ತುಂಬಿ ತುಳುಕುತ್ತಿದೆ ಜೈಲುಗಳು; ವಿಚಾರಣೆಗೆ ಮುನ್ನವೇ ಲಕ್ಷಾಂತರ ಕೈದಿಗಳಿಗೆ ʼಶಿಕ್ಷೆʼ

ಸಾಂದರ್ಭಿಕ ಚಿತ್ರ | Photo Credit : magnific.com
ಹೊಸದಿಲ್ಲಿ: ದೇಶದ ಜೈಲು ವ್ಯವಸ್ಥೆಯಲ್ಲಿರುವ ಗಂಭೀರ ಸಮಸ್ಯೆಯೊಂದನ್ನು ಅಂಕಿಅಂಶಗಳು ಮತ್ತೊಮ್ಮೆ ಬಹಿರಂಗಪಡಿಸಿವೆ. 2024ರ ಅಂತ್ಯದ ವೇಳೆಗೆ ಭಾರತದ ಬಹುತೇಕ ಜೈಲುಗಳಲ್ಲಿ ನಿಗದಿತ ಸಾಮರ್ಥ್ಯಕ್ಕಿಂತ ಹೆಚ್ಚಿನ ಕೈದಿಗಳು ಇದ್ದಾರೆ. ದೇಶದ ಒಟ್ಟಾರೆ ಜೈಲು ಭರ್ತಿ ಪ್ರಮಾಣ ಶೇ.112.7ಕ್ಕೆ ತಲುಪಿದೆ.
ಕೇಂದ್ರ ಸರ್ಕಾರ ರಾಜ್ಯಸಭೆಗೆ ನೀಡಿದ ಮಾಹಿತಿಯ ಪ್ರಕಾರ, ದೇಶದ ಜೈಲುಗಳಲ್ಲಿ ಒಟ್ಟು 4,53,769 ಕೈದಿಗಳನ್ನು ಇರಿಸುವ ಸಾಮರ್ಥ್ಯವಿದೆ. ಆದರೆ, 2024ರ ಡಿಸೆಂಬರ್ 31ರ ವೇಳೆಗೆ ಜೈಲುಗಳಲ್ಲಿ 5,11,542 ಕೈದಿಗಳು ಇದ್ದರು. ಅಂದರೆ, ಜೈಲುಗಳ ಸಾಮರ್ಥ್ಯಕ್ಕಿಂತ 57,773 ಕೈದಿಗಳು ಹೆಚ್ಚಾಗಿದ್ದಾರೆ.
ಗೃಹ ವ್ಯವಹಾರಗಳ ರಾಜ್ಯ ಸಚಿವ ಬಂಡಿ ಸಂಜಯ್ ಕುಮಾರ್ ಅವರು ರಾಜ್ಯಸಭೆಯಲ್ಲಿ ನೀಡಿದ ರಾಷ್ಟ್ರೀಯ ಅಪರಾಧ ದಾಖಲೆಗಳ ಬ್ಯೂರೋ (NCRB) ಅಂಕಿಅಂಶಗಳ ಪ್ರಕಾರ, ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಪೈಕಿ ದಿಲ್ಲಿಯ ಜೈಲುಗಳಲ್ಲಿ ಅತಿ ಹೆಚ್ಚು ಒತ್ತಡ ಕಂಡುಬಂದಿದೆ. ದಿಲ್ಲಿಯ ಜೈಲುಗಳಲ್ಲಿ 10,026 ಕೈದಿಗಳನ್ನು ಇರಿಸುವ ಸಾಮರ್ಥ್ಯವಿದೆ. ಆದರೆ, ಅಲ್ಲಿ 19,512 ಕೈದಿಗಳು ಇದ್ದಾರೆ. ಇದು ಜೈಲು ಸಾಮರ್ಥ್ಯಕ್ಕಿಂತ ಶೇ.194.6ರಷ್ಟು ಹೆಚ್ಚಾಗಿದೆ.
ದಿಲ್ಲಿಯನ್ನು ಹೊರತುಪಡಿಸಿದರೆ, ಜೈಲುಗಳಲ್ಲಿ ಹೆಚ್ಚಿನ ಒತ್ತಡ ಕಂಡುಬಂದ ರಾಜ್ಯಗಳ ಪೈಕಿ ಮೇಘಾಲಯ ಮೊದಲ ಸ್ಥಾನದಲ್ಲಿದ್ದು, 860 ಕೈದಿಗಳ ಸಾಮರ್ಥ್ಯವಿರುವ ಜೈಲುಗಳಲ್ಲಿ 1,406 ಕೈದಿಗಳಿದ್ದಾರೆ. ಅಲ್ಲಿ ಭರ್ತಿ ಪ್ರಮಾಣ ಶೇ.163.5ರಷ್ಟಿದೆ. ಜಮ್ಮು ಮತ್ತು ಕಾಶ್ಮೀರದಲ್ಲಿ 3,629 ಸಾಮರ್ಥ್ಯಕ್ಕೆ 5,383 ಕೈದಿಗಳಿದ್ದು, ಭರ್ತಿ ಪ್ರಮಾಣ ಶೇ.148.3 ಆಗಿದೆ. ಮಧ್ಯಪ್ರದೇಶದಲ್ಲಿ 30,644 ಸಾಮರ್ಥ್ಯದ ಜೈಲುಗಳಲ್ಲಿ 45,092 ಕೈದಿಗಳಿದ್ದು, ಶೇ.147.1ರಷ್ಟು ಭರ್ತಿ ದಾಖಲಾಗಿದೆ. ಮಹಾರಾಷ್ಟ್ರದಲ್ಲಿ 27,110 ಕೈದಿಗಳ ಸಾಮರ್ಥ್ಯವಿದ್ದರೂ 39,003 ಕೈದಿಗಳು ಇದ್ದು, ಭರ್ತಿ ಪ್ರಮಾಣ ಶೇ.143.9ಕ್ಕೆ ತಲುಪಿದೆ.
ಇದೇ ರೀತಿ, ಕೇರಳದ ಜೈಲುಗಳಲ್ಲಿ 7,823 ಕೈದಿಗಳ ಸಾಮರ್ಥ್ಯವಿದ್ದರೂ 10,307 ಕೈದಿಗಳಿದ್ದು, ಭರ್ತಿ ಪ್ರಮಾಣ ಶೇ.131.8ರಷ್ಟಿದೆ. ಪಂಜಾಬ್ ನಲ್ಲಿ ಶೇ.115.5 ಮತ್ತು ಉತ್ತರ ಪ್ರದೇಶದಲ್ಲಿ ಶೇ.113.9ರಷ್ಟು ಜೈಲು ಭರ್ತಿ ದಾಖಲಾಗಿದೆ. ದೇಶದಲ್ಲೇ ಅತಿ ಹೆಚ್ಚು ಜೈಲು ಸಾಮರ್ಥ್ಯ ಹೊಂದಿರುವ ಉತ್ತರ ಪ್ರದೇಶದಲ್ಲಿ 76,162 ಕೈದಿಗಳನ್ನು ಇರಿಸುವ ವ್ಯವಸ್ಥೆಯಿದ್ದರೂ, ಅಲ್ಲಿ 86,762 ಕೈದಿಗಳು ಜೈಲುಗಳಲ್ಲಿದ್ದಾರೆ.
►3.71 ಲಕ್ಷ ವಿಚಾರಣಾಧೀನ ಕೈದಿಗಳು
ರಾಜ್ಯಸಭೆಗೆ ನೀಡಿದ ಮತ್ತೊಂದು ಮಾಹಿತಿಯಲ್ಲಿ, 2024ರ ಡಿಸೆಂಬರ್ 31ರ ವೇಳೆಗೆ ದೇಶದಲ್ಲಿ 3,71,440 ವಿಚಾರಣಾಧೀನ ಕೈದಿಗಳು ಇದ್ದರು ಎಂದು ಸರ್ಕಾರ ತಿಳಿಸಿದೆ. ಇವರಲ್ಲಿ 968 ಕೈದಿಗಳು ಭಾರತೀಯ ನಾಗರಿಕ ಸುರಕ್ಷಾ ಸಂಹಿತೆ (BNSS) ಸೆಕ್ಷನ್ 479 ಅಥವಾ ಹಿಂದಿನ ಅಪರಾಧ ಪ್ರಕ್ರಿಯಾ ಸಂಹಿತೆ (CrPC) ಸೆಕ್ಷನ್ 436A ಅಡಿ ಬಿಡುಗಡೆಗೆ ಅರ್ಹರಾಗಿದ್ದರು. ಆದರೆ, ಅವರಲ್ಲಿ 627 ಮಂದಿಯನ್ನು ಮಾತ್ರ ಬಿಡುಗಡೆ ಮಾಡಲಾಗಿದೆ.
ಉಳಿದ ಅರ್ಹ ವಿಚಾರಣಾಧೀನ ಕೈದಿಗಳ ಬಿಡುಗಡೆ ವಿಳಂಬಕ್ಕೆ ಯಾವುದೇ ನಿರ್ದಿಷ್ಟ ಕಾರಣಗಳನ್ನು ರಾಜ್ಯಗಳು ಅಥವಾ ಕೇಂದ್ರಾಡಳಿತ ಪ್ರದೇಶಗಳು ಕೇಂದ್ರ ಗೃಹ ಸಚಿವಾಲಯಕ್ಕೆ ತಿಳಿಸಿಲ್ಲ ಎಂದು ಸಚಿವರು ಹೇಳಿದರು.
ಜೈಲು ನಿರ್ವಹಣೆ ಮತ್ತು ಕೈದಿಗಳ ಆಡಳಿತವು ಸಂವಿಧಾನದ ರಾಜ್ಯ ಪಟ್ಟಿಗೆ ಸೇರಿರುವುದರಿಂದ, ಜೈಲು ಮೂಲಸೌಕರ್ಯ ವಿಸ್ತರಣೆ, ಹೆಚ್ಚಿನ ಸಂಖ್ಯೆಯ ಕೈದಿಗಳ ಸಮಸ್ಯೆ ಪರಿಹಾರ ಮತ್ತು ಅರ್ಹ ಕೈದಿಗಳ ಸಮಯೋಚಿತ ಬಿಡುಗಡೆ ಜವಾಬ್ದಾರಿ ರಾಜ್ಯ ಸರ್ಕಾರಗಳದ್ದಾಗಿದೆ ಎಂದು ಕೇಂದ್ರ ತಿಳಿಸಿದೆ.
ಮಾಹಿತಿಯ ಪ್ರಕಾರ, ಒಟ್ಟಾರೆ ದೇಶದ ಜೈಲುಗಳಲ್ಲಿ ಇರುವ ಒಟ್ಟು ಕೈದಿಗಳ ಪೈಕಿ ಸುಮಾರು ಶೇ.70ರಷ್ಟು ಮಂದಿ ವಿಚಾರಣಾಧೀನ ಕೈದಿಗಳಾಗಿದ್ದಾರೆ. ಅಂದರೆ, ಇವರ ಮೇಲಿರುವ ಪ್ರಕರಣಗಳ ವಿಚಾರಣೆ ಇನ್ನೂ ಪೂರ್ಣಗೊಂಡಿಲ್ಲ ಮತ್ತು ನ್ಯಾಯಾಲಯವು ಅವರನ್ನು ಅಪರಾಧಿಗಳೆಂದು ಘೋಷಿಸಿಲ್ಲ. ಆದರೂ, ಇಂತಹ ವಿಚಾರಣಾಧೀನ ಕೈದಿಗಳಲ್ಲಿ ಹಲವರು ತಮ್ಮ ಮೇಲಿರುವ ಆರೋಪಗಳಿಗೆ ಅನ್ವಯಿಸುವ ಗರಿಷ್ಠ ಶಿಕ್ಷೆಯ ಅವಧಿಗಿಂತಲೂ ಹೆಚ್ಚು ಸಮಯವನ್ನು ಜೈಲುಗಳಲ್ಲಿ ಕಳೆಯುತ್ತಿದ್ದಾರೆ.
ವಿಚಾರಣಾಧೀನ ಕೈದಿಗಳ ಹೆಚ್ಚಿನ ಸಂಖ್ಯೆಯೇ ದೇಶದ ಜೈಲುಗಳಲ್ಲಿ ಉಂಟಾಗಿರುವ ಅತಿಯಾದ ದಟ್ಟಣೆಗೆ ಪ್ರಮುಖ ಕಾರಣವಾಗಿದೆ. ಹಲವು ಜೈಲುಗಳಲ್ಲಿರುವ ಅಮಾನವೀಯ ಪರಿಸ್ಥಿತಿಗಳು ಕೈದಿಗಳ ಮಾನಸಿಕ ಆರೋಗ್ಯದ ಮೇಲೂ ಪರಿಣಾಮ ಬೀರುತ್ತಿದ್ದು, ಕೆಲವರು ಆತ್ಮಹತ್ಯೆಯಂತಹ ಸ್ಥಿತಿಗೂ ತಲುಪುತ್ತಿದ್ದಾರೆ.
ಅಧ್ಯಯನಗಳ ಪ್ರಕಾರ, ವಿಚಾರಣಾಧೀನ ಕೈದಿಗಳು ದೀರ್ಘಕಾಲ ಜೈಲಿನಲ್ಲೇ ಉಳಿಯಲು ಪ್ರಮುಖ ಕಾರಣಗಳೆಂದರೆ ತನಿಖೆ ಪೂರ್ಣಗೊಳ್ಳುವಲ್ಲಿ ಆಗುವ ವಿಳಂಬ, ನ್ಯಾಯಾಧೀಶರ ಕೊರತೆ ಮಾತ್ರವಲ್ಲದೆ, ಬಡತನದಿಂದಾಗಿ ಸಮರ್ಪಕ ಕಾನೂನು ನೆರವು ಪಡೆಯಲು ಸಾಧ್ಯವಾಗದಿರುವುದು ಕೂಡ.
►ಬಾಕಿಯಿರುವ ಕೋಟ್ಯಂತರ ಪ್ರಕರಣಗಳು!
ದೇಶದ ನ್ಯಾಯಾಲಯಗಳಲ್ಲಿ ಬಾಕಿ ಇರುವ ಪ್ರಕರಣಗಳ ಸಂಖ್ಯೆ ಸಮಸ್ಯೆಯ ಗಂಭೀರತೆಯನ್ನು ತೋರಿಸುತ್ತದೆ. ಜಿಲ್ಲಾ ನ್ಯಾಯಾಲಯಗಳಲ್ಲಿ ಸುಮಾರು 3.6 ಕೋಟಿ ಕ್ರಿಮಿನಲ್ ಪ್ರಕರಣಗಳು, ಹೈಕೋರ್ಟ್ಗಳಲ್ಲಿ ಸುಮಾರು 17.5 ಲಕ್ಷ ಪ್ರಕರಣಗಳು ಹಾಗೂ ಸುಪ್ರೀಂ ಕೋರ್ಟ್ನಲ್ಲಿ 14,667 ಪ್ರಕರಣಗಳು ಬಾಕಿ ಇವೆ. ಈ ಸಮಸ್ಯೆಗೆ ನ್ಯಾಯಾಧೀಶರ ಕೊರತೆಯೇ ಪ್ರಮುಖ ಕಾರಣ.
ಭಾರತದಲ್ಲಿ ಪ್ರತಿ 10 ಲಕ್ಷ ಜನರಿಗೆ ಕೇವಲ 21 ನ್ಯಾಯಾಧೀಶರು ಮಾತ್ರ ಇದ್ದಾರೆ. ಇದು ಕಾನೂನು ಆಯೋಗದ 120ನೇ ವರದಿಯಲ್ಲಿ ಶಿಫಾರಸು ಮಾಡಲಾಗಿದ್ದ ಪ್ರಮಾಣಕ್ಕಿಂತ ಬಹಳ ಕಡಿಮೆ. ನ್ಯಾಯಾಧೀಶರ ಸಂಖ್ಯೆ ಇಷ್ಟೊಂದು ಕಡಿಮೆ ಇದ್ದಾಗ, ದೇಶದಲ್ಲಿ ಬಾಕಿ ಉಳಿದಿರುವ ಲಕ್ಷಾಂತರ ಪ್ರಕರಣಗಳ ತ್ವರಿತ ಇತ್ಯರ್ಥ ಸಾಧ್ಯವಾಗುವುದಾದರೂ ಹೇಗೆ ಎಂಬ ಪ್ರಶ್ನೆ ಎದುರಾಗುತ್ತದೆ.
ಇತ್ತೀಚೆಗೆ ಸುಪ್ರೀಂ ಕೋರ್ಟ್ ಕೂಡ ವಿಚಾರಣೆ ಪೂರ್ಣಗೊಳ್ಳದೆ ದೀರ್ಘಕಾಲ ಜೈಲಿನಲ್ಲಿ ಇರಿಸುವುದು ಒಂದು ರೀತಿಯಲ್ಲಿ ಶಿಕ್ಷೆಯಂತಾಗುತ್ತದೆ ಎಂದು ಮಹತ್ವದ ಅಭಿಪ್ರಾಯ ವ್ಯಕ್ತಪಡಿಸಿತ್ತು. ಆದರೆ, ಇಷ್ಟೊಂದು ಪ್ರಮಾಣದಲ್ಲಿ ವಿಚಾರಣಾಧೀನ ಕೈದಿಗಳ ಸಮಸ್ಯೆ ಮತ್ತು ಮಾನವ ಹಕ್ಕುಗಳ ಉಲ್ಲಂಘನೆ ನಡೆಯುತ್ತಿದ್ದರೂ, ಇದಕ್ಕೆ ಶಾಶ್ವತ ಪರಿಹಾರ ಕಲ್ಪಿಸಲು ಕಾನೂನು ರೂಪಿಸುವ ಅಥವಾ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವ ನಿಟ್ಟಿನಲ್ಲಿ ರಾಜಕಾರಣಿಗಳು, ಕಾನೂನು ರೂಪಿಸುವವರು ಮತ್ತು ಸಂಬಂಧಿತ ಸಂಸ್ಥೆಗಳು ಅಗತ್ಯ ಮಟ್ಟದ ಗಮನ ಹರಿಸಬೇಕಿದೆ.






