ಬರ ಸಂಶೋಧನೆಗಾಗಿ IIT ಬಾಂಬೆ ಪ್ರೊ. ಕಾರ್ತಿಕೇಯನ್ ಲಂಕಾಗೆ NASI ಪ್ರಶಸ್ತಿ

ಪ್ರೊ. ಕಾರ್ತಿಕೇಯನ್ ಲಂಕಾ | Photo Credit : NDTV
ವಿಜ್ಞಾನಕ್ಕೆ ಗಮನಾರ್ಹ ಕೊಡುಗೆ ನೀಡಿದ ಯುವ ಸಂಶೋಧಕರನ್ನು ಗುರುತಿಸಿ NASI ಯುವ ವಿಜ್ಞಾನಿ ಪ್ರಶಸ್ತಿ ನೀಡಲಾಗುತ್ತದೆ.
ಭೂ ವಿಜ್ಞಾನದಲ್ಲಿ, ವಿಶೇಷವಾಗಿ ಕೃಷಿ ಬರಗಾಲದ ಕುರಿತಾಗಿ ನಡೆಸಿದ ಅಧ್ಯಯನಕ್ಕಾಗಿ IIT ಬಾಂಬೆಯ ಪ್ರೊಫೆಸರ್ ಕಾರ್ತಿಕೇಯನ್ ಲಂಕಾ ಅವರನ್ನು ಭಾರತದ ರಾಷ್ಟ್ರೀಯ ವಿಜ್ಞಾನ ಅಕಾಡೆಮಿಯು (NASI) ಯುವ ವಿಜ್ಞಾನಿ 2026 ಪ್ರಶಸ್ತಿಗೆ ಆಯ್ಕೆ ಮಾಡಿದೆ. IIT ಬಾಂಬೆ ಈ ವಿವರವನ್ನು ಅಧಿಕೃತ ಪ್ರಕಟಣೆಯಲ್ಲಿ ತಿಳಿಸಿದೆ.
ಪ್ರೊಫೆಸರ್ ಕಾರ್ತಿಕೇಯನ್ ಅವರ ಸಂಶೋಧನೆಯು ಬರ, ಮಣ್ಣಿನ ತೇವಾಂಶ ಮತ್ತು ಭೂಮಿ ಹಾಗೂ ವಾತಾವರಣದ ನಡುವಿನ ಪರಸ್ಪರ ಕ್ರಿಯೆಗಳನ್ನು ಅರ್ಥಮಾಡಿಕೊಳ್ಳುವುದರ ಮೇಲೆ ಕೇಂದ್ರೀಕರಿಸುತ್ತದೆ. ನೀರಿನ ಲಭ್ಯತೆಯಲ್ಲಿನ ಬದಲಾವಣೆಗಳು ಕೃಷಿಯ ಮೇಲೆ ಹೇಗೆ ಪರಿಣಾಮ ಬೀರುತ್ತವೆ ಎಂಬುದನ್ನು ಅಧ್ಯಯನ ಮಾಡಲು ಅವರು ಉಪಗ್ರಹ ದತ್ತಾಂಶ, ದೂರ ಸಂವೇದನೆ ಮತ್ತು ಹವಾಮಾನ ಮಾದರಿಗಳನ್ನು ಬಳಸುತ್ತಾರೆ.
ಬೆಳೆಗಳು, ರೈತರು ಮತ್ತು ಜಲ ಸಂಪನ್ಮೂಲಗಳ ಮೇಲೆ ನೇರ ಪರಿಣಾಮ ಬೀರುವಂತಹ ಕೃಷಿ ಬರಗಾಲದ ತಿಳಿವಳಿಕೆ ಮತ್ತು ಮುನ್ಸೂಚನೆ ಸುಧಾರಿಸುವ ಗುರಿಯನ್ನು ಅವರ ಕೆಲಸ ಹೊಂದಿದೆ. IIT ಬಾಂಬೆಯ ಸಂಪನ್ಮೂಲ ಇಂಜಿನಿಯರಿಂಗ್ ಅಧ್ಯಯನ ಕೇಂದ್ರದಲ್ಲಿ ಅವರ ಸಂಶೋಧನೆಯು ಮೈಕ್ರೋವೇವ್ ರಿಮೋಟ್ ಸೆನ್ಸಿಂಗ್, ಬರ ಮತ್ತು ಭೂಮೇಲ್ಮೈ ಮಾಡೆಲಿಂಗ್ ಬಳಸಿಕೊಂಡು ಮಣ್ಣಿನ ತೇವಾಂಶ ಅಂದಾಜು ಮಾಡುವುದನ್ನು ಒಳಗೊಂಡಿದೆ.
ಅವರ ಸಂಶೋಧನೆಯು ಬರ ಮೇಲ್ವಿಚಾರಣೆಯನ್ನು ಸುಧಾರಿಸಲು ಸಹಾಯ ಮಾಡಲಿದೆ. ಕೃಷಿ ಮತ್ತು ನೀರಿನ ನಿರ್ವಹಣೆಗೆ ಸಂಬಂಧಿಸಿ ಬರ ಪ್ರಮುಖ ಕಾಳಜಿಯಾಗಿದೆ. ಬದಲಾಗುತ್ತಿರುವ ಮಣ್ಣಿನ ತೇವಾಂಶ ಮತ್ತು ಮಳೆಯ ಪರಿಸ್ಥಿತಿಗಳ ಉತ್ತಮ ಚಿತ್ರಣವನ್ನು ಪಡೆಯಲು ಪ್ರೊಫೆಸರ್ ಕಾರ್ತಿಕೇಯನ್ ಅವರ ಸಂಶೋಧನೆಯಲ್ಲಿ ಉಪಗ್ರಹಗಳು ಮತ್ತು ವೈಜ್ಞಾನಿಕ ಮಾಡೆಲ್ ಗಳಿಂದ ದತ್ತಾಂಶವನ್ನು ಬಳಸಿಕೊಳ್ಳಲಾಗಿದೆ. ಇಂತಹ ಅಧ್ಯಯನಗಳಿಂದ ಬರ ಪರಿಸ್ಥಿತಿ ಎಲ್ಲಿ ಬೆಳೆಯಬಹುದು ಮತ್ತು ಅವು ಕೃಷಿ ಪ್ರದೇಶದ ಮೇಲೆ ಹೇಗೆ ಪರಿಣಾಮ ಬೀರಬಹುದು ಎಂಬುದನ್ನು ಅರ್ಥ ಮಾಡಿಕೊಳ್ಳಲು ಸಂಶೋಧಕರಿಗೆ ಸಹಾಯ ಮಾಡುತ್ತದೆ.
ಪ್ರೊಫೆಸರ್ ಕಾರ್ತಿಕೇಯನ್ ಅವರು IIT ಬಾಂಬೆಯ ಸಂಪನ್ಮೂಲ ಇಂಜಿನಿಯರಿಂಗ್ ಅಧ್ಯಯನ ಕೇಂದ್ರದಲ್ಲಿ ಅಸೋಸಿಯೇಟ್ ಪ್ರೊಫೆಸರ್ ಆಗಿದ್ದಾರೆ. ಅವರ ಶೈಕ್ಷಣಿಕ ಕೆಲಸವು ದೂರ ಸಂವೇದಿ, ಭೂ–ವಾತಾವರಣ ಸಂವಹನ ಮತ್ತು ಜಲವಿಜ್ಞಾನವನ್ನು ವ್ಯಾಪಕವಾಗಿ ಒಳಗೊಂಡಿದೆ. ವಿಜ್ಞಾನಕ್ಕೆ ಗಮನಾರ್ಹ ಕೊಡುಗೆ ನೀಡಿದ ಯುವ ಸಂಶೋಧಕರನ್ನು ಗುರುತಿಸಿ NASI ಯುವ ವಿಜ್ಞಾನಿ ಪ್ರಶಸ್ತಿ ನೀಡಲಾಗುತ್ತದೆ. ಪ್ರೊಫೆಸರ್ ಕಾರ್ತಿಕೇಯನ್ ಅವರ ಆಯ್ಕೆಯಿಂದ ಕೊನೆಗೂ ಬರ ಮತ್ತು ಪರಿಸರ ಅಧ್ಯಯನಕ್ಕೆ ರಾಷ್ಟ್ರೀಯ ಮನ್ನಣೆ ನೀಡಿದಂತಾಗಿದೆ.






