಂಪುಟ ಸಭೆಯಲ್ಲಿ ಈ ಕಡತದ ಕುರಿತು ಚರ್ಚೆ ನಡೆಯಲಿದೆ. ಸಚಿವ ಸಂಪುಟಕ್ಕೆ ಮಂಡಿಸಿರುವ ಕಡತದ (RD 6 LGE 2024) ರಹಸ್ಯ ಹಾಳೆಗಳು "the-file.in"ಗೆ ಲಭ್ಯವಾಗಿವೆ.
ಬಲ್ಡೋಟಾ ಸಮೂಹದ ಎಂಎಸ್ಪಿಎಲ್ ಗ್ಯಾಸಸ್ ಲಿಮಿಟೆಡ್ಗೆ ಅಂದಾಜು 84.79 ಕೋಟಿ ರೂ. ಮೌಲ್ಯದ 22.73 ಎಕರೆ ವಿಸ್ತೀರ್ಣದ ಸರಕಾರಿ ಜಮೀನನ್ನು ಖಾಯಂ ಆಗಿ ಮಂಜೂರು ಮಾಡಲು ಕಾನೂನು ಮತ್ತು ಆರ್ಥಿಕ ಇಲಾಖೆಯು ಅಸಮ್ಮತಿ ವ್ಯಕ್ತಪಡಿಸಿದೆ. ಆದರೂ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಸೂಚನೆ ಮೇರೆಗೆ ಕಡತವನ್ನು ಮಂಡಿಸಿರುವುದು ಸಚಿವ ಸಂಪುಟದ ಟಿಪ್ಪಣಿ ಹಾಳೆಯಿಂದ ತಿಳಿದು ಬಂದಿದೆ.
ವಿಜಯನಗರ ಜಿಲ್ಲೆ ಹೊಸಪೇಟೆ ತಾಲೂಕಿನ ಹೊಸಪೇಟೆ ಹೋಬಳಿಯ ಅಮರಾವತಿ ಗ್ರಾಮದಲ್ಲಿ ಸರ್ವೆ ನಂಬರ್ 571ರಲ್ಲಿ 22.73 ಎಕರೆ ವಿಸ್ತೀರ್ಣದ ಸರಕಾರಿ ಜಮೀನಿದೆ. ಈ ಜಮೀನನ್ನು ಎಂಎಸ್ಪಿಎಲ್ ಗ್ಯಾಸಸ್ ಲಿಮಿಟೆಡ್ನ ಪವನ ವಿದ್ಯುತ್ ಯೋಜನೆಗಾಗಿ 2011ರ ಸರಕಾರದ ಆದೇಶದ ಪ್ರಕಾರ 2016ರ ಫೆ.26ರಂದು ಅಂದರೇ ಸಿದ್ದರಾಮಯ್ಯ ಅವರ ಮೊದಲ ಅವಧಿಯಲ್ಲಿ 30 ವರ್ಷಗಳ ಅವಧಿಗೆ ಗುತ್ತಿಗೆ ಆಧಾರದ ಮೇಲೆ ಮಂಜೂರಾಗಿತ್ತು.
ವಿಶೇಷವೆಂದರೇ ಇದೇ ಜಮೀನನ್ನು ಸಿದ್ದರಾಮಯ್ಯ ಅವರ 2ನೇ ಅವಧಿಯಲ್ಲಿ ಖಾಯಂ ಆಗಿ ಮಂಜೂರು ಮಾಡಲು ಕಡತದಲ್ಲಿ ಅನುಮೋದನೆ ಕೋರಿದೆ. ಕೈಗಾರಿಕೆ ಚಟುವಟಿಕೆಗಳಿಗೆ ಉತ್ತೇಜನ ನೀಡಬೇಕು ಎಂದು ಮುಖ್ಯಮಂತ್ರಿ ಅವರ ಸೂಚನೆಯನ್ನು ಮುಂದೊಡ್ಡಿರುವುದು ತಿಳಿದು ಬಂದಿದೆ.
ಹೊಸಪೇಟೆ ತಾಲೂಕಿನ ಅಮರಾವತಿ ಗ್ರಾಮದಲ್ಲಿನ ಸರ್ವೇ ನಂಬರ್ 571ರಲ್ಲಿ ಒಟ್ಟಾರೆ 331.64 ಎಕರೆ ಜಮೀನಿದೆ. ಈ ಪೈಕಿ ಹೊಸಪೇಟೆ ನಗರಸಭೆ ಆಯುಕ್ತರ ಹೆಸರಿನಲ್ಲಿ 9 ಎಕರೆ ಇದ್ದರೇ ಸರಕಾರ ರೈಲ್ವೆ ಹೆಸರಿನಲ್ಲಿ 322.64 ಎಕರೆ ಸ್ವಾಧೀನದಲ್ಲಿದೆ. ಇದರಲ್ಲಿಯೇ ವಿಜಯನಗರ ಜಿಲ್ಲಾಧಿಕಾರಿ 2023ರ ನವೆಂಬರ್ 29ರ ಪ್ರಕಾರ 8 ಎಕರೆ ಜಮೀನನ್ನು ಸಮಗ್ರ ಗಣಿ ಪರಿಸರ ಪುನಃಶ್ಚೇತನ ಅಭಿವೃದ್ಧಿ ಯೋಜನೆಯಡಿ ಶುದ್ಧ ಕುಡಿಯುವ ನೀರಿನ ಘಟಕಕ್ಕೆ ಕಾಯ್ದಿರಿಸಿದೆ.
ಉಳಿದ ಜಮೀನಿನ ಪೈಕಿ 22.73 ಎಕರೆ ವಿಸ್ತೀರ್ಣದ ಸರಕಾರಿ ಜಮೀ ನನ್ನು ಎಂಎಸ್ಪಿಎಲ್ ಗ್ಯಾಸಸ್ ಲಿಮಿಟೆಡ್ಗೆ ಖಾಯಂ ಆಗಿ ಮಂಜೂರು ಮಾಡಲು ಹೊರಟಿದೆ. ಉಪ ವಿಭಾಗಾಧಿಕಾರಿಗಳ ವರದಿ ಪ್ರಕಾರ ಹೊಸಪೇಟೆಯ ಅಮರಾವತಿಯಲ್ಲಿ ಕೃಷಿಯೇತರ ಜಮೀನಿಗೆ ಮಾರ್ಗಸೂಚಿ ಮೌಲ್ಯವು ಎಕರೆಗೆ 1,05,24,800 ರೂ. ಇದೆ. ಅಲ್ಲದೇ ಮಾರುಕಟ್ಟೆ ಮೌಲ್ಯದ ಪ್ರಕಾರ ಎಕರೆಗೆ 3,73,05,085 ರೂ. ಇದೆ. ಇದರ ಪ್ರಕಾರ 22.73 ಎಕರೆಗೆ ಮಾರುಕಟ್ಟೆಯಲ್ಲಿ 84,79,44,582 ರು ಇದೆ ಎಂದು ಉಪ ವಿಭಾಗಾಧಿಕಾರಿಗಳ ವರದಿಯಿಂದ ಗೊತ್ತಾಗಿದೆ.
ಸಂಡೂರಿನಲ್ಲಿಯೂ 191.73 ಎಕರೆ: ಎಂಎಸ್ಪಿಎಲ್ ಲಿಮಿಟೆಡ್ಗೆ ಬಳ್ಳಾರಿ ಜಿಲ್ಲೆಯ ಸಂಡೂರು ತಾಲೂಕಿನ ಚೋರನೂರು ಹೋಬಳಿಯ ಕಾಳಿಂಗೇರಿ, ಅಂಕಮನಾಳ ಗ್ರಾಮದ ವಿವಿಧ ಸರ್ವೇ ನಂಬರ್ಗಳಲ್ಲಿರುವ ಸರಕಾರಿ ಜಮೀನುಗಳನ್ನು ಗುತ್ತಿಗೆ ಆಧಾರದ ಮೇಲೆ ಮಂಜೂರು ಮಾಡಲು ತುದಿಗಾಲಲ್ಲಿ ನಿಂತಿದೆ. 191.73 ಎಕರೆ ವಿಸ್ತೀರ್ಣದ ಸರಕಾರಿ ಜಮೀನು ಮಂಜೂರು ಮಾಡುವ ಸಂಬಂಧದ ಕಡತವು ಕಂದಾಯ ಇಲಾಖೆಯಲ್ಲಿ ಬಿರುಸಿನ ವೇಗದಲ್ಲಿ ಚಲಿಸುತ್ತಿದೆ.
ಸಂಡೂರು ತಾಲೂಕಿನ ಚೋರನೂರು ಹೋಬಳಿ ಕಾಳಿಂಗೇರಿ ಗ್ರಾಮ ಮತ್ತು ಅಂಕಮನಾಳ ಗ್ರಾಮದ ವಿವಿಧ ಸರ್ವೇ ನಂಬರ್ಗಳಲ್ಲಿ 201.92 ಎಕರೆ ಪೈಕಿ 191 ಎಕರೆ 71 ಗುಂಟೆ ಜಮೀನನ್ನು ಗುತ್ತಿಗೆ ಆಧಾರದ ಮೇಲೆ ಮಂಜೂರು ಮಾಡುವ ಕಲ್ಬುರ್ಗಿ ಪ್ರಾದೇಶಿಕ ಆಯುಕ್ತರು 2024ರ ಜನವರಿ 19ರಂದೇ ಪ್ರಸ್ತಾವ ಸಲ್ಲಿಸಿದ್ದರು.







