“ಪುಟಾಣಿಗಳ ಸಾಮೂಹಿಕ ಅಂತ್ಯಸಂಸ್ಕಾರ ಹೃದಯ ವಿದ್ರಾವಕ” : ಯುಎಇಯನ್ನು ಕಣ್ಣೀರಲ್ಲಿ ಮುಳುಗಿಸಿದ ಭೀಕರ ರಸ್ತೆ ಅಪಘಾತ

ದುಬೈ: ರಾತ್ರಿ ಬೆಳಗಾಗುವುದರೊಳಗೆ ತನ್ನ ನಾಲ್ವರು ಪುಟ್ಟ ಮಕ್ಕಳನ್ನು ಕಳೆದುಕೊಂಡ ಅಬ್ದುಲ್ ಲತೀಫ್ ಮಡುಗಟ್ಟಿದ ದುಃಖವನ್ನು ನಿಯಂತ್ರಿಸುತ್ತಾ ದುಬೈ ಬಳಿಯ ಅಲ್ಕುಸೇಸ್ ಖಬರಸ್ತಾನದಲ್ಲಿ ಗರಬಡಿದಂತೆ ನಿಂತಿದ್ದರು.
ಅಪಘಾತದಲ್ಲಾದ ಗಾಯದಿಂದ ಕೈಗೆ ಹಾಕಿದ್ದ ನೇತುದಾರದೊಂದಿಗೆ ಗಾಲಿಕುರ್ಚಿಯಲ್ಲಿ ತನ್ನ ಮಕ್ಕಳ ಅಂತ್ಯಕ್ರಿಯೆ ಯಲ್ಲಿ ಪಾಲ್ಗೊಳ್ಳಲಿಕ್ಕಾಗಿ ಅಬುಧಾಬಿಯಿಂದ ಬಂದಿದ್ದ ಅವರಿಗೆ ಸಾಂತ್ವನ ಹೇಳುವ ಧೈರ್ಯ ಯಾರಿಗೂ ಇದ್ದಂತಿರಲಿಲ್ಲ.
ರವಿವಾರ ನಸುಕಿಗೆ ಮುನ್ನ ಅಬುಧಾಬಿಯಲ್ಲಿ ಸಂಭವಿಸಿದ ಭೀಕರ ಕಾರು ಅಪಘಾತದಲ್ಲಿ ಜೀವ ಕಳೆದುಕೊಂಡ ಕೇರಳದ ಮಲಪ್ಪುರಂ ಮೂಲದ ನಾಲ್ವರು ಮಕ್ಕಳ ಅಂತ್ಯ ಸಂಸ್ಕಾರದಲ್ಲಿ ಪಾಲ್ಗೊಳ್ಳಲು ಮಂಗಳವಾರ ಸಂಜೆ ಅಲ್ಲಿ ಸೇರಿದ್ದ ಎಲ್ಲರ ಕಣ್ಣುಗಳೂ ತೇವವಾಗಿದ್ದವು.
“ಒಂದೇ ಕುಟುಂಬದ ಮಕ್ಕಳ ಸಾಮೂಹಿಕ ಅಂತ್ಯಸಂಸ್ಕಾರವನ್ನು ನಾನು ಎಂದಿಗೂ ನೋಡಿಲ್ಲ. ಅಲ್ಲಿ ಹಾಜರಿದ್ದ ನಮ್ಮೆಲ್ಲರಿಗೂ ಅದೊಂದು ಹೃದಯವಿದ್ರಾವಕ ಅನುಭವ,” ಎಂದು ಸಾಮಾಜಿಕ ಕಾರ್ಯಕರ್ತೆಯೊಬ್ಬರು ಸುದ್ದಿಗಾರರೊಂದಿಗೆ ಹೇಳಿದ್ದು ಅಲ್ಲಿನ ಒಟ್ಟು ಸನ್ನಿವೇಶವನ್ನು ಚಿತ್ರಿಸುವಂತಿತ್ತು.
ಅಬುಧಾಬಿಯ ಹೊರವಲಯದಲ್ಲಿ ಲೀವಾ ಫೆಸ್ಟಿವಲ್ನಿಂದ ದುಬೈನ ತಮ್ಮ ನಿವಾಸಕ್ಕೆ ಮರಳುತ್ತಿದ್ದ ವೇಳೆ ಸಂಭವಿಸಿದ ವಾಹನ ಅಪಘಾತದಲ್ಲಿ ಅಬ್ದುಲ್ ಲತೀಫ್ ಮತ್ತು ರುಕ್ಸಾನ ಅವರ ನಾಲ್ವರು ಪುತ್ರರು – ಅಶಾಜ್ (14), ಅಮ್ಮಾರ್ (12), ಆಜಮ್ (8), ಅಯ್ಯಾಶ್ (5) –ಮತ್ತು ಕುಟುಂಬದ ಪರಿಚಾರಕಿ ಬುಶ್ರಾ ಫಯಾಝ್ (49) ದಾರುಣವಾಗಿ ಮೃತಪಟ್ಟರು. ಬುಶ್ರಾ ಅವರ ಮೃತದೇಹವನ್ನು ಸೋಮವಾರ ರಾತ್ರಿ ಸ್ವದೇಶಕ್ಕೆ ಕಳುಹಿಸಲಾಯಿತು ಮತ್ತು ಮಂಗಳವಾರ ಬೆಳಗ್ಗೆ ಕೇರಳದಲ್ಲಿ ಅವರ ಅಂತ್ಯಸಂಸ್ಕಾರವೂ ನಡೆಯಿತು.
ದಂಪತಿಯ ಮೂವರು ಮಕ್ಕಳು ಸ್ಥಳದಲ್ಲೇ ಮೃತಪಟ್ಟರೆ ನಾಲ್ಕನೇಯ ಪುತ್ರ ಆಜಮ್ ಚಿಕಿತ್ಸೆ ಫಲಕಾರಿಯಾಗದೆ ಸೋಮವಾರ ಸಂಜೆ ಮೃತಪಟ್ಟ. ಏಕಮಾತ್ರ ಪುತ್ರಿ ಇಝ್ಝಾ (10) ಸಣ್ಣಪುಟ್ಟ ಗಾಯಗಳೊಂದಿಗೆ ಪಾರಾಗಿದ್ದು ಚಿಕಿತ್ಸೆ ಪಡೆಯುತ್ತಿದ್ದಾಳೆ.
ಘಟನೆಯ ಸುದ್ದಿ ತಿಳಿಯುತ್ತಿದ್ದಂತೆಯೇ ದುಬೈ, ಅಬುಧಾಬಿ, ಶಾರ್ಜಾ, ರಾಸ್ ಅಲ್ ಖೈಮಾ ಮೊದಲಾದೆಡೆಗಳಿಂದ ದಂಪತಿಯ ಸ್ನೇಹಿತರು ಮತ್ತು ಬಂಧು ಬಳಗ ಅಪಾರ ಸಂಖ್ಯೆಯಲ್ಲಿ ಅಬುಧಾಬಿಯ ಆಸ್ಪತ್ರೆಗೆ ದೌಡಾಯಿಸಿದ್ದರು. ಮಕ್ಕಳ ಸಾವಿನ ಸುದ್ದಿಯನ್ನು ಪೋಷಕರಿಗೆ ತಿಳಿಸುವುದು ಹೇಗೆ ಎಂಬ ವಿಚಾರದಲ್ಲಿ ಹಲವಾರು ಗಂಟೆಗಳ ಕಾಲ ಆಸ್ಪತ್ರೆಯ ಸಿಬ್ಬಂದಿ ಮತ್ತು ಆಪ್ತೇಷ್ಟರ ಮಧ್ಯೆ ವಿಚಾರವಿನಿಮಯ ನಡೆದಿತ್ತು. ಕೊನೆಗೂ ರವಿವಾರ ತಡರಾತ್ರಿ ಅಬ್ದುಲ್ ಲತೀಫ್ರಿಗೆ ವಿಷಯ ಮುಟ್ಟಿಸಲಾಯಿತು. ಆದರೆ ತಾಯಿ ರುಕ್ಸಾನ ಅವರಿಗೆ ಮಕ್ಕಳ ಸಾವಿನ ಸುದ್ದಿಯನ್ನು ತಲುಪಿಸುವುದು ಹೇಗೆ ಎಂಬುದೇ ದೊಡ್ಡ ಸವಾಲಾಗಿತ್ತು.
“ರುಕ್ಸಾನ ಅವರ ಗಾಯಗೊಂಡ ಕೈಗೆ ಶಸ್ತ್ರಚಿಕಿತ್ಸೆ ನಡೆದಿದ್ದು ಮಂಗಳವಾರದವರೆಗೂ ಅವರಿಗೆ ಮಕ್ಕಳ ಸಾವಿನ ವಿಚಾರವನ್ನು ತಿಳಿಸಲಾಗಿರಲಿಲ್ಲ,” ಎಂದು ಸಂಬಂಧಿಯೊಬ್ಬರು ಹೇಳಿದರು. “ಇಂದು ಕೌನ್ಸೆಲರ್ಗಳ ವೃತ್ತಿಪರ ತಂಡದ ಮೂಲಕ ಅವರಿಗೆ ಈ ಹೃದಯವಿದ್ರಾವಕ ಸುದ್ದಿಯನ್ನು ತಲುಪಿಸಲಾಯಿತು. ತಂಡವು ವೃತ್ತಿಪರವಾಗಿ ಕಾರ್ಯ ನಿರ್ವಹಿಸಲು ನಾವು ಬಂಧುಗಳು ಆ ಪ್ರಕಿಯೆಯಿಂದ ದೂರವಿದ್ದೆವು.”
ಸಣ್ಣಪುಟ್ಟ ಗಾಯಗಳೊಂದಿಗೆ ಪಾರಾಗಿರುವ ಇಝ್ಜಾ ಆಸ್ಪತ್ರೆಯ ಹಾಸಿಗೆಯಲ್ಲೇ ಮೊಬೈಲ್ ಫೋನ್ನಲ್ಲಿ ಆಟವಾಡುತ್ತಿದ್ದು, ತಮ್ಮ ಸಹೋದರರಿಗೆ ಏನಾಗಿದೆ ಎಂಬುದರ ಅರಿವು ಆಕೆಗೆ ಇದ್ದಂತಿಲ್ಲ. ಲತೀಫ್-ರುಕ್ಸಾನಾ ದಂಪತಿಯ ಆಪ್ತೇಷ್ಟರು, ಅಬುಧಾಬಿ ಮತ್ತು ದುಬೈಯ ಸಾಮಾಜಿಕ ಕಾರ್ಯಕರ್ತರು ಅಧಿಕಾರಿಗಳೊಂದಿಗೆ ಸಮಾಲೋಚಿಸಿ ಅಂತ್ಯಸಂಸ್ಕಾರದ ರೂಪುರೇಶೆ ಸಿದ್ಧಪಡಿಸಿದ್ದರು.
ಮಂಗಳವಾರ ಮಧ್ಯಾಹ್ನ ಮಕ್ಕಳ ಮೃತದೇಹಗಳನ್ನು ಅಂತ್ಯಸಂಸ್ಕಾರಕ್ಕೆ ದುಬೈಗೆ ಒಯ್ಯುವ ಮೊದಲು, ಪೋಷಕರಿಗೆ ಮೃತದೇಹಗಳ ಅಂತಿಮ ದರ್ಶನಕ್ಕೆ ಅವಕಾಶ ನೀಡಲಾಗಿತ್ತು. ತಮ್ಮ ಕರುಳಕುಡಿಗಳನ್ನು ಕೊನೆಯ ಬಾರಿ ನೋಡಬೇಕೆಂಬ ಆಸೆಯನ್ನು ರುಕ್ಸಾನ ವ್ಯಕ್ತಪಡಿಸಿದ್ದರಿಂದ ಆಕೆಯನ್ನು ಚಿಕಿತ್ಸೆ ಪಡೆಯುತ್ತಿದ್ದ ಸ್ಥಳದಿಂದ ಆಂಬ್ಯುಲೆನ್ಸ್ ಮೂಲಕ ಶವಾಗಾರಕ್ಕೆ ಕರೆದೊಯ್ಯಲಾಗಿತ್ತು. ಕೈಗೆ ಪ್ಲಾಸ್ಟರ್ ಹಾಕಿಸಿಕೊಂಡಿದ್ದರೂ, ಅಂತ್ಯಸಂಸ್ಕಾರದಲ್ಲಿ ಭಾಗವಹಿಸಲು ಅಬ್ದುಲ್ ಲತೀಫ್ ಆಸ್ಪತ್ರೆಯಿಂದ ವಿಶೇಷ ಅನುಮತಿ ಪಡೆದು ಬಿಡುಗಡೆಗೊಂಡಿದ್ದರು. ಆದರೆ ಆಘಾತದಿಂದ ತತ್ತರಿಸಿ ಹೋಗಿರುವ ರುಕ್ಸಾನಾ ತನ್ನ ಬದುಕುಳಿದ ಏಕೈಕ ಮಗುವಿನ ಜೊತೆಗೆ ಆಸ್ಪತ್ರೆಯಲ್ಲೇ ಉಳಿಯಬೇಕಾಯಿತು.
ಸಾಮಾನ್ಯವಾಗಿ ಅನಿವಾಸಿ ಭಾರತೀಯರ ಮೃತದೇಹಗಳನ್ನು ಅವರ ವೀಸಾ ಇರುವ ಎಮಿರೇಟ್ನಲ್ಲೇ ಸಮಾಧಿ ಮಾಡಲಾಗುತ್ತದೆ. ಅಬ್ದುಲ್ ಲತೀಫ್ ಮತ್ತು ರುಕ್ಸಾನಾ ಕುಟುಂಬವು ರಾಸ್ ಅಲ್ ಖೈಮಾ ವೀಸಾ ಹೊಂದಿದ್ದರಿಂದ ದುಬೈಯಲ್ಲಿ ಅಂತ್ಯ ಸಂಸ್ಕಾರ ನಡೆಸಲು ವಿಶೇಷ ಅನುಮತಿ ಪಡೆಯಬೇಕಾಗಿ ಬಂತು. “ಇವರ ವೀಸಾಗಳು ರಾಸ್ ಅಲ್ ಖೈಮಾದ್ದಾಗಿದ್ದರೂ, ಕುಟುಂಬವು ದುಬೈಯಲ್ಲೇ ವಾಸವಾಗಿದ್ದು, ಹೆಚ್ಚಿನ ಬಂಧುಗಳೂ ಇಲ್ಲಿಯೇ ನೆಲೆಸಿದ್ದಾರೆ. ಆದ್ದರಿಂದ ಮಕ್ಕಳನ್ನು ದುಬೈಯಲ್ಲೇ ಅಂತ್ಯಸಂಸ್ಕಾರ ಮಾಡಲು ಕುಟುಂಬ ಬಯಸಿತ್ತು. ನಮ್ಮ ಮನವಿಗೆ ಸ್ಪಂದಿಸಿ ಪ್ರಕ್ರಿಯೆಗಳನ್ನು ವೇಗಗೊಳಿಸಿದ ದುಬೈ ಅಧಿಕಾರಿಗಳಿಗೆ ನಾವು ಕೃತಜ್ಞರಾಗಿದ್ದೇವೆ,” ಎಂದು ಕುಟುಂಬದ ಆಪ್ತರೊಬ್ಬರು ಮಾಧ್ಯಮಕ್ಕೆ ತಿಳಿಸಿದರು.
ರುಕ್ಸಾನರ ಮಟ್ಟಿಗೆ ಯುಎಇ ಎರಡನೇ ಮನೆ ಇದ್ದಂತೆ. ದಶಕಗಳ ಹಿಂದೆಯೇ ಆಕೆಯ ಪೋಷಕರು ಯುಎಇಯಲ್ಲಿ ಬದುಕು ಕಟ್ಟಿಕೊಂಡವರು. ಆಕೆ ಜನಿಸಿದ್ದೂ ಇಲ್ಲೇ. ಅವರ ಕೆಲವು ಸಹೋದರ-ಸಹೋದರಿಯರು, ನಿಕಟ ಬಂಧುಗಳು ಇಲ್ಲಿಯೇ ವಾಸಿಸುತ್ತಿದ್ದಾರೆ. ಅಪಘಾತದ ಸುದ್ದಿ ತಿಳಿದು ಕೇರಳದಿಂದ ದುಬೈಗೆ ಆಗಮಿಸಿದ ಆಕೆಯ ತಾಯಿ ಮತ್ತು ಸಹೋದರಿ, ಹಾಗೆಯೇ ಸ್ಪೇನ್ನಿಂದ ದೌಡಾಯಿಸಿದ ಸಹೋದರರು ಇನ್ನೂ ಶೋಕದ ಮಡುವಿನಲ್ಲಿದ್ದಾರೆ. ಕುಟುಂಬದ ಹಲವಾರು ಆಪ್ತ ಸ್ನೇಹಿತರು ಈ ದುಃಖದ ಘಳಿಗೆಯಲ್ಲಿ ದಂಪತಿಗೆ ಬೆಂಬಲವಾಗಿ ನಿಂತಿದ್ದಾರೆ.
ಕರಾಳ ರಾತ್ರಿ..
ದಿಢೀರನೆ ಬದುಕನ್ನು ಬಂಗಾರವಾಗಿಸುವ ಖ್ಯಾತಿ ಹೊಂದಿರುವ ಯುಎಇ ಅಬ್ದುಲ್ ಲತೀಫ್ ಕುಟುಂಬಕ್ಕೂ ನೆಮ್ಮದಿಯ ಜೀವನದ ಹಾದಿ ತೋರಿತ್ತು. ಆದರೆ ರಾತ್ರಿ ಬೆಳಗಾಗುವುದರೊಳಗೆ ವಿಧಿಯು ಎಲ್ಲವನ್ನೂ ಬುಡಮೇಲು ಮಾಡಿಬಿಟ್ಟಿತ್ತು. ಅಬ್ದುಲ್ ಲತೀಫ್ ರಾಸ್ ಅಲ್ ಖೈಮಾದಲ್ಲಿ ತಮ್ಮದೇ ವ್ಯವಹಾರ ನಡೆಸುತ್ತಿದ್ದು, ರುಕ್ಸಾನ ದುಬೈಯಲ್ಲಿ ಪ್ರಾಪರ್ಟಿ ಸಲಹೆಗಾರರಾಗಿ ಕೆಲಸ ಮಾಡುತ್ತಿದ್ದರು. ಐವರು ಮಕ್ಕಳೂ ದುಬೈನ ಪ್ರತಿಷ್ಟಿತ ಅರಬ್ ಯುನಿಟಿ ಸ್ಕೂಲ್ನಲ್ಲಿ ಬ್ರಿಟಿಷ್ ಪಠ್ಯಕ್ರಮದಲ್ಲಿ ವ್ಯಾಸಂಗ ನಡೆಸುತ್ತಿದ್ದು ಚಳಿಗಾಲದ ರಜೆಯ ಕೊನೆಯ ವಾರಾಂತ್ಯವನ್ನು ಸದುಪಯೋಗಪಡಿಸಿಕೊಳ್ಳಲು ಸ್ನೇಹಿತರ ಗುಂಪಿನೊಂದಿಗೆ ಲೀವಾ ಉತ್ಸವಕ್ಕೆ ತೆರಳಿದ್ದರು.
ತಮ್ಮೊಂದಿಗೆ ಬಂದಿದ್ದ ಇತರರು ಅಬುಧಾಬಿಯಲ್ಲೇ ಉಳಿಯಲು ನಿರ್ಧರಿಸಿದರೆ, ಅಬ್ದುಲ್ ಲತೀಫ್ ಮತ್ತು ರುಕ್ಸಾನ ಮಕ್ಕಳ ಮೊದಲ ಶಾಲಾ ದಿನಕ್ಕೆ ಸಿದ್ಧತೆ ಮಾಡುವ ಉದ್ದೇಶದಿಂದ ಮನೆಗೆ ಹಿಂದಿರುಗಲು ನಿರ್ಧರಿಸಿದ್ದರು.
“ಇದು ಪ್ರೀತಿ ಮತ್ತು ಹೊಣೆಗಾರಿಕೆಯಿಂದ ಕೂಡಿದ ನಿರ್ಧಾರ. ಪ್ರತಿದಿನ ಅನೇಕ ಪೋಷಕರು ಇಂತಹ ನಿರ್ಧಾರ ತೆಗೆದುಕೊಳ್ಳುವ ಪ್ರಸಂಗ ಎದುರಿಸಬೇಕಾಗುತ್ತದೆ. ಆದರೆ ಕ್ಷಣಮಾತ್ರದಲ್ಲಿ ಕುಟುಂಬವು ರಜೆಯ ಖುಷಿಯ ಬೆನ್ನಲ್ಲೇ ಮರಣದ ದುಃಖವನ್ನು ಎದುರಿಸಬೇಕಾಗುತ್ತದೆ ಎಂದು ಯಾರೂ ಊಹಿಸಿರಲಿಲ್ಲ,” ಎಂಬ ಸಂಬಂಧಿಕರೊಬ್ಬರ ಮಾತು ಬದುಕಿನ ನಶ್ವರತೆಯನ್ನು ಸಾರುವಂತಿತ್ತು. ಅಂತ್ಯ ನಮಾಝ್ಗೆ ಮುಂಚೆ ನೀಡಿದ ಉಪನ್ಯಾಸದಲ್ಲಿ ಮಸೀದಿಯ ಇಮಾಮರು, ಇದನ್ನೇ ಪುನರಾವರ್ತಿಸಿದ್ದರು. “ಪ್ರೌಢಾವಸ್ಥೆಗೆ ತಲುಪುವ ಮುನ್ನ ನಿಧನರಾದ ಮಕ್ಕಳು ಸ್ವರ್ಗಕ್ಕೆ ಸೇರುತ್ತಾರೆ,” ಎಂಬ ಇಸ್ಲಾಮೀ ವಿಶ್ವಾಸವನ್ನು ನೆನಪಿಸಿ ಪೋಷಕರಿಗೆ, ಬಂಧುಗಳಿಗೆ ಸಹನೆಯ ಉಪದೇಶ ನೀಡಿದ್ದು ಸಮಯೋಚಿತವಾಗಿತ್ತು.
ಯುಎಇಯನ್ನೇ ಶೋಕಸಾಗರದಲ್ಲಿ ಮುಳುಗಿಸಿದ ಮಹಾ ಅಪಘಾತದ ಕಾರಣಗಳ ಬಗ್ಗೆ ಅಬುಧಾಬಿ ಪೊಲೀಸರು ಇನ್ನೂ ಅಧಿಕೃತ ಹೇಳಿಕೆ ನೀಡಿಲ್ಲ. ಚಳಿಗಾಲದಲ್ಲಿ ತಡರಾತ್ರಿ ಬೀಳುವ ಮಂಜು, ಅತಿಯಾದ ವೇಗ ಇತ್ಯಾದಿಗಳ ಬಗ್ಗೆ ಸಾರ್ವಜನಿಕ ವಲಯಗಳಲ್ಲಿ ಚರ್ಚೆ ನಡೆಯುತ್ತಿದೆ. ಮಕ್ಕಳೂ ಸೇರಿದಂತೆ ಪ್ರಯಾಣಿಕರೆಲ್ಲರಿಗೂ ಸೀಟ್ಬೆಲ್ಟ್ ಕಡ್ಡಾಯಗೊಳಿಸಿ ಈಗಾಗಲೇ ಜಾರಿಯಲ್ಲಿರುವ ಕಾಯ್ದೆಯನ್ನು ಏಐ ಬಳಸಿ ಮತ್ತಷ್ಟು ಪರಿಣಾಮಕಾರಿಯಾಗಿ ಅನಿಷ್ಠಾನಗೊಳಿಸುವ ಪ್ರಯತ್ನ ಇತ್ತೀಚಿಗೆ ಚುರುಕುಗೊಂಡಿದೆ. ತಪ್ಪಿತಸ್ಥರಿಗೆ ನಾಲ್ಕು ನೂರು ದಿರ್ಹಮ್ ದಂಡ ಮತ್ತು ಚಾಲನಾ ಪರವಾನಿಗೆಯ ಮೇಲೆ ನಾಲ್ಕು ಬ್ಲ್ಯಾಕ್ ಪಾಯಿಂಟ್ ಹಾಕಲಾಗುತ್ತಿದೆ.
ಈ ಮಧ್ಯೆ ಮೃತ ಬಾಲಕರು ಕಲಿಯುತ್ತಿದ್ದ ಅರಬ್ ಯುನಿಟಿ ಸ್ಕೂಲ್ನ ಪ್ರಾಂಶುಪಾಲರು ಈ ಘಟನೆಯಿಂದ ವಿದ್ಯಾರ್ಥಿಗಳು ಮತ್ತು ಪೋಷಕರಿಗೆ ಆಗಬಹುದಾದ ಆಘಾತದ ಹಿನ್ನೆಲೆಯಲ್ಲಿ ವಿಶೇಷ ಎಚ್ಚರಿಕೆಯನ್ನು ವಹಿಸಿದ್ದಾರೆ. ಪೋಷಕರಿಗೆ ಕಳಿಸಲಾಗಿರುವ ಸುತ್ತೋಲೆಯಲ್ಲಿ. ಯಾವ ರೀತಿ ತಮ್ಮ ಸಹಪಾಠಿಗಳನ್ನು ಕಳೆದುಕೊಂಡ ಎಳೆಯ ಮಕ್ಕಳ ಮನಸ್ಸಿಗೆ ಆಘಾತವಾಗದಂತೆ ಘಟನೆಯ ವಿವರಗಳನ್ನು ನೀಡಬೇಕೆಂಬುದನ್ನು ವಿವರಿಸಿದ್ದಾರೆ: “ಮುಂದಿನ ದಿನಗಳಲ್ಲಿ ಮತ್ತು ವಾರಗಳಲ್ಲಿ ನಮ್ಮ ಶಾಲೆಯು ಅನುಕಂಪ, ಶುಶ್ರೂಷೆ ಮತ್ತು ಐಕಮತ್ಯದೊಂದಿಗೆ ಸಂತ್ರಸ್ತ ಕುಟುಂಬ ಮತ್ತು ಒಟ್ಟು (ಶಾಲಾ) ಸಮೂಹದ ಬೆಂಬಲಕ್ಕೆ ನಿಲ್ಲಲಿದೆ,” ಎನ್ನುತ್ತದೆ ಆ ಸುತ್ತೋಲೆ. ಶಾಲೆಯ ಹೊಸ ಪ್ರಾಂಶುಪಾಲ ಮಾರ್ಕ್ ಪಾಲಿಟ್ ತಮ್ಮ ಕರ್ತವ್ಯದ ಮೊದಲ ದಿನದಂದೇ ಅನಿರೀಕ್ಷಿತ ಸವಾಲೊಂದನ್ನು ಎದುರಿಸಬೇಕಾಗಿ ಬಂದಿರುವುದೂ ವಿಧಿಲಿಖಿತವೇ ಇರಬಹುದು.







