ಪ್ಯಾರಾ ಅತ್ಲೆಟಿಕ್ಸ್ | ಇತಿಹಾಸ ನಿರ್ಮಿಸಿದ ಶರ್ಮಿಳಾ ಧಂಖಡ್ : ಚಿನ್ನ ಗೆದ್ದ ಭಾರತದ ಮೊದಲ ಅತ್ಲೀಟ್

ಶರ್ಮಿಳಾ ಧನ್ಕರ್ | Photo Credit : PTI
ಗ್ಲಾಸ್ಗೊ, ಜು. 28: ಕಾಮನ್ವೆಲ್ತ್ ಗೇಮ್ಸ್ನಲ್ಲಿ ಸೋಮವಾರ ಒಂದೇ ದಿನ ಆರು ಪದಕಗಳನ್ನು ಗೆದ್ದಿರುವ ಭಾರತೀಯ ಕ್ರೀಡಾಪಟುಗಳು ಗಮನಾರ್ಹ ಸಾಧನೆ ಮಾಡಿದರು. ಚಿನ್ನದ ಪದಕ ಜಯಿಸಿದ ದೇಶದ ಮೊತ್ತ ಮೊದಲ ಪ್ಯಾರಾ ಅತ್ಲೀಟ್ ಎಂಬ ಹಿರಿಮೆಗೆ ಪಾತ್ರರಾದ ಶರ್ಮಿಳಾ ಧಂಖಡ್ ಇತಿಹಾಸ ನಿರ್ಮಿಸಿದರು.
ಐದನೇ ದಿನದ ಸ್ಪರ್ಧೆಯಲ್ಲಿ ಶರ್ಮಿಳಾ ಅವರು 9.81 ಮೀ.ದೂರಕ್ಕೆ ಶಾಟ್ಪುಟ್ ಎಸೆದು ಮಹಿಳೆಯರ ಎಫ್57 ಶಾಟ್ಪುಟ್ ಸ್ಪರ್ಧೆಯಲ್ಲಿ ಪ್ರಶಸ್ತಿ ಜಯಿಸಿದರು. ಇದರೊಂದಿಗೆ ಗೇಮ್ಸ್ನ ಪ್ಯಾರಾ ಅತ್ಲೆಟಿಕ್ಸ್ನಲ್ಲಿ ಭಾರತವು 20 ವರ್ಷಗಳಿಂದ ಎದುರಿಸುತ್ತಿದ್ದ ಪದಕದ ಬರವನ್ನು ನೀಗಿಸಿದರು.
2006ರ ಆವೃತ್ತಿಯಲ್ಲಿ ಪುರುಷರ ಡಿಸ್ಕಸ್ ಥ್ರೋ ಸ್ಪರ್ಧೆಯಲ್ಲಿ ರಂಜಿತ್ ಕುಮಾರ್ ಜಯಶೀಲನ್ ಸಿಡಬ್ಲ್ಯುಜಿಯಲ್ಲಿ ಪದಕ ಜಯಿಸಿದ ಕೊನೆಯ ಪ್ಯಾರಾ ಅತ್ಲೀಟ್ ಆಗಿದ್ದಾರೆ.
ಹರ್ಯಾಣದ ಮಹೇಂದ್ರಗಡ ಜಿಲ್ಲೆಯ ಬಡ ಕುಟುಂಬದಿಂದ ಬಂದಿರುವ 40ರ ವಯಸ್ಸಿನ ಶರ್ಮಿಳಾ ಎರಡನೇ ಬಾರಿ ಕಾಮನ್ವೆಲ್ತ್ ಗೇಮ್ಸ್ನಲ್ಲಿ ಸ್ಪರ್ಧಿಸಿದ್ದಾರೆ. ಎರಡನೇ ವಯಸ್ಸಿನಲ್ಲಿ ಪೊಲಿಯೊ ಬಾಧಿತವಾಗಿ ತನ್ನ ಬಲಗಾಲಿನ ಬಲ ಕಳೆದುಕೊಂಡಿದ್ದ ಶರ್ಮಿಳಾ 34ನೇ ವಯಸ್ಸಿನಲ್ಲಿ ತನ್ನ ಕ್ರೀಡಾ ಜೀವನ ಆರಂಭಿಸಿದರು.
‘‘ನನ್ನ ತಾಯಿ ಅಂಧೆ, ನನ್ನ ತಂದೆ ರೈತ. ಬದುಕಲು ತುಂಬಾ ಕಷ್ಟಪಡುತ್ತಿದ್ದೆವು. 19ನೇ ವಯಸ್ಸಿಗೆ ಮದುವೆಯಾದೆ. ಪತಿಯ ಕಿರುಕುಳ ತಾಳಲಾರದೆ ತನ್ನ ಎರಡು ಪುತ್ರಿಯರೊಂದಿಗೆ ತವರು ಮನೆಗೆ ವಾಪಸಾಗಿದೆ. ಒಂದು ದಿನ ರಾತ್ರಿ 11ರಿಂದ 3ರ ತನಕ ನನ್ನ ಮೊದಲ ಪತಿ ನನ್ನನ್ನು ಥಳಿಸಿ ಮನೆಯಿಂದ ಹೊರ ಹಾಕಿದ್ದ. ಆ ನಂತರ ನಾನು ಅಲ್ಲಿಗೆ ಹೋಗಲಿಲ್ಲ’’ ಎಂದು ಶರ್ಮಿಳಾ ಹೇಳಿದರು.
‘‘ಅಜಿತ್ ಸಿಂಗ್ ಅವರೊಂದಿಗೆ ಎರಡನೇ ವಿವಾಹವಾದ ನಂತರ ನನ್ನ ಜೀವನದಲ್ಲಿ ಬದಲಾವಣೆಯಾಯಿತು. ಅವರು ನನ್ನನ್ನು ಪ್ಯಾರಾ ಸ್ಪೋರ್ಟ್ಸ್ಗೆ ಪರಿಚಯಿಸಿದರು. ಕೋಚ್ಗಳಾದ ತೇಕ್ ಚಂದ್ ಹಾಗೂ ದೇವೇಂದ್ರ ಅವರೊಂದಿಗೆ ತರಬೇತಿ ನಡೆಸಲು ಉತ್ತೇಜಿಸಿದರು. 2021ರಲ್ಲಿ ಪ್ಯಾರಾ ನ್ಯಾಶನಲ್ ಚಾಂಪಿಯನ್ಶಿಪ್ನಲ್ಲಿ ಪಾದಾರ್ಪಣೆಗೈದಿದ್ದು, ರಾಷ್ಟ್ರೀಯ ದಾಖಲೆಯೊಂದಿಗೆ ಚಿನ್ನದ ಪದಕ ಜಯಿಸಿದ್ದೆ’’ ಎಂದು ಶರ್ಮಿಳಾ ಹೇಳಿದ್ದಾರೆ.
ಶರ್ಮಿಳಾ 2022ರ ಬರ್ಮಿಂಗ್ಹ್ಯಾಮ್ ಕಾಮನ್ವೆಲ್ತ್ ಗೇಮ್ಸ್ನಲ್ಲಿ ನಾಲ್ಕನೇ ಸ್ಥಾನ ಪಡೆದು ಪದಕ ವಂಚಿತರಾಗಿದ್ದರು. 2023ರ ಏಶ್ಯನ್ ಗೇಮ್ಸ್ನಲ್ಲೂ 4ನೇ ಸ್ಥಾನ ಪಡೆದರು.
ಕನ್ನಡತಿ ಶಿಲ್ಪಾಗೆ ಕಂಚು: ಮಹಿಳೆಯರ ಗುಂಡು ಎಸೆತದ ಎಫ್ 57 ಸ್ಪರ್ಧೆಯಲ್ಲಿ ಕನ್ನಡತಿ ಶಿಲ್ಪಾ ಕೆ. ಎಸ್. ಕಂಚಿನ ಪದಕ ಜಯಿಸಿದರು.
ಕರ್ನಾಟಕದ ಕೆ.ಆರ್.ನಗರ ತಾಲೂಕಿನ ಶಿಲ್ಪಾ ಅವರು ನಾಲ್ಕನೇ ವಯಸ್ಸಿನಲ್ಲಿ ಅಪಘಾತವೊಂದರಲ್ಲಿ ಒಂದು ಕಾಲು ಕಳೆದುಕೊಂಡಿದ್ದರೂ ಛಲ ಬಿಡದೆ ಶಿಕ್ಷಣದೊಂದಿಗೆ ಕ್ರೀಡೆಯಲ್ಲೂ ತನ್ನನ್ನು ತೊಡಗಿಸಿಕೊಂಡು ಎಲ್ಲರಿಗೂ ಸ್ಫೂರ್ತಿಯಾಗಿದ್ದಾರೆ.
ಸರ್ವೇಶ್ ಐತಿಹಾಸಿಕ ಸಾಧನೆ: ಸರ್ವೇಶ್ ಕುಶಾರೆ ಪುರುಷರ ಹೈಜಂಪ್ನಲ್ಲಿ ಬೆಳ್ಳಿ ಪದಕವನ್ನು ಗೆದ್ದಿರುವ ಮೊದಲ ಭಾರತೀಯ ಕ್ರೀಡಾಪಟು ಎನಿಸಿಕೊಂಡು ಐತಿಹಾಸಿಕ ಸಾಧನೆ ಮಾಡಿದರು. ರಾಷ್ಟ್ರೀಯ ದಾಖಲೆವೀರ ಕುಶಾರೆ 2.25 ಮೀ.ದೂರಕ್ಕೆ ಜಾವೆಲಿನ್ ಎಸೆದು ಚಿನ್ನದ ಪದಕದಿಂದ ವಂಚಿತರಾದರು. ಭಾರತದ ಇನ್ನೋರ್ವ ಸ್ಪರ್ಧಿ ಆದರ್ಶ್ ರಾಮ್ ಐದನೇ ಸ್ಥಾನ ಪಡೆದರು.
ಡೆಕಾಥ್ಲಾನ್ಗಿಂತ ಮೊದಲು ಮುನ್ನಚ್ಚರಿಕೆಯ ಕ್ರಮವಾಗಿ ತೇಜಸ್ವಿನ್ ಶಂಕರ್ ಹೈಜಂಪ್ ಫೈನಲ್ ಸ್ಪರ್ಧೆಯಿಂದ ಹಿಂದೆ ಸರಿದರು.
ಪದಕದ ಬೇಟೆ ಮುಂದುವರಿಸಿದ ವೇಟ್ಲಿಫ್ಟರ್ಗಳು: ಭಾರತದ ಪರವಾಗಿ ವೇಟ್ಲಿಫ್ಟರ್ಗಳು ಮತ್ತೊಮ್ಮೆ ಪದಕದ ಬೇಟೆ ಮುಂದುವರಿಸಿದರು.
ಪುರುಷರ 79 ಕೆಜಿ ಸ್ಪರ್ಧೆಯಲ್ಲಿ ವೆಲ್ಲೂರಿ ಅಜಯ್ ಬಾಬು ರೋಚಕ ಸ್ಪರ್ಧೆಯಲ್ಲಿ ಬೆಳ್ಳಿ ಪದಕ ಜಯಿಸಿದರು. ಚಿನ್ನ ಜಯಿಸಿದ್ದ ಮಲೇಶ್ಯದ ಹಿದಾಯತ್ ಮುಹಮ್ಮದ್ಗಿಂತ ಕೇವಲ ಒಂದು ಕೆಜಿ ಹಿಂದುಳಿದರು.
ಮಹಿಳೆಯರ 53 ಕೆಜಿ ವಿಬಾಗದಲ್ಲಿ ಜೀವನಶ್ರೇಷ್ಠ ಸಾಧನೆಯೊಂದಿಗೆ ಜ್ಞಾನೇಶ್ವರಿ ಯಾದವ್ ಬೆಳ್ಳಿ ಪದಕ ಜಯಿಸಿದರು. ಬಿಂದ್ಯಾರಾಣಿ 58 ಕೆಜಿ ತೂಕ ವಿಭಾಗದಲ್ಲಿ ಕಂಚಿನ ಪದಕವನ್ನು ಜಯಿಸಿ ಭಾರತವು ವೇಟ್ಲಿಫ್ಟಿಂಗ್ವೊಂದರಲ್ಲಿ ಒಟ್ಟು ಅರು ಪದಕಗಳನ್ನು ಗೆಲ್ಲುವಲ್ಲಿ ನೆರವಾದರು.
ಭಾರತೀಯ ಬಾಕ್ಸರ್ಗಳಾದ ಸಚಿನ್ ಸಿವಾಚ್, ಅಂಕುಶ್ ಹಾಗೂ ಸಾಕ್ಷಿ ಚೌಧರಿ ಕ್ವಾರ್ಟರ್ ಫೈನಲ್ಗೆ ತಲುಪಿದರು.






