ಮುಂಗಾರು ಮಳೆ ಬಲವಾಗುವ ಸಾಧ್ಯತೆ; ಮುಂದಿನ ವಾರಗಳಲ್ಲಿ ಎಲ್ಲಿ ಮತ್ತು ಯಾವಾಗ ಮಳೆಯಾಗಲಿದೆ?

Photo Credit: PTI
ಮುಂದಿನ ವಾರದ ಆರಂಭದಲ್ಲಿ ಮುಂಗಾರು ಬಲವಾಗಿ ಮರಳಿ ಬರುವ ನಿರೀಕ್ಷೆಯಿದೆ. ಉತ್ತರ, ಪೂರ್ವ ಮತ್ತು ಮಧ್ಯ ಭಾರತದಲ್ಲಿ ವ್ಯಾಪಕ ಮಳೆಯಾಗುವ ನಿರೀಕ್ಷೆಯಿದೆ.
ಭಾರತದಲ್ಲಿ ಜುಲೈ ತಿಂಗಳ ಬಹುಪಾಲು ಮುಂಗಾರು ಮಳೆ ಕಾಣಿಸಿಕೊಳ್ಳಲೇ ಇಲ್ಲ. ಮೋಡಗಳು ಮಾಯವಾದವು, ಬಯಲು ಪ್ರದೇಶಗಳು ಒಣಗಿದವು ಮತ್ತು ಮಳೆಯು ಹಿಮಾಲಯದ ತಪ್ಪಲಿನ ಕಡೆಗೆ ಹಿಮ್ಮೆಟ್ಟಿತು. ಇದೀಗ ಭಾರತೀಯ ಹವಾಮಾನ ಇಲಾಖೆ, ಈ ಕಾಯುವಿಕೆ ಬಹುತೇಕ ಮುಗಿದಿದ್ದು, ಮುಂಗಾರು ಬಲವಾದ ಪುನರಾಗಮನಕ್ಕೆ ಸಿದ್ಧವಾಗಿದೆ ಎಂದು ಹೇಳಿದೆ.
ಮುಂದಿನ ವಾರ ಎಲ್ಲಿ ಮಳೆಯಾಗಲಿದೆ?
ಈಶಾನ್ಯ ಭಾರತದಲ್ಲಿ ಮಳೆ ಪ್ರಾರಂಭವಾಗುವ ನಿರೀಕ್ಷೆಯಿದೆ. ಮುಂದಿನ ವಾರದ ಆರಂಭದಲ್ಲಿ ಮಳೆ ಪೂರ್ವ, ಮಧ್ಯ ಮತ್ತು ಉತ್ತರ ಭಾರತಕ್ಕೂ ಹರಡಲಿದೆ. ವ್ಯಾಪಕ ಮಳೆ ಮತ್ತು ಗುಡುಗು ಸಹಿತ ಮಳೆಯಾಗುವ ಸಾಧ್ಯತೆಯಿದ್ದು, ಕೆಲವೆಡೆ ಭಾರೀ ಮಳೆಯಾಗುವ ಸಾಧ್ಯತೆಯಿದೆ. ಬಿಸಿಯಾದ ವಾರಗಳನ್ನು ಕಳೆದಿರುವ ಗಂಗಾ ಬಯಲು ಮತ್ತು ಮಧ್ಯ ಭಾರತಕ್ಕೆ ಇದು ಈ ತಿಂಗಳ ಮೊದಲ ವ್ಯಾಪಕ ಮಳೆಯಾಗುವ ಸಾಧ್ಯತೆಯಿದೆ.
ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತ ಉಂಟಾಗುತ್ತಿರುವುದು ಮಳೆಯ ಮುನ್ಸೂಚನೆಯಾಗಿದೆ. ವಾಯುಭಾರ ಕುಸಿತದ ಪ್ರದೇಶದಲ್ಲಿ ವಾತಾವರಣದ ಗಾಳಿ ಮೇಲೇರುತ್ತದೆ. ಹೀಗೆ ಮೇಲೇರಿದಾಗ ಅದು ದೈತ್ಯ ವ್ಯಾಕ್ಯೂಮ್ ಕ್ಲೀನರ್ ನಂತೆ ವರ್ತಿಸಿ, ಸಮುದ್ರದಿಂದ ತೇವಭರಿತ ಗಾಳಿಯನ್ನು ಹೀರಿಕೊಳ್ಳುತ್ತದೆ. ಬಳಿಕ ಅದನ್ನು ಮಳೆ ಸುರಿಸುವ ಮೋಡಗಳಾಗಿ ಸಂಘಟಿಸುತ್ತದೆ.
ಈ ವ್ಯವಸ್ಥೆಯು ಒಳನಾಡಿನಲ್ಲಿ ಪೂರ್ವ ಕರಾವಳಿಯುದ್ದಕ್ಕೂ ಮಧ್ಯ ಭಾರತದ ಕಡೆಗೆ ಚಲಿಸುವುದರಿಂದ ಮುಂಗಾರು ತೊಟ್ಟಿಯನ್ನು (ಕನಿಷ್ಠ ವಾಯುಭಾರ ಪ್ರದೇಶ) ತನ್ನ ಮೂಲ ಸ್ಥಾನಕ್ಕೆ ಮರಳಿ ಎಳೆಯುತ್ತದೆ. ಈ ತೊಟ್ಟಿಯು ಉತ್ತರ ಭಾರತಾದ್ಯಂತ ವ್ಯಾಪಿಸಿರುವ ಕಡಿಮೆ ಒತ್ತಡದ ಉದ್ದನೆಯ ರೇಖೆಯಾಗಿದೆ. ಇದು ಮುಂಗಾರಿನ ಬೆನ್ನೆಲುಬಿನಂತೆ ಕಾರ್ಯನಿರ್ವಹಿಸುತ್ತದೆ. ತೊಟ್ಟಿ ಇರುವ ಪ್ರದೇಶದಲ್ಲಿ ಮಳೆಯೂ ಕಾಣಿಸಿಕೊಳ್ಳುತ್ತದೆ.
ವಾರಗಳವರೆಗೆ ಈ ಬೆನ್ನೆಲುಬು ಹಿಮಾಲಯದ ತಪ್ಪಲಿನ ಕಡೆಗೆ ಸ್ಥಳಾಂತರಗೊಂಡಿತ್ತು. ಆದ್ದರಿಂದಲೇ ಬಯಲು ಪ್ರದೇಶಗಳು ಒಣಗಿದ್ದರೆ, ಬೆಟ್ಟ ಪ್ರದೇಶಗಳು ಭಾರೀ ಮಳೆಯನ್ನು ಪಡೆದವು. ತೊಟ್ಟಿ ದಕ್ಷಿಣಕ್ಕೆ ಮರಳಿದ ಬಳಿಕ ಬಂಗಾಳ ಕೊಲ್ಲಿ ಮತ್ತು ಅರಬ್ಬಿ ಸಮುದ್ರ ಎರಡರಿಂದಲೂ ತೇವಾಂಶಭರಿತ ಗಾಳಿಯು ಒಳನಾಡಿನತ್ತ ಆಳವಾಗಿ ಪ್ರವೇಶಿಸುವ ನಿರೀಕ್ಷೆಯಿದೆ. ಇದರಿಂದ ಹೆಚ್ಚು ವಿಶಾಲ ಪ್ರದೇಶದಲ್ಲಿ ಮಳೆಯಾಗುವ ಸಾಧ್ಯತೆಯಿದೆ.
ಜುಲೈನಲ್ಲಿ ಮುಂಗಾರು ತಣ್ಣಗಾಗಲು ಕಾರಣವೇನು?
ಭಾರತದ ಹವಾಮಾನ ತಜ್ಞರು ಈ ಅವಧಿಯನ್ನು 'ವಿರಾಮದ ಮುಂಗಾರು' ಹಂತ ಎಂದು ಕರೆಯುತ್ತಾರೆ. ಈ ವಿರಾಮದ ವೇಳೆ ತೊಟ್ಟಿಯು ಉತ್ತರದತ್ತ ತಿರುಗುತ್ತದೆ ಮತ್ತು ಮಧ್ಯ ಭಾರತ ಒಣಗುತ್ತದೆ. ಜುಲೈನಲ್ಲಿ ವಾಯುಭಾರ ಕುಸಿತದ ವ್ಯವಸ್ಥೆಗಳು ಹೆಚ್ಚಾಗಿ ರೂಪುಗೊಳ್ಳಲಿಲ್ಲ. ಅರಬ್ಬಿ ಸಮುದ್ರದಿಂದ ತೇವಾಂಶ ಸಾಗಿಸುವ ಗಾಳಿ ದುರ್ಬಲಗೊಂಡು ಮೋಡಗಳ ಬೆಳವಣಿಗೆಯನ್ನು ನಿಗ್ರಹಿಸಿತು. ಪರಿಣಾಮವಾಗಿ ರಾಷ್ಟ್ರವ್ಯಾಪಿ ಶೇ 24ರಷ್ಟು ಮಳೆ ಕೊರತೆ ಉಂಟಾಯಿತು.
ಒಂದು ವಾರದ ಉತ್ತಮ ಮಳೆ ಸಾಕಾಗುವುದೆ?
ಇಲ್ಲ. ಮುಂದಿನ ವಾರದ ಮಳೆಯು ಬಯಲು ಪ್ರದೇಶಗಳನ್ನು ತಂಪಾಗಿಸಲಿದೆ. ರಾಗಿ, ಸೋಯಾಬೀನ್, ಹತ್ತಿ ಮತ್ತು ದ್ವಿದಳ ಧಾನ್ಯಗಳ ಬಿತ್ತನೆಗೆ ರೈತರಿಗೆ ಸಹಾಯವಾಗಲಿದೆ. ಆದರೆ ಋತುಮಾನದಲ್ಲಿನ ಮಳೆ ಕೊರತೆಯನ್ನು ನೀಗಿಸಲು ಇನ್ನೂ ಹಲವು ವಾರಗಳ ನಿರಂತರ ಹಾಗೂ ವ್ಯಾಪಕ ಮಳೆಯ ಅಗತ್ಯವಿದೆ. ಆಗಸ್ಟ್ನಲ್ಲಿ ಸುರಿಯುವ ಮಳೆಯೇ ಈ ಮುಂಗಾರು ಋತುವಿನ ನಿಜವಾದ ಮಳೆಯ ಪ್ರಮಾಣವನ್ನು ನಿರ್ಧರಿಸಲಿದೆ.






