ಸಾವಯವ ಕೃಷಿಯಿಂದ ಕಲ್ಲಂಗಡಿ ಬೆಳೆದು ಯಶಸ್ಸು ಕಂಡ ಬಾಳುರ್ ಗ್ರಾಮದ ರೈತ

ಸಾವಯವ ಕೃಷಿ ಮೂಲಕವೇ ಕಲ್ಲಂಗಡಿ ಬೆಳೆದು ಯಶಸ್ಸು ಸಾಧಿಸಿ ಬೀದರ್ನ ತಂದೆ-ಮಗ ಇತರ ರೈತರಿಗೆ ಮಾದರಿಯಾಗಿದ್ದಾರೆ. ತಂದೆ ಪೂರ್ಣಕಾಲಿಕ ಕೃಷಿಕರಾಗಿದ್ದು, ಮಗ ಕಂಪೆನಿ ಕೆಲಸದಲ್ಲಿದ್ದರೂ, ರಜೆ ಹಾಕಿ ಕೃಷಿ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದಾರೆ. ಆ ಮೂಲಕ ಅರೆ ಕಾಲಿಕ ಕೃಷಿಕರಾಗಿ ತಂದೆಗೆ ಬೆನ್ನೆಲುಬಾಗಿದ್ದಾರೆ.
ಬೀದರ್ ಜಿಲ್ಲೆಯ ಭಾಲ್ಕಿ ತಾಲೂಕಿನ ಬಾಳುರ್ ಗ್ರಾಮದ ರೈತ ರಾಜಕುಮಾರ್ ಪಾಂಚಾಳ್ ಅವರು ಸಾವಯವ ಕೃಷಿಯಿಂದ ಸುಮಾರು ಐದು ಎಕರೆ ಭೂಮಿಯಲ್ಲಿ ಕಲ್ಲಂಗಡಿ ಹಣ್ಣು ಬೆಳೆದಿದ್ದು, ಅದಕ್ಕೆ ಅವರ ಮಗ ಸಚಿನ್ ಪಾಂಚಾಳ್ ಅವರು ಸಾಥ್ ನೀಡುತ್ತಿದ್ದಾರೆ.
ರಾಜಕುಮಾರ್ ಪಾಂಚಾಳ್ ಅವರಿಗೆ ಸುಮಾರು 7 ಎಕರೆ ಜಮೀನು ಇದ್ದು, 3-4 ವರ್ಷಗಳಿಂದ ಅವರು ಕಲ್ಲಂಗಡಿ ಬೆಳೆಯುತ್ತಿದ್ದಾರೆ. ಈ ವರ್ಷ ತೋಟಗಾರಿಕೆ ಇಲಾಖೆಯಿಂದ ಮಾಹಿತಿ ಪಡೆದುಕೊಂಡು ಸಂಪೂರ್ಣವಾಗಿ ಸಾವಯವ ಕೃಷಿ ಪದ್ಧತಿ ಅಳವಡಿಸಿಕೊಂಡು ಕಲ್ಲಂಗಡಿ ಬೆಳೆದಿದ್ದಾರೆ. ಈ ವರ್ಷ 5 ಎಕರೆ ಜಮೀನಿನಲ್ಲಿ 3 ಲಕ್ಷ ರೂ. ಬಂಡವಾಳ ಹಾಕಿ ಕಲ್ಲಂಗಡಿ ಬೆಳೆದಿದ್ದಾರೆ.
ಅವರ ಮಗ ಸಚಿನ್ ಪಾಂಚಾಳ್ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಾರೆ. ತಮ್ಮ ಹೊಲದಲ್ಲಿ ಕಲ್ಲಂಗಡಿ ಬೆಳೆ ಹಾಕಿದ್ದರಿಂದ ಸಚಿನ್ ಅವರು ತಮ್ಮ ಕಂಪನಿ ಕೆಲಸಕ್ಕೆ ಮೂರು ತಿಂಗಳಿಂದ ರಜೆ ಹಾಕಿ ಕಲ್ಲಂಗಡಿ ಬೆಳೆ ಬೆಳೆಯಲು ಅವರ ತಂದೆಯ ಸಹಾಯಕ್ಕೆ ನಿಂತಿದ್ದಾರೆ. ನಂತರ ಕಲ್ಲಂಗಡಿ ಹಣ್ಣಿನ ಕಟಾವು ಆಗಿ, ರಾಶಿ ಆದ ಬಳಿಕ ಮರಳಿ ಕಂಪನಿ ಕೆಲಸಕ್ಕೆ ತೆರಳುತ್ತಾರೆ. ಆ ಮೂಲಕ ಕಂಪೆನಿ ಕೆಲಸಕ್ಕೆ ರಜೆ ಹಾಕಿ ತಂದೆಗೆ ಸಾಥ್ ನೀಡುತ್ತಿದ್ದಾರೆ. ಮಣ್ಣಿನಿಂದ ದೂರವಾಗಿ ಕಂಪೆನಿ ಕೆಲಸಗಳ ದರ್ಬಾರ್ ಹಿಂದೆ ಓಡುವ ಯುವ ಜನಾಂಗಕ್ಕೆ ಇವರು ಮಾದರಿಯಾಗಿದ್ದಾರೆ.
‘ತೋಟಗಾರಿಕೆ ಇಲಾಖೆಯ ಬಗ್ಗೆ ನಮಗೆ ಯಾವುದೇ ರೀತಿಯಲ್ಲಿ ಮಾಹಿತಿ ಇರಲಿಲ್ಲ. ಒಂದು ಸಲ ತೋಟಗಾರಿಕೆ ಇಲಾಖೆಗೆ ಭೇಟಿ ನೀಡಿದಾಗ ಅಲ್ಲಿನ ಅಧಿಕಾರಿಗಳು ನಮಗೆ ಒಳ್ಳೆ ರೀತಿಯಿಂದ ಸ್ಪಂದಿಸಿ, ಆತ್ಮೀಯವಾಗಿ ಮಾತನಾಡಿಸಿದರು. ಮಣ್ಣಿನ ಪರೀಕ್ಷೆ ಮಾಡಿಸಲು ಹೇಳಿದರು. ಹಾಗೆಯೇ ಕೆಲವೊಂದು ರೀತಿಯ ಗೊಬ್ಬರ ಹಾಕುವುದಕ್ಕೂ ಕೂಡ ಅವರು ಸಲಹೆ ನೀಡಿದರು. ಅವರ ಸಲಹೆಯಂತೆ ನಾವು ಎಲ್ಲವೂ ಮಾಡಿಸಿದ್ದೇವೆ. ಹಾಗಾಗಿಯೇ ಬೇರೆಯವರ ಬೆಳೆಗಿಂತಲೂ ನಮ್ಮ ಬೆಳೆ ಚೆನ್ನಾಗಿ ಬಂದಿದೆ’ ಎಂದು ಸಚಿನ್ ಪಾಂಚಾಳ್ ಹೇಳುತ್ತಾರೆ.
ಸುತ್ತಮುತ್ತಲಿನ ಎಲ್ಲ ರೈತರಿಗಿಂತ ತಮ್ಮ ಕಲ್ಲಂಗಡಿ ಫಸಲು ಬಂದಿತ್ತು. ಇದರಿಂದ 6ರಿಂದ7 ಲಕ್ಷ ರೂ. ಆದಾಯ ಬರುವ ನಿರೀಕ್ಷೆ ಇತ್ತು. ಆದರೆ ಮಾರುಕಟ್ಟೆಯಲ್ಲಿ ಕಲ್ಲಂಗಡಿಯ ಬೆಲೆ ಕುಸಿತ ಇರುವುದರಿಂದ ನಿರೀಕ್ಷೆ ಮಟ್ಟದಲ್ಲಿ ಲಾಭ ಬರುವುದಿಲ್ಲ ಎನ್ನುವುದು ಅವರ ಅಭಿಪ್ರಾಯ.
ಕಲ್ಲಂಗಡಿ ಹಣ್ಣುಗಳನ್ನು ನೇರವಾಗಿ ಇವರು ಮಾರುಕಟ್ಟೆಗೆ ಕಳುಹಿಸುವುದಿಲ್ಲ. ಮಧ್ಯವರ್ತಿಗಳೇ ಇವರು ಬೆಳೆದ ಹೊಲಕ್ಕೆ ಬಂದು ಖರೀದಿಸಿಕೊಂಡು ಹೋಗುತ್ತಾರೆ. ಮಧ್ಯವರ್ತಿಗಳಿಂದಲೂ ಕೂಡ ಇವರ ಲಾಭಾಂಶದಲ್ಲಿ ಏರುಪೇರಾಗಬಹುದು.
ಅಲ್ಲದೆ, ಇತ್ತೀಚಿಗೆ ಮಳೆ ಬೀಳುತ್ತಿರುವುದರಿಂದ ವಾತಾವರಣ ತಂಪಾಗಿದೆ. ಹಾಗಾಗಿ ತಂಪಾದ ವಾತಾವರಣದಲ್ಲಿ ಕಲ್ಲಂಗಡಿ ಹಣ್ಣು ಮಾರುಕಟ್ಟೆ ಕುಸಿಯುತ್ತದೆ. ಆದ್ದರಿಂದ ಬದಲಾದ ವಾತಾವರಣ ಕೂಡ ಅವರ ಲಾಭದ ಮೇಲೆ ಪರಿಣಾಮ ಬೀರಬಹುದು ಎಂಬ ಆತಂಕವಿದೆ.
ನಾನು ಕಂಪನಿಯಲ್ಲಿ ಕೆಲಸ ಮಾಡುತ್ತೇನೆ. ನಮ್ಮ ತಂದೆ ಕಲ್ಲಂಗಡಿ ಬೆಳೆಯುತ್ತಿದ್ದುದರಿಂದ ನಾನು ಕೆಲಸಕ್ಕೆ ರಜೆ ಹಾಕಿ ಅವರಿಗೆ ಸಹಾಯ ಮಾಡುತ್ತಿದ್ದೇನೆ. ಸಾವಯವ ಕೃಷಿಯಿಂದ ನಮ್ಮ ಬೆಳೆ ಚೆನ್ನಾಗಿ ಬಂದಿದ್ದು, ಒಳ್ಳೆ ಆದಾಯ ಬರುವ ನಿರೀಕ್ಷೆ ಇತ್ತು. ಮಾರುಕಟ್ಟೆಯಲ್ಲಿ ಬೆಲೆ ಕಡಿಮೆ ಇರುವುದರಿಂದ ಆದಾಯದಲ್ಲಿ ಕುಸಿತವಾಗುವ ಆತಂಕವಿದೆ.
- ಸಚಿನ್ ಪಾಂಚಾಳ್, ರೈತನ ಮಗ.
ಸಾವಯವ ಕೃಷಿಯಲ್ಲಿ ಸಾಗುವಳಿ ಮಾಡಿದಾಗ ಭೂಮಿ ಆರೋಗ್ಯದ ಜೊತೆಗೆ ಇಡೀ ಮಾನವ ಕುಲದ ಆರೋಗ್ಯ ಕಾಪಾಡಬಹುದು. ಸಾಗುವಳಿ ಕೃಷಿಯಿಂದ ಕಡಿಮೆ ಖರ್ಚಿನಲ್ಲಿ ಅಧಿಕ ಲಾಭ ಪಡೆಯಬಹುದು. ಟ್ರೈಕೋಡರ್ಮಾ, ಸೋಡೊನೊಮೋಸ್ ಹಾಕಿದರೆ ಮಣ್ಣಿನಿಂದ ಹರಡುವ ರೋಗಗಳು ನಿಯಂತ್ರಣದಲ್ಲಿಡಬಹುದು.
- ನಿಲಂಜನ್, ಸಹಾಯಕ ನಿರ್ದೇಶಕ, ತೋಟಗಾರಿಕೆ ಜೈವಿಕ ಕೇಂದ್ರ







