ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ ಹಗರಣ ಆರೋಪಿಯಿಂದ ಅಕ್ರಮ ಪದೋನ್ನತಿಗೆ ಯತ್ನ

ಬೆಂಗಳೂರು : ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದಲ್ಲಿ ನಡೆದಿರುವ ಹಗರಣದಲ್ಲಿ ಆರೋಪಿಯಾಗಿರುವ ಕೆಎಎಸ್ ಅಧಿಕಾರಿ ನಟೇಶ್ ಅವರಿಗೆ ಅಕ್ರಮವಾಗಿ ಪದೋನ್ನತಿ ನೀಡಲಾಗುತ್ತಿದೆ ಎಂದು ಕರ್ನಾಟಕ ರಾಷ್ಟ್ರ ಸಮಿತಿಯು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ದೂರು ನೀಡಿದೆ.
ನಟೇಶ್ ಅವರ ವಿರುದ್ಧ ಮೂಡಾ ಸೇರಿದಂತೆ ಹಲವು ಭ್ರಷ್ಟಾಚಾರದ ಆರೋಪಗಳಿವೆ. ಇವರು ಸರಕಾರಿ ಸೇವೆಗೆ ನೇಮಕವಾದಾಗಿನಿಂದ ಅನ್ವಯವಾಗುವಂತೆ ಸಹಾಯಕ ಆಯುಕ್ತರ ಹುದ್ದೆಗೆ ಪದೋನ್ನತಿ ನೀಡಲು ಸಚಿವ ಸಂಪುಟಕ್ಕೆ ಕಡತ ಮಂಡಿಸಲಾಗುತ್ತಿದೆ ಎಂದು ಗಮನಸೆಳೆದಿದೆ. ಆದರೆ ಪದೋನ್ನತಿಗಿಂತಲೂ ಹುದ್ದೆ ಉನ್ನತೀಕರಣ ಭಾಗ್ಯವನ್ನು ಕರುಣಿಸುತ್ತಿದೆ ಎಂಬ ಮಾತುಗಳು ಅಧಿಕಾರಿ ವರ್ಗದಲ್ಲಿ ಕೇಳಿ ಬರುತ್ತಿವೆ ಸಮಿತಿ ದೂರಿನಲ್ಲಿ ಆರೋಪಿಸಿದೆ.
2026ರ ಜನವರಿ 8ರಂದು ನೀಡಿರುವ ದೂರಿನ ಪ್ರತಿಯು "the-file.in"ಗೆ ಲಭ್ಯವಾಗಿದೆ. ಡಿ.ಬಿ. ನಟೇಶ್ ಅವರು ನೇಮಕವಾದ ವರ್ಷ ಮತ್ತು ನೇಮಕದಲ್ಲಿನ ಲೋಪಗಳು, ಮೀಸಲಾತಿ, ವ್ಯಕ್ತಿತ್ವ ಪರೀಕ್ಷೆಗೆ ಹಾಜರಾಗಿದ್ದ ವೇಳೆ ಸಲ್ಲಿಸಿದ್ದ ಹಲವು ದಾಖಲಾತಿಗಳು ಮತ್ತು ಕರ್ನಾಟಕ ಆಡಳಿತ ನ್ಯಾಯ ಮಂಡಳಿಯು ನೀಡಿದ್ದ ಆದೇಶಗಳನ್ನೂ ದೂರಿನಲ್ಲಿ ಉಲ್ಲೇಖಿಸಿದೆ.
ಡಿ.ಬಿ.ನಟೇಶ್ ಅವರು 2005ನೇ ಸಾಲಿನಲ್ಲಿ ಗೆಜೆಟೆಡ್ ಪ್ರೊಬೆಷನರಿ ಪರೀಕ್ಷೆಗೆ ಅಭ್ಯರ್ಥಿಯಾಗಿದ್ದರು. 3 ಬಿ (ಗ್ರಾಮೀಣ-ಕೆಎಂಎಸ್) ಮೀಸಲಾತಿ ಅಡಿ ಅರ್ಜಿ ಸಲ್ಲಿಸಿದ್ದರು. ಮೀಸಲಾತಿಗೆ ಸಂಬಂಧಪಟ್ಟ ಎಲ್ಲ ಪ್ರಮಾಣ ಪತ್ರಗಳ ಮೂಲ ಪ್ರತಿಗಳನ್ನು ಹಾಜರುಪಡಿಸುವ ಷರತ್ತಿಗೊಳಪಟ್ಟು ವ್ಯಕ್ತಿತ್ವ ಪರೀಕ್ಷೆಗೆ ಹಾಜರಾತಿಗೆ ಕರೆ ಬಂದಿತ್ತು. 2006ರ ಮಾರ್ಚ್ 8ರಂದು ವ್ಯಕ್ತಿತ್ವ ಪರೀಕ್ಷೆಗೆ ಹಾಜರಾಗಿದ್ದ ನಟೇಶ್ ಅವರು ವಿದ್ಯಾಭ್ಯಾಸದ ಪ್ರಮಾಣಪತ್ರಗಳ ಮೂಲ ಪ್ರತಿಗಳನ್ನಷ್ಟೇ ಹಾಜರುಪಡಿಸಿದ್ದರು. ಆದರೆ ಮೀಸಲಾತಿಗೆ ಸಂಬಂಧಪಟ್ಟ ಯಾವುದೇ ಪ್ರಮಾಣ ಪತ್ರದ ಮೂಲ ಪ್ರತಿಯನ್ನು ಹಾಜರುಪಡಿಸಿರಲಿಲ್ಲ. ಬದಲಿಗೆ ಬಸ್ನಲ್ಲಿ ಪ್ರಯಾಣಿಸುವಾಗ ಕಳೆದು ಹೋಗಿವೆ ಎಂದು ವ್ಯಕ್ತಿತ್ವ ಪರೀಕ್ಷೆಗೆ ಹಾಜರಾಗಿದ್ದ ಸಂದರ್ಭದಲ್ಲಿ ಹೇಳಿಕೆ ನೀಡಿದ್ದರು ಎಂಬ ಅಂಶವನ್ನು ದೂರಿನಲ್ಲಿ ವಿವರಿಸಿರುವುದು ಗೊತ್ತಾಗಿದೆ.
ಮೀಸಲಾತಿಗೆ ಸಂಬಂಧಪಟ್ಟ ಯಾವುದೇಪ್ರಮಾಣಪತ್ರದ ಮೂಲ ಪ್ರತಿ ಹಾಜರುಪಡಿಸದ ಕಾರಣಕ್ಕಾಗಿ ಗೆಜೆಟೆಡ್ ಪ್ರೊಬೆಷನರಿ ಪರೀಕ್ಷೆಯ ನಿಯಮಗಳ ಪ್ರಕಾರ ನಟೇಶ್ ಅವರನ್ನು ಸಾಮಾನ್ಯ ವರ್ಗದಲ್ಲಿ ಪರಿಗಣಿಸಿ ವ್ಯಕ್ತಿತ್ವ ಪರೀಕ್ಷೆಗೆ ಅವಕಾಶ ಕಲ್ಪಿಸಿತ್ತು. ಹೀಗಾಗಿ ಸಾಮಾನ್ಯ ವಿಭಾಗದಲ್ಲಿ ತಹಶೀಲ್ದಾರ್ ಆಗಿ ಆಯ್ಕೆಯಾಗಿದ್ದರು.ಅಲ್ಲದೇ 3 ಬಿ (ಗ್ರಾಮೀಣ -ಕೆಎಂಎಸ್) ಮೀಸಲಾತಿ ಮೂಲ ಪ್ರಮಾಣ ಪತ್ರಗಳನ್ನು ನಿಗದಿತ ದಿನದಂದು ಹಾಜರುಪಡಿಸದ ಕಾರಣಕ್ಕಾಗಿ ಸಹಾಯಕ ಆಯುಕ್ತರ ಹುದ್ದೆ ನಟೇಶ್ ಅವರಿಗೆ ದೊರೆತಿರುವುದಿಲ್ಲ. ಆದರೆ ನಟೇಶ್ ಅವರು ಆ ನಂತರ 2005ರ ಗೆಜೆಟೆಡ್ ಪ್ರೊಬೇಷನರಿ ಪರೀಕ್ಷೆಯಲ್ಲಿ 3 ಬಿ (ಗ್ರಾಮೀಣ ಕೆಎಂಎಸ್) ಮೀಸಲಾತಿ ಅಡಿಯೇ ತನ್ನನ್ನು ಪರಿಗಣಿಸಬೇಕು ಮತ್ತು ಸಹಾಯಕ ಆಯುಕ್ತರ ಹುದ್ದೆ ನೀಡಬೇಕು ಎಂದು ಕರ್ನಾಟಕ ಆಡಳಿತ ನ್ಯಾಯಮಂಡಳಿಯಲ್ಲಿ ದಾವೆ (ಅರ್ಜಿ ಸಂಖ್ಯೆ; 6419/06)ಹೂಡಿದ್ದರು. ಈ ಅರ್ಜಿಯನ್ನು ವಿಚಾರಣೆಗೆ ಕೈಗೆತ್ತಿಕೊಂಡಿದ್ದ ಕೆಎಟಿಯು ನಟೇಶ್ ಅವರು ವ್ಯಕ್ತಿತ್ವ ಪರೀಕ್ಷೆಯಂದು ಮೀಸಲಾತಿಗೆ ಸಂಬಂಧಪಟ್ಟ ಯಾವುದೇ ಪ್ರಮಾಣ ಪತ್ರದ ಮೂಲ ಪ್ರತಿ ಹಾಜರುಪಡಿಸದೇ ಇದ್ದ ಕಾರಣಕ್ಕಾಗಿ ಅವರನ್ನು ಸಾಮಾನ್ಯ ವಿಭಾಗದ ಮೀಸಲಾತಿಗೆ ಪರಿಗಣಿಸಿರುವ ಕೆಪಿಎಸ್ಸಿಯ ನಿರ್ಣಯ ಸರಿಯಿದೆ ಎಂದು ಕೆಎಟಿಯು ತೀರ್ಮಾನಿಸಿತ್ತು. ಅಲ್ಲದೇ ನಟೇಶ್ ಅವರ ಅರ್ಜಿಯನ್ನೂ ವಜಾಗೊಳಿಸಿತ್ತು ಎಂದು ದೂರಿನಲ್ಲಿ ಸಮಿತಿ ವಿವರಿಸಿದೆ.
‘ಮೀಸಲಾತಿ ಪಡೆಯಲು ಅನರ್ಹ’
ನಟೇಶ್ ಅವರು ಕೆಎಟಿಯ ಆದೇಶವನ್ನು ಉಚ್ಛ ನ್ಯಾಯಾಲಯದಲ್ಲಿ ಮೇಲ್ಮನವಿ (ರಿಟ್ ಪಿಟಿಷನ್ 5559/2012) (ಎಸ್-ಕೆಎಟಿ) ಸಲ್ಲಿಸಿದ್ದರು. ಈ ದಾವೆಯನ್ನು ವಿಚಾರಣೆಗೆ ಕೈಗೆತ್ತಿಕೊಂಡಿದ್ದ ಉಚ್ಛ ನ್ಯಾಯಾಲಯವೂ ನಟೇಶ್ ಅವರ ಮೇಲ್ಮನವಿ ಅರ್ಜಿಯನ್ನು ವಜಾಗೊಳಿಸಿತ್ತಲ್ಲದೇ ಕೆಪಿಎಸ್ಸಿ ನಿರ್ಣಯ ಮತ್ತು ಕೆಎಟಿ ನೀಡಿದ್ದ ಆದೇಶಗಳೂ ಸರಿ ಇವೆ ಎಂದು ಎತ್ತಿ ಹಿಡಿದಿತ್ತು.
ನಟೇಶ್ ಅವರು ಹೈಕೋರ್ಟ್ ಆದೇಶವನ್ನೂ ಸುಪ್ರೀಂ ಕೋರ್ಟ್ನಲ್ಲಿ (ಎಸ್ಎಲ್ಪಿ 4878/2013) ಪ್ರಶ್ನಿಸಿದ್ದರು. ವಿಶೇಷ ಮೇಲ್ಮನವಿಯನ್ನು ವಿಚಾರಣೆಗೆ ಕೈಗೆತ್ತಿಕೊಂಡಿದ್ದ ಸುಪ್ರೀಂ ಕೋರ್ಟ್ ಸಹ ನಟೇಶ್ ಅವರ ಅರ್ಜಿಯನ್ನು ವಜಾಗೊಳಿಸಿತ್ತು. ಹೈಕೋರ್ಟ್ ಆದೇಶ, ಕೆಎಟಿ ಆದೇಶ ಮತ್ತು ಕೆಪಿಎಸ್ಸಿ ನಿರ್ಧಾರವನ್ನು ಬೆಂಬಲಿಸಿತ್ತು. ಹೀಗಾಗಿ ನಟೇಶ್ ಅವರು ಮಂಡಿಸಿದ್ದ ವಾದವನ್ನು ಸುಪ್ರೀಂ ಕೋರ್ಟ್ ಸೇರಿದಂತೆ ವಿವಿಧ ನ್ಯಾಯಾಲಯಗಳೂ ತಿರಸ್ಕರಿಸಿದ್ದವು. 2005ನೇ ಸಾಲಿನ ಗೆಜೆಟೆಡ್ ಪ್ರೊಬೇಷನರಿ ಪರೀಕ್ಷೆಯಲ್ಲಿ ನಟೇಶ್ ಅವರು 3 ಬಿ (ಗ್ರಾಮೀಣ ಕೆಎಂಎಸ್) ಮೀಸಲಾತಿ ಪಡೆಯಲು ಅರ್ಹರಿರುವುದಿಲ್ಲ ಎಂಬುದು ಹಲವಾರು ಬಾರಿ ಸಾಬೀತಾಗಿದೆ ಎಂದು ದೂರಿನಲ್ಲಿ ವಿವರಿಸಿರುವುದು ತಿಳಿದು ಬಂದಿದೆ.







