ಸಾಮಾಜಿಕ ಬಹಿಷ್ಕಾರ ಸಾಬೀತಾದರೆ ಆರೋಪಿಗೆ 3 ವರ್ಷ ಜೈಲು
ಕರ್ನಾಟಕ ಸಾಮಾಜಿಕ ಬಹಿಷ್ಕಾರ ವಿಧೇಯಕ 2025 ಮಂಡಿಸಲು ಸಿದ್ಧತೆ

ಸಾಂದರ್ಭಿಕ ಚಿತ್ರ
ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಹುಟ್ಟೂರು ಸಿದ್ದರಾಮನಹುಂಡಿ ಗ್ರಾಮದ ಬಳಿ ಇರುವ ಶ್ರೀನಿವಾಸಪುರ ಮತ್ತು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರ ಸ್ವಕ್ಷೇತ್ರ ಕನಕಪುರದಲ್ಲಿ ದಲಿತ ಕುಟುಂಬಗಳಿಗೆ ಸಾಮಾಜಿಕ ಬಹಿಷ್ಕಾರ ಹಾಕಿದ್ದರ ಬೆನ್ನಲ್ಲೇ ರಾಜ್ಯ ಕಾಂಗ್ರೆಸ್ ಸರಕಾರವು ರೂಪಿಸಿರುವ ಕರ್ನಾಟಕ ಸಾಮಾಜಿಕ ಬಹಿಷ್ಕಾರ (ತಡೆಗಟ್ಟುವಿಕೆ, ನಿಷೇಧ ಮತ್ತು ಪರಿಹಾರ ) ವಿಧೇಯಕ 2025 ಮುನ್ನೆಲೆಗೆ ಬಂದಿದೆ.
ಮಹಾರಾಷ್ಟ್ರ ರಾಜ್ಯ ಸರಕಾರವು ಈಗಾಗಲೇ ಸಾಮಾಜಿಕ ಬಹಿಷ್ಕಾರವನ್ನು ಅಪರಾಧೀಕರಿಸಿದ ಮೊದಲ ರಾಜ್ಯವಾಗಿದೆ. 2016 ರಲ್ಲಿ ಮಹಾರಾಷ್ಟ್ರ ಸರಕಾರವು ಸಾಮಾಜಿಕ ಬಹಿಷ್ಕಾರ ಕಾಯ್ದೆಯು ಜಾತಿ ಮತ್ತು ಸಮುದಾಯ ಪಂಚಾಯತ್ಗಳಂತಹ ನ್ಯಾಯಾಂಗೇತರ ಸಂಸ್ಥೆಗಳಿಂದ ಆಚರಿಸುವ ಸಾಮಾಜಿಕ ಬಹಿಷ್ಕಾರವನ್ನು ನಿಷೇಧಿಸಿದೆ. ಇದೇ ಮಾದರಿಯಲ್ಲಿ ರಾಜ್ಯ ಕಾಂಗ್ರೆಸ್ ಸರಕಾರವು ಸಹ ಕರ್ನಾಟಕ ಸಾಮಾಜಿಕ ಬಹಿಷ್ಕಾರ (ತಡೆಗಟ್ಟುವಿಕೆ, ನಿಷೇಧ ಮತ್ತು ಪರಿಹಾರ ) ವಿಧೇಯಕ ೨೦೨೫ನ್ನುಮಂಡಿಸಲು ಸಿದ್ಧತೆ ನಡೆಸಿದೆ. ವಿಧೇಯಕದ ಕರಡು ಪ್ರತಿಯು ‘the-file.in’ಗೆ ಲಭ್ಯವಾಗಿದೆ.
ರಾಜ್ಯದಲ್ಲಿ ಒಬ್ಬ ವ್ಯಕ್ತಿ ಅಥವಾ ಅವರ ಕುಟುಂಬ ಸದಸ್ಯರನ್ನೂ ಒಳಗೊಂಡಂತೆ ವ್ಯಕ್ತಿಗಳ ಗುಂಪಿನ ಸಾಮಾಜಿಕ ಬಹಿಷ್ಕಾರವನ್ನು ನಿಷೇಧಿಸುವುದು, ತಡೆಗಟ್ಟುವುದು ಮತ್ತು ಪರಿಹಾರ ನೀಡುವ ಉದ್ದೇಶದಿಂದ ಈ ವಿಧೇಯಕವನ್ನು ರೂಪಿಸಲಾಗಿದೆ.
ಸಾಮಾಜಿಕ ಬಹಿಷ್ಕಾರ ಹೇರಿಕೆ ಮಾಡುವುದು ಸಹ ಇನ್ನು ಮುಂದೆ ಅಪರಾಧವಾಗಲಿದೆ. ಈ ಅಪರಾಧ ಸಾಬೀತಾದರೆ ಮೂರು ವರ್ಷಗಳಿಗೆ ವಿಸ್ತರಿಸಬಹುದಾದ ಅಥವಾ ಒಂದು ಲಕ್ಷ ರೂ.ಗೆ ವಿಸ್ತರಿಸಬಹುದಾದ ಜುಲ್ಮಾನೆ ಅಥವಾ ಇವರೆಡನ್ನೂ ಸೇರಿಸಿ ಜೈಲು ಶಿಕ್ಷೆಯನ್ನು ವಿಧಿಸಲು ಅವಕಾಶ ಕಲ್ಪಿಸಿಕೊಂಡಿರುವುದು ವಿಧೇಯಕದಿಂದ ತಿಳಿದು ಬಂದಿದೆ.
ಒಬ್ಬ ವ್ಯಕ್ತಿ ಅಥವಾ ಅವರ ಕುಟುಂಬ ಸದಸ್ಯರನ್ನೂ ಒಳಗೊಂಡಂತೆ ವ್ಯಕ್ತಿಗಳ ಗುಂಪಿನ ಸಾಮಾಜಿಕ ಬಹಿಷ್ಕಾರದ ಪಿಡುಗನ್ನು ಸಂಪೂರ್ಣವಾಗಿ ತೆಗೆದುಹಾಕುವಲ್ಲಿ ಈಗಾಗಲೇ ಜಾರಿಯಲ್ಲಿರುವ ಕಾನೂನುಗಳು ಪರಿಣಾಮಕಾರಿಯಾಗಿಲ್ಲ
ಎಂಬುದು ಸಾಬೀತಾಗಿದೆ ಮತ್ತು ಸಾರ್ವಜನಿಕ ಕ್ಷೇಮಾಭಿವೃದ್ಧಿಯ ಹಿತಾಸಕ್ತಿಯಲ್ಲಿ ಸಾಮಾಜಿಕ ಸುಧಾರಣೆಯ ವಿಷಯವಾಗಿ ಸಾಮಾಜಿಕ ಬಹಿಷ್ಕಾರವನ್ನು ನಿಷೇಧಿಸುವುದು ಅಗತ್ಯವಾಗಿದೆ ಎಂದು ವಿಧೇಯಕದಲ್ಲಿ ಪ್ರತಿಪಾದಿಸಿರುವುದು ಗೊತ್ತಾಗಿದೆ.
ರಾಜ್ಯದಲ್ಲಿ ಜನರು ಅವರ ಮಾನವ ಹಕ್ಕುಗಳೊಂದಿಗೆ ಸೌಹಾರ್ದದಿಂದ ಬದುಕುವುದನ್ನು ಖಚಿತಪಡಿಸಿಕೊಳ್ಳುವುದು ಈ ವಿಧೇಯಕದ ಉದ್ದೇಶವಾಗಿದೆ. ಈ ವಿಧೇಯಕದಲ್ಲಿ ಜಾತಿ ಪಂಚಾಯತ್ ಅನ್ನೂ ವಿಶ್ಲೇಷಿಸಿದೆ. ಅದೇ ಸಮುದಾಯದಲ್ಲಿನ ಹಲವು ಪದ್ಧತಿಗಳನ್ನು ನಿಯಂತ್ರಿಸಲು ಸಹ ಈ ವಿಧೇಯಕವು ಸಹಕಾರಿಯಾಗಲಿದೆ.
ಸಾಮಾಜಿಕ ಬಹಿಷ್ಕಾರವನ್ನು ವಿಧೇಯಕದ ೩ನೇ ಪ್ರಕರಣದಲ್ಲಿ ನಿರ್ದಿಷ್ಟಪಡಿಸಿದೆ. ಸಮುದಾಯದ ಸದಸ್ಯರ ನಡುವೆ ಯಾವುದೇ ಸಾಮಾಜಿಕ ತಾರತಮ್ಯದ ಕುರಿತ ಮೌಖಿಕವಾದ ಅಥವಾ ಲಿಖಿತವಾದ ಪರೋಕ್ಷ ಸೂಚನೆ ಅಥವಾ ಕೃತ್ಯ ಎಂದು ವಿವರಿಸಿದೆ.
ಸಾಮಾಜಿಕ ಬಹಿಷ್ಕಾರ ಮಾಡಿರುವ ಕಾರಣದಿಂದಾಗಿ ತೊಂದರಗೆ ಒಳಗಾದ ಅಥವಾ ದೈಹಿಕವಾದ ಅಥವಾ ಹಣಕಾಸಿನ ತೊಂದರೆ ಅಥವಾ ಸ್ವತ್ತಿಗೆ ತೊಂದರೆಯನ್ನು ಅನುಭವಿಸಿದ ವ್ಯಕ್ತಿ ಮತ್ತು ಆತನ ಸಂಬಂಧಿಕರು, ಕಾನೂನುಬದ್ಧ ಪೋಷಕರು ಮತ್ತು ಕಾನೂನುಬದ್ಧ ವಾರಸುದಾರರನ್ನು ‘ಸಂತ್ರಸ್ತ’ ಎಂದು ವಿಶ್ಲೇಷಿಸಿದೆ.
ಇನ್ನೊಬ್ಬ ವ್ಯಕ್ತಿಯೊಂದಿಗೆ ವ್ಯವಹರಿಸಲು, ಬಾಡಿಗೆಗಾಗಿ ಕೆಲಸ ನಿರ್ವಹಿಸಲು ಅಥವಾ ವ್ಯಾಪಾರ ಮಾಡಲು ನಿರಾಕರಿಸುವುದು, ಪ್ರತಿಫಲಕ್ಕಾಗಿ ಸೇವೆಯನ್ನು ಸಲ್ಲಿಸುವುದಕ್ಕಾಗಿ ಸೇವೆಗಳನ್ನು ನೀಡುವ ಅಥವಾ ಒಪ್ಪಂದ ಅವಕಾಶಗಳನ್ನು ಒಳಗೊಂಡ ಸದವಕಾಶಗಳನ್ನು ನಿರಾಕರಿಸುವುದು ಸಹ ಸಾಮಾಜಿಕ ಬಹಿಷ್ಕಾರ ಎಂದು ವಿಶ್ಲೇಷಿಸಿದೆ.
ಆತನ ಸಮುದಾಯದ ಯಾರೇ ಸದಸ್ಯನನ್ನು ಯಾವುದೇ ಸಾಮಾಜಿಕ ಅಥವಾ ಧಾರ್ಮಿಕ ಪದ್ಧತಿ, ಬಳಕೆ ಅಥವಾ ಸಮಾರಂಭವನ್ನು ವೀಕ್ಷಿಸುವುದರಿಂದ ಅಥವಾ ಸಾಮಾಜಿಕ, ಧಾರ್ಮಿಕ, ಸಾಮುದಾಯಿಕ ಕಾರ್ಯಕ್ರಮಗಳು, ಸಮಾರಂಭ, ಸಮಾವೇಶ ಸಭೆ ಅಥವಾ ಮೆರವಣಿಗೆಗಳಲ್ಲಿ ಪಾಲ್ಗೊಳ್ಳುವುದರಿಂದ ತಡೆಯುವಂತಿಲ್ಲ. ಅಲ್ಲದೆ ನಿರ್ಬಂಧಿಸುವಂತಿಲ್ಲ. ಹಾಗೆಯೇ ಇಂತಹ ನಿರ್ಬಂಧಕ್ಕೆ ಕಾರಣನಾಗುವುದು ಸಹ ಸಾಮಾಜಿಕ ಬಹಿಷ್ಕಾರ ಎಸಗಿದಂತೆ ಎಂದು ವಿವರಿಸಿದೆ.
ಯಾವುದೇ ಶಾಲೆ, ಶೈಕ್ಷಣಿಕ ಸಂಸ್ಥೆ, ವೈದ್ಯಕೀಯ ಸಂಸ್ಥೆ, ಸಮುದಾಯ ಸಭಾಂಗಣ, ಕ್ಲಬ್, ಸ್ಮಶಾನ, ಸಮಾಧಿ ಸ್ಥಳ ಅಥವಾ ಆತನ ಸಮುದಾಯವು ಬಳಸುವ ಅಥವಾ ಬಳಸಲು ಉದ್ದೇಶಿಸಿರುವ ಯಾವುದೇ ಇತರ ಸ್ಥಳ ಅಥವಾ ಯಾವುದೇ ಇತರ ಸಾರ್ವಜನಿಕ ಸ್ಥಳದ ಸೌಲಭ್ಯ ಒದಗಿಸುವುದನ್ನು, ಬಳಸುವುದನ್ನು ತಡೆಯುವುದು ಅಥವಾ ನಿರ್ಬಂಧಿಸುವುದು ಅಥವಾ ಇದಕ್ಕೆ ಕಾರಣಕರ್ತನಾಗುವುದು ಸಹ ಅಪರಾಧವಾಗಲಿವೆ.
ಆತನ ಸಮುದಾಯದ ಯಾರೇ ಮಕ್ಕಳು ನಿರ್ದಿಷ್ಟ ಕುಟುಂಬದ ಅಥವಾ ಸಮುದಾಯದ ಇತರ ಕುಟುಂಬಗಳ ಮಕ್ಕಳೊಂದಿಗೆ ಒಟ್ಟಿಗೆ ಆಟವಾಡುವುದನ್ನು ತಡೆಯುವುದು ಸಹ ನಿರ್ಬಂಧಿಸುವುದು ಸಹ ಅಪರಾಧವಾಗಲಿವೆ.
ನೈತಿಕತೆ, ಸಾಮಾಜಿಕ ಸ್ವೀಕಾರ, ರಾಜಕೀಯ ಒಲವು, ಲಿಂಗತ್ವ ಅಥವಾ ಯಾವುದೇ ಇತರ ಆಧಾರದ ಮೇಲೆ ಸಮುದಾಯದ ಸದಸ್ಯರ ನಡುವೆ ತಾರತಮ್ಯವನ್ನು ಮಾಡುವುದು ಸಹ ಸಾಮಾಜಿಕ ಬಹಿಷ್ಕಾರವನ್ನು ಎಸಗಿದಂತಾಗುತ್ತದೆ.
ಆತನ ಸಮುದಾಯದ ಯಾರೇ ಸದಸ್ಯನನ್ನು ಯಾವುದೇ ನಿರ್ದಿಷ್ಟ ರೀತಿಯ ಬಟ್ಟೆಗಳನ್ನು ಧರಿಸಲು ಅಥವಾ ಯಾವುದೇ ನಿರ್ದಿಷ್ಟ ಭಾಷೆಯನ್ನು ಬಳಸಲು ಸಾಂಸ್ಕೃತಿಕ ಅಡಚಣೆಯನ್ನು ಸೃಷ್ಟಿಸುವುದು ಅಥವಾ ಸೃಷ್ಟಿಸುವಂತೆ ಮಾಡುವುದು ಅಥವಾ ಒತ್ತಾಯಿಸುವುದು ಸಹ ಅಪರಾಧಾಗಲಿವೆ.
ವ್ಯಕ್ತಿಯು ತನ್ನ ಅಧಿಕಾರವನ್ನು ಬಳಸಿ ಅಥವಾ ಬಳಸಲು ಕಾರಣವಾಗಿ ಸಾಮಾಜಿಕ ಬಹಿಷ್ಕಾರ ವಿಧಿಸಲಿಕ್ಕಾಗಿಯೇ ಜಾತಿ ಪಂಚಾಯತಿ ಸಭೆ ನಡೆಸುವುದು ಮತ್ತು ಸಭೆಗಳಲ್ಲಿ ಮತ ಚಲಾಯಿಸಲು ಅದರ ಇತರ ಸದಸ್ಯರನ್ನು ಪ್ರಭಾವಿಸುವುದು, ಅಂಥ ಸಭೆಗಳಲ್ಲಿ ಉಪಸ್ಥಿತನಾಗಿರದಿದ್ದರೂ ಸಹ ಈ ಪ್ರಕರಣದ ಅಡಿ ಅಪರಾಧ ಎಸಗಿದಂತೆ. ಜಾತಿ ಪಂಚಾಯತ್ ಸಭೆಯು ನಡೆದಾಗ ಸಾಮಾಜಿಕ ಬಹಿಷ್ಕಾರ ವಿಧಿಸುವ ನಿರ್ಣಯ ಹೊರಡಿಸುವುದು, ಅಂತಹ ನಿರ್ಣಯ ಅಥವಾ ಆಚರಣೆಯ ಚರ್ಚೆಗಳ ಪರವಾಗಿ ಮತ ಚಲಾಯಿಸಿದ ಪ್ರತೀ ಸದಸ್ಯನೂ ಸಹ ಈ ಪ್ರಕರಣದಡಿಯಲ್ಲಿ ಅಪರಾಧ ಎಸಗಿದಂತಾಗುತ್ತದೆ.







