Fact Check | ಚಿನ್ನ ಖರೀದಿಸಬೇಡಿ ಎಂದು ದೇಶದ ಜನರಿಗೆ ಇಂದಿರಾ ಗಾಂಧಿ ಹೇಳಿದ್ದರೇ?

Photo Credit : X
ಸಾಮಾಜಿಕ ಮಾಧ್ಯಮಗಳಲ್ಲಿ ದಿ ಹಿಂದೂ ಪತ್ರಿಕೆಯ ಕ್ಲಿಪಿಂಗ್ ಒಂದು ಹರಿದಾಡುತ್ತಿದೆ. ಇದು 1967 ರ ದಿ ಹಿಂದೂ ಪತ್ರಿಕೆಯ ಮುಖಪುಟದಂತೆ ಕಾಣುತ್ತಿದ್ದು, ಅದರಲ್ಲಿ "Don’t Buy Gold, Indira Gandhi Tells People — Appeals for National Discipline (ಚಿನ್ನ ಖರೀದಿಸಬೇಡಿ ಎಂದು ಜನರಿಗೆ ಹೇಳಿದ ಇಂದಿರಾ ಗಾಂಧಿ- ರಾಷ್ಟ್ರೀಯ ಶಿಸ್ತಿಗಾಗಿ ಮನವಿ) ಎಂಬ ಹೆಡ್ಡಿಂಗ್ ಇದೆ.
ಪಶ್ಚಿಮ ಏಷ್ಯಾ ಬಿಕ್ಕಟ್ಟಿನ ಮಧ್ಯೆ ಭಾರತೀಯರು ಚಿನ್ನದ ಖರೀದಿ ಮಾಡಬೇಡಿ ಎಂದು ಪ್ರಧಾನಿ ಮೋದಿ ಜನರಲ್ಲಿ ಮನವಿ ಮಾಡಿದ ಬೆನ್ನಲ್ಲೇ ಈ ಕ್ಲಿಪ್ಪಿಂಗ್ ವೈರಲ್ ಆಗಿದೆ. ಈ ಹಿಂದೆ ಇಂದಿರಾ ಗಾಂಧಿ ಕೂಡಾ ಚಿನ್ನ ಖರೀದಿ ಮಾಡಬೇಡಿ ಅಂದಿದ್ದರು. ಇಂದಿರಾ ಮಾಡಿದ್ದನ್ನೇ ಮೋದಿ ಕೂಡಾ ಮಾಡ್ತಾ ಇದ್ದಾರೆ ಎಂದು ಮೋದಿ ಬೆಂಬಲಿಗರು ಈ ಕ್ಲಿಪಿಂಗ್ ನ್ನು ಶೇರ್ ಮಾಡುತ್ತಿದ್ದಾರೆ.
►ವೈರಲ್ ಕ್ಲಿಪ್ಪಿಂಗ್ ನಿಜವೇ?
ಇದು ನಕಲಿ ಕ್ಲಿಪಿಂಗ್. ದಿ ಹಿಂದೂ ಪತ್ರಿಕೆಯ ಸಂಪಾದಕ ಸುರೇಶ್ ನಂಬತ್ ಅವರು ಈ ಬಗ್ಗೆ ಟ್ವೀಟ್ ಮಾಡಿ ಈ ನಕಲಿ ಮುಖಪುಟಕ್ಕೂ ತಮ್ಮ ಪ್ರಕಟಣೆಗೂ ಯಾವುದೇ ಸಂಬಂಧವಿಲ್ಲ. ಜನರು ಅದನ್ನು ಹಂಚಿಕೊಳ್ಳಬೇಡಿ ಎಂದು ಒತ್ತಾಯಿಸಿದ್ದಾರೆ.
ದಿ ಹಿಂದೂ ಪತ್ರಿಕೆಯ ಎಕ್ಸ್ ಖಾತೆಯಲ್ಲಿಯೂ ಈ ಬಗ್ಗೆ ಪೋಸ್ಟ್ ಮಾಡಲಾಗಿದೆ.
ಪತ್ರಕರ್ತ ರಾಜ್ದೀಪ್ ಸರ್ದೇಸಾಯಿ ಅವರು X ನಲ್ಲಿ ವೈರಲ್ ಕ್ಲಿಪ್ಪಿಂಗ್ AI-ರಚಿತವಾಗಿದ್ದು, ಅದು ನಿಜವಾದದ್ದಲ್ಲ. ನಿಜವಾದ ಮುಖಪುಟ ಇಲ್ಲಿದೆ ಎಂದು ಅದರ ಫೋಟೋವನ್ನೂ ಶೇರ್ ಮಾಡಿದ್ದಾರೆ. ಅಷ್ಟೇ ಅಲ್ಲದೆ, 1973 ರಲ್ಲಿ ತೈಲ ಕೊರತೆ ಉಂಟಾದಾಗ ಕೈಗೊಂಡ ಕ್ರಮಗಳ ಬಗ್ಗೆ ಇರುವ ಟೈಮ್ಸ್ ಆಫ್ ಇಂಡಿಯಾ ವರದಿಯ ಪುಟವನ್ನೂ ಅವರು ಹಂಚಿಕೊಂಡಿದ್ದಾರೆ.
ಇತ್ತೀಚಿನ ವರ್ಷಗಳಲ್ಲಿ ರಾಜಕೀಯಕ್ಕೆ ಸಂಬಂಧಿಸಿದಂತೆ ಭಾರತದಲ್ಲಿ AI-ರಚಿತ ಕಂಟೆಂಟ್ ಗಳು ಸಿಕ್ಕಾಪಟ್ಟೆ ಪ್ರಸಾರವಾಗಿವೆ. ಇಂದಿರಾ ಗಾಂಧಿಯವರ ನಕಲಿ ವೀಡಿಯೊ ಸಂದರ್ಶನಗಳು, ತಿರುಚಿದ ಪತ್ರಿಕೆಗಳ ಮುಖಪುಟಗಳು ಮತ್ತು ರಾಜಕೀಯ ವ್ಯಕ್ತಿಗಳ ಡೀಪ್ ಫೇಕ್ ಫೋಟೊಗಳು ಪದೇ ಪದೇ ವೈರಲ್ ಆಗಿವೆ.
►ಇಂದಿರಾ ಗಾಂಧಿ ನಿಜವಾಗಿಯೂ ಚಿನ್ನವನ್ನು ಖರೀದಿಸಬಾರದೆಂದು ಜನರಿಗೆ ಹೇಳಿದ್ದರಾ?
ಹೌದು. ವೈರಲ್ ಕ್ಲಿಪ್ಪಿಂಗ್ ಫೇಕ್ ಆಗಿದ್ದರೂ, ಇಂದಿರಾ ಗಾಂಧಿ ಭಾರತೀಯರಲ್ಲಿ ಚಿನ್ನ ಖರೀದಿಸಬೇಡಿ ಎಂದಿದ್ದರು.
ಚಿನ್ನ ಖರೀದಿಸಬೇಡಿ ಎಂದು ಮನವಿ ಮಾಡಿದ್ದು ಇದೇ ಮೊದಲಲ್ಲ.
1962 ರ ಭಾರತ-ಚೀನಾ ಯುದ್ಧದ ಸಮಯದಲ್ಲಿ, ಪ್ರಧಾನಿ ಜವಾಹರಲಾಲ್ ನೆಹರು ನಾಗರಿಕರಿಗೆ ಚಿನ್ನ ಮತ್ತು ಹಣವನ್ನು ರಾಷ್ಟ್ರೀಯ ರಕ್ಷಣಾ ನಿಧಿಗೆ ದಾನ ಮಾಡುವಂತೆ ಮನವಿ ಮಾಡಿದ್ದರು.
1965 ರಲ್ಲಿ ಪಾಕಿಸ್ತಾನದೊಂದಿಗಿನ ಯುದ್ಧದಿಂದ ಉಂಟಾದ ಹಣಕಾಸಿನ ಸಮಸ್ಯೆಗಳು, ಬರಗಾಲದಿಂದ ಉಂಟಾದ ಆಹಾರ ಬಿಕ್ಕಟ್ಟು, ಭಾರತವನ್ನು ಸ್ವಾತಂತ್ರ್ಯದ ನಂತರದ ತೀವ್ರ ಆರ್ಥಿಕ ಹಿಂಜರಿತಕ್ಕೆ ತಳ್ಳಿತು. 1966 ರಲ್ಲಿ ಮೂರು ವಾರಗಳ ಅವಧಿಯಲ್ಲಿ ಭಾರತದ ವಿದೇಶಿ ವಿನಿಮಯ ವ್ಯಾಪ್ತಿ ಸುಮಾರು 65% ರಷ್ಟು ಕಡಿಮೆಯಾಯಿತು, ಇದರಿಂದಾಗಿ ರೂಪಾಯಿ ಮೌಲ್ಯವು 57% ರಷ್ಟು ಅಪಮೌಲ್ಯಗೊಂಡಿತು. ಆಮದುಗಳನ್ನು ನಿರ್ವಹಿಸಲು ಮತ್ತು ಮೀಸಲುಗಳನ್ನು ರಕ್ಷಿಸಲು ಪ್ರಯತ್ನಿಸುತ್ತಿರುವ ಹೊಸದಾಗಿ ಸ್ವತಂತ್ರಗೊಂಡ ದೇಶಕ್ಕೆ, ಪ್ರಮುಖ ಆಮದು ಸೋರಿಕೆಯಾದ ಚಿನ್ನವನ್ನು ಖರೀದಿಸಬೇಡಿ ಎಂದು ನಾಗರಿಕರನ್ನು ಕೇಳುವುದು ಇಂದಿರಾ ಗಾಂಧಿ ಅವರ ತರ್ಕಬದ್ಧ ಆರ್ಥಿಕ ನೀತಿಯಾಗಿತ್ತು.
1991 ರಲ್ಲಿ, ಇರಾಕ್ ಕುವೈತ್ ಮೇಲೆ ಆಕ್ರಮಣ ಮಾಡಿದ ನಂತರ ತೈಲ ಬೆಲೆಗಳು ಹೆಚ್ಚಾದ ಬಳಿಕ ಭಾರತ ಮತ್ತೆ ತೀವ್ರ ಪಾವತಿ ಸಮತೋಲನ ಬಿಕ್ಕಟ್ಟನ್ನು ಎದುರಿಸಿತು. 1991 ರ ಮಧ್ಯಭಾಗದಲ್ಲಿ, ವಿದೇಶೀ ವಿನಿಮಯ ಮೀಸಲು ಕೇವಲ ಮೂರು ವಾರಗಳ ಆಮದುಗಳನ್ನು ಪೂರೈಸುವಷ್ಟು ಮಟ್ಟಕ್ಕೆ ಕುಸಿದಿತ್ತು. ದೇಶವು ತನ್ನ ವಿದೇಶಿ ಸಾಲವನ್ನು ಅಥವಾ ಬಡ್ಡಿಯನ್ನು ಮರುಪಾವತಿಸಲು ಸಾಧ್ಯವಾಗದ ಸ್ಥಿತಿಯನ್ನು ತಪ್ಪಿಸಲು ಭಾರತವು ಭೌತಿಕವಾಗಿ ಬ್ಯಾಂಕ್ ಆಫ್ ಇಂಗ್ಲೆಂಡ್ ಮತ್ತು ಬ್ಯಾಂಕ್ ಆಫ್ ಜಪಾನ್ ಗೆ ಮೇಲಾಧಾರವಾಗಿ ಚಿನ್ನವನ್ನು ಸಾಗಿಸಿತು.
2013 ರಲ್ಲಿ, ಆಗಿನ ಹಣಕಾಸು ಸಚಿವ ಪಿ ಚಿದಂಬರಂ ತೀವ್ರವಾಗಿ ವಿಸ್ತರಿಸಿದ ಚಾಲ್ತಿ ಖಾತೆ ಕೊರತೆಯನ್ನು ನೀಗಿಸಲು "ಚಿನ್ನವನ್ನು ಖರೀದಿಸುವುದನ್ನು ನಿಲ್ಲಿಸಿ" ಎಂದು ಭಾರತೀಯರನ್ನು ಪದೇ ಪದೇ ಒತ್ತಾಯಿಸಿದರು.
ಚಿನ್ನ ಖರೀದಿ ಮಾಡಬೇಡಿ ಅಂತ ಸರ್ಕಾರ ಹೇಳುತ್ತಿರುವುದು ಭಾರತೀಯ ಆರ್ಥಿಕ ಇತಿಹಾಸದಲ್ಲಿ ಪುನರಾವರ್ತಿತ ಮಾದರಿಯನ್ನು ರೂಪಿಸುತ್ತದೆ.
►ಮೋದಿಯನ್ನು ಕಾಂಗ್ರೆಸ್ ಟೀಕಿಸುತ್ತಿರುವುದೇಕೆ?
ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರು ಮೋದಿಯವರ ಮನವಿಯನ್ನು ಸಲಹೆಯಲ್ಲ, ಬದಲಾಗಿ "ವೈಫಲ್ಯ" ಎಂದು ಹೇಳಿದ್ದಾರೆ. 12 ವರ್ಷಗಳ ಅಧಿಕಾರದ ನಂತರ ಸರ್ಕಾರವು ಆರ್ಥಿಕತೆಯನ್ನು ನಿರ್ವಹಿಸುವಲ್ಲಿ ವಿಫಲವಾದ ಕಾರಣ ನಾಗರಿಕರಿಗೆ ಈಗ ಏನು ಖರೀದಿಸಬೇಕು, ಎಲ್ಲಿ ಪ್ರಯಾಣಿಸಬೇಕು ಮತ್ತು ಹೇಗೆ ಖರ್ಚು ಮಾಡಬೇಕು ಎಂದು ಹೇಳಲಾಗುತ್ತಿದೆ ಎಂದು ರಾಹುಲ್ ಹೇಳಿದ್ದಾರೆ.
ಮೋದಿಯವರ ಮನವಿಯು "ಆರ್ಥಿಕ ತುರ್ತುಸ್ಥಿತಿಯ ಮುನ್ನುಡಿ"ಯೇ ಎಂದು ಎಎಪಿಯ ಅರವಿಂದ್ ಕೇಜ್ರಿವಾಲ್ ಕೇಳಿದ್ದಾರೆ. ಆಡಳಿತ ವ್ಯವಸ್ಥೆಯು ದೊಡ್ಡ ಪ್ರಮಾಣದ ರ್ಯಾಲಿಗಳನ್ನು ಮುಂದುವರಿಸುತ್ತಿರುವಾಗ ದೇಶಭಕ್ತಿಯ ಹೆಸರಿನಲ್ಲಿ ನಾಗರಿಕರು ಹೊರೆಯನ್ನು ಹೊರುವಂತೆ ಕೇಳಲಾಗುತ್ತಿದೆ ಎಂದು ಎಎಪಿ ಸಂಸದ ಸಂಜಯ್ ಸಿಂಗ್ ಆರೋಪಿಸಿದ್ದಾರೆ.
ಇದಕ್ಕೆ ತಿರುಗೇಟು ನೀಡಿದ ಬಿಜೆಪಿ, ಇತಿಹಾಸ ಅಥವಾ ಆರ್ಥಿಕ ನಿರ್ವಹಣೆಯನ್ನು ಅರ್ಥಮಾಡಿಕೊಳ್ಳದೆ ಮೋದಿಯ ಪ್ರತಿಯೊಂದು ನಡೆಯನ್ನು ವಿರೋಧಿಸುವುದನ್ನು ಕಾಂಗ್ರೆಸ್ ನಾಯಕರು "ದೈನಂದಿನ ದಿನಚರಿ"ಯನ್ನಾಗಿ ಮಾಡಿಕೊಂಡಿದ್ದಾರೆ. ಇಂದಿರಾ ಗಾಂಧಿ ಅಥವಾ ಚಿದಂಬರಂ ಇದೇ ರೀತಿಯ ಮನವಿಗಳನ್ನು ಮಾಡಿದಾಗ, ಕಾಂಗ್ರೆಸ್ ಅದನ್ನು ಆರ್ಥಿಕ ನೀತಿ ಎಂದು ಸಮರ್ಥಿಸಿಕೊಂಡಿತು. ಆದರೆ ಮೋದಿ ರಾಷ್ಟ್ರೀಯ ಹಿತಾಸಕ್ತಿಯಲ್ಲಿ ಅದೇ ರೀತಿ ಮಾಡಿದಾಗ, ಕಾಂಗ್ರೆಸ್ ಅದನ್ನು ತಪ್ಪು ಎಂದು ಕರೆಯುತ್ತದೆ ಎಂದಿದೆ.
ನಕಲಿ ಕ್ಲಿಪ್ಪಿಂಗ್ ನ ಫ್ಯಾಕ್ಟ್ ಚೆಕ್ ಮಾಡಿದ ಪತ್ರಕರ್ತ ಸರ್ದೇಸಾಯಿ, ಹೌದು, ಹಿಂದಿನ ಸರ್ಕಾರಗಳು ಇದೇ ರೀತಿಯ ಮನವಿಗಳನ್ನು ಮಾಡಿದ್ದವು. ಆದರೆ 2026 ರಲ್ಲಿ ಭಾರತವು ಮೂಲಭೂತವಾಗಿ ವಿಭಿನ್ನ ಆರ್ಥಿಕತೆಯಾಗಿದೆ. 800 ಶತಕೋಟಿ ಡಾಲರ್ ವಿದೇಶೀ ವಿನಿಮಯ ಮೀಸಲು ಹೊಂದಿರುವ ದೇಶವು, 1967 ಮತ್ತು 1991 ರ ತೀವ್ರ ದುರ್ಬಲತೆಗಳನ್ನು ದಾಟಿದೆ. ಆಗ ಆಮದು ವ್ಯಾಪ್ತಿಯನ್ನು ವರ್ಷಗಳಲ್ಲಿ ಅಲ್ಲ, ವಾರಗಳಲ್ಲಿ ಅಳೆಯಲಾಗುತ್ತಿತ್ತು. ಭಾರತದ ಚಿನ್ನದ ಆಮದು 2025-26 ರಲ್ಲಿ ದಾಖಲೆಯ ಶೇ. 24 ರಷ್ಟು ಏರಿಕೆಯಾಗಿದೆ. ಇದು ನಿಜವಾದ ಒತ್ತಡದ ಹಂತವಾಗಿದೆ. ಆದರೆ ಇಂದು ಸ್ವಯಂಪ್ರೇರಿತ ಸಂಯಮವನ್ನು ಕೇಳುತ್ತಿರುವ ಆರ್ಥಿಕತೆಯು 1967 ರ ಅದೇ ದುರ್ಬಲ, ನೆರವು-ಅವಲಂಬಿತ, ಕ್ಷಾಮದಿಂದ ಚೇತರಿಸಿಕೊಳ್ಳುವ ಭಾರತವಲ್ಲ ಎಂದು ಹೇಳಿದ್ದಾರೆ.






