ಫತೇಪುರ್ ಸಿಕ್ರಿ : ಮೊಗಲರ ಕಾಲದ ಸಂಸ್ಕೃತಿ, ಧಾರ್ಮಿಕ ಸಹಿಷ್ಣುತೆಯ ಸಂಕೇತ

ಅಕ್ಬರ್ ಅತ್ಯಂತ ಪ್ರೀತಿ ಹಾಗೂ ಗೌರವದ ಸಂಕೇತವಾಗಿ ನಿರ್ಮಿಸಿದ ‘ಫತೇಹ್ಪುರ್ ಸಿಕ್ರಿ’ ನಗರವನ್ನು ಕೆಲವೇ ವರ್ಷಗಳಲ್ಲಿ ತ್ಯಜಿಸುವಂತಾಯಿತು. ನೀರಿನ ಕೊರತೆ ಹಾಗೂ ರಾಜಕೀಯ ಕಾರಣಗಳಿಂದಾಗಿ ಕ್ರಿ.ಶ.1585ರಲ್ಲಿ ತನ್ನ ರಾಜಧಾನಿಯನ್ನು ಪುನಃ ಆಗ್ರಾಕ್ಕೆ ಸ್ಥಳಾಂತರಿಸಲಾಯಿತು. ಆದರೆ, ಫತೇಹ್ಪುರ್ ಸಿಕ್ರಿ ಇಂದಿಗೂ ತನ್ನ ಅದ್ಭುತ ಸೌಂದರ್ಯ ಮತ್ತು ಐತಿಹಾಸಿಕ ಪ್ರಭಾವದ ಸಾಕ್ಷಿಯಾಗಿ ನಿಂತಿದೆ.
ಆಗ್ರಾ(ಉ.ಪ್ರ): ಉತ್ತರ ಪ್ರದೇಶದ ಆಗ್ರಾ ಸಮೀಪದಲ್ಲಿರುವ ಐತಿಹಾಸಿಕ ನಗರ ಫತೇಹ್ಪುರ್ ಸಿಕ್ರಿಯನ್ನು ಮೊಗಲ್ ಚಕ್ರವರ್ತಿ ಜಲಾಲುದ್ದೀನ್ ಮುಹಮ್ಮದ್ ಅಕ್ಬರ್ ಕ್ರಿ.ಶ.1571ರಲ್ಲಿ ನಿರ್ಮಿಸಿದ್ದ. ಸುಮಾರು 15 ವರ್ಷಗಳ ಕಾಲ ಇದು ಮೊಗಲ್ ಸಾಮ್ರಾಜ್ಯದ ರಾಜಧಾನಿಯಾಗಿತ್ತು.
ಫತೇಹ್ಪುರ್ ಸಿಕ್ರಿ ಕೇವಲ ರಾಜಧಾನಿಯಲ್ಲ, ಅಕ್ಬರ್ನ ಸಂಸ್ಕೃತಿ, ಧಾರ್ಮಿಕ ಸಹಿಷ್ಣುತೆ ಮತ್ತು ಕಲೆಗಳ ಮೆಚ್ಚುಗೆಯ ಪ್ರತೀಕ. ಇದರ ಶಿಲ್ಪಕಲೆ, ಇತಿಹಾಸ ಮತ್ತು ಮಾನವೀಯ ಸಂದೇಶ ಇಂದಿಗೂ ಭಾರತೀಯ ಪರಂಪರೆಯ ಅಮರ ಸಂಕೇತವಾಗಿದೆ. ಕೆಂಪು ಕಲ್ಲುಗಳಿಂದ ನಿರ್ಮಿಸಲಾಗಿರುವ ಇಲ್ಲಿನ ಪ್ರಮುಖ ಕಟ್ಟಡಗಳು ಭಾರತೀಯ, ಪರ್ಷಿಯನ್ ಮತ್ತು ಇಸ್ಲಾಮಿಕ್ ಶೈಲಿಯ ಮಿಶ್ರಣದ ಅತ್ಯುತ್ತಮ ಉದಾಹರಣೆಯಾಗಿದೆ.
ಮದುವೆಯಾಗಿ ಹಲವು ವರ್ಷಗಳಾದರೂ ಸಂತಾನವಿಲ್ಲದೆ ಕೊರಗುತ್ತಿದ್ದ ಅಕ್ಬರ್ ಹಾಗೂ ಜೋಧಾ ಬಾಯಿ ದಂಪತಿ, ಸಿಕ್ರಿ ಪ್ರದೇಶದಲ್ಲಿ ನೆಲೆಸಿದ್ದ ಪ್ರಸಿದ್ಧ ಸೂಫಿ ಸಂತ ಶೇಖ್ ಸಲೀಂ ಚಿಸ್ತಿ ಬಳಿ ಆಶೀರ್ವಾದ ಪಡೆದ ನಂತರ ಅವರಿಗೆ ಕ್ರಿ.ಶ.1569ರಲ್ಲಿ ಮಗ ಜನಿಸಿದ. ಸಲೀಂ ಚಿಸ್ತಿ ಅವರ ಮೇಲಿನ ಗೌರವಾರ್ಥ ಅಕ್ಬರ್ ತನ್ನ ಮಗನಿಗೆ ಸಲೀಂ(ಜಹಾಂಗೀರ್) ಎಂದು ನಾಮಕರಣ ಮಾಡಿದನು. ಅಲ್ಲದೆ, ಸಿಕ್ರಿ ಪ್ರದೇಶವನ್ನೇ ತನ್ನ ಹೊಸ ರಾಜಧಾನಿಯನ್ನಾಗಿಸಿ ‘ಫತೇಹ್ಪುರ್ ಸಿಕ್ರಿ’ ನಿರ್ಮಿಸಿದನು.
ಬುಲಂದ್ ದರ್ವಾಝಾ: ಫತೇಹ್ಪುರ್ ಸಿಕ್ರಿಯಲ್ಲಿನ ಆಕರ್ಷಣೆಗಳಲ್ಲಿ ಬುಲಂದ್ ದರ್ವಾಝಾ ಪ್ರಮುಖವಾದದ್ದು. ಅಕ್ಬರ್ ತನ್ನ ಗುಜರಾತ್ ಗೆಲುವಿನ ಸ್ಮರಣಾರ್ಥ ಬುಲಂದ್ ದರ್ವಾಝಾ ನಿರ್ಮಿಸಿದನು. ಸುಮಾರು 54 ಮೀಟರ್(177 ಅಡಿ) ಎತ್ತರವಿರುವ ಈ ಬುಲಂದ್ ದರ್ವಾಝಾ ಭಾರತದಲ್ಲಿನ ಅತ್ಯಂತ ಎತ್ತರದ ದ್ವಾರಗಳಲ್ಲಿ
ಒಂದಾಗಿದೆ.
ಜಾಮಾ ಮಸ್ಜಿದ್: ಜಾಮಾ ಮಸ್ಜಿದ್ ಅನ್ನು ಅಕ್ಬರ್ ಕ್ರಿ.ಶ.1571-1572ರ ಅವಧಿಯಲ್ಲಿ ನಿರ್ಮಿಸಿದನು. ಕೆಂಪು ಮರಳುಗಲ್ಲು ಹಾಗೂ ಬಿಳಿ ಅಮೃತ ಶಿಲೆಗಳಿಂದ ನಿರ್ಮಿಸಲಾಗಿರುವ ಈ ಮಸ್ಜಿದ್ ಮುಂಭಾಗದಲ್ಲಿ ವಿಶಾಲ ಅಂಗಳ ಇದೆ. ಅಲ್ಲಿ ಸಾವಿರಾರು ಮಂದಿ ಏಕಕಾಲದಲ್ಲಿ ನಮಾಝ್ ನಿರ್ವಹಿಸಬಹುದಾಗಿದೆ. ಮುಖ್ಯ ಮಿಹ್ರಾಬ್ ಮತ್ತು ಮಿಂಬರ್ ಆಕರ್ಷಕ ಪರ್ಷಿಯನ್ ಶೈಲಿಯ ಅಲಂಕಾರವನ್ನು ಹೊಂದಿದೆ.
ಶೇಖ್ ಸಲೀಂ ಚಿಸ್ತಿ ದರ್ಗಾ: ಶೇಖ್ ಸಲೀಂ ಚಿಸ್ತಿ ದರ್ಗಾ ಇಲ್ಲಿನ ಅತ್ಯಂತ ಪವಿತ್ರ ಶ್ರದ್ಧಾ ಕೇಂದ್ರವಾಗಿದೆ. ದರ್ಗಾದ ಒಳಗಿನ ವಿನ್ಯಾಸವು ಅತ್ಯಂತ ಆಕರ್ಷಣೀಯವಾಗಿದೆ. ಮಧ್ಯ ಭಾಗದಲ್ಲಿ ಸಲೀಂ ಚಿಸ್ತಿಯವರ ಸಮಾಧಿ ಇದೆ. ದರ್ಗಾ ವೀಕ್ಷಣೆಗೆ ಪ್ರತಿ ದಿನ ಸರ್ವ ಧರ್ಮದ ಸಾವಿರಾರು ಯಾತ್ರಿಕರು ಭೇಟಿ ನೀಡುತ್ತಾರೆ.
ಪಂಚ್ ಮಹಲ್: ಫತೇಹ್ಪುರ್ ಸಿಕ್ರಿಯ ವಾಸ್ತುಶಿಲ್ಪದ ಅದ್ಭುತ ರತ್ನವೆಂದರೆ ಪಂಚ್ ಮಹಲ್. ಐದು ಮಹಡಿಗಳನ್ನು ಹೊಂದಿರುವ ಅರಮನೆ. ಅಕ್ಬರ್ ಕಾಲದ ಅತ್ಯಂತ ಸುಂದರ ಮತ್ತು ವಿಶಿಷ್ಟ ವಾಸ್ತುಶಿಲ್ಪಗಳಲ್ಲಿ ಒಂದಾಗಿದೆ. ಇದರ ವಿನ್ಯಾಸವು ಭಾರತೀಯ ಮತ್ತು ಪರ್ಷಿಯನ್ ಶೈಲಿಯ ಸುಂದರ ಸಂಯೋಜನೆಯಾಗಿದೆ.
ಪಂಚ್ ಮಹಲ್ ಅನ್ನು ಸಂಪೂರ್ಣವಾಗಿ ಕೆಂಪು ಮರಳುಗಲ್ಲಿನಿಂದ ನಿರ್ಮಿಸಲಾಗಿದೆ. ಪ್ರತಿ ಮಹಡಿಗೂ ವಿಭಿನ್ನ ಗಾತ್ರ ಮತ್ತು ವಿನ್ಯಾಸವಿದೆ. ಮೊದಲ ಮಹಡಿಯು 84 ಕಂಬಗಳ ಮೇಲೆ ನಿಂತಿರುವ ವಿಶಾಲ ವೇದಿಕೆ, ಎರಡನೇ ಮಹಡಿಯು 56 ಕಂಬಗಳ ಸಹಾಯದಿಂದ ನಿರ್ಮಿಸಲಾಗಿದ್ದರೆ, ಮೂರನೇ ಮಹಡಿಯು 20 ಕಂಬಗಳ ವಿನ್ಯಾಸವನ್ನು ಹೊಂದಿದೆ.
ನಾಲ್ಕನೇ ಮಹಡಿಯು 12 ಕಂಬಗಳ ಸಣ್ಣ
ವೇದಿಕೆಯಾಗಿದ್ದು, ಇಲ್ಲಿಂದ ಫತೇಹ್ಪುರ್ ಸಿಕ್ರಿಯ ಸುತ್ತಮುತ್ತಲಿನ ದೃಶ್ಯಾವಳಿಗಳನ್ನು ಕಣ್ತುಂಬಿಕೊಳ್ಳ
ಬಹುದಾಗಿದೆ. ಐದನೇ ಮಹಡಿಯಲ್ಲಿ ಒಂದು ಸಣ್ಣ ಮಂಟಪವನ್ನು ನಿರ್ಮಿಸಲಾಗಿದೆ. ಪ್ರತಿ ಮಹಡಿಯೂ ಗಾಳಿಯ ಚಲನೆಗೆ, ಬೆಳಕಿನ ಪ್ರವೇಶಕ್ಕೆ ಮತ್ತು ಸೌಂದರ್ಯಕ್ಕೆ ಅನುಗುಣವಾಗಿ ವಿನ್ಯಾಸಗೊಳಿಸಲಾಗಿದೆ.
ಪಂಚ್ ಮಹಲ್ ಅರಮನೆಗಳ ಹವಾಮಾನ ನಿಯಂತ್ರಣ ಕಟ್ಟಡವಾಗಿಯೂ ಕಾರ್ಯ ನಿರ್ವಹಿಸುತ್ತಿತ್ತು. ಎಲ್ಲ ಬದಿಗಳಿಂದ ಗಾಳಿ ಹರಿಯುವಂತೆ ವಿನ್ಯಾಸ ಗೊಂಡಿರುವುದರಿಂದ ಬೇಸಿಗೆಯ ಬಿಸಿಲಿನಲ್ಲಿಯೂ ತಂಪಾದ ವಾತಾವರಣವನ್ನು ಕಾಪಾಡುತ್ತಿತ್ತು.
ದೀವಾನ್-ಎ-ಖಾಸ್: ಪ್ರಧಾನಮಂತ್ರಿ ಅಬುಲ್ ಫಝಲ್, ಕವಿ ಫೈಝಿ, ಗಾಯಕ ತಾನ್ಸೇನ್, ಬೀರ್ಬಲ್, ರಾಜ ತೋದರ್ ಮಲ್, ರಾಜ ಮಾನ್ ಸಿಂಗ್, ಅಬ್ದುಲ್ ರಹೀಮ್ ಖಾನ್, ಫಕೀರ್ ಝಿಯಾವುದ್ದೀನ್ ಹಾಗೂ ಮುಲ್ಲಾ ದೋ ಪಿಯಾಝ ಇವರನ್ನು ಅಕ್ಬರ್ನ ನವರತ್ನಗಳು ಎಂದು ಕರೆಯಲಾಗುತ್ತಿತ್ತು. ದೀವಾನ್-ಎ-
ಖಾಸ್ನಲ್ಲಿ ಅಕ್ಬರ್ ಇವರೊಂದಿಗೆ ವಿವಿಧ ವಿಷಯಗಳ ಕುರಿತು ಸಂವಾದ ನಡೆಸುತ್ತಿದ್ದನು.
ಅಕ್ಬರ್ ಆರಂಭಿಸಿದ್ದ ‘ದೀನ್-ಇ-ಇಲಾಹಿ’ ಎಂಬ ಧರ್ಮದ ಕುರಿತು ಧಾರ್ಮಿಕ ಮುಖಂಡರೊಂದಿಗೆ ಇಲ್ಲೇ ಚರ್ಚೆ ನಡೆಸುತ್ತಿದ್ದನು. ದೀವಾನ್-ಎ-ಖಾಸ್ ಕೋಣೆಯ ಒಳಗೆ ‘ಸಿಂಹಾಸನ ಸ್ತಂಭ’ವಿದ್ದು, ಅದರ ಮಧ್ಯಭಾಗದಲ್ಲಿ ಅಕ್ಬರ್ ಹಾಗೂ ನಾಲ್ಕು ಬದಿಗಳಲ್ಲಿ ತನ್ನ ಆಪ್ತರನ್ನು ಕೂರಿಸಿ ಚರ್ಚೆಗಳನ್ನು ನಡೆಸುತ್ತಿದ್ದ. ಸಿಂಹಾಸ್ತನ ಸ್ತಂಭದಲ್ಲಿ ಜಗತ್ತಿನ ವಿವಿಧ ಧರ್ಮಗಳ ಕಲಾ ಪ್ರಕಾರಗಳ ಚಿಹ್ನೆಗಳನ್ನು ಕೆತ್ತಲಾಗಿದೆ.
ಇದರೊಂದಿಗೆ, ಜೋಧಾ ಬಾಯಿ ಅರಮನೆ, ಅಕ್ಬರ್ನ ವಿಶ್ರಾಂತಿ ಕೊಠಡಿ, ತಾನ್ಸೇನ್ ಸಂಗೀತ ಕಾರ್ಯಕ್ರಮ ನೀಡಲು ಕಲ್ಯಾಣಿ ಮಾದರಿಯಲ್ಲಿ ನಿರ್ಮಿಸಿರುವ ಸ್ಥಳ. ಸಾಮಾನ್ಯ ಜನರ ಅಹವಾಲುಗಳನ್ನು ಆಲಿಸಲು ಮೀಸಲಿಟ್ಟಿದ್ದ ‘ದಿವಾನ್ ಎ ಆಮ್’, ಸೈನಿಕರ ಕುದುರೆಗಳು, ಆನೆಗಳನ್ನು ಕಟ್ಟಲು ನಿಗದಿಪಡಿಸಿರುವ ಸ್ಥಳಗಳು, ಉದ್ಯಾನವನಗಳು, ಚೌಕಾಕಾರದ ನೀರಿನ ಬಾವಿಗಳು ಪ್ರವಾಸಿಗರ ಆಕರ್ಷಣೆಯ ಕೇಂದ್ರಗಳಾಗಿವೆ.







