ಸಂವಿಧಾನ ವಿರೋಧಿ ಶಿಕ್ಷಣ ಪ್ರಸ್ತಾವನೆಗಳು ಪ್ರಜಾಪ್ರಭುತ್ವ ವ್ಯವಸ್ಥೆಗೆ ಮಾರಕ
ಇಂದು ಅಂತರ್ರಾಷ್ಟ್ರೀಯ ಪ್ರಜಾಪ್ರಭುತ್ವ ದಿನ
ಇಂದು ಅಂತರ್ರಾಷ್ಟ್ರೀಯ ಪ್ರಜಾಪ್ರಭುತ್ವ ದಿನ. ಅಂತರ್ರಾಷ್ಟ್ರೀಯ ಪ್ರಜಾಪ್ರಭುತ್ವ ದಿನವು ಪ್ರಪಂಚದಲ್ಲಿ ಹಾಗೂ ನಮ್ಮ ನಮ್ಮ ದೇಶ ಹಾಗೂ ರಾಜ್ಯಗಳಲ್ಲಿ ಪ್ರಜಾಪ್ರಭುತ್ವದ ಸ್ಥಿತಿಗತಿಯನ್ನು ಪರಾಮರ್ಶಿಸಲು ನಮಗೆ ಒಂದು ಉತ್ತಮ ಅವಕಾಶವನ್ನು ಒದಗಿಸುತ್ತದೆ. ಪ್ರಜಾಪ್ರಭುತ್ವವು ಒಂದು ಗುರಿಯಂತೆಯೇ ಪ್ರಕ್ರಿಯೆಯೂ ಹೌದು. ಪ್ರಜಾಪ್ರಭುತ್ವದ ಬಲವರ್ಧನೆಯಲ್ಲಿ ಶಿಕ್ಷಣದ ಪಾತ್ರ ನಿರ್ಣಾಯಕ. ನಾಗರಿಕ ಸಮಾಜದ ಕಟ್ಟಕಡೆಯ ವ್ಯಕ್ತಿಯನ್ನೂ ಒಳಗೊಂಡಂತೆ ಎಲ್ಲಾ ನಾಗರಿಕರ ಸಂಪೂರ್ಣ ಭಾಗವಹಿಸುವಿಕೆ ಮತ್ತು ಬೆಂಬಲದೊಂದಿಗೆ ಮಾತ್ರ ಪ್ರಜಾಪ್ರಭುತ್ವದ ಆದರ್ಶಗಳನ್ನು ಎಲ್ಲರೂ ಎಲ್ಲೆಡೆ ಅನುಭವಿಸಲು ಸಾಧ್ಯ.
ಮಾನವ ಹಕ್ಕುಗಳ ಸಾರ್ವತ್ರಿಕ ಘೋಷಣೆಯ(1948) 19ನೇ ವಿಧಿಯು ಹೇಳುವಂತೆ, ಪ್ರತಿಯೊಬ್ಬರಿಗೂ ಶಿಕ್ಷಣದ ಹಕ್ಕಿದೆ. ಕನಿಷ್ಠ ಪ್ರಾಥಮಿಕ ಮತ್ತು ಮೂಲಭೂತ ಹಂತಗಳಲ್ಲಿ ಶಿಕ್ಷಣವು ಉಚಿತವಾಗಿ ರಬೇಕು. ಪ್ರಾಥಮಿಕ ಶಿಕ್ಷಣ ಕಡ್ಡಾಯವಾಗಿರಬೇಕು. ತಾಂತ್ರಿಕ ಮತ್ತು ವೃತ್ತಿಪರ ಶಿಕ್ಷಣವನ್ನು ಸಾಮಾನ್ಯವಾಗಿ ಎಲ್ಲರಿಗೂ ಲಭ್ಯವಾಗುವಂತೆ ಮಾಡಬೇಕು ಮತ್ತು ಉನ್ನತ ಶಿಕ್ಷಣಕ್ಕೆ ಎಲ್ಲರಿಗೂ ಅರ್ಹತೆಯ ಆಧಾರದಲ್ಲಿ ಸಮಾನವಾಗಿ ಪ್ರವೇಶಿಸುವ ಅವಕಾಶವಿರಬೇಕು. ಇದೇ ರೀತಿ ಭಾರತದ ಸಂವಿಧಾನದ 21ಎ, 41, 45 ಹಾಗೂ 46ನೇ ವಿಧಿಗಳು ನೇರವಾಗಿ ಶಿಕ್ಷಣದ ಅವಕಾಶಕ್ಕೆ ಸಂಬಂಧಿಸಿದ ಅವಕಾಶಗಳಾಗಿವೆ. ಪ್ರಜಾಪ್ರಭುತ್ವದ ಜೀವಾಳವೆನಿಸಿರುವ ಶಿಕ್ಷಣದ ಮೂಲಭೂತ ಹಕ್ಕನ್ನು ಕೊಡಮಾಡುವಲ್ಲಿ ನಮ್ಮ ರಾಜ್ಯದ ಇಂದಿನ ಪರಿಸ್ಥಿತಿಯನ್ನು ಅವಲೋಕಿಸುವ ಆಶಯ ಈ ಲೇಖನದ್ದಾಗಿದೆ.
ಹೊಸ ಸರಕಾರ ರಚನೆಯಾದ ನಂತರ, ಕಳೆದ ಮೂರು ತಿಂಗಳಿಂದ ಕರ್ನಾಟಕದಲ್ಲಿ ಸಾರ್ವಜನಿಕ ವ್ಯವಸ್ಥೆಯ ಶಿಕ್ಷಣ ಸುಧಾರಣೆ ಕುರಿತಂತೆ ಹಲವು ಬಗೆಯ ಚರ್ಚೆಗಳು ನಡೆಯುತ್ತಿವೆ. ಒಂದೆಡೆ, ನಮ್ಮ ಒಕ್ಕೂಟ ವ್ಯವಸ್ಥೆಯ ಮೂಲ ಆಶಯಕ್ಕೆ ವಿರುದ್ಧವಾಗಿದ್ದ ಅಸಾಂವಿಧಾನಿಕ ಹಾಗೂ ಅಪ್ರಜಾಸತ್ತಾತ್ಮಕ ರಾಷ್ಟ್ರೀಯ ಶಿಕ್ಷಣ ನೀತಿ 2020ನ್ನು ತಿರಸ್ಕರಿಸಿ, ಸಂವಿಧಾನಬದ್ಧ ರಾಜ್ಯ ಶಿಕ್ಷಣ ನೀತಿಯನ್ನು ರೂಪಿಸುವ ನಿರ್ಧಾರವನ್ನು ರಾಜ್ಯ ಸರಕಾರ ಪ್ರಕಟಿಸಿದೆ. ಮತ್ತೊಂದೆಡೆ, ಮಾನವ ಹಕ್ಕುಗಳ ಸಾರ್ವತ್ರಿಕ ಘೋಷಣೆ (1948)ಹಾಗೂ ಸಂವಿಧಾನದ (21ಎ) ಅನ್ವಯ ಮೂಲಭೂತ ಹಕ್ಕಾಗಿರುವ ಶಿಕ್ಷಣವನ್ನು ಪ್ರತಿಯೊಬ್ಬ ಹಕ್ಕುದಾರರಿಗೆ ಕೊಡಮಾಡಬೇಕಾದ ಸರಕಾರ, ತನ್ನ ಕರ್ತವ್ಯದ ಹಾಗೂ ಜವಾಬ್ದಾರಿಯಿಂದ ದೂರ ಸರಿದು ಸರಕಾರಿ ಶಾಲೆ ಹಾಗೂ ವಿಶ್ವವಿದ್ಯಾನಿಲಯಗಳನ್ನು ಖಾಸಗಿ ಕಾರ್ಪೊರೇಟ್ ಸಂಸ್ಥೆಗಳಿಗೆ ದತ್ತು ನೀಡುವ ಮತ್ತು ಅವರಿಂದ ಪಡೆಯಬಹುದಾದ ಕಾರ್ಪೊರೇಟ್ ಸಾಮಾಜಿಕ ಜವಾಬ್ದಾರಿಯ (ಸಿಎಸ್ಆರ್)ನಿಧಿಯಿಂದ ಗುಣಮಟ್ಟದ ಶಿಕ್ಷಣ ಒದಗಿಸುವುದಾಗಿ ಹೇಳುತ್ತಿದೆ. ಈ ಪ್ರಕ್ರಿಯೆಯ ಭಾಗವಾಗಿ ಹಲವು ಸುತ್ತಿನ ಮಾತುಕತೆಗಳು ಪ್ರಾರಂಭವಾಗಿರುವುದು ಮಾಧ್ಯಮದಲ್ಲಿ ವರದಿಯಾಗಿದೆ. ಈ ಬಗ್ಗೆ ಪ್ರಸ್ತಾವನೆ ಸಲ್ಲಿಸುವಂತೆ ಉಪಮುಖ್ಯಮಂತ್ರಿಗಳು ಸೂಚಿಸಿರುವುದಾಗಿಯೂ ತಿಳಿದು ಬಂದಿದೆ. ಈ ಬೆಳವಣಿಗೆಗಳನ್ನು ಸೂಕ್ಷ್ಮವಾಗಿ ಗಮನಿಸಿದರೆ, ಮಾತು ಮತ್ತು ಕೃತಿಯಲ್ಲಿ, ಈ ಎರಡೂ ನಡೆಗಳು ಪರಸ್ಪರ ವಿರೋಧಾಭಾಸದಿಂದ ಕೂಡಿರುವುದು ಮೇಲ್ನೋಟಕ್ಕೆ ಸಾಬೀತಾಗುತ್ತದೆ.
ಸಂವಿಧಾನಬದ್ಧವೆಂದರೆ ಅದು ಹಕ್ಕು ಆಧಾರಿತ ಮಾನವ ಅಭಿವೃದ್ಧಿಯ ಮಾದರಿ. ಸಂವಿಧಾನಬದ್ಧ ಮೂಲಭೂತ ಹಕ್ಕುಗಳನ್ನು ಸಾರ್ವತ್ರಿಕವಾಗಿ ಸಮಾನತೆ, ಸಾಮಾಜಿಕ ನ್ಯಾಯ ಹಾಗೂ ತಾರತಮ್ಯವಿಲ್ಲದಂತೆ ಕೊಡುವ ಪೂರ್ಣ ಹೊಣೆಗಾರಿಕೆ ಸರಕಾರದ್ದಾಗಿರುತ್ತದೆ. ಅದಕ್ಕೆ ಬೇಕಾದ ಎಲ್ಲಾ ಬಗೆಯ ಸಂಪನ್ಮೂಲಗಳನ್ನು ಒದಗಿಸುವ ಪೂರ್ಣ ಜವಾಬ್ದಾರಿಯೂ ಸರಕಾರದ್ದೇ ಆಗಿರುತ್ತದೆ. ಆದ್ದರಿಂದಲೇ ನಾವು ಅದನ್ನು ಮೂಲಭೂತ ಹಕ್ಕೆಂದು ಪರಿಗಣಿಸುತ್ತೇವೆ. ರಾಷ್ಟ್ರೀಯ ಶಿಕ್ಷಣ ನೀತಿ 2020, ಈ ಸಾಂವಿಧಾನಿಕ ಜವಾಬ್ದಾರಿಯಿಂದ ನುಣುಚಿಕೊಂಡು ಪರೋಪಕಾರಿ ಖಾಸಗಿ ಸಂಸ್ಥೆಗಳ ಭಾಗವಹಿಸುವಿಕೆಯ ಮೂಲಕ (ರಾಶಿನೀ-2020, ಪುಟ 6) ಸಾರ್ವಜನಿಕ ಶಿಕ್ಷಣ ವ್ಯವಸ್ಥೆಯನ್ನು ಖಾಸಗೀಕರಣಗೊಳಿಸುವ ಪ್ರಸ್ತಾವನೆಯಿಟ್ಟ ಕಾರಣದಿಂದಾಗಿಯೇ ಅದನ್ನು ಸಂವಿಧಾನ ವಿರೋಧಿ ಹಾಗೂ ಪ್ರಜಾಪ್ರಭುತ್ವ ವಿರೋಧಿ ನೀತಿಯೆಂದು ರಾಜ್ಯ ಸರಕಾರ ತಿರಸ್ಕರಿಸಿದ್ದು. ಆದರೆ, ಸಂವಿಧಾನ ವಿರೋಧಿ ನೀತಿಯನ್ನು ತಿರಸ್ಕರಿಸಿದ ರಾಜ್ಯ ಸರಕಾರ ಅದೇ ಪರಿಭಾಷೆ ಮತ್ತು ಅದೇ ಬಗೆಯ ಪ್ರಸ್ತಾವನೆಗಳನ್ನು ಮುಂದಿಡುತ್ತಿರುವುದರ ಹಿಂದೆ ನವ-ಉದಾರವಾದಿ (Neo-liberal) ಬಂಡವಾಳಶಾಹಿ ವ್ಯವಸ್ಥೆಯ ರಾಜಕೀಯ ಅರ್ಥಶಾಸ್ತ್ರ ಅಡಗಿದೆ.
ಈ ಕಟು ಸತ್ಯವನ್ನು ಅರಿಯದೆ ಕೇವಲ ಸರಕಾರ ಬದಲಾದರೆ ಎಲ್ಲವೂ ಬದಲಾಗುತ್ತದೆ ಎಂಬ ಭ್ರಮೆ ನಮ್ಮನ್ನು ಮತ್ತಷ್ಟು ನಿರಾಶರನ್ನಾಗಿ ಮಾಡುತ್ತದೆ. ಇಂದಿನ ರಾಜಕೀಯ ಹಾಗೂ ಆರ್ಥಿಕ ವ್ಯವಸ್ಥೆಯ ಇತಿಮಿತಿಗಳನ್ನು ಅರಿತು ಹೊಸ ಮಾರ್ಗದ ಬಗ್ಗೆಯೂ ನಾವು ಚಿಂತಿಸಬೇಕಿದೆ. ನವ-ಉದಾರವಾದಿ ಸಿದ್ಧಾಂತವನ್ನು ತಮ್ಮ ಅಭಿವೃದ್ಧಿಯ ಮಾದರಿಯಾಗಿ ಸ್ವೀಕರಿಸಿರುವ ಇಂದಿನ ಬಹುತೇಕ ರಾಜಕೀಯ ಪಕ್ಷಗಳ ನಡುವೆ ಗುರುತಿಸಬಹುದಾದ ಮೂಲಭೂತ ವ್ಯತ್ಯಾಸವೇನು ಕಾಣುವುದಿಲ್ಲ. ಬಲಪಂಥೀಯ ಕೋಮುವಾದಿ ಹಾಗೂ ಸರ್ವಾಧಿಕಾರಿ ಧೋರಣೆಯ ಪ್ರತಿಗಾಮಿ ಪಕ್ಷವನ್ನು ಕೆಳಗಿಳಿಸಿ, ಜಾತ್ಯತೀತ ಹಾಗೂ ಪ್ರಜಾಸತ್ತಾತ್ಮಕ (ಪೂರ್ಣವಾಗಿಯಲ್ಲದಿದ್ದರೂ ಅಪಾಯಕಾರಿಯಲ್ಲದ) ಸರಕಾರವನ್ನು ಜನಾದೇಶದ ಮೂಲಕ ತಂದಿದ್ದೇವೆ ಎಂಬುದನ್ನು ಹೊರತು ಪಡಿಸಿದರೆ, ಅಧಿಕಾರ ಮತ್ತು ಆರ್ಥಿಕ ನೀತಿಗಳಲ್ಲಿ ಎರಡೂ ಪಕ್ಷಗಳ ಮಧ್ಯೆ ಮೂಲಭೂತ ವ್ಯತ್ಯಾಸವಿಲ್ಲ. ಉದಾಹರಣೆಗೆ, ಮೆಕಾಲೆ ಶಿಕ್ಷಣ ಪದ್ಧತಿಯನ್ನು ವಿರೋಧಿಸುತ್ತಲೇ, ಅದೇ ಶಿಕ್ಷಣ ವ್ಯವಸ್ಥೆಯ ಭಾಗವಾಗಿ ತಮ್ಮ ಮಕ್ಕಳನ್ನು ಓದಿಸಿ ಹೊರದೇಶಕ್ಕೆ ಕಳಿಸುವ ದೇಶಪ್ರೇಮಿ ಸಂಘಟನೆಗಳು ಅದನ್ನು ಬದಲಾಯಿಸುವ ಗೋಜಿಗೆ ಹೋಗದೆ ರಾಜಕೀಯಕ್ಕಾಗಿ ಶಿಕ್ಷಣದ ಭಾರತೀಕರಣದ ಪ್ರಹಸನ ನಡೆಸುತ್ತಿರುವುದನ್ನು ನಾವು ನೋಡಿದ್ದೇವೆ. ಈ ಭಾರತೀಕರಣದ ಹೊಸ ಅವತಾರವೇ ರಾಷ್ಟ್ರೀಯ ಶಿಕ್ಷಣ ನೀತಿ ೨೦೨೦. ಶಿಕ್ಷಣದ ಭಾರತೀಕರಣ ಸನಾತನ ಮೌಲ್ಯಗಳನ್ನು ಮತ್ತು ಪರಂಪರೆಯನ್ನು (ಈಗ ಚರ್ಚೆಯಾಗುತ್ತಿರುವ ಸನಾತನ ಧರ್ಮದ ಚೌಕಟ್ಟಿನಲ್ಲಿ) ತನ್ನ ಒಡಲಾಳದಲ್ಲಿ ಇರಿಸಿಕೊಂಡಿದೆ. ರಾಷ್ಟ್ರೀಯ ಶಿಕ್ಷಣ ನೀತಿ ೨೦೨೦ರ ಮೂಲ ಉದ್ದೇಶವೇ ಶಿಕ್ಷಣದ ಖಾಸಗೀಕರಣ, ಕಾರ್ಪೊರೇಟರೀಕರಣ, ಕೇಂದ್ರೀಕರಣ ಹಾಗೂ ಭಾರತೀಕರಣದ ಹೆಸರಲ್ಲಿ ಕೋಮುವಾದೀಕರಣ ಮತ್ತು ಕೇಸರೀಕರಣ. ಇದಕ್ಕೆ ಭಿನ್ನವಾದ ರೀತಿಯಲ್ಲಿ ಆಲೋಚಿಸಬೇಕಾದವರೂ ಅದೇ ದಾರಿ ತುಳಿಯಲು ಕಾರಣವೇನೆಂಬುದನ್ನು ನಾವು ಅರ್ಥಮಾಡಿಕೊಳ್ಳಬೇಕಿದೆ.
ನಾವು ತರಬೇತಿಗಾಗಿ (Schooling) ಶಿಕ್ಷಣ ಮತ್ತು ಮಾನವೀಯ ಮೌಲ್ಯಗಳ ಪ್ರಜಾಸತ್ತಾತ್ಮಕ ಸಮಸಮಾಜಕ್ಕಾಗಿ ನೈಜ ಶಿಕ್ಷಣದ ನಡುವಿನ ವ್ಯತ್ಯಾಸವನ್ನು ಅರಿಯಬೇಕು. ಬಂಡವಾಳಶಾಹಿ ಅಥವಾ ನವ-ಉದಾರವಾದಿ ಅವಶ್ಯಕತೆಗಳ ಪೂರೈಕೆಗೆಂದೇ ಕಟ್ಟಿಕೊಂಡಿರುವ ಸ್ಕೂಲಿಂಗ್ ಎಂಬ ಶಾಲಾ ಶಿಕ್ಷಣ ಪ್ರಕ್ರಿಯೆಯ ಸ್ವರೂಪ, ವಿಧಾನ ಹಾಗೂ ಕಲಿಸುವ ವಿಷಯ, ಆ ವ್ಯವಸ್ಥೆಯ ಅವಶ್ಯಕತೆಗಳ ಪೂರೈಕೆ ಮತ್ತು ಅದನ್ನು ಯಥಾವತ್ತಾಗಿ ಮುಂದುವರಿಸುವ ಉದ್ದೇಶಕ್ಕೆ ಮಾತ್ರ ಸೀಮಿತವಾಗಿರುತ್ತದೆ. ಬಂಡವಾಳಶಾಹಿ ಶಿಕ್ಷಣ ವ್ಯವಸ್ಥೆ ತನ್ನ ಲಾಭಗಳಿಕೆಯ ಕಾರ್ಯತಂತ್ರದ ಭಾಗವಾಗಿ ಅಗ್ಗದ ಬೆಲೆಯಲ್ಲಿ ದೊರೆಯಬಹುದಾದ ನವಸಾಕ್ಷರತೆ ಮತ್ತು ಕೌಶಲಾಧಾರಿತ ನೆಲೆಯಲ್ಲಿ ದುಡಿಯುವ ಒಂದು ಮೂಕ ವರ್ಗವನ್ನು ಕಟ್ಟಿಕೊಡುವ ಸಂಕುಚಿತ ಆಶಯಕ್ಕೆ ಸೀಮಿತವಾಗಿರುತ್ತದೆ. ಇಲ್ಲಿ ವಿನಮ್ರತೆಯಿಂದ ತಗ್ಗಿ-ಬಗ್ಗಿ ನಡೆಯುವ ಮತ್ತು ಹೇಳಿದ್ದನ್ನು ಕೇಳುವ-ಮಾಡುವ ಹಾಗೂ ಅದಕ್ಕೆ ಪೂರಕವಾದ ಸಂಸ್ಕೃತಿ ಮೌಲ್ಯಗಳನ್ನು ಒಪ್ಪಿ ನಡೆಯುವ ಒಂದು ನಿಷ್ಠಾವಂತ ವರ್ಗವನ್ನು ಸೃಷ್ಟಿಸುವುದೇ ಶಿಕ್ಷಣದ ಮೂಲ ಉದ್ದೇಶವಾಗಿದೆ.
ಇದಕ್ಕೆ ಪರ್ಯಾಯವಾಗಿ, ನಮ್ಮ ಸಂವಿಧಾನಬದ್ಧ ಶಿಕ್ಷಣ ಭಾರತವನ್ನು ಒಂದು ಸಾರ್ವಭೌಮ, ಸಮಾಜವಾದಿ, ಜಾತ್ಯತೀತ ಹಾಗೂ ಪ್ರಜಾಸತ್ತಾತ್ಮಕ ಗಣರಾಜ್ಯವನ್ನಾಗಿಸುವ ಆಶಯವನ್ನು ಹೊಂದಿದೆ. ಸಂವಿಧಾನ ಶಿಕ್ಷಣವನ್ನು ಒಂದು ಸಾಮಾಜಿಕ ಒಳಿತು ಮತ್ತು ಸಾಮಾಜಿಕ ಪರಿವರ್ತನೆಯ ಸಾಧನವನ್ನಾಗಿ ನೋಡುತ್ತದೆ. ಶಿಕ್ಷಣವನ್ನು ಮಾನವ ವಿಮೋಚನೆ, ಪ್ರಜಾಪ್ರಭುತ್ವದ ಬಲವರ್ಧನೆ ಮತ್ತು ಸಮಾಜವಾದದ ಮೌಲ್ಯಗಳನ್ನು ಒಳಮಾಡಿಕೊಳ್ಳುವ ಸಮಾನತೆ, ಸಾಮಾಜಿಕ ನ್ಯಾಯ ಮತ್ತು ತಾರತಮ್ಯರಹಿತ ಸಮಸಮಾಜವನ್ನು ಕಟ್ಟಿಕೊಡುವ ಆಶಯವನ್ನು ಹೊಂದಿದೆ. ಇಲ್ಲಿ ಅಭಿವ್ಯಕ್ತಿ ಸ್ವಾತಂತ್ರ್ಯ, ಬಹುತ್ವ, ಬಹುಸಂಸ್ಕೃತಿ, ಬಹುಭಾಷೆ, ಜಾತಿ-ಧರ್ಮ ಮೀರಿದ ಭ್ರಾತೃತ್ವ, ಸಾಮರಸ್ಯ, ಸಹಬಾಳ್ವೆ, ಪ್ರಜಾಪ್ರಭುತ್ವದ ಬಲವರ್ಧನೆ, ಇತ್ಯಾದಿಗಳು ಶಿಕ್ಷಣದ ಮೂಲ ಆಶಯಗಳಾಗಿರುತ್ತವೆ. ಎಲ್ಲಕ್ಕಿಂತ ಮಿಗಿಲಾಗಿ, ಸಂವಿಧಾನದ ಪರಿಚ್ಛೇದ ೩೯ರಲ್ಲಿ ಪ್ರಸ್ತಾಪಿಸಿರುವ ಸಮಾಜವಾದಿ ಮೌಲ್ಯಗಳನ್ನು ಸಾಕಾರಗೊಳಿಸುವ ಆಶಯವನ್ನು ರಾಜ್ಯ ಸರಕಾರಗಳು ನಿರ್ದೇಶಕ ತತ್ವಗಳ ಭಾಗವಾಗಿ ಜಾರಿಗೊಳಿಸಬೇಕಾಗುತ್ತದೆ.
ಈ ಕಾರಣದಿಂದಾಗಿಯೇ, ಶಿಕ್ಷಣದ ಮೂಲಭೂತ ಹಕ್ಕನ್ನು ಕೊಡಮಾಡುವ ಸಂವಿಧಾನದ ಆಶಯವನ್ನು ಸಾಕಾರಗೊಳಿಸಲು ರೂಪಿಸಲಾದ ಶಿಕ್ಷಣ ಹಕ್ಕು ಕಾಯ್ದೆ 2009 ತನ್ನ ಉದ್ದೇಶದಲ್ಲಿ ಈ ರೀತಿ ಹೇಳಿದೆ: ‘‘ಈ ಉದ್ದೇಶಿತ ಮಸೂದೆಯನ್ನು ಮೌಲ್ಯಗಳಾದ ಸಮಾನತೆ, ಸಾಮಾಜಿಕ ನ್ಯಾಯ ಮತ್ತು ಪ್ರಜಾಪ್ರಭುತ್ವ ಹಾಗೂ ಒಂದು ನ್ಯಾಯಯುತ ಮಾನವೀಯ ಸಮಾಜವನ್ನು ಕಟ್ಟಿಕೊಳ್ಳಬೇಕಾದರೆ, ಎಲ್ಲರನ್ನೂ ಒಳಗೊಳ್ಳುವ ಪ್ರಾಥಮಿಕ ಶಿಕ್ಷಣದ ಮೂಲಕ ಸಾಧ್ಯ ಎಂಬ ನಂಬಿಕೆಯಿಂದ ರೂಪಿಸಲಾಗುತ್ತಿದೆ. ಅವಕಾಶ ವಂಚಿತ ಹಾಗೂ ದುರ್ಬಲ ವರ್ಗದ ಮಕ್ಕಳಿಗೆ ಉಚಿತ, ಕಡ್ಡಾಯ ಮತ್ತು ತೃಪ್ತಿದಾಯಕ ಶಿಕ್ಷಣದ ಅವಕಾಶ ಒದಗಿಸುವುದು ಕೇವಲ ಸರಕಾರಿ ಅಥವಾ ಸರಕಾರಿ ಅನುದಾನಿತ ಶಾಲೆಗಳದು ಮಾತ್ರವಲ್ಲ, ಅದರ ಜೊತೆಗೆ ಸರಕಾರದ ಹಣಕಾಸನ್ನು ಅವಲಂಬಿಸದ ಶಾಲೆಗಳ ಜವಾಬ್ದಾರಿಯೂ ಹೌದು’’. ನಮ್ಮ ದುರಾದೃಷ್ಟವೆಂದರೆ, ಪದೇ ಪದೇ ಸಂವಿಧಾನವನ್ನು ಉಲ್ಲೇಖಿಸಿ ಮಾತನಾಡುವ ನಮ್ಮ ಜನಪ್ರತಿನಿಧಿಗಳಿಗೆ ಅಥವಾ ಅಧಿಕಾರಶಾಹಿಗೆ ಸಂವಿಧಾನದ ಅಥವಾ ಶಿಕ್ಷಣ ಹಕ್ಕು ಕಾಯ್ದೆಯ ಆಶಯಗಳು ಅರ್ಥವಾದಂತಿಲ್ಲ.
ಸಂವಿಧಾನದ ಆಶಯವನ್ನು ಕಾಯಾ ವಾಚಾ ಮನಸಾ ಈಡೇರಿಸಬೇಕಾದ ಹಾಗೂ ಸಂವಿಧಾನದ ಹೆಸರಿನಲ್ಲಿಯೇ ಪ್ರಮಾಣವಚನ ಸ್ವೀಕರಿಸುವ ಜನಪ್ರತಿನಿಧಿಗಳು, ಶಿಕ್ಞಣವನ್ನು ಖಾಸಗಿಯವರಿಗೆ ವಹಿಸುವ ಹಾಗೂ ತಮ್ಮ ಸಂವಿಧಾನಬದ್ಧ ಜವಾಬ್ದಾರಿಯನ್ನು ಕಾರ್ಯಗತಗೊಳಿಸಲು ಕಾರ್ಪೊರೇಟ್ ಸಂಸ್ಥೆಗಳ ಮುಂದೆ ಮಂಡಿಯೂರಿ ಬೇಡುವ ಪರಿ ಮೂಲಭೂತ ಹಕ್ಕು ಹಾಗೂ ಅವುಗಳನ್ನು ಪಡೆಯುವ ಅಧಿಕಾರ ಹೊಂದಿರುವ ಮೂಲವಾರಸುದಾರರಿಗೆ ತೋರುವ ಅಗೌರವವೆನಿಸುತ್ತದೆ. ಶಿಕ್ಷಣವನ್ನು ಒಂದು ಲಾಭದಾಯಿಕ ಉದ್ದಿಮೆಯ ಭಾಗವಾಗಿ ಶಾಲೆಗಳನ್ನು ನಡೆಸುವ ಖಾಸಗಿ ಉದ್ಯಮಿಗಳ ಮುಂದೆ ಜನರಿಂದ ಆಯ್ಕೆಯಾದ ಗೌರವಾನ್ವಿತ ಜನ ಪ್ರತಿನಿಧಿಗಳಾಗಿ ತಲೆಬಾಗಿ ನಿಲ್ಲುವುದು ಎಷ್ಟು ಸರಿಯೆಂದು ಯೋಚಿಸುವ ಕಾಲ ಬಂದಿದೆ. ಜನರ ತೆರಿಗೆಯಿಂದ ನಿರ್ಮಿಸಿರುವ ರಸ್ತೆ, ನೀರು, ವಿದ್ಯುತ್, ಮೂಲಭೂತ ಸೌಕರ್ಯ, ರಿಯಾಯಿತಿ ದರದಲ್ಲಿ ಭೂಮಿ, ಬ್ಯಾಂಕ್ನಿಂದ ಸಾಲ, ರಾಜ್ಯ ಕಟ್ಟಿದ ಶಿಕ್ಷಣ ವ್ಯವಸ್ಥೆಯಿಂದ ಹೊರಬಂದಿರುವ ಮಾನವ ಸಂಪನ್ಮೂಲ ಇತ್ಯಾದಿಗಳನ್ನು ಬಳಸಿ ಲಾಭ ಗಳಿಸುವ ಉದ್ಯಮಿಗಳು ಹಾಗೂ ಕಾರ್ಪೊರೇಟ್ ಸಂಸ್ಥೆಗಳು ತಮ್ಮ ನಿವ್ವಳ ಆದಾಯದಲ್ಲಿ ಒಂದು ಪಾಲನ್ನು ಸರಕಾರದ ಖಜಾನೆಗೆ ನೀಡಿ ನೈತಿಕತೆಯನ್ನು ಮೆರೆಯಬೇಕಿದೆ. ಅದನ್ನು ಮರೆತು, ಸಿಎಸ್ಅರ್ ನೆಪದಲ್ಲಿ, ಪರೋಪಕಾರ ಮಾಡುವಂತೆ ನಟಿಸಿ ಅಲ್ಲಿಯೂ ತಮ್ಮ ಬಗ್ಗೆ ಪ್ರಚಾರದ ಬ್ಯಾನರ್ಕಟ್ಟುವ ಈ ಸಂಸ್ಥೆಗಳ ಮುಂದೆ ಸರಕಾರ ತಲೆಬಾಗಿ ನಿಲ್ಲುವುದು ತಮ್ಮನ್ನು ಆರಿಸಿ ಕಳಿಸಿದ ಜನರಿಗೆ ಮಾಡುವ ಅಪಚಾರ.
ಹಾಗಾಗಿ, ಸರಕಾರ ಸಿಎಸ್ಆರ್ ಹಣ ಶಿಕ್ಷಣಕ್ಕೆ ಮತ್ತು ಉಳಿದ ಸಂವಿಧಾನಬದ್ಧ ಹಕ್ಕುಗಳ ಜಾರಿಗೆ ಪೂರಕವಾಗಿ ಸಹಾಯವಾಗುತ್ತದೆಯೆಂದು ಭಾವಿಸಿದರೆ, ಮಾನ್ಯ ಮುಖ್ಯಮಂತ್ರಿಗಳ ಘನ ಅಧ್ಯಕ್ಷತೆಯಲ್ಲಿ ಸಂವಿಧಾನಬದ್ಧ ಹಕ್ಕುಗಳ ಸಾಕಾರಕ್ಕಾಗಿ ಸಾರ್ವಜನಿಕ ನಿಧಿ (Public Corpus for Realisation of Fundamental Rights) ಸ್ಥಾಪಿಸಲಿ. ಈ ನಿಧಿಗೆ ಜನರ ತೆರಿಗೆಯಿಂದ ಕೊಡಮಾಡಿರುವ, ಮೂಲಭೂತ ನಾಗರಿಕ ಸೌಲಭ್ಯಗಳನ್ನು ಪಡೆಯುತ್ತಿರುವ ಎಲ್ಲ ಉದ್ಯಮಪತಿಗಳು, ಕಾರ್ಪೊರೇಟ್ ಸಂಸ್ಥೆಗಳು ಮತ್ತು ವ್ಯಾಪಾರಸ್ಥರು ತಮ್ಮ ನ್ಯಾಯಬದ್ಧ ತೆರಿಗೆ ಪಾವತಿಸುವುದರ ಜೊತೆಗೆ ತಮ್ಮ ನಿವ್ವಳ ಲಾಭದಲ್ಲಿ ಅವರು ಇಷ್ಟಪಟ್ಟು ಕೊಡಬಹುದಾದ ಒಂದು ಭಾಗವನ್ನು ತಮ್ಮ ಸಾಮಾಜಿಕ ಜವಾಬ್ದಾರಿಯ ಭಾಗವಾಗಿ ನೀಡಬಹುದು. ಜೊತೆಗೆ, ಸಾರ್ವಜನಿಕ ಶಿಕ್ಷಣ ವ್ಯವಸ್ಥೆ ಕಟ್ಟುವಲ್ಲಿ ಸಾಮಾಜಿಕ ಕಳಕಳಿಯುಳ್ಳ ಎಲ್ಲಾ ನಾಗರಿಕರು ತಮ್ಮ ಶಕ್ತ್ಯಾನುಸಾರ ದೇಣಿಗೆಯನ್ನು ಈ ಸಾರ್ವಜನಿಕ ನಿಧಿಗೆ ನೀಡಬಹುದು. ಇದಕ್ಕೆ ಯಾವುದೇ ಮಿತಿಯಿರಬೇಕಿಲ್ಲ. ಈ ಹಣವನ್ನು ಸರಕಾರ ಸಾರ್ವಜನಿಕ ಶಿಕ್ಷಣ, ಆರೋಗ್ಯ, ಮೂಲಸೌಕರ್ಯ ಇತ್ಯಾದಿಗಳಿಗೆ ಬಳಸಲು ನಿರ್ದಿಷ್ಟ ಯೋಜನೆಯನ್ನು ತಯಾರಿಸಿ ಅನುಷ್ಠಾನಗೊಳಿಸಬಹುದು. ಈ ನಿಧಿಯನ್ನು ಅರ್ಥಪೂರ್ಣವಾಗಿ ಉಪಯೋಗಿಸಲು ಒಂದು ಸಾಂಸ್ಥಿಕ ಚೌಕಟ್ಟನ್ನು ಕಟ್ಟಿಕೊಟ್ಟಂತಾಗುತ್ತದೆ. ಆಗ ಮಾತ್ರ, ನಮ್ಮ ಕೆಲಸ ಕಾರ್ಯಗಳು ಸಂವಿಧಾನಬದ್ಧವಾಗಿರುತ್ತವೆ. ಜೊತೆಗೆ, ಈ ವ್ಯವಸ್ಥೆ ನಾಡಿನ ಸ್ವಾಭಾವಿಕ ಸಂಪನ್ಮೂಲಗಳನ್ನು ಬಳಸಿ ಲಾಭಗಳಿಸುವ ಸಂಸ್ಥೆಗಳು ತಮ್ಮ ಉತ್ತರದಾಯಿತ್ವವನ್ನು ಸಾಬೀತುಪಡಿಸಲು ಒಂದು ಹೊಸ ಬಗೆಯ ಸಾಂಸ್ಥಿಕ ಚೌಕಟ್ಟು ನಿರ್ಮಾಣವಾದಂತಾಗುತ್ತದೆ. ಸರಕಾರ ತನ್ನ ಉತ್ತರದಾಯಿತ್ವದ ದೃಷ್ಟಿಯಿಂದ ಈ ಹಣವನ್ನು ಹೇಗೆ ಸಮರ್ಪಕವಾಗಿ ಬಳಸಲಾಗಿದೆ ಎಂದು ಸಾರ್ವಜನಿಕ ನಿಧಿಗೆ ಹಣ ನೀಡಿದ ಎಲ್ಲರಿಗೂ ವಾರ್ಷಿಕವಾಗಿ ವರದಿಯನ್ನೂ ನೀಡಬಹುದು. ಇದನ್ನು ಹೊರತು ಪಡಿಸಿ, ಶಿಕ್ಷಣವನ್ನು ಪ್ರತ್ಯಕ್ಷವಾಗಿಯಾಗಲಿ, ಪರೋಕ್ಷವಾಗಿಯಾಗಲಿ ಖಾಸಗಿಯವರಿಗೆ ವಹಿಸುವ ಅಥವಾ ದತ್ತು ನೀಡುವ ಪ್ರಸ್ತಾವನೆ ಸಂವಿಧಾನ ವಿರೋಧಿ ಪ್ರಸ್ತಾವನೆಯಾಗುತ್ತದೆ. ಭಾರತದ ಸಂವಿಧಾನದ ಪ್ರಸ್ತಾವನೆಯನ್ನು ಓದಿ ಪ್ರತಿಜ್ಞೆ ಕೈಗೊಳ್ಳುತ್ತಿರುವ ಇಂದು ನಾವೆಲ್ಲರೂ ಈ ವಿಷಯದಲ್ಲಿ ಆತ್ಮಾವಲೋಕನ ಮಾಡಿಕೊಳ್ಳಬೇಕಿದೆ.