“ಪರಿಹಾರ ಹಣದಿಂದ ನನ್ನ ಮಗುವನ್ನು ಮರಳಿ ತರಲು ಸಾಧ್ಯವೇ?"
► ಪೂಂಚ್ನಲ್ಲಿ ಭೀಕರ ಶೆಲ್ ದಾಳಿಗೆ ಇಬ್ಬರು ಅಪ್ರಾಪ್ತ ಮಕ್ಕಳು ಮೃತ್ಯು ► ಭಯದಲ್ಲೇ ದಿನದೂಡುತ್ತಿರುವ ಜನತೆ

Photo | The Quint
ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ಗಡಿ ಪಟ್ಟಣ ಪೂಂಚ್ನಲ್ಲಿ ಇತ್ತೀಚೆಗೆ ನಡೆದ ಭೀಕರ ಶೆಲ್ ದಾಳಿಯಲ್ಲಿ ಇಬ್ಬರು ಅಪ್ರಾಪ್ತ ಮಕ್ಕಳು ಸಾವನ್ನಪ್ಪಿದ್ದಾರೆ.ಈ ದುರಂತ ಘಟನೆಯ ಕುರಿತು ಪ್ರತಿಕ್ರಿಯಿಸಿರುವ ಮೃತರ ಚಿಕ್ಕಮ್ಮ ಶಹೀನ್ ಖಾನ್ ಅವರು, ದಿ ಕ್ವಿಂಟ್ಗೆ ನೀಡಿದ ತಮ್ಮ ಹೇಳಿಕೆಯಲ್ಲಿ, ಆಘಾತ ಮತ್ತು ದುಃಖವನ್ನು ವ್ಯಕ್ತಪಡಿಸಿದ್ದಾರೆ.
"ಅವರಿಗೆ ಯುದ್ಧ ಎಂದರೇನು ಅಂತಾನೇ ಗೊತ್ತಿರಲಿಲ್ಲ" ಎಂದು ನೋವಿನಿಂದ ಮೃತಪಟ್ಟ ಮಕ್ಕಳ ಚಿಕ್ಕಮ್ಮ ಶಹೀನ್ ಖಾನ್ ಹೇಳುತ್ತಾರೆ. ಬುಧವಾರ ಮೇ 7 ರಂದು ರಾತ್ರಿ 1:15 ರ ಸುಮಾರಿಗೆ ಜಮ್ಮು ಮತ್ತು ಕಾಶ್ಮೀರದ ಗಡಿ ಪಟ್ಟಣವಾದ ಪೂಂಚ್ನ ಆಕಾಶವು ಯುದ್ಧಭೂಮಿಯಂತೆ ಬೆಳಗುತ್ತಿತ್ತು. ಗುರುವಾರ ಮಧ್ಯಾಹ್ನದವರೆಗೆ ಭಾರೀ ಪ್ರಮಾಣದ ಗುಂಡಿನ ಚಕಮಕಿ ನಡೆಯಿತು. ಪಾಕಿಸ್ತಾನ ನಡೆಸಿದ ಶೆಲ್ ದಾಳಿಯು ಪೂಂಚ್ ಪ್ರದೇಶದಲ್ಲಿ ಆತಂಕ ಮತ್ತು ವಿಷಾದದ ವಾತಾವರಣವನ್ನು ಸೃಷ್ಟಿಸಿದೆ.
ಮೇ 8 ರ ಬೆಳಿಗ್ಗೆ ಹೊಗೆಯಿಂದ ಆವೃತವಾದ ಛಾವಣಿಗಳ ನಡುವೆ ಶಹೀನ್ ಖಾನ್ ಕುಳಿತಿದ್ದರು. ಮುರಿದು ಬಿದ್ದಿದ್ದ ತಮ್ಮ ಮನೆಯ ಮೆಟ್ಟಿಲುಗಳ ಮೇಲೆ ಕುಳಿತು, ತಮ್ಮ 14 ವರ್ಷದ ಸೋದರಳಿಯ ಅಯಾನ್ ಮತ್ತು 12 ವರ್ಷದ ಸೋದರ ಸೊಸೆ ಔರ್ಬಾ ಅವರ ಭಾವಚಿತ್ರವನ್ನು ಹಿಡಿದುಕೊಂಡಿದ್ದರು. ಕುಟುಂಬದ ದಿನಸಿ ಅಂಗಡಿಯ ಬಳಿ ಆಡುತ್ತಿದ್ದಾಗ ಶೆಲ್ ಬಂದು ಬಿದ್ದ ಪರಿಣಾಮವಾಗಿ ಅಯಾನ್ ಸ್ಥಳದಲ್ಲೇ ಮೃತಪಟ್ಟರೆ ಗಂಭೀರವಾಗಿ ಗಾಯಗೊಂಡಿದ್ದ ಔರ್ಬಾ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಳು.
ಬಸ್ ನಿಲ್ದಾಣದ ಬಳಿಯ ಗಲ್ಲಿಯಲ್ಲಿ ರಕ್ತಸಿಕ್ತವಾದ ಒಂದು ಶೂ ಸುಟ್ಟು ಕರಕಲಾದ ವಾಹನದ ಕೆಳಗೆ ಬಿದ್ದಿತ್ತು. 48 ವರ್ಷದ ಶಹೀನ್ ನಿಧಾನವಾಗಿ ಅದನ್ನು ಎತ್ತಿಕೊಂಡು ಧೂಳನ್ನು ಒರೆಸುತ್ತಾ "ಅಯಾನ್ ಇದನ್ನ ಈದ್ ಗೆ ಅಂತ ತಂದಿದ್ದ," ಎಂದು ದುಃಖದಿಂದ ಹೇಳುತ್ತಾರೆ.
ಭಾರತವು ಪಾಕಿಸ್ತಾನದ ಭಯೋತ್ಪಾದಕ ಮೂಲಸೌಕರ್ಯಗಳ ಮೇಲೆ 'ಆಪರೇಷನ್ ಸಿಂಧೂರ್' ಎಂಬ ಮಿಲಿಟರಿ ದಾಳಿಯನ್ನು ನಡೆಸಿದ್ದಕ್ಕೆ ಪ್ರತೀಕಾರವಾಗಿ ಪಾಕಿಸ್ತಾನವು ಪೂಂಚ್ನ ಮುಖ್ಯ ಬಸ್ ನಿಲ್ದಾಣ ಮತ್ತು ಸುತ್ತಮುತ್ತಲಿನ ವಸತಿ ಪ್ರದೇಶಗಳು ಸೇರಿದಂತೆ ಪೂಂಚ್ನ ವಿವಿಧ ನಾಗರಿಕ ಪ್ರದೇಶಗಳ ಮೇಲೆ ಶೆಲ್ ದಾಳಿ ನಡೆಸಿತು ಎಂದು ವರದಿಯಾಗಿದೆ.
ಈ ದಾಳಿಯಲ್ಲಿ ಕನಿಷ್ಠ 16 ಜನರು ಸಾವನ್ನಪ್ಪಿದ್ದಾರೆ. 57 ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ. ಹಲವಾರು ಮನೆಗಳು, ಅಂಗಡಿಗಳು, ಧಾರ್ಮಿಕ ಸ್ಥಳಗಳು ಮತ್ತು ಸಾರ್ವಜನಿಕ ಆಸ್ತಿಪಾಸ್ತಿಗಳು ನಾಶವಾಗಿವೆ."ಶೆಲ್ ದಾಳಿಯು ನಮ್ಮ ಇಡೀ ಸಮುದಾಯದ ನಗುವನ್ನು ಕಸಿದುಕೊಂಡಿದೆ," ಎಂದು ಶಹೀನ್ ದಿ ಕ್ವಿಂಟ್ಗೆ ತಿಳಿಸಿದ್ದಾರೆ. ಅದು ನನ್ನ ಕುಟುಂಬವನ್ನು ಒಳಗಿಂದಲೇ ಮುರಿದು ಹಾಕಿದೆ ಎಂದು ಶಾಹೀನ್ ಹೇಳುತ್ತಾರೆ.
"ಅವರು ಮಕ್ಕಳು. ಅವರಿಗೆ ಯುದ್ಧ ಎಂದರೇನು ಅಂತಾನೇ ಗೊತ್ತಿರಲಿಲ್ಲ," ಎಂದು ಶಹೀನ್ ಖಾನ್ ಹೇಳುತ್ತಾರೆ. ಅನೇಕ ಮನೆಗಳು, ಅಂಗಡಿಗಳು, ಧಾರ್ಮಿಕ ಸ್ಥಳಗಳು ಮತ್ತು ಸಾರ್ವಜನಿಕ ಆಸ್ತಿಪಾಸ್ತಿಗಳು ಪೂಂಚ್ ಪಟ್ಟಣದಲ್ಲಿ ನಾಶವಾಗಿವೆ.
"ಅಯಾನ್... ಎಲ್ಲರಿಗೂ ಅಚ್ಚುಮೆಚ್ಚಿನವನಾಗಿದ್ದ. ಅವನು ಮಾತನಾಡುತ್ತಿದ್ದ ರೀತಿ - ಯಾವಾಗಲೂ ತಮಾಷೆ ಅಥವಾ ಬುದ್ಧಿವಂತಿಕೆಯ ಮಾತುಗಳನ್ನಾಡುತ್ತಿದ್ದ - ಅದು ನನ್ನ ಹೃದಯವನ್ನು ಕರಗಿಸುತ್ತಿತ್ತು. ಈಗ, ಅವನು ಮತ್ತು ಅವನ ಸಹೋದರಿ ಮಲಗುತ್ತಿದ್ದ ಕೋಣೆಗೆ ಕಾಲಿಡಲು ಸಹ ನನಗೆ ಸಾಧ್ಯವಾಗುತ್ತಿಲ್ಲ. ಅದು ತುಂಬಾ ನಿಶ್ಯಬ್ದವಾಗಿದೆ. ತುಂಬಾ ಖಾಲಿಯಾಗಿದೆ ಎಂದು ಶಾಹೀನ್ ಹೇಳುತ್ತಾರೆ.
ಸ್ಥಳೀಯ ವ್ಯಾಪಾರಿಯಾದ ಅವರ ತಂದೆ ರಮೀಜ್ ಖಾನ್ ಅವರನ್ನು ಮಾತನಾಡಿಸಲು ಹೋದಾಗ ಅವರು ದಿಗ್ಭ್ರಮೆಯಿಂದ ಮೌನವಾಗಿದ್ದರು ಎಂದು ದಿ ಕ್ವಿಂಟ್ ವರದಿ ಹೇಳಿದೆ.
'ಇಡೀ ಸಮುದಾಯದ ನಗು ಮಾಯವಾಗಿದೆ. ದಾಳಿ ನಡೆದಾಗ ಅದು ಖಯಾಮತ್ ಅಂದ್ರೆ ಜಗತ್ತಿನ ಕೊನೆ ದಿನ ಎಂದು ನಾನು ಭಾವಿಸಿದೆ," ಎಂದು 36 ವರ್ಷದ ವಾಹಿದ್ ಹೇಳುತ್ತಾರೆ. ಮೊದಲ ಶೆಲ್ಗಳು ಬಿದ್ದಾಗ ಅವರು ತಮ್ಮ ಚಿಕ್ಕಪ್ಪನ ಮನೆಯಲ್ಲಿದ್ದರು."ನೆಲ ನಡುಗಿತು, ಮಕ್ಕಳು ಕಿರುಚುತ್ತಿದ್ದರು, ಮನೆಗಳು ಹೊತ್ತಿ ಉರಿಯುತ್ತಿದ್ದವು. ನಾನು ಯುದ್ಧದ ಸಿನಿಮಾಗಳನ್ನು ನೋಡಿದ್ದೇನೆ, ಆದರೆ ನಿಜವಾದ ಪರಿಸ್ಥಿತಿಗೆ ಯಾವುದೂ ನಿಮ್ಮನ್ನು ಸಿದ್ಧಪಡಿಸುವುದಿಲ್ಲ. ನನ್ನ ಸೋದರಳಿಯನಿಗೆ ಗುಂಡು ತಗುಲಿತು. ಮೂರು ಅಥವಾ ನಾಲ್ಕು ಮಕ್ಕಳಿಗೆ ರಕ್ತಸ್ರಾವವಾಗುತ್ತಿರುವುದನ್ನು ನಾನು ನೋಡಿದೆ. ಮತ್ತು ನನಗೆ ಏನೂ ಮಾಡಲು ಸಾಧ್ಯವಾಗಲಿಲ್ಲ." ಎಂದು ವಾಹಿದ್ ಹೇಳುತ್ತಾರೆ.
ನಾವು ಕೂಗು ಕೇಳಿದೆವು ಎಂದು ಪೂಂಚ್ನ ಮತ್ತೊಬ್ಬ ನಿವಾಸಿ ಅನ್ವರ್ ಹುಸೇನ್ ಶಾ ಹೇಳಿದ್ದಾರೆ.
ನನ್ನ ಸಹೋದರ ನನ್ನನ್ನು ಎಬ್ಬಿಸಿದ. ಕೆಲವೇ ನಿಮಿಷಗಳಲ್ಲಿ, ನಾವು ಟ್ರಾಕ್ಟರ್ನಲ್ಲಿ ಕತ್ತಲೆಯಲ್ಲಿ ದಿಕ್ಕಿಲ್ಲದೆ ಓಡಿದೆವು. ನಾವು 20 ಕಿಲೋಮೀಟರ್ ದೂರದಲ್ಲಿರುವ ಮದರಸಕ್ಕೆ ಓಡಿ ಹೋದೆವು. ನನಗೆ ಶೂ ಹಾಕಿಕೊಳ್ಳಲು ಸಹ ಸಮಯವಿರಲಿಲ್ಲ ಎಂದು ಅವರು ಹೇಳುತ್ತಾರೆ.
ಪೂಂಚ್ನ ಅನೇಕರಿಗೆ, ಈ ಶೆಲ್ ದಾಳಿಯು ಅವರ ಜೀವನದ ಅತ್ಯಂತ ಕೆಟ್ಟ ರಾತ್ರಿಯಾಗಿತ್ತು. ಸಿಂಡಿಕೇಟ್ ಚೌಕ್ ಬಳಿ ವಾಸಿಸುವ ಶಾಲಾ ಶಿಕ್ಷಕ ಸಲೀಂ ಅಹ್ಮದ್, "ಸುಮಾರು 6:35 ಕ್ಕೆ, ನಾನು ಹೊಗೆಯನ್ನು ನೋಡಿದೆ, ಮೊದಲು ಮಂದವಾಗಿತ್ತು, ನಂತರ ಬೆಳೆಯಿತು. ನಂತರ ನಾನು ಸ್ಫೋಟಗಳನ್ನು ಕೇಳಿದೆ - ಒಂದರ ನಂತರ ಇನ್ನೊಂದು, ಮತ್ತೆ ಇನ್ನೊಂದು ಎಂದು ಹೇಳುತ್ತಾರೆ.
"ನಾನು ನನ್ನ ನೆರೆಮನೆಯವರ ಮನೆಗೆ ಧಾವಿಸಿದೆ. ಆ ವ್ಯಕ್ತಿ ಕೆಲಸದ ನಿಮಿತ್ತ ಊರಿನಿಂದ ಹೊರಗಿದ್ದ; ಅವನ ಹೆಂಡತಿ ಮತ್ತು ಮಕ್ಕಳು ಮಾತ್ರ ಇದ್ದರು. ಅವರನ್ನು ಸುರಕ್ಷಿತವಾಗಿ ಕಂಡುಕೊಂಡಾಗ ನನಗೆ ಸ್ವಲ್ಪ ಸಮಾಧಾನವಾಯಿತು. ಆದರೆ ಶೀಘ್ರದಲ್ಲೇ ನಮ್ಮ ಸ್ಥಳೀಯ ಅಂಗಡಿಯ ಮಾಲೀಕ ಅಮರೀಕ್ ಸಿಂಗ್ ಮೃತಪಟ್ಟಿದ್ದಾರೆಂದು ನನಗೆ ತಿಳಿಯಿತು. ನನಗೆ ಹೃದಯ ಒಡೆದಷ್ಟು ನೋವಾಯಿತು”, ಎಂದು ಅವರು ಹೇಳುತ್ತಾರೆ.
ಸ್ಥಳೀಯ ಗುರುದ್ವಾರವು ಭಾಗಶಃ ಹಾನಿಗೊಳಗಾಗಿದೆ. ಹತ್ತಿರದ ಮಸೀದಿಯೂ ಹಾನಿಗೊಳಗಾಗಿದೆ. ಪ್ರಕ್ಷುಬ್ಧ ಗಡಿ ಜಿಲ್ಲೆಯಲ್ಲಿ ಬಹುಸಂಸ್ಕೃತಿಯ ಸಹಬಾಳ್ವೆಯ ಸಂಕೇತವಾಗಿದ್ದ ಪೂಂಚ್ಗೆ, ಈ ಶೆಲ್ ದಾಳಿಯು ಕೇವಲ ದೇಹಗಳಿಗೆ ಗಾಯ ಮಾಡಲಿಲ್ಲ - ಅದು ನಂಬಿಕೆ ಮತ್ತು ಸುರಕ್ಷತೆಯನ್ನೂ ಘಾಸಿಗೊಳಿಸಿತು.
ಮೇ 7 ರಂದು ಪೂಂಚ್ನಲ್ಲಿ ನಡೆದ ಗಡಿ ದಾಳಿಯಲ್ಲಿ ಮೃತಪಟ್ಟವರಲ್ಲಿ ಅಂಗಡಿ ಮಾಲೀಕ ಅಮರೀಕ್ ಸಿಂಗ್ ಕೂಡ ಒಬ್ಬರು."ಜನರು ಎಲ್ಲೆಡೆ ಓಡುತ್ತಿದ್ದರು," ಎಂದು ಮೊದಲ ಸ್ಫೋಟದ ಕೆಲವೇ ನಿಮಿಷಗಳಲ್ಲಿ ಜಿಲ್ಲಾ ಆಸ್ಪತ್ರೆಗೆ ಧಾವಿಸಿದ ರುಕ್ಸಾನಾ ಬಾನೋ ಹೇಳುತ್ತಾರೆ.
"ನನ್ನ ಅಜ್ಜಿ ವಿಭಜನೆಯ ಬಗ್ಗೆ ಹೇಳುತ್ತಿದ್ದ ಕಥೆಗಳನ್ನು ಅದು ನನಗೆ ನೆನಪಿಸಿತು - ರಕ್ತಸಿಕ್ತ ಬಟ್ಟೆಗಳಲ್ಲಿ ಮಕ್ಕಳು, ತಾಯಂದಿರು ತಮ್ಮ ಗಂಡ ಮತ್ತು ಮಕ್ಕಳಿಗಾಗಿ ಹುಡುಕುತ್ತಿದ್ದರು. ಅರ್ಧ ಗಂಟೆ ವರೆಗೆ ನಮ್ಮಲ್ಲಿ ಸ್ಟ್ರೆಚರ್ಗಳೇ ಇರಲಿಲ್ಲ. ಗಾಯಾಳುಗಳನ್ನು ಸಾಗಿಸಲು ನಾವು ಬಾಗಿಲುಗಳು, ಮರದ ಹಲಗೆಗಳು, ದುಪಟ್ಟಾಗಳನ್ನು ಬಳಸಬೇಕಾಯಿತು”, ಎಂದು ರುಕ್ಸಾನಾ ಬಾನೋ ಹೇಳುತ್ತಾರೆ.
ಹೆಸರು ಹೇಳಲು ಇಚ್ಛಿಸದ ಸ್ಥಳೀಯ ವೈದ್ಯರೊಬ್ಬರು, ಮಕ್ಕಳ ಸಾವುನೋವುಗಳ ಸಂಖ್ಯೆ ವಿಶೇಷವಾಗಿ ಆತಂಕಕಾರಿಯಾಗಿದೆ ಎಂದು ಹೇಳಿದ್ದಾರೆ. "ಮಿಲಿಟರಿ ಸಂಘರ್ಷವು ಸೈನಿಕರಿಗೆ ಹಾನಿ ಮಾಡುತ್ತದೆ ಎಂದು ನೀವು ನಿರೀಕ್ಷಿಸುತ್ತೀರಿ. ಆದರೆ ಇವರು ಶಾಲಾ ಮಕ್ಕಳು. ಅವರು ಏನನ್ನೂ ಮಾಡಿರಲಿಲ್ಲ”, ಎಂದು ಅವರು ಹೇಳುತ್ತಾರೆ.
ಮೇ 7 ರ ಬೆಳಿಗ್ಗೆಯ ಘಟನೆ ಬಳಿಕ ಯಾವುದೇ ಶೆಲ್ ದಾಳಿ ನಡೆಯದಿದ್ದರೂ, ಜನರಲ್ಲಿ ಭಯ ಇನ್ನೂ ಬಾಕಿ ಇದೆ. ಅಂಗಡಿಗಳು ಮುಚ್ಚಿವೆ. ಶಾಲೆಗಳು ಮುಚ್ಚಲ್ಪಟ್ಟಿವೆ. ಅನೇಕ ಕುಟುಂಬಗಳು, ವಿಶೇಷವಾಗಿ ಚಿಕ್ಕ ಮಕ್ಕಳಿರುವವರು, ಪಟ್ಟಣವನ್ನು ತೊರೆದು ಹತ್ತಿರದ ಹಳ್ಳಿಗಳಿಗೆ ಅಥವಾ ಗಡಿ ನಿಯಂತ್ರಣ ರೇಖೆಯಿಂದ ದೂರವಿರುವ ಸಂಬಂಧಿಕರ ಮನೆಗಳಿಗೆ ಹೋಗಿದ್ದಾರೆ.
ನನ್ನ ಜೀವನದಲ್ಲಿ, ನಾನು ಇದರಂತ ದಾಳಿ ಹಿಂದೆಂದೂ ನೋಡಿಲ್ಲ," ಎಂದು ವಾಹಿದ್ ಹೇಳುತ್ತಾರೆ. ಹಿಂದಿನ ಗಡಿ ಉದ್ವಿಗ್ನತೆಗಳ ಸಮಯದಲ್ಲಿಯೂ, ನಾಗರಿಕ ಪ್ರದೇಶಗಳ ಮೇಲೆ ನೇರ ದಾಳಿಯನ್ನು ನಾವು ಎಂದಿಗೂ ನಿರೀಕ್ಷಿಸಿರಲಿಲ್ಲ ಎಂದು ಅವರು ಹೇಳುತ್ತಾರೆ.
ಸ್ಥಳೀಯ ಆಡಳಿತವು ಪರಿಹಾರ ಮತ್ತು ಪುನರ್ನಿರ್ಮಾಣ ಸಹಾಯದ ಭರವಸೆ ನೀಡಿದೆ. "ಯಾವ ಪರಿಹಾರವು ನನ್ನ ಮಗುವನ್ನು ಮರಳಿ ತರಲು ಸಾಧ್ಯವೇ?" ಎಂದು ಶಹೀನ್ ಖಾನ್ ಪ್ರಶ್ನಿಸುತ್ತಾರೆ. "ಈ ಮಕ್ಕಳು ನೋಡಿದ ಭಯಾನಕತೆಯನ್ನು ಯಾವ ಭದ್ರತೆಯು ಅಳಿಸಿಹಾಕಲು ಸಾಧ್ಯ? ಎಂದು ಅವರು ಪ್ರಶ್ನಿಸಿದ್ದಾರೆ.
ಮುಗ್ಧ ಮಕ್ಕಳ ಸಾವಿನ ಈ ದುರಂತವು ಪೂಂಚ್ನ ಜನರನ್ನು ಮಾತ್ರವಲ್ಲ, ಇಡೀ ದೇಶವನ್ನು ಬೆಚ್ಚಿಬೀಳಿಸುವಂತಿದೆ. ಯುದ್ಧದ ಕ್ರೌರ್ಯಕ್ಕೆ ಬಲಿಯಾದ ಈ ಅಮಾಯಕ ಜೀವಗಳು ಎಂದಿಗೂ ಮರೆಯಲಾಗದ ನೋವಿನ ಕಥೆಯನ್ನು ಹೇಳುತ್ತಿವೆ.