ಮಂಗಳೂರು ಸೆಂಟ್ರಲ್ ರೈಲು ನಿಲ್ದಾಣದಲ್ಲಿ ಕೇರಳದ ಲಾಬಿ
ಮಂಗಳೂರು ಸೆಂಟ್ರಲ್ನಲ್ಲಿ ಹೆಚ್ಚುವರಿ ಪ್ಲಾಟ್ಫಾರ್ಮ್ಗಳ ಕಾಮಗಾರಿಗಳ ಮುಕ್ತಾಯದ ಕ್ಷಣಗಣನೆ ಆರಂಭವಾಗಿದೆ. ಇದನ್ನೇ ಕಾತರದಿಂದ ಕಾಯುತ್ತಿರುವ ಕೇರಳ ಲಾಬಿ ತನ್ನ ಬೇಳೆ ಬೇಯಿಸಿಕೊಳ್ಳಲು ಮುಂದಾಗಿದೆ. ಹೊಸ ಪ್ಲಾಟ್ಫಾರ್ಮ್ನ ಕಾಮಗಾರಿ ಮುಕ್ತಾಯಕ್ಕೆ ಮುನ್ನವೇ, ಕೇರಳದಿಂದ ಮಂಗಳೂರು ಸೆಂಟ್ರಲಿಗೆ ಹೊಸ ರೈಲುಗಳ ಆರಂಭದ ಪ್ರಸ್ತಾವನೆಗೆ ಚೆನ್ನೈ ವಲಯ ಕಚೇರಿಯಲ್ಲಿ ತೀವ್ರ ಲಾಬಿ ನಡೆಯುತ್ತಿದೆ.
ಈ ಹಿಂದೆ ಕಾರ್ಯ ನಿರ್ವಹಿಸುತ್ತಿದ್ದ ತಮಿಳುನಾಡು ಮೂಲದ ಮುಖ್ಯ ಪ್ರಯಾಣಿಕ ರೈಲುಗಳ ಸಂಚಾರ ಪ್ರಬಂಧಕರು ಈಗ ವರ್ಗಾವಣೆಗೊಂಡು ಅವರ ಹುದ್ದೆಗೆ ಈಗ ಮಲಯಾಳಿ ಅಧಿಕಾರಿ ನೇಮಕಗೊಂಡಿದ್ದಾರೆ. ಇದರಿಂದಾಗಿ ಮಲಯಾಳಿ ಲಾಬಿಗೆ ಇನ್ನಷ್ಟು ಬಲ ಬಂದು, ಮಂಗಳೂರಿನಲ್ಲಿ ಹೊಸ ಪ್ಲಾಟ್ಫಾರ್ಮ್ನ ಕಾರ್ಯ ಆರಂಭಕ್ಕೂ ಮುನ್ನವೇ, ಕೇರಳ ಮೂಲದ ಸಂಘಟನೆಗಳು ಹೊಸ ರೈಲುಗಳ ಪ್ರಸ್ತಾವನೆಯನ್ನು ಕಾರ್ಯ ರೂಪಕ್ಕೆ ತರಲು ಶಕ್ತವಾಗುತ್ತಿರುವ ಲಕ್ಷಣಗಳು ಗೋಚರಿಸುತ್ತದೆ.
ಈಗ ಮಂಗಳೂರು-ಎರ್ನಾಕುಲಮ್ ವಂದೇ ಭಾರತ್ ಎಕ್ಸ್ಪ್ರೆಸ್ ಆರಂಭ ಆಗುತ್ತಿದೆ. ಮುಂದೆ ಮಂಗಳೂರು ಸೆಂಟ್ರಲ್ -ಕೊಟ್ಟಾಯಂ ಎಕ್ಸ್ಪ್ರೆಸ್ ರೈಲಿನ ಆರಂಭದ ಪ್ರಸ್ತಾವನೆ ಸಹ ಅಂತಿಮ ಹಂತದಲ್ಲಿ ಇದೆ ಎಂದು ಜಾಲತಾಣಗಳಲ್ಲಿ ಚರ್ಚೆ ನಡೆಯುತ್ತಿದೆ.
ವಾಸ್ತವ ವಿಷಯ ಏನೆಂದರೆ, ಕೇರಳ ರೈಲುಗಳಿಗೆ ಮಂಗಳೂರು ಸೆಂಟ್ರಲ್ನಲ್ಲಿ ಯಾವತ್ತಿಗೂ ಪ್ಲಾಟ್ಫಾರ್ಮ್ ಲಭ್ಯ ಇರುತ್ತವೆ. ಆದರೆ ಚೋದ್ಯವೇನೆಂದರೆ ಕರ್ನಾಟಕ/ಕೊಂಕಣ ಭಾಗದ ರೈಲುಗಳಿಗೆ ಇಲ್ಲಿ ಅಧಿಕೃತವಾಗಿ ಪ್ಲಾಟ್ಫಾರ್ಮ್ ಲಭ್ಯ ಇಲ್ಲ.
ಸುಮಾರು ವರ್ಷಗಳ ಹಿಂದೆ, ಮಂಗಳೂರು ಜಂಕ್ಷನ್ -ಮುಂಬೈ ಸಿ.ಎಸ್.ಎಂ.ಟಿ. ರೈಲಿಗೆ ಮಂಗಳೂರು ಸೆಂಟ್ರಲ್ನಲ್ಲಿ ಪ್ಲಾಟ್ಫಾರ್ಮ್ನ ಲಭ್ಯ ಇಲ್ಲ ಎಂಬ ನೆಪವೊಡ್ಡಿ ಈ ರೈಲನ್ನು ಈ ಭಾಗದ ಜನತೆಯ ಪ್ರಬಲ ವಿರೋಧದ ನಡುವೆಯೇ, ಮಂಗಳೂರು ಜಂಕ್ಷನ್ನಲ್ಲಿಯೇ ನಿಲ್ಲಿಸಲಾಯಿತು.
ಇದಾದ ಕೆಲವೇ ತಿಂಗಳ ನಂತರ ಬೆನ್ನು-ಬೆನ್ನಿಗೆ ಕೇರಳದಿಂದ ಮೂರು ರೈಲುಗಳು ಮಂಗಳೂರು ಸೆಂಟ್ರಲ್ನಲ್ಲಿ ಬರುವುದಕ್ಕೆ ಅವಕಾಶ ಮಾಡಿ ಕೊಡಲಾಯಿತು. ಹಾಗಾದರೆ ಮಂಗಳೂರು ಎಕ್ಸ್ಪ್ರೆಸ್ ರೈಲು ಸೆಂಟ್ರಲಿಗೆ ಬರಲು ಯಾಕೆ ಅವಕಾಶ ನಿರಾಕರಿಸಲಾಯಿತು? ಎಂದು ಅಧಿಕಾರಿಗಳನ್ನು ಪ್ರಶ್ನಿಸಿದರೆ, ಹೊಸ ಪ್ಲಾಟ್ಫಾರ್ಮ್ ಆದ ಮೇಲೆ ಅವಕಾಶ ಮಾಡಿ ಕೊಡುತ್ತೇವೆ ಎಂಬ ಉತ್ತರ ಕೊಡಲಾಯಿತು.
ಮುಂದೆ ಹನುಮಂತ ಕಾಮತ್ ಅವರು ಪಾಲಕ್ಕಾಡ್ ವಿಭಾಗದ ವಿಭಾಗೀಯ ರೈಲು ಬಳಕೆದಾರರ ಸಲಹಾ ಸಮಿತಿಯ ಸದಸ್ಯರಾಗಿ ಆಯ್ಕೆಯಾದ ನಂತರ, ಪರಿಸ್ಥಿತಿ ಸ್ವಲ್ಪ ಮಟ್ಟಿಗೆ ಬದಲಾವಣೆ ಕಂಡಿದೆ. ಬಳಕೆದಾರರ ಸಭೆಯಲ್ಲಿ ಕಾಮತ್ ಅವರು ಮಂಗಳೂರಿಗೆ ಆಗುತ್ತಿರುವ ಅನ್ಯಾಯವನ್ನು ಸಭೆಯಲ್ಲಿ ವಿವರಿಸಿದ ನಂತರ ಪಾಲಕ್ಕಾಡ್ ವಿಭಾಗ ಸ್ವಲ್ಪ ಮಟ್ಟಿಗೆ ಎಚ್ಚೆತ್ತುಕೊಂಡಿದೆ.
ಇದೇ ವೇಳೆ ಮಂಗಳೂರು ಸೆಂಟ್ರಲ್ ರೈಲು ನಿಲ್ದಾಣವನ್ನು ಅಭಿವೃದ್ಧಿ ಪಡಿಸಲು ಸಂಸದರ ಪ್ರಯತ್ನದಿಂದ 2 ಹೊಸ ಪ್ಲಾಟ್ಫಾರ್ಮ್ ಹಾಗೂ ಒಂದು ಪಿಟ್ಲೈನ್ ಸಿದ್ಧವಾಗಿದೆ. ಈಗ ಮಂಗಳೂರು ಜಂಕ್ಷನ್ಗೆ ಬಂದು ಹೋಗುವ ಕರ್ನಾಟಕ ಹಾಗೂ ಕೊಂಕಣ ಭಾಗದ ರೈಲುಗಳನ್ನು ಮಂಗಳೂರು ಸೆಂಟ್ರಲಿಗೆ ವಿಸ್ತರಿಸಲು ಕ್ರಮ ಕೈಗೊಳ್ಳಬೇಕೆಂದು ಸಂಸದರು ಈಗಾಗಲೇ ರೈಲ್ವೆ ಅಧಿಕಾರಿಗಳಿಗೆ ಸೂಕ್ತ ನಿರ್ದೇಶನ ನೀಡಿದ್ದಾರೆ. ಅಂತೆಯೇ ಮಳೆ, ಚಳಿ, ಬಿಸಿಲಿಗೆ ಮೈಯೊಡ್ಡಿ ನಿಲ್ಲುವ ರೈಲು ಪ್ರಯಾಣಿಕರ ಬವಣೆಯನ್ನು ಅರಿತು ಎಲ್ಲಾ ಪ್ಲಾಟ್ಫಾರ್ಮ್ಗಳಿಗೆ, ಈಗಿರುವ 4 ಬೋಗಿಗಳ ಮೇಲ್ಛಾವಣಿ ಬದಲು 26 ಬೋಗಿ ನಿಲ್ಲುವ ಇಡೀ ಪ್ಲಾಟ್ಫಾರ್ಮ್ಗೆ ಮೇಲ್ಛಾವಣಿ ಈ ಕೂಡಲೇ ಹಾಕಬೇಕೆಂದು ಪ್ರಯಾಣಿಕರ ಒತ್ತಾಸೆ ಆಗಿದೆ.
ದಕ್ಷಿಣ ರೈಲ್ವೆಯ ಪ್ರಸ್ತಾವಿತ ಹೊಸ ವಂದೇ ಭಾರತ್ ರೈಲು, ಮಂಗಳೂರು ಜಂಕ್ಷನ್ನಿಂದ ಸದ್ಯ ಓಡಾಟ ನಡೆಸುತ್ತಿರುವ ಕರ್ನಾಟಕದ ರೈಲುಗಳನ್ನು ಮಂಗಳೂರು ಸೆಂಟ್ರಲ್ ತನಕ ವಿಸ್ತರಿಸುವ ಪ್ರಯತ್ನಕ್ಕೆ ಅಡ್ಡಿ ಆಗದಿರಲಿ ಎಂಬುದೇ ನಮ್ಮೆಲ್ಲರ ಆಶಯ.
ಹಾಗೆಯೇ ಮಂಗಳೂರು ಸೆಂಟ್ರಲಿನ ಹೊಸ ಎರಡು ಪ್ಲಾಟ್ಫಾರ್ಮ್ ಅನ್ನು ಸಂಪೂರ್ಣವಾಗಿ ಕರ್ನಾಟಕ ಹಾಗೂ ಕೊಂಕಣ ರೈಲುಗಳಿಗೆ ಮಾತ್ರ ಮೀಸಲಿಡಬೇಕು.