ಕ್ಷೇತ್ರ ಮರುವಿಂಗಡಣೆ ಮಸೂದೆ: ಲೋಕಸಭೆಯಲ್ಲಿ ವಿರೋಧ ಪಕ್ಷಕ್ಕೆ ಅನುಕೂಲಕರವಾಗಿದೆಯೇ?

Photo Credit : PTI
ಎಪ್ರಿಲ್ 16 (ಗುರುವಾರದಿಂದ) ಪ್ರಾರಂಭವಾಗಿರುವ ಮೂರು ದಿನಗಳ ವಿಶೇಷ ಸಂಸತ್ತಿನ ಅಧಿವೇಶನದಲ್ಲಿ ಮಹಿಳಾ ಮೀಸಲಾತಿ ಕಾಯ್ದೆ ಮತ್ತು ಕ್ಷೇತ್ರ ಪುನರ್ ವಿಂಗಡಣೆ ಆಯೋಗ ರಚನೆಗೆ ಸಂಬಂಧಿಸಿದಂತೆ ಲೋಕಸಭೆಯಲ್ಲಿ ಮೂರು ಪ್ರತ್ಯೇಕ ಮಸೂದೆಗಳನ್ನು ಮಂಡಿಸಲಾಗಿದೆ. ಲೋಕಸಭೆಯನ್ನು 545 ರಿಂದ 850 ಸ್ಥಾನಗಳಿಗೆ ವಿಸ್ತರಿಸಲು ಪ್ರಸ್ತಾಪಿಸುವ ಕ್ಷೇತ್ರ ಮರುವಿಂಗಡಣೆ ಮಸೂದೆಯನ್ನು ವಿರೋಧ ಪಕ್ಷಗಳು ವಿರೋಧಿಸಿವೆ. ಸರ್ಕಾರವು ವಿಸ್ತರಣೆಯನ್ನು ನಾರಿ ಶಕ್ತಿ ವಂದನ್ ಅಧಿನಿಯಮ್ (33% ಮಹಿಳಾ ಮೀಸಲಾತಿ) ಅನುಷ್ಠಾನಕ್ಕೆ ಲಿಂಕ್ ಮಾಡಿರುವುದನ್ನು ವಿಪಕ್ಷಗಳು ವಿರೋಧಿಸಿದ್ದು, ಇದು ಆಡಳಿತರೂಢ ಸರ್ಕಾರದ ರಾಜಕೀಯ ಸ್ಟಂಟ್ ಎಂದಿವೆ.
ಸಾಂವಿಧಾನಿಕ ತಿದ್ದುಪಡಿಯಾಗಿ, ಮಸೂದೆಗೆ 368ನೇ ವಿಧಿಯ ಅಡಿಯಲ್ಲಿ "ವಿಶೇಷ ಬಹುಮತ"ದ ಅಗತ್ಯವಿದೆ. ಇದರರ್ಥ ಪ್ರತಿ ಸದನದ ಒಟ್ಟು ಸದಸ್ಯರ ಬಹುಮತದಿಂದ ಹಾಗೂ ಹಾಜರಿರುವ ಮತ್ತು ಮತ ಚಲಾಯಿಸುವ ಸದಸ್ಯರ ಕನಿಷ್ಠ ಮೂರನೇ ಎರಡರಷ್ಟು ಬೆಂಬಲದಿಂದ ಇದನ್ನು ಅನುಮೋದಿಸಬೇಕು.
►ಲೋಕಸಭೆ
ಲೋಕಸಭೆಯಲ್ಲಿ ಪ್ರಸ್ತುತ ಸಂಖ್ಯಾಬಲ 545 ಸದಸ್ಯರಷ್ಟಿದೆ. ಎಲ್ಲಾ ಸಂಸದರು ಹಾಜರಿದ್ದು ಮತ ಚಲಾಯಿಸಿದರೆ, ಮಸೂದೆ ಅಂಗೀಕಾರಗೊಳ್ಳಲು ಕನಿಷ್ಠ 360 ಸದಸ್ಯರ ಬೆಂಬಲ ಬೇಕು. ಆಡಳಿತಾರೂಢ NDA ಪ್ರಸ್ತುತ 293 ಸಂಸದರನ್ನು ಹೊಂದಿದ್ದು, ಸರಿಸುಮಾರು 67 ಮತಗಳ ಕೊರತೆಯನ್ನು ಹೊಂದಿದೆ. 16 ಸಂಸದರನ್ನು ಹೊಂದಿರುವ ತೆಲುಗು ದೇಶಂ ಪಕ್ಷ (ಟಿಡಿಪಿ) ನಂತಹ ಪ್ರಮುಖ ಮಿತ್ರಪಕ್ಷಗಳ ನಿರ್ಧಾರವು ಅನಿಶ್ಚಿತತೆಯನ್ನು ಹೊಂದಿದೆ.
ರಾಜ್ಯಸಭೆ
ಲೋಕಸಭೆಯಲ್ಲಿ ಅನುಮೋದನೆ ಪಡೆದ ನಂತರ ಮಸೂದೆಯನ್ನು ಅಂಗೀಕರಿಸಬೇಕಾದ ರಾಜ್ಯಸಭೆಯಲ್ಲಿ, ಆಡಳಿತಾರೂಢ NDA ತುಲನಾತ್ಮಕವಾಗಿ ಬಲವಾದ ಸ್ಥಾನದಲ್ಲಿದ್ದರೂ ಅಗತ್ಯವಿರುವ ಮೂರನೇ ಎರಡರಷ್ಟು ಬಹುಮತಕ್ಕಿಂತ ಕಡಿಮೆಯಿದೆ.
244 ಸದಸ್ಯರ ಒಟ್ಟು ಬಲದಲ್ಲಿ, ಎಲ್ಲಾ ಸದಸ್ಯರು ಹಾಜರಿದ್ದು ಮತ ಚಲಾಯಿಸಿದರೆ ಮಸೂದೆಗೆ ಕನಿಷ್ಠ 163 ಮತಗಳು ಬೇಕಾಗುತ್ತವೆ. NDAಯ ಬಲ 141. ಪ್ರತಿಪಕ್ಷದ ಸದಸ್ಯರು ಮತದಾನದ ಸಮಯದಲ್ಲಿ ಗೈರುಹಾಜರಾಗಿದರೆ ಅಗತ್ಯವಿರುವ ಸಂಖ್ಯೆ ಕಡಿಮೆಯಾಗಬಹುದು.
►ವಿರೋಧ ಯಾಕೆ?
ಬುಧವಾರ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ, ಮಸೂದೆಯು ಕ್ಷೇತ್ರ ಮರುವಿಂಗಡಣೆಗೆ ರಾಜಕೀಯ ಪ್ರೇರಿತ ಸಂಬಂಧವನ್ನು ಹೊಂದಿರುವುದರಿಂದ ಅದನ್ನು ವಿರೋಧಿಸಲು ವಿರೋಧ ಪಕ್ಷಗಳು ಒಪ್ಪಿಕೊಂಡವು. 2011ರ ಜನಗಣತಿಯನ್ನು ಬಳಸಿಕೊಂಡು ನಕ್ಷೆಗಳನ್ನು ಮರುರೂಪಿಸುವುದು 2029ರ ಚುನಾವಣೆಗೆ ಮೊದಲು ಚುನಾವಣಾ ಕ್ಷೇತ್ರವನ್ನು ಮರುರೂಪಿಸಲು "ಹಿಂಬಾಗಿಲಿನ ಪ್ರವೇಶ" ಎಂದು ಅವರು ಹೇಳಿದ್ದಾರೆ.
ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಮತ್ತು ಸಮಾಜವಾದಿ ಪಕ್ಷದ ಅಖಿಲೇಶ್ ಯಾದವ್ ಇಬ್ಬರೂ ಇದನ್ನು "ಪಿತೂರಿ" ಎಂದು ಕರೆದಿದ್ದಾರೆ. “ನಾವು ಈ ಮಸೂದೆಯನ್ನು ವಿರೋಧಿಸಲು ನಿರ್ಧರಿಸಿದ್ದೇವೆ, ಆದರೆ ಮಹಿಳಾ ಮೀಸಲಾತಿಯನ್ನು ವಿರೋಧಿಸುವುದಿಲ್ಲ. ಮಸೂದೆಯಲ್ಲಿನ ಕ್ಷೇತ್ರ ಮರುವಿಂಗಡಣೆ ನಿಬಂಧನೆಗಳನ್ನು ನಾವು ವಿರೋಧಿಸುತ್ತೇವೆ” ಎಂದು ಖರ್ಗೆ ಹೇಳಿದ್ದಾರೆ.
ಪ್ರಸ್ತಾವಿತ ಡಿಲಿಮಿಟೇಶನ್ ಮಸೂದೆ 2026 ನವೀಕರಿಸಿದ ಜನಸಂಖ್ಯೆ ಮತ್ತು ಮತದಾರರ ದತ್ತಾಂಶವನ್ನು ಆಧರಿಸಿ ರಾಷ್ಟ್ರವ್ಯಾಪಿ ಲೋಕಸಭಾ ಕ್ಷೇತ್ರಗಳನ್ನು ಮರುವಿಂಗಡಣೆ ಮಾಡುವ ನಿರೀಕ್ಷೆಯಿದೆ. ಜನಸಂಖ್ಯಾ ನಿಯಂತ್ರಣವನ್ನು ಉತ್ತೇಜಿಸಲು 1970ರ ದಶಕದಿಂದ ಜಾರಿಯಲ್ಲಿರುವ ಕ್ಷೇತ್ರ ಪುನರ್ ವಿಂಗಡಣೆ ಮೇಲಿನ ಸ್ಥಗಿತದ ಅಂತ್ಯದ ನಂತರ ಈ ಪ್ರಕ್ರಿಯೆ ನಡೆಯುತ್ತಿದೆ. ಈ ಮಸೂದೆಯನ್ನು ಜಾರಿಗೆ ತಂದರೆ, ಪ್ರಸ್ತುತ ಜನಸಂಖ್ಯಾ ವಾಸ್ತವಗಳನ್ನು ಪ್ರತಿಬಿಂಬಿಸಲು ರಾಜ್ಯಗಳಾದ್ಯಂತ ಪ್ರಾತಿನಿಧ್ಯವನ್ನು ಮರುಮಾಪನ ಮಾಡುತ್ತದೆ. ಇದು ಸಂಭಾವ್ಯವಾಗಿ ಒಟ್ಟು ಸೀಟುಗಳ ಸಂಖ್ಯೆಯನ್ನು ಹೆಚ್ಚಿಸುತ್ತದೆ ಮತ್ತು ಅವುಗಳನ್ನು ಪ್ರದೇಶಗಳಾದ್ಯಂತ ಮರುಹಂಚಿಕೆ ಮಾಡುತ್ತದೆ.
►ಲೋಕಸಭಾ ಸ್ಥಾನಗಳನ್ನು ಅದು ಹೇಗೆ ಬದಲಾಯಿಸುತ್ತದೆ?
ಮತದಾರರು ಅಥವಾ ಜನಸಂಖ್ಯೆ ಆಧಾರಿತ ಕ್ಷೇತ್ರ ಮರುವಿಂಗಡಣೆ ಪ್ರಾಥಮಿಕವಾಗಿ ಹೆಚ್ಚಿನ ಬೆಳವಣಿಗೆಯ ಪ್ರದೇಶಗಳ ಮೇಲೆ ಪರಿಣಾಮ ಬೀರುತ್ತದೆ. ಮತದಾರರ ಒತ್ತಡವನ್ನು ಸಮತೋಲನಗೊಳಿಸಲು ವೇಗವಾಗಿ ವಿಸ್ತರಿಸುತ್ತಿರುವ ನಗರ ಮತ್ತು ಸೆಮಿ-ಅರ್ಬನ್ ಕ್ಷೇತ್ರಗಳನ್ನು ವಿಭಜಿಸುವ ಅಥವಾ ಮರುವಿಂಗಡಿಸುವ ಸಾಧ್ಯತೆಯಿದೆ.
ಉತ್ತರ ಪ್ರದೇಶದಲ್ಲಿ ಗಾಝಿಯಾಬಾದ್ ಲೋಕಸಭಾ ಕ್ಷೇತ್ರ, ನೋಯ್ಡಾ ಲೋಕಸಭಾ ಕ್ಷೇತ್ರ ಮತ್ತು ಲಕ್ನೋ ಲೋಕಸಭಾ ಕ್ಷೇತ್ರಗಳಂತಹ ಸ್ಥಾನಗಳು ಜನಸಂಖ್ಯೆಯ ಏರಿಕೆಯಿಂದಾಗಿ ಪ್ರಮುಖ ಪುನರ್ರಚನೆಯನ್ನು ಕಾಣಬಹುದು. ಬಿಹಾರದಲ್ಲಿ ಪಾಟ್ನಾ ಸಾಹಿಬ್ ಲೋಕಸಭಾ ಕ್ಷೇತ್ರ ಮತ್ತು ಮುಜಫರ್ಪುರ್ ಲೋಕಸಭಾ ಕ್ಷೇತ್ರಗಳಂತಹ ಕ್ಷೇತ್ರಗಳನ್ನು ಇದು ವಿಭಜಿಸಬಹುದು.
ಮಹಾರಾಷ್ಟ್ರದಲ್ಲಿ ಥಾಣೆ ಲೋಕಸಭಾ ಕ್ಷೇತ್ರ ಮತ್ತು ಪುಣೆ ಲೋಕಸಭಾ ಕ್ಷೇತ್ರವೂ ಮರುವಿಂಗಡಣೆಗೆ ಒಳಗಾಗಬಹುದು.
►ರಾಜ್ಯವಾರು ಪರಿಣಾಮ: ಯಾರಿಗೆ ಲಾಭ, ಯಾರಿಗೆ ನಷ್ಟ?
ಉತ್ತರ ಪ್ರದೇಶ ಮತ್ತು ಬಿಹಾರದಂತಹ ಉತ್ತರ ಮತ್ತು ಮಧ್ಯ ರಾಜ್ಯಗಳು ಹೆಚ್ಚಿನ ಜನಸಂಖ್ಯಾ ಬೆಳವಣಿಗೆಯಿಂದಾಗಿ ಹೆಚ್ಚಿನ ಸ್ಥಾನಗಳನ್ನು ಪಡೆಯುವ ಸಾಧ್ಯತೆಯಿದೆ. ಮಹಾರಾಷ್ಟ್ರದಂತಹ ರಾಜ್ಯಗಳು, ವಿಶೇಷವಾಗಿ ನಗರ ಪ್ರದೇಶಗಳಲ್ಲಿ, ಮಧ್ಯಮ ಲಾಭವನ್ನು ಪಡೆಯಬಹುದು. ತಮಿಳುನಾಡು ಮತ್ತು ಕೇರಳ ಸೇರಿದಂತೆ ದಕ್ಷಿಣ ರಾಜ್ಯಗಳು ನಿಧಾನಗತಿಯ ಜನಸಂಖ್ಯಾ ಬೆಳವಣಿಗೆಯಿಂದಾಗಿ ಸಂಸತ್ತಿನಲ್ಲಿ ಸೀಮಿತ ಸ್ಥಾನ ಹೆಚ್ಚಳ ಅಥವಾ ಕಡಿಮೆ ಪಾಲನ್ನು ಕಾಣಬಹುದು.
ಈ ಪುನರ್ ವಿಂಗಡಣೆಯು ಲೋಕಸಭೆಯಲ್ಲಿನ ಅಧಿಕಾರದ ಸಮತೋಲನವನ್ನು ಗಮನಾರ್ಹವಾಗಿ ಬದಲಾಯಿಸಬಹುದು.
►ಕ್ಷೇತ್ರ ಮರುವಿಂಗಡಣೆಯ ಸಾಧಕ-ಬಾಧಕಗಳು
►ನ್ಯಾಯಯುತ ಪ್ರಾತಿನಿಧ್ಯ: ಕ್ಷೇತ್ರಗಳನ್ನು ಪ್ರಸ್ತುತ ಜನಸಂಖ್ಯಾ ವಾಸ್ತವಗಳೊಂದಿಗೆ ಜೋಡಿಸುತ್ತದೆ.
►ಉತ್ತಮ ಆಡಳಿತ: ಜನನಿಬಿಡ ಸ್ಥಾನಗಳನ್ನು ವಿಭಜಿಸುವ ಕಾರಣ ಸಂಸದರಿಗೆ ಹೊರೆ ಕಡಿಮೆ ಮಾಡುತ್ತದೆ.
►ನಗರ ಬೆಳವಣಿಗೆಯನ್ನು ಪ್ರತಿಬಿಂಬಿಸುತ್ತದೆ: ವಿಸ್ತರಿಸುತ್ತಿರುವ ನಗರಗಳಿಗೆ ಬಲವಾದ ರಾಜಕೀಯ ಧ್ವನಿಯನ್ನು ನೀಡುತ್ತದೆ.
►ಅನಾನುಕೂಲಗಳು ಮತ್ತು ಕಳವಳಗಳು
►ಪ್ರಾದೇಶಿಕ ಅಸಮತೋಲನ: ಜನಸಂಖ್ಯಾ ಬೆಳವಣಿಗೆಯನ್ನು ನಿಯಂತ್ರಿಸಿದ ರಾಜ್ಯಗಳಿಗೆ ಇದರಿಂದ ಲಾಭವಿಲ್ಲ.
►ರಾಜಕೀಯ ಅಡ್ಡಿ: ಕ್ಷೇತ್ರ ಮರುವಿಂಗಡಣೆಯಿಂದಾಗಿ ಹಾಲಿ ಸಂಸದರು ಭದ್ರಕೋಟೆಗಳನ್ನು ಕಳೆದುಕೊಳ್ಳಬಹುದು.
►ಅನುಷ್ಠಾನ ಸವಾಲುಗಳು: ಭಾರತದಾದ್ಯಂತ ಕ್ಷೇತ್ರಗಳನ್ನು ಮರುರೂಪಿಸುವುದು ಸಂಕೀರ್ಣ ಮತ್ತು ವಿವಾದಾತ್ಮಕವಾಗಿದೆ.






