ಎನ್.ಡಿ. ಸುಂದರೇಶ್ - ಒಂದು ನೆನಪು

ರೈತಪರ ಹೋರಾಟಗಾರ ಎನ್. ಡಿ. ಸುಂದರೇಶ್ ಮರೆಯಾಗಿ 31 ವರ್ಷಗಳಾಗಿವೆ.
ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲೂಕಿನ ನಂಬಳ ಗ್ರಾಮದ ಶ್ರೀಮಂತ ಕುಟುಂಬದ ಶ್ರೀಮತಿ ಸಿದ್ದಮ್ಮ ಮತ್ತು ದುಗ್ಗಪ್ಪಗೌಡ ಇವರ ಮಗನಾಗಿ 24-08-1938ರಲ್ಲಿ ಜನಿಸಿದ ಎನ್. ಡಿ. ಸುಂದರೇಶ್ ವಿದ್ಯಾರ್ಥಿ ಜೀವನದಲ್ಲೇ ಸಾಮಾಜಿಕ ಚಟುವಟಿಕೆಯಲ್ಲಿ ಗುರುತಿಸಿಕೊಂಡಿದ್ದವರು. ಮೈಸೂರಿನ ಮಹಾರಾಜಾ ಕಾಲೇಜಿನ ವಿದ್ಯಾರ್ಥಿ ಸಂಘದ ಅಧ್ಯಕ್ಷರಾಗಿ, ಅವಿರೋಧವಾಗಿ ಆಯ್ಕೆಯಾಗಿ ವಿದ್ಯಾರ್ಥಿ ಸಮೂಹವನ್ನು ಒಂದು ತಾತ್ವಿಕ ನೆಲೆಗಟ್ಟಿನಲ್ಲಿ ಹೋರಾಟಕ್ಕೆ ಸಜ್ಜುಗೊಳಿಸುತ್ತಿದ್ದರು ಎನ್. ಡಿ. ಸುಂದರೇಶ್. ಕಂದಾಚಾರ, ಮೌಢ್ಯ ವಿರೋಧಿಯಾದ ಇವರು ಡಾ. ರಾಮ್ ಮನೋಹರ ಲೋಹಿಯಾ, ಶಾಂತವೇರಿ ಗೋಪಾಲಗೌಡ, ರಾಷ್ಟ್ರಕವಿ ಕುವೆಂಪು ವಿಚಾರಗಳ ಪ್ರಭಾವಕ್ಕೊಳಗಾಗಿ ಪ್ರೊ. ಎಂ.ಡಿ.ಎನ್., ಪೂರ್ಣಚಂದ್ರ ತೇಜಸ್ವಿ, ಪಿ. ಲಂಕೇಶ್, ಕಡಿದಾಳ್ ಶಾಮಣ್ಣ, ಯು.ಆರ್. ಅನಂತಮೂರ್ತಿ ಇತರರನ್ನೊಡಗೂಡಿ ರಾಜ್ಯಾದ್ಯಂತ ಸುತ್ತಾಡಿ, ಸಮಾಜವಾದಿ ಯುವಜನ ಸಭಾದಲ್ಲಿ ಕೆಲಸ ಮಾಡಿದವರು. 1972ರಲ್ಲಿ ರೈತಸಂಘ ಕಟ್ಟಿಕೊಂಡು ಶಿವಮೊಗ್ಗ ಜಿಲ್ಲೆಯ ಸುತ್ತಮುತ್ತ ರೈತರಿಗೆ ಆಗುತ್ತಿದ್ದ ಅನ್ಯಾಯವನ್ನು ನಿರಂತರವಾಗಿ ಪ್ರತಿಭಟಿಸುತ್ತಿದ್ದರು. ಎಚ್.ಎಸ್. ರುದ್ರಪ್ಪನವರು ಕಬ್ಬು ಬೆಳೆಗಾರರ ಸಂಘದ ಅಧ್ಯಕ್ಷರಾಗಿದ್ದಾಗ ಆ ಸಂಘಕ್ಕೆ ಎನ್.ಡಿ. ಸುಂದರೇಶ್ರವರು ಪ್ರಧಾನ ಕಾರ್ಯದರ್ಶಿಯಾಗಿದ್ದರು. ಕಬ್ಬು ಬೆಳೆಗಾರರ ಸಂಘ ಕೇವಲ ಕಬ್ಬುಬೆಳೆಗಾರರ ಹಿತಾಸಕ್ತಿಗಾಗಿ ಹೋರಾಟ ಮಾಡದೆ ಸಮಸ್ತ ರೈತರ ಪರ ಹೋರಾಟ ಮಾಡುವಲ್ಲಿ ಎನ್.ಡಿ. ಸುಂದರೇಶ್ರವರ ಪಾತ್ರ ಬಹುಮುಖ್ಯವಾಗಿತ್ತು.
ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷದ ಗುಂಡೂರಾವ್ ನೇತೃತ್ವದ ಸರಕಾರ ಅಧಿಕಾರದಲ್ಲಿದ್ದಾಗ 1980 ಜುಲೈ 21ರಂದು ನರಗುಂದ, ನವಿಲಗುಂದದಲ್ಲಿ ನಡೆದ ರೈತ ಬಂಡಾಯದಲ್ಲಿ ಆಗಿನ ಸರಕಾರ ಚಳವಳಿ ನಿರತ ರೈತ ಸಮುದಾಯದ ಮೇಲೆ ಗುಂಡು ಹಾರಿಸಿ ರೈತರನ್ನು ಬಲಿ ತೆಗೆದುಕೊಂಡಾಗ ಆ ಘಟನೆಯನ್ನು ಮೊದಲನೆಯದಾಗಿ ಖಂಡಿಸಿದ ಎನ್.ಡಿ. ಸುಂದರೇಶ್, ಅಷ್ಟಕ್ಕೆ ಸುಮ್ಮನಾಗದೆ ರಾಜ್ಯಾದ್ಯಂತ ಚಳವಳಿಗೆ ಕರೆ ನೀಡಿ ನರಗುಂದ, ನವಲಗುಂದಕ್ಕೆ ಕೆಲ ಸಂಗಡಿಗರ ಜೊತೆ ಹೋಗಿ ಗುಂಡೂರಾವ್ ಸರಕಾರವನ್ನು ಕಟುವಾಗಿ ಟೀಕಿಸಿ, ಆನಂತರ, ರಾಜ್ಯಾದ್ಯಂತ ಸುತ್ತಿ ಗುಂಡೂರಾವ್ ಸರಕಾರದ ವಿರುದ್ಧ ಗುಡುಗುತ್ತಾ ಕರ್ನಾಟಕ ರಾಜ್ಯ ರೈತಸಂಘ ಸ್ಥಾಪನೆಗೆ ಕಾರಣರಾದವರಲ್ಲಿ ಎನ್.ಡಿ. ಸುಂದರೇಶ್ ಅಗ್ರಗಣ್ಯರು. ಕಬ್ಬು ಬೆಳೆಗಾರರ ಸಂಘವನ್ನೇ ‘ಕರ್ನಾಟಕ ರಾಜ್ಯ ರೈತ ಸಂಘ’ ಎಂದು ಮಾರ್ಪಡಿಸಿ, ಸಂಘದ ಮೊದಲನೇ ಸಂಸ್ಥಾಪಕ ಪ್ರಧಾನಕಾರ್ಯದರ್ಶಿಯಾಗಿದ್ದರು. ಆನಂತರ ಎಚ್.ಎಸ್. ರುದ್ರಪ್ಪನವರ ನೇತೃತ್ವದಲ್ಲಿ ಪ್ರೊ.ಎನ್.ಡಿ.ಎನ್. ಪೂರ್ಣಚಂದ್ರ ತೇಜಸ್ವಿ, ಪಿ. ಲಂಕೇಶ್, ಕಡಿದಾಳ್ ಶಾಮಣ್ಣ, ಪ್ರೊ. ರವಿವರ್ಮಕುಮಾರ್, ಪ್ರೊ. ಮಂಜುನಾಥ ದತ್ತ, ಆರ್.ಪಿ. ವೆಂಕಟೇಶ್ ಮೂರ್ತಿ ಇತರರ ಜೊತೆ ರಾಜ್ಯದ ಹಳ್ಳಿ ಹಳ್ಳಿಯಲ್ಲೂ ಸುತ್ತಿ ತಾತ್ವಿಕ ನೆಲೆಗಟ್ಟಿನಲ್ಲಿ ಬೃಹತ್ ರೈತಚಳವಳಿಗೆ ಕಾರಣರಾದರು.
ಈ ನಾಡು ಕಂಡ ಅಪ್ರತಿಮ ಹೋರಾಟಗಾರರಾಗಿದ್ದ ಎನ್.ಡಿ. ಸುಂದರೇಶ್ ಚಳವಳಿಯಲ್ಲಿ ತಾಯಿ ಹೃದಯದ ನಾಯಕರಾಗಿದ್ದರು. ಯಾವುದೇ ರಾಜಕೀಯ ಆಸೆ ಆಮಿಷಗಳಿಗೆ ಬಲಿಯಾಗದೆ ಚಳವಳಿ ರಾಜಕಾರಣದಲ್ಲಿ ನಂಬಿಕೆ ಇಟ್ಟುಕೊಂಡು ದುಡಿಯುವ ಜನರ ಸಮಸ್ಯೆಗಳಿಗೆ ಹೋರಾಟದ ಮೂಲಕವೇ ಪರಿಹಾರಗಳನ್ನು ಕಂಡುಕೊಳ್ಳುತ್ತಿದ್ದರು.
ಎನ್.ಡಿ. ಸುಂದರೇಶ್ ಮರೆಯಾಗಿ 31ವರ್ಷಗಳಾಯಿತು. ಇನ್ನೂ ಅವರ ಪ್ರಭಾವ ರೈತ ಚಳವಳಿಯ ಮೇಲಿದೆ. ಇಂತಹವರು ಕಟ್ಟಿದ ಚಳವಳಿ ಇನ್ನೂ ತಾತ್ವಿಕ ನೆಲೆಗಟ್ಟಿನಲ್ಲಿ ಹೋರಾಟ ಮಾಡಿ ರೈತ ಸಮುದಾಯ, ದುಡಿಯುವ ಸಮುದಾಯಕ್ಕೆ ನಾವೆಲ್ಲರೂ ಕೆಲಸ ಮಾಡಬೇಕಾಗಿದೆ. ಇದೇ ಸುಂದರೇಶ್ ಅವರಿಗೆ ನಿಜವಾಗಿ ಸಲ್ಲಿಸುವ ಗೌರವವಾಗುತ್ತದೆ.







