ನಕಲಿ ಶಿಕ್ಷಕರ ವೇತನ ಪಾವತಿ: ಅಧಿಕಾರಿಗಳ ವಿರುದ್ಧ ವಿಚಾರಣೆ ಕೈ ಬಿಟ್ಟು ಆರೋಪ ಮುಕ್ತಗೊಳಿಸಿದ ಇಲಾಖೆ

ಬೆಂಗಳೂರು : ರಾಮನಗರ ಜಿಲ್ಲೆಯಲ್ಲಿ 2011ರಿಂದ 2014ರವರೆಗೆ ಎಚ್ಆರ್ಎಂಎಸ್ ಮೂಲಕ ನಕಲಿ ಶಿಕ್ಷಕರ ವೇತನ ಪಾವತಿಸಿ ಸರಕಾರಕ್ಕೆ ಮಾಡಿದ್ದ ವಂಚನೆ ಪ್ರಕರಣದಲ್ಲಿ ಕೆಲವು ಅಧಿಕಾರಿಗಳ ವಿರುದ್ಧ ಸರಕಾರದ ಹಂತದಲ್ಲಿಯೇ ಇಲಾಖೆ ವಿಚಾರಣೆಯನ್ನು ಕೈ ಬಿಟ್ಟು ಆರೋಪ ಮುಕ್ತಗೊಳಿಸಿರುವುದು ಆರ್ಟಿಐ ದಾಖಲೆಗಳಿಂದ ಬಹಿರಂಗವಾಗಿದೆ.
ಸಹ ಶಿಕ್ಷಕರ ನೇಮಕಾತಿ ಅಕ್ರಮ ಪ್ರಕರಣದಲ್ಲಿ ಬಂಧನಕ್ಕೊಳಗಾಗಿದ್ದ ಎಂ.ಪಿ.ಮಾದೇಗೌಡ ಮತ್ತಿತರರ ವಿರುದ್ಧ ಶಿಸ್ತು ಕ್ರಮ ಜರುಗಿಸುವ ಕುರಿತು ಮತ್ತು ಮರು ವಿಚಾರಣೆ ನಡೆಸಬೇಕು ಎಂದು ಕಾನೂನು ಇಲಾಖೆಯು 2 ವರ್ಷಗಳ ಹಿಂದೆಯೇ ಅಭಿಪ್ರಾಯ ನೀಡಿತ್ತು. ಆದರೆ ಈ ಕುರಿತು ಶಾಲಾ ಶಿಕ್ಷಣ ಮತ್ತು ಸಾಕ್ಷರತೆ ಇಲಾಖೆಯು ಏನು ಕ್ರಮಕೈಗೊಂಡಿದೆ ಎಂಬ ಬಗ್ಗೆ ಇದುವರೆಗೂ ಯಾವುದೇ ಮಾಹಿತಿಯನ್ನು ಇಲಾಖೆಯು ಬಹಿರಂಗಪಡಿಸಿಲ್ಲ.
ಇದಕ್ಕೆ ಸಂಬಂಧಿಸಿದಂತೆ ‘‘the-file.in’ ಆರ್ಟಿಐ ಅಡಿಯಲ್ಲಿ ಕಾನೂನು ಇಲಾಖೆಯ ಅಭಿಪ್ರಾಯದ ಕಡತವನ್ನು ಪಡೆದುಕೊಂಡಿದೆ.
ಎಂ.ಪಿ.ಮಾದೇಗೌಡ ಮತ್ತಿತರರ ವಿರುದ್ಧ ಶಿಸ್ತು ಕ್ರಮ ಜರುಗಿಸುವ ಕುರಿತು ಶಾಲಾ ಶಿಕ್ಷಣ ಮತ್ತು ಸಾಕ್ಷರತೆ ಇಲಾಖೆಯು ಕಾನೂನು ಇಲಾಖೆಯ ಅಭಿಪ್ರಾಯ ಕೋರಿತ್ತು. ಈ ಕುರಿತು ಕಡತವನ್ನು ಪರಿಶೀಲಿಸಿದ್ದ ಕಾನೂನು ಇಲಾಖೆಯು ಈ ಪ್ರಕರಣದಲ್ಲಿ ಆರೋಪಿತ ಅಧಿಕಾರಿಗಳ ವಿರುದ್ಧ ಮರು ವಿಚಾರಣೆ ಮಾಡಬೇಕಾಗುತ್ತದೆ ಎಂದು ಅಭಿಪ್ರಾಯಿಸಿತ್ತು.
2011ರಿಂದ 2014ರವರೆಗೆ ರಾಮನಗರ ಜಿಲ್ಲೆ ಎಚ್ಆರ್ಎಂಎಸ್ ಮೂಲಕ ನಕಲಿ ಶಿಕ್ಷಕರಿಗೆ ವೇತನ ಪಾವತಿಸಿ ಸರಕಾರಕ್ಕೆ ವಂಚನೆಯಾಗಿತ್ತು. ಈ ಪ್ರಕರಣದಲ್ಲಿ 10 ಆರೋಪಿತರ ವಿರುದ್ಧ ಶಿಸ್ತು ಕ್ರಮ ಜರುಗಿಸಲು ಕ್ರಮವಹಿಸಿತ್ತು. 2 ಆರೋಪಿತರ ವಿರುದ್ಧ ಇಲಾಖೆ ಆಯುಕ್ತರ ಹಂತದಲ್ಲಿ ಹಾಗೂ ಉಳಿದ ಗ್ರೂಪ್ ಎ ಅಧಿಕಾರಿಗಳ ವಿರುದ್ಧ ಸರಕಾರದ ಹಂತದಲ್ಲಿ ಇಲಾಖೆ ವಿಚಾರಣೆ ನಡೆಸಿತ್ತು.
ಅಲ್ಲದೇ ಸರಕಾರದ ಹಂತದಲ್ಲಿ ನಡೆಸಿದ್ದ ವಿಚಾರಣೆಯಲ್ಲಿ 4 ಅಧಿಕಾರಿಗಳು ನಿವೃತ್ತರಾಗಿದ್ದರು. ಹೀಗಾಗಿ ಅವರ ವಿರುದ್ಧ ಇಲಾಖೆ ವಿಚಾರಣೆ ನಡೆದಿರಲಿಲ್ಲ. ಮತ್ತು ಉಳಿದ 4 ಅಧಿಕಾರಿಗಳ ವಿರುದ್ಧ ವಿಚಾರಣೆ ನಡೆದು ದೋಷಮುಕ್ತಗೊಳಿಸಿ ಅಂತಿಮ ಆದೇಶ ಮಾಡಲಾಗಿತ್ತು ಎಂದು ಕಾನೂನು ಇಲಾಖೆಯು ತನ್ನ ಅಭಿಪ್ರಾಯದಲ್ಲಿ ಉಲ್ಲೇಖಿಸಿರುವುದು ಗೊತ್ತಾಗಿದೆ.
ಅಲ್ಲದೇ ಆಯುಕ್ತರ ಹಂತದಲ್ಲಿ ನಡೆದಿದ್ದ ವಿಚಾರಣೆಯ ಒಂದು ಪ್ರಕರಣದಲ್ಲಿ ಪ್ರಥಮ ದರ್ಜೆ ಸಹಾಯಕ ಮಂಜುನಾಥ್ ಡಿ.ವಿ. ಅವರನ್ನು ಸೇವೆಯಿಂದ ವಜಾಗೊಳಿಸಿತ್ತು. ಈ ಕುರಿತು ಆರೋಪಿತ ಅಧಿಕಾರಿ ಕೆಎಟಿಯಲ್ಲಿ ಅರ್ಜಿ (ಸಂಖ್ಯೆ; 2680/2021) ದಾಖಲಿಸಿದ್ದರು. ಈ ಪ್ರಕರಣದಲ್ಲಿ ಇಲಾಖೆ ಪರ 2022ರ ಜನವರಿ 12ರಂದು ತೀರ್ಪು ಬಂದಿತ್ತು. ಈ ತೀರ್ಪಿನ ವಿರುದ್ಧ ಆರೋಪಿತ ಅಧಿಕಾರಿ ಉಚ್ಛ ನ್ಯಾಯಾಲಯದಲ್ಲಿ ರಿಟ್ ಮೂಲಕ ಮೇಲ್ಮನವಿ (ಸಂಖ್ಯೆ 16654/2022) ಸಲ್ಲಿಸಿದ್ದರು. ಹೈಕೋರ್ಟ್ ಕೂಡ 2023ರ ಆಗಸ್ಟ್ 18ರಂದು ಕೆಎಟಿ ಆದೇಶವನ್ನೇ ಎತ್ತಿ ಹಿಡಿದಿತ್ತು. ಹೈಕೋರ್ಟ್ ನೀಡಿದ್ದ ಆದೇಶದ ವಿರುದ್ಧ ಮೇಲ್ಮನವಿ ಸಲ್ಲಿಸಲು ಈ ಪ್ರಕರಣವು ಅರ್ಹವಾಗಿಲ್ಲ ಎಂದು ಶಾಲಾ ಶಿಕ್ಷಣ ಮತ್ತು ಸಾಕ್ಷರತೆ ಇಲಾಖೆಯು ಅಭಿಪ್ರಾಯಿಸಿತ್ತು.
ಆರೋಪಿತ ಅಧಿಕಾರಿಗಳನ್ನು ಕರ್ತವ್ಯದಿಂದ ವಜಾಗೊಳಿಸಿರುವುದನ್ನು ಕರ್ನಾಟಕ ಆಡಳಿತ ನ್ಯಾಯ ಮಂಡಳಿಯು ಸ್ಥಿರೀಕರಿಸಿತ್ತು. ಅಲ್ಲದೇ ಎಲ್ಲಾ ಆರೋಪಿತ ಅಧಿಕಾರಿಗಳ ವಿರುದ್ಧ ಜಂಟಿ ವಿಚಾರಣೆ ಕೈಗೊಳ್ಳಲು ನ್ಯಾಯ ಮಂಡಳಿಯು ಆದೇಶಿಸಿತ್ತು. ಹೀಗಾಗಿ ಇಲಾಖೆಯು ಜಂಟಿ ಇಲಾಖೆ ವಿಚಾರಣೆ ನಡೆಸಲು ಮುಂದಾಗಿತ್ತು. ಆದರೆ ಆರೋಪಿತರ ಪೈಕಿ 4 ಮಂದಿ ಅಧಿಕಾರಿಗಳು ನಿವೃತ್ತರಾಗಿದ್ದರು. ಹೀಗಾಗಿ ಕೆಸಿಎಸ್ಆರ್ ನಿಯಮಾವಳಿಗಳ ಪ್ರಕಾರ ಕಾಲಮಿತಿ ಮೀರಿತ್ತು. ಈ ಮಧ್ಯೆ ಇನ್ನುಳಿದ 4 ಆರೋಪಿತ ಅಧಿಕಾರಿಗಳ ವಿರುದ್ಧ ಈಗಾಗಲೇ ನಿಯಮಗಳ ಅನ್ವಯ ಶಿಸ್ತು ಕ್ರಮ ಜರುಗಿಸುತ್ತಾದರೂ ಕಡೆಯಲ್ಲಿ ಅವರನ್ನು ದೋಷಮುಕ್ತಗೊಳಿಸಿತ್ತು.
ಈ ಪ್ರಕರಣದದಲ್ಲಿ ಅರ್ಜಿದಾರರನ್ನು ಹೊರತುಪಡಿಸಿ ಬಾಕಿ ಉಳಿದ ಮತ್ತೋರ್ವ ಆರೋಪಿತರ ವಿರುದ್ಧ ದಂಡನೆ ವಿಧಿಸಲು ಶಾಲಾ ಶಿಕ್ಷಣ ಮತ್ತು ಸಾಕ್ಷರತೆ ಇಲಾಖೆಯು ಪರಿಶೀಲನೆ ನಡೆಸಿತ್ತು.






