ಅವಳಿಗೆ ಅದೆಷ್ಟು ಧೈರ್ಯ? ಕೊಲೆ ಪ್ರಕರಣದಲ್ಲಿ 14 ಗೋರಕ್ಷಕರಿಗೆ ಜೀವಾವಧಿ ಶಿಕ್ಷೆ ವಿಧಿಸಿದ ಮುಸ್ಲಿಂ ನ್ಯಾಯಾಧೀಶೆಗೆ ಬಲಪಂಥೀಯರಿಂದ ಬೆದರಿಕೆ

Photo Credit : altnews
ಮಧ್ಯಪ್ರದೇಶದಲ್ಲಿ 2022ರಲ್ಲಿ ನಡೆದ ಮುಸ್ಲಿಂ ಟ್ರಕ್ ಚಾಲಕನ ಗುಂಪು ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ, ಜೂನ್ 12ರಂದು 14 ಮಂದಿಗೆ ಶಿಕ್ಷೆ ಪ್ರಕಟಿಸಿದ ನ್ಯಾಯಾಧೀಶರ ವಿರುದ್ಧ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಕೋಮು ನಿಂದನೆ ಹಾಗೂ ಬೆದರಿಕೆಗಳು ಕೇಳಿಬಂದಿವೆ.
ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶರಾದ ತಬಸ್ಸುಮ್ ಖಾನ್ ಅವರು ಎರಡು ಪ್ರತ್ಯೇಕ ಪ್ರಕರಣಗಳಲ್ಲಿ (ಎಸ್.ಟಿ. ಸಂಖ್ಯೆ 35/2022 ಮತ್ತು ಎಸ್.ಟಿ. ಸಂಖ್ಯೆ 4/2023) 14 ಅಪರಾಧಿಗಳಿಗೆ ಜೀವಾವಧಿ ಶಿಕ್ಷೆ ವಿಧಿಸಿದ ಕೆಲವೇ ಗಂಟೆಗಳಲ್ಲಿ, ಅವರ ಧರ್ಮವನ್ನು ಗುರಿಯಾಗಿಸಿಕೊಂಡು ದ್ವೇಷಪೂರಿತ ಪೋಸ್ಟ್ ಗಳು ಹಾಗೂ ವೀಡಿಯೋಗಳು ವೈರಲ್ ಆದವು. ಆ ಪೋಸ್ಟ್ಗಳಲ್ಲಿ ಅವರ ಧರ್ಮವನ್ನು ನಿಂದಿಸಿ, ಅಮಾನವೀಯವಾಗಿ ಚಿತ್ರಿಸಲಾಗಿತ್ತು. ಅಲ್ಲದೆ, ಬಹಿರಂಗವಾಗಿ ಹಿಂಸಾಚಾರದ ಬೆದರಿಕೆ ಹಾಕುತ್ತಾ, “ಜಿಹಾದ್” ಭೀತಿಯನ್ನು ಸೃಷ್ಟಿಸಲಾಗಿತ್ತು. ಶಿಕ್ಷೆಗೆ ಒಳಗಾದ ಅಪರಾಧಿಗಳನ್ನು ತಕ್ಷಣ ಬಿಡುಗಡೆ ಮಾಡಬೇಕೆಂದು ಒತ್ತಾಯಿಸಲಾಗಿತ್ತು.
►ಏನಿದು ಘಟನೆ?
ಮಹಾರಾಷ್ಟ್ರದ ಅಮರಾವತಿ ನಿವಾಸಿ ನಝೀರ್ ಅಹ್ಮದ್ ಅವರ ಗುಂಪು ಹತ್ಯೆಗೆ ಸಂಬಂಧಿಸಿದ ಪ್ರಕರಣ ಇದು. 2022ರ ಆಗಸ್ಟ್ 3ರಂದು ನಝೀರ್ ಅಹ್ಮದ್ ಮತ್ತು ಅವರ ಇಬ್ಬರು ಸಹಚರರು ನಂದರವಾಡದಿಂದ ಮಹಾರಾಷ್ಟ್ರದತ್ತ ಜಾನುವಾರುಗಳನ್ನು ಸಾಗಿಸುತ್ತಿದ್ದರು. ಮಧ್ಯಪ್ರದೇಶದ ನರ್ಮದಾಪುರಂ ಜಿಲ್ಲೆಯ ಸಿವೋನಿ ಮಾಲ್ವಾ ಬಳಿಯ ಬರಖಾಡ್ ಗ್ರಾಮದಲ್ಲಿ, ಜಾನುವಾರು ಕಳ್ಳಸಾಗಣೆ ಮಾಡುತ್ತಿದ್ದಾರೆ ಎಂಬ ಶಂಕೆಯ ಮೇರೆಗೆ 50ರಿಂದ 60 ಜನರಿದ್ದ ಗುಂಪೊಂದು ಇವರ ವಾಹನವನ್ನು ತಡೆದಿತ್ತು.
ಯಾವುದೇ ವಿಚಾರಣೆ ನಡೆಸದೆ ಮೂವರ ಮೇಲೂ ತೀವ್ರ ಹಲ್ಲೆ ನಡೆಸಲಾಗಿತ್ತು ಎಂದು ಘಟನೆಯಿಂದ ಬದುಕುಳಿದ ಶೇಖ್ ಲಾಲಾ ತಿಳಿಸಿದ್ದಾರೆ. ತೀವ್ರವಾಗಿ ಗಾಯಗೊಂಡಿದ್ದ ನಝೀರ್ ಅಹ್ಮದ್ ಅವರು ನಂತರ ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದರು. ಉಳಿದ ಇಬ್ಬರು ಪ್ರಾಣಾಪಾಯದಿಂದ ಪಾರಾಗಿದ್ದರು.
ಘಟನೆಗೆ ಸಂಬಂಧಿಸಿದಂತೆ ತನಿಖೆ ನಡೆಸಿದ ಪೊಲೀಸರು 14 ಜನರ ವಿರುದ್ಧ ಎಫ್ಐಆರ್ ದಾಖಲಿಸಿದ್ದರು. ಮೂರು ವರ್ಷಗಳ ಸುದೀರ್ಘ ವಿಚಾರಣೆಯ ನಂತರ, ನ್ಯಾಯಾಲಯವು ಎಲ್ಲಾ 14 ಆರೋಪಿಗಳನ್ನು ಕೊಲೆ, ಕೊಲೆ ಯತ್ನ, ಗಲಭೆ ಮತ್ತು ಅಕ್ರಮ ತಡೆ ಸೇರಿದಂತೆ ವಿವಿಧ ಅಪರಾಧಗಳ ಅಡಿಯಲ್ಲಿ ದೋಷಿ ಎಂದು ಘೋಷಿಸಿ, ಜೀವಾವಧಿ ಶಿಕ್ಷೆ ವಿಧಿಸಿದೆ.
ಶಿಕ್ಷೆಗೆ ಒಳಗಾದವರೆಲ್ಲರೂ ಸಿವೋನಿ ಮಾಲ್ವಾ ನಿವಾಸಿಗಳಾಗಿದ್ದು, ಅವರನ್ನು ದೀಪಕ್ ಅಲಿಯಾಸ್ ಬಾಬಾ ಕೇವತ್, ಅಜಯ್ ಅಲಿಯಾಸ್ ಅಜ್ಜು ರಾಥೋಡ್, ಪ್ರಕಾಶ್ ಕೌಶಲ್, ಪವನ್ ಬಾತವ್, ಅಮರ್ ಅಲಿಯಾಸ್ ಭೋಲಾ ಬಾತವ್, ಕನ್ಹಯ್ಯಾ ಬಾತವ್, ಬಲ್ಲು ಅಲಿಯಾಸ್ ಅನುಜ್ ರಘುವಂಶಿ, ರಾಜು ಅಲಿಯಾಸ್ ರಾಜೇಂದ್ರ ಕೌಶಲ್, ಆಕಾಶ್ ಅಲಿಯಾಸ್ ಪಿಂಟೋಲಿ ಬಾತವ್, ಗೌರವ್ ಯಾದವ್, ಆಕಾಶ್ ಸರಾಥೆ, ಚೇತನ್ ಮರಾಠಾ, ದೇವೇಂದ್ರ ಅಲಿಯಾಸ್ ಚೋಟು ಕೋರಿ ಮತ್ತು ಸಂದೀಪ್ ಅಲಿಯಾಸ್ ರಾಜಾ ಕೌಶಲ್ ಎಂದು ಗುರುತಿಸಲಾಗಿದೆ.
ತೀರ್ಪು ಪ್ರಕಟವಾದ ಬೆನ್ನಲ್ಲೇ ದೋಷಿಗಳ ಸಂಬಂಧಿಕರು ನ್ಯಾಯಾಲಯದ ಆವರಣದ ಹೊರಗೆ ಪ್ರತಿಭಟನೆ ನಡೆಸಿದರು ಮತ್ತು ದೋಷಿಗಳನ್ನು ಜೈಲಿಗೆ ಕರೆದೊಯ್ಯುತ್ತಿದ್ದ ಪೊಲೀಸ್ ವಾಹನವನ್ನು ತಡೆಯಲು ಯತ್ನಿಸಿದರು. ಇದರ ಬೆನ್ನಲ್ಲೇ ನ್ಯಾಯಾಧೀಶೆ ಖಾನ್ ಅವರ ವಿರುದ್ಧ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ನಿಂದನೆ ಆರಂಭವಾಯಿತು.
ನ್ಯಾಯಾಧೀಶರನ್ನು ಗುರಿಯಾಗಿಸಿಕೊಂಡು ದ್ವೇಷ ಹರಡುತ್ತಿದ್ದವರ ವಿರುದ್ಧ ಸಿವೋನಿ ಮಾಲ್ವಾ ಪೊಲೀಸರು ಭಾರತೀಯ ನ್ಯಾಯ ಸಂಹಿತೆಯ ಸೆಕ್ಷನ್ 196 ಮತ್ತು 302ರ ಅಡಿಯಲ್ಲಿ ಅಪರಿಚಿತ ವ್ಯಕ್ತಿಗಳ ವಿರುದ್ಧ ಎಫ್ಐಆರ್ ದಾಖಲಿಸಿದ್ದಾರೆ. ಕೋಮು ದ್ವೇಷವನ್ನು ಪ್ರಚೋದಿಸುವ ಮತ್ತು ಸಾರ್ವಜನಿಕ ಶಾಂತಿಗೆ ಭಂಗ ತರುವಂತಹ ಪೋಸ್ಟ್ಗಳ ವಿರುದ್ಧ ಈ ಕ್ರಮ ಕೈಗೊಳ್ಳಲಾಗಿದೆ.
ಅಶ್ಲೀಲ ನಿಂದನೆ, ಬೆದರಿಕೆ ವೀಡಿಯೋಗಳ ಮೂಲಕ ಆಕ್ರೋಶ
ಈ ತೀರ್ಪು ಬಲಪಂಥೀಯ ಸಂಘಟನೆಗಳು ಮತ್ತು ಹಿಂದುತ್ವ ಕಾರ್ಯಕರ್ತರಲ್ಲಿ ತೀವ್ರ ಆಕ್ರೋಶ ಮೂಡಿಸಿದ್ದು, ಶಿಕ್ಷೆಗೊಳಗಾದ 14 ಜನರನ್ನು ಬಿಡುಗಡೆ ಮಾಡುವಂತೆ ಒತ್ತಾಯಿಸಿ ಪ್ರಚೋದನಾಕಾರಿ ಹೇಳಿಕೆಗಳನ್ನು ನೀಡುತ್ತಿದ್ದಾರೆ.
ಇದರಲ್ಲಿ ಠಾಕೂರ್ ವಿಶಾಲ್ ಸಿಂಗ್ ಎಂಬಾತನ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಸದ್ದು ಮಾಡಿದೆ. ಆತ ತನ್ನ ಫೋನ್ ಕ್ಯಾಮೆರಾ ಮುಂದೆ ನಿಂತು, ನ್ಯಾಯಾಧೀಶೆಯ ವಿರುದ್ಧ ಅತ್ಯಂತ ಕೆಟ್ಟ ಪದಗಳಿಂದ, ಧರ್ಮವನ್ನು ನಿಂದಿಸಿ ಬಹಿರಂಗ ಬೆದರಿಕೆ ಹಾಕಿದ್ದಾನೆ.
https://www.instagram.com/vishalthakur_sanatani/
"ನೋಡು ಮುಲ್ಲಿ ಮಾ****, ನಮ್ಮ 14 ಜನ ಸಹೋದರರನ್ನು 14 ದಿನಗಳಲ್ಲಿ ಬಿಡುಗಡೆ ಮಾಡದಿದ್ದರೆ, ದೇಶಾದ್ಯಂತ ರಕ್ತಪಾತವಾಗುತ್ತದೆ. ಹಿಂದೂಗಳೇ, ನೋಡಿ, ಯಾರು ಗೋಹತ್ಯೆ ಮಾಡುತ್ತಾರೋ, ಆ* ಗಳು ಮುಕ್ತವಾಗಿ ತಿರುಗಾಡುತ್ತಿದ್ದಾರೆ, ಮತ್ತು ಇಂದು ಒಬ್ಬ ಮುಲ್ಲಿ ಮಾ*** ನ್ಯಾಯಾಧೀಶೆಯಾಗಿದ್ದಾಳೆ, ಹಾಗೂ ಅವಳು ನಮ್ಮ 14 ಜನ ಸಹೋದರರಿಗೆ ಜೀವಾವಧಿ ಶಿಕ್ಷೆ ವಿಧಿಸಿದ್ದಾಳೆ. ಒಬ್ಬ ಮುಲ್ಲಾ ಪ್ರಧಾನಮಂತ್ರಿಯಾದರೆ ಏನಾಗಬಹುದು ಎಂದು ಊಹಿಸಿಕೊಳ್ಳಿ."
ಆಲ್ಟ್ ನ್ಯೂಸ್ ವರದಿಯ ಪ್ರಕಾರ, ಈ ವೀಡಿಯೋ ವೈರಲ್ ಆದ ನಂತರ ಸಿಂಗ್ ತನ್ನ ಇನ್ಸ್ಟಾಗ್ರಾಮ್ ಖಾತೆಯಿಂದ ಎಲ್ಲಾ ವೀಡಿಯೋಗಳನ್ನು ಡಿಲೀಟ್ ಮಾಡಿದ್ದಾನೆ. ಆದರೆ, ಆತನ ಮತ್ತೊಂದು ವೀಡಿಯೋ ಪತ್ತೆಯಾಗಿದ್ದು, ಅದರಲ್ಲಿ ನ್ಯಾಯಾಧೀಶರಿಗೆ ಅತ್ಯಾಚಾರದ ಬಹಿರಂಗ ಬೆದರಿಕೆ ಹಾಕಿರುವುದು ಕಂಡುಬಂದಿದೆ.
ಏತನ್ಮಧ್ಯೆ, ಇದೇ ತೀರ್ಪಿನ ಕುರಿತು ಅವರು ಮಾತನಾಡುತ್ತಿರುವ ಮತ್ತೊಂದು ವೀಡಿಯೋ ಆಲ್ಟ್ ನ್ಯೂಸ್ಗೆ ಸಿಕ್ಕಿದೆ. ಈ ವೀಡಿಯೋ ಇನ್ನಷ್ಟು ಆಕ್ಷೇಪಾರ್ಹವಾಗಿದ್ದು, ಖಾನ್ ಅವರಿಗೆ ಬಹಿರಂಗವಾಗಿ ಅತ್ಯಾಚಾರದ ಬೆದರಿಕೆಯನ್ನು ಒಡ್ಡುತ್ತದೆ.
"ಕೇಳು ಮುಲ್ಲಿ ಮಾ****, ಗೋಸೇವಕರಾದ ನಮ್ಮ 14 ಜನ ಸಹೋದರರಿಗೆ ನೀನು ಏನು ಜೀವಾವಧಿ ಶಿಕ್ಷೆ ನೀಡಿದ್ದೀಯಲ್ಲ, ಕೇಳು, ನಿನಗಾಗಿ ಒಂದೇ ಒಂದು ಸಾಲು ಸಾಕು. ನ್ಯಾಯಾಧೀಶರ ಹೆಸರಿನ ಮರೆಯಲ್ಲಿ ನೀನು ಎಲ್ಲಿಯವರೆಗೆ ಅಡಗಿರುತ್ತೀಯಾ, ಎಂದಾದರೂ ಒಂದು ದಿನ ನಿನ್ನ **** ಸಾರ್ವಜನಿಕವಾಗಿ ಆಗೇ ಆಗುತ್ತದೆ."
ಮುಂದಿನ ತನಿಖೆಯಿಂದ 11,000ಕ್ಕೂ ಹೆಚ್ಚು ಫಾಲೋವರ್ಸ್ ಹೊಂದಿದ್ದ, ಪ್ರಸ್ತುತ ನಿಷ್ಕ್ರಿಯಗೊಂಡಿರುವ ಹಳೆಯ ಇನ್ಸ್ಟಾಗ್ರಾಮ್ ಖಾತೆಯೊಂದು ಪತ್ತೆಯಾಗಿದ್ದು, ಅದರ ಬಯೋ ಪ್ರಕಾರ ಸಿಂಗ್ ಸೂರತ್ನ ನಿವಾಸಿಯಾಗಿದ್ದಾನೆ. ಈಗ ಚರ್ಚೆಯಲ್ಲಿರುವ ಈ ಎರಡು ವೀಡಿಯೋಗಳನ್ನು @vishalthakur_sanatani ಎಂಬ ಹೊಸ ಖಾತೆಯಿಂದ ಅಪ್ಲೋಡ್ ಮಾಡಲಾಗಿದ್ದು, ಇದು ಕೂಡ 8,000ಕ್ಕೂ ಹೆಚ್ಚು ಫಾಲೋವರ್ಸ್ಗಳನ್ನು ಹೊಂದಿದೆ.
ನ್ಯಾಯಾಧೀಶೆಯ ವಿರುದ್ಧ ಬೆದರಿಕೆ ಹಾಕಿರುವ ಈ ವೀಡಿಯೋ ವೈರಲ್ ಆದ ಬಳಿಕ, ಹಲವು ಬಳಕೆದಾರರು ಇದೇ ಮಾದರಿಯನ್ನು ಅನುಸರಿಸಿದರು.
ಇನ್ಸ್ಟಾಗ್ರಾಮ್ ಬಳಕೆದಾರ @lion_akhilesh099 ಎಂಬುವವರು, "ಮುಸ್ಲಿಂ ನ್ಯಾಯಾಧೀಶೆಯಾಗಿದ್ದರೂ ಸಹ, ಅವಳು 14 ಜನ ಗೋರಕ್ಷಕರಿಗೆ ಜೀವಾವಧಿ ಶಿಕ್ಷೆ ವಿಧಿಸಿದ್ದಾಳೆ. ಒಂದು ವೇಳೆ ಈ ಜನರು ಅಧಿಕಾರಕ್ಕೆ ಬಂದರೆ, ಭಾರತವನ್ನು ಮುಸ್ಲಿಂ ರಾಷ್ಟ್ರವನ್ನಾಗಿ ಮಾಡಲು ಒಂದು ನಿಮಿಷವೂ ಬೇಕಾಗುವುದಿಲ್ಲ… ಜಾಗೋ ಹಿಂದೂ ಜಾಗೋ" ಎಂದು ಹೇಳಿದ್ದಾರೆ.
ಬಲಪಂಥೀಯ ಧೋರಣೆಯ ಮಾಧ್ಯಮ ಸಂಸ್ಥೆಯಾದ ಸುದರ್ಶನ್ ನ್ಯೂಸ್ ಟಿವಿಯ ಮುಖ್ಯ ನಿರೂಪಕ ಸುರೇಶ್ ಚವ್ಹಾಣ್ಕೆ, ಶಿಕ್ಷೆಗೊಳಗಾದ ಕೊಲೆಗಾರರೊಂದಿಗೆ ನಿರಂತರ ಒಗ್ಗಟ್ಟನ್ನು ಪ್ರದರ್ಶಿಸಿದರು. ಅವರು ತಮ್ಮ ವೀಕ್ಷಕರಲ್ಲಿ 'ಧ್ವನಿ ಎತ್ತುವಂತೆ' ಒತ್ತಾಯಿಸಿದರು ಮತ್ತು "ಗೋಮಾತೆಯನ್ನು ಉಳಿಸಲು ತಮ್ಮ ಪ್ರಾಣವನ್ನು ಪಣಕ್ಕಿಡುವ ನಿಮ್ಮ ಕುಟುಂಬದ ಸದಸ್ಯರಿಗೂ ಸಹ ಜೀವಾವಧಿ ಶಿಕ್ಷೆಯಾಗಬಹುದು" ಎಂದಿದ್ದಾರೆ. ಅವರ ಒಂದು ಕಾರ್ಯಕ್ರಮದಲ್ಲಿ "ನಾವು ಸಂತ್ರಸ್ತರ ಕುಟುಂಬದೊಂದಿಗೆ ಇದ್ದೇವೆ" ಎಂಬ ಟಿಕ್ಕರ್ ಪ್ರದರ್ಶಿಸಲಾಗುತ್ತಿತ್ತು.
ಸುದರ್ಶನ್ ನ್ಯೂಸ್ ಟಿವಿಯ ಅಧಿಕೃತ ಹ್ಯಾಂಡಲ್ ನಿಂದ, "ನಾವು ಮುಸ್ಲಿಂ ನ್ಯಾಯಾಧೀಶರ ನಿರ್ಧಾರವನ್ನು ಬಹಿರಂಗವಾಗಿ ವಿರೋಧಿಸುತ್ತೇವೆ" ಎಂದು ಟ್ವೀಟ್ ಮಾಡಲಾಗಿತ್ತು.
ಪಂಜಾಬ್ನ ಪೀರ್ ಮುಚ್ಚಲ್ಲಾದಲ್ಲಿ ಜೂನ್ 22ರಂದು, ಗೋರಕ್ಷಾ ಪರಿಷತ್ ಈ 14 ಜನರ ಬಿಡುಗಡೆಗೆ ಆಗ್ರಹಿಸಿ ಪ್ರತಿಭಟನೆ ನಡೆಸಿತು. ಪ್ರತಿಭಟನಾಕಾರರು "ತಬಸ್ಸುಮ್ ಬೇಗಂ, ಹಾಯ್ ಹಾಯ್" ಎಂದು ಘೋಷಣೆಗಳನ್ನು ಕೂಗುತ್ತಾ ಖಾನ್ ಅವರ ಪ್ರತಿಕೃತಿಯನ್ನು ದಹಿಸಿ ಆಕ್ರೋಶ ವ್ಯಕ್ತಪಡಿಸಿದರು.
ಫೇಸ್ಬುಕ್ ಬಳಕೆದಾರ ವೇದಾಂತ್ ವಾಲ್ಮೀಕಿ ಎಂಬುವವರು ಈ ಘಟನೆಯನ್ನು ಬಿಂಬಿಸುವ ವೀಡಿಯೋವೊಂದನ್ನು ಪೋಸ್ಟ್ ಮಾಡಿದ್ದು, "ಇಲ್ಲಿ ಮುಖ್ಯ ಅಪರಾಧಿ ನ್ಯಾಯಾಧೀಶೆ ತಬಸ್ಸುಮ್ ಖಾನ್" ಎಂದು ಪ್ರತಿಪಾದಿಸಿದ್ದಾರೆ. ಈ ವೀಡಿಯೋ 7,000ಕ್ಕೂ ಹೆಚ್ಚು ಲೈಕ್ಗಳು ಹಾಗೂ 2,000ಕ್ಕೂ ಹೆಚ್ಚು ಹಂಚಿಕೆಗಳನ್ನು ಪಡೆದುಕೊಂಡಿದೆ.
ಇದೇ ರೀತಿಯ ಇನ್ನೂ ಹಲವು ವೀಡಿಯೋಗಳು ಮತ್ತು ಪೋಸ್ಟ್ಗಳು ಖಾನ್ ಅವರನ್ನು "ಮುಸ್ಲಿಂ ನ್ಯಾಯಾಧೀಶೆ" ಎಂದು ಬಿಂಬಿಸಿದ್ದು, ತೀರ್ಪಿಗೆ ಹಿಂದೂ-ಮುಸ್ಲಿಂ ಬಣ್ಣ ಬಳಿದಿವೆ.
ಹಲವಾರು ಪ್ರಭಾವಿ ಗೋರಕ್ಷಕರು ಕೂಡ ಈ ತೀರ್ಪಿನ ವಿರುದ್ಧ ವಿರೋಧ ವ್ಯಕ್ತಪಡಿಸಿದ್ದಾರೆ. 2023ರ ಕುಖ್ಯಾತ ನಾಸಿರ್ ಮತ್ತು ಜುನೈದ್ ಕೊಲೆ ಪ್ರಕರಣದ ಆರೋಪಿಯಾಗಿರುವ ಮೋಹಿತ್ 'ಮೋನು' ಮಾನೇಸರ್, ತೀರ್ಪನ್ನು ಖಂಡಿಸಿ ಮತ್ತು ತಮ್ಮ ಹಿಂದೂ ಸಹೋದರ-ಸಹೋದರಿಯರು ಒಗ್ಗಟ್ಟಿನಿಂದ ನಿಲ್ಲುವಂತೆ ಕರೆ ನೀಡಿ ವೀಡಿಯೋವೊಂದನ್ನು ಬಿಡುಗಡೆ ಮಾಡಿದ್ದಾರೆ.
ಹಲವು ಬಾರಿ ಮುಸ್ಲಿಂ ವಿರೋಧಿ ಹಿಂಸಾಚಾರದ ಆರೋಪ ಎದುರಿಸುತ್ತಿರುವ ದಕ್ಷ್ ಚೌಧರಿ, ಅಪರಾಧಿಗಳ ಕುಟುಂಬಗಳನ್ನು ಭೇಟಿ ಮಾಡಿದ್ದರು. ಅವರು ಅಪ್ಲೋಡ್ ಮಾಡಿರುವ ವೀಡಿಯೋಗಳಲ್ಲಿ, ಅವರ ಮಕ್ಕಳಿಗೆ "ನಿಮ್ಮ ತಂದೆ ಶೀಘ್ರದಲ್ಲೇ ಬಿಡುಗಡೆಯಾಗುತ್ತಾರೆ" ಎಂದು ಭರವಸೆ ನೀಡುತ್ತಿರುವುದನ್ನು ಕಾಣಬಹುದು.
ಅವರು ಅಪ್ಲೋಡ್ ಮಾಡಿದ ವೀಡಿಯೋವೊಂದರಲ್ಲಿ, ಜ್ಯೋತಿರ್ಮಠ ಪೀಠದ ಶಂಕರಾಚಾರ್ಯ ಸ್ವಾಮಿ ಅವಿಮುಕ್ತೇಶ್ವರಾನಂದ ಸರಸ್ವತಿ ಅವರೊಂದಿಗೆ ವೀಡಿಯೋ ಕಾಲ್ನಲ್ಲಿ ಮಾತನಾಡುತ್ತಿರುವುದು ಕಂಡುಬಂದಿದ್ದು, ಶಂಕರಾಚಾರ್ಯರು ಕೊಲೆಗಾರರ ಪರವಾಗಿ ಒಗ್ಗಟ್ಟನ್ನು ವ್ಯಕ್ತಪಡಿಸಿದ್ದಾರೆ. ಚೌಧರಿ ಅವರು ಎಲ್ಲಾ ರೀತಿಯ ಸಹಾಯದ ಭರವಸೆ ನೀಡಿದರು ಮತ್ತು ಜೈಲಿನಲ್ಲಿರುವವರ ಪರವಾಗಿ ಸರ್ಕಾರ ಏಕೆ ಧ್ವನಿ ಎತ್ತುತ್ತಿಲ್ಲ ಎಂದು ಪ್ರಶ್ನಿಸಿದರು.
ರಾಷ್ಟ್ರೀಯ ಬಜರಂಗದಳದ ನಾಯಕರು ಉತ್ತರ ಪ್ರದೇಶದ ಲಲಿತ್ಪುರದ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಪ್ರತಿಭಟನೆ ನಡೆಸಿದರು. ಖಾನ್ ಅವರು ವಿಧಿಸಿರುವ ಜೀವಾವಧಿ ಶಿಕ್ಷೆಯ ತೀರ್ಪನ್ನು ರದ್ದುಗೊಳಿಸಬೇಕೆಂದು ಅವರು ಒತ್ತಾಯಿಸಿದರು.
ಈ ಘಟನೆಯು ಗುಂಪು ಹಿಂಸಾಚಾರದ ಕಾನೂನುಬದ್ಧತೆ ಮತ್ತು ನೈತಿಕತೆಯ ಚರ್ಚೆಯನ್ನು ಮೀರಿದ ವಿಚಾರವಾಗಿ ಹೇಗೆ ರೂಪಾಂತರಗೊಂಡಿದೆ ಎಂಬುದನ್ನು ಒತ್ತಿಹೇಳುತ್ತದೆ. ಮುಸ್ಲಿಂ ಟ್ರಕ್ ಚಾಲಕನ ಮೇಲೆ ಗುಂಪು ಹಲ್ಲೆ ನಡೆಸಿ ಕೊಂದಿದ್ದಕ್ಕಾಗಿ 14 ಜನರಿಗೆ ಶಿಕ್ಷೆಯಾಗಿರುವುದರ ಮೇಲೆ ಗಮನ ಹರಿಸುವ ಬದಲು, ಬಲಪಂಥೀಯ ಪ್ರಚಾರವು ತೀರ್ಪು ನೀಡಿದ ನ್ಯಾಯಾಧೀಶರ ಧಾರ್ಮಿಕ ಗುರುತಿನ ಕಡೆಗೆ ತಿರುಗಿತು. ಮುಸ್ಲಿಂ ನ್ಯಾಯಾಧೀಶೆಯೊಬ್ಬರು ತಮ್ಮ ಅಧಿಕಾರವನ್ನು "ದುರುಪಯೋಗಪಡಿಸಿಕೊಂಡಿದ್ದಾರೆ" ಅಥವಾ ಕೋಮು ಪೂರ್ವಾಗ್ರಹದಿಂದ ವರ್ತಿಸಿದ್ದಾರೆ ಎಂಬ ಆರೋಪಗಳನ್ನು ಮಾಡಲಾಯಿತು.
ಈ ಅಭಿಯಾನವು ಕಾನೂನು ಪ್ರಶ್ನೆಗಳನ್ನೂ ಎತ್ತುತ್ತದೆ. ನ್ಯಾಯಾಂಗ ಆದೇಶದ ವಿಷಯದಲ್ಲಿ ಕರ್ತವ್ಯದಲ್ಲಿರುವ ನ್ಯಾಯಾಧೀಶರಿಗೆ ಬೆದರಿಕೆ ಹಾಕುವುದು ನ್ಯಾಯಾಂಗ ನಿಂದನೆಯಾಗಬಹುದು, ಏಕೆಂದರೆ ಇದು ನ್ಯಾಯದ ಆಡಳಿತದಲ್ಲಿ ಹಸ್ತಕ್ಷೇಪ ಮಾಡುತ್ತದೆ. ಬೆದರಿಕೆಗಳ ಸ್ವರೂಪವನ್ನು ಅವಲಂಬಿಸಿ, ಇದು ಭಾರತೀಯ ನ್ಯಾಯ ಸಂಹಿತೆಯ (ಬಿಎನ್ಎಸ್) ಸೆಕ್ಷನ್ 351ರ ಅಡಿಯಲ್ಲಿ ಕ್ರಿಮಿನಲ್ ಬೆದರಿಕೆಯೂ ಆಗಬಹುದು. ಆದರೂ, ಈ ಕಾನೂನು ರಕ್ಷಣೆಗಳ ಹೊರತಾಗಿಯೂ, ತೀರ್ಪಿನ ನಂತರವೂ ಆನ್ಲೈನ್ ಅಭಿಯಾನ ಮುಂದುವರಿದಿದೆ.
ಸೌಜನ್ಯ: altnews.in






