ಉಡುಪಿ: ತಾಯಿ, ಮಕ್ಕಳ ಕಗ್ಗೊಲೆ ಪ್ರಕರಣ: ಸ್ನ್ಯಾಪ್ಚಾಟ್ ನಿಂದ ಐನಾಝ್ ಮನೆ ದಾರಿ ಕಂಡುಕೊಂಡಿದ್ದ ಆರೋಪಿ!
ಆ್ಯಪ್ ಸಹಾಯದಿಂದಲೇ ರಿಕ್ಷಾ ಚಾಲಕನಿಗೆ ಲೊಕೇಶನ್ ತೋರಿಸಿದ ಪ್ರವೀಣ್

snapchat Photo: moeabdallah.com
ಉಡುಪಿ: ನೇಜಾರಿನ ಒಂದೇ ಕುಟುಂಬದ ನಾಲ್ವರ ಹತ್ಯೆ ಬಗ್ಗೆ ಯಾವುದೇ ಸುಳಿವು ಲಭಿಸದಂತೆ ಮಾಸ್ಟರ್ ಪ್ಲ್ಯಾನ್ ಮಾಡಿಕೊಂಡಿದ್ದ ಆರೋಪಿ ಪ್ರವೀಣ್ ಚೌಗುಲೆ(39), ಐನಾಝ್ಳ ಮನೆಯ ದಾರಿಯನ್ನು ‘ಸ್ನ್ಯಾಪ್ ಚಾಟ್’ ಮೂಲಕ ಕಂಡುಕೊಂಡಿದ್ದ ಎಂಬುದು ಪೊಲೀಸ್ ತನಿಖೆಯಿಂದ ಬೆಳಕಿಗೆ ಬಂದಿದೆ.
ಈ ಮೂಲಕ ಆರೋಪಿ ಪ್ರವೀಣ್ ಈ ಹಿಂದೆ ಐನಾಝ್ರ ನೇಜಾರಿನ ಮನೆಗೆ ಬಂದಿದ್ದ ಹಾಗೂ ಕೃತ್ಯಕ್ಕೆ ಒಂದು ವಾರ ಮೊದಲು ಐನಾಝ್ ಮನೆಯಲ್ಲಿ ನಡೆದ ಹುಟ್ಟುಹಬ್ಬ ಆಚರಣೆಯಲ್ಲಿ ಆತ ಆಕೆಗೆ ಉಂಗುರ ತೊಡಿಸಿದ್ದ ಎಂಬುದೆಲ್ಲ ಸುಳ್ಳು ಸುದ್ದಿ ಎಂಬುದು ಸ್ಪಷ್ಟವಾಗಿದೆ. ಪ್ರವೀಣ್ ಇದೇ ಮೊದಲ ಬಾರಿಗೆ ನೇಜಾರಿಗೆ ಬಂದು ಈ ಕೃತ್ಯ ಎಸಗಿದ್ದನು ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಆಕೆ ಮನೆಗೆ ಬಂದಿದ್ದು ತಿಳಿದಿತ್ತು: ಏರ್ ಇಂಡಿಯಾ ಏಕ್ಸ್ಪ್ರೆಸ್ನಲ್ಲಿ ಕೆಲಸ ಮಾಡುತ್ತಿದ್ದ ಐನಾಝ್ಳನ್ನು ಹಚ್ಚಿಕೊಂಡಿದ್ದ ಅದೇ ಕಂಪೆನಿಯ ಸಿಬ್ಬಂದಿ ಪ್ರವೀಣ್ ಆಕೆಗೆ ವಿವಿಧ ರೀತಿಯ ಕಿರುಕುಳ ನೀಡುತ್ತಿದ್ದನು. ಪದೇ ಪದೇ ಕರೆ ಮಾಡಿ ಮಾತನಾಡಲು ಒತ್ತಾಯಿಸುತ್ತಿದ್ದ ಎಂದು ತಿಳಿದುಬಂದಿದೆ. ಇದೇ ಕಾರಣಕ್ಕೆ ಆಕೆ ಆತನ ಮೊಬೈಲ್ ನಂಬರ್ನ್ನು ಬ್ಲಾಕ್ ಮಾಡಿದ್ದಳು.
ಕೊಲೆಗೆ ಮುನ್ನಾ ದಿನ ನ.೧೧ರಂದು ಶನಿವಾರ ಐನಾಝ್ ಅಬುಧಾಬಿಯಿಂದ ಕರ್ತವ್ಯ ಮುಗಿಸಿ ಮಂಗಳೂರಿಗೆ ಬಂದಿದ್ದು, ಆಕೆ ಅಬುಧಾಬಿಯಿಂದ ಬರುವಾಗ ತಮ್ಮನಿಗೆ ಮತ್ತು ಮನೆ ಕೆಲಸದಾಕೆಯ ಮಗನಿಗೆ ತಂದ ವಸ್ತುಗಳನ್ನು ಕೊಡಲು ಶನಿವಾರ ಸಂಜೆ ನೇಜಾರಿನ ಮನೆಗೆ ಬಂದಿದ್ದಳು. ಆಕೆಗೆ ಮರುದಿನ ರವಿವಾರ ರಾತ್ರಿ ೮ಗಂಟೆಗೆ ದುಬೈ ಹೋಗಲು ಇದ್ದುದರಿಂದ ಮನೆಯಿಂದ ಬೆಳಗ್ಗೆ ೧೧ಗಂಟೆಗೆ ಮಂಗಳೂರಿಗೆ ಹೊರಡಬೇಕಿತ್ತು. ಇದೆನ್ನೆಲ್ಲ ಅರಿತಿದ್ದ ಪ್ರವೀಣ್ ರವಿವಾರ ಬೆಳಗ್ಗೆ ಆಕೆ ಹೊರಡುವ ಮೊದಲು ಆಕೆಯನ್ನು ಹತ್ಯೆ ಮಾಡಲು ಯೋಜನೆ ರೂಪಿಸಿದ್ದನು ಎಂದು ತಿಳಿದುಬಂದಿದೆ.
ಚಾಲಕನಿಗೆ ದಾರಿ ತೋರಿಸಿದ: ಮೊದಲ ಬಾರಿಗೆ ನೇಜಾರಿಗೆ ಬರುತ್ತಿದ್ದ ಆರೋಪಿ ಪ್ರವೀಣ್, ಆಕೆಯ ಮನೆ ಗೊತ್ತಿಲ್ಲದಿದ್ದರೂ ಸ್ನ್ಯಾಪ್ಚಾಟ್ ಆ್ಯಪ್ ಮೂಲಕ ದಾರಿ ಕಂಡುಕೊಂಡಿದ್ದನು. ಆ್ಯಪ್ ಸೂಚಿಸಿದ ಮಾರ್ಗದಲ್ಲೇ ಬಂದು ಆತ, ಐನಾಝ್ ಮನೆ ತಲುಪಿದ್ದಾನೆ.
ಸಂತೆಕಟ್ಟೆಯಿಂದ ನೇಜಾರಿನ ತೃಪ್ತಿ ಲೇಔಟ್ಗೆ ಪ್ರವೀಣ್ ರಿಕ್ಷಾದಲ್ಲಿ ಹೋಗಿದ್ದು, ಈ ವೇಳೆ ಚಾಲಕ ದಾರಿ ತಪ್ಪಿ ಮುಂದೆ ಹೋಗಿದ್ದನು. ಆಗ ಪ್ರವೀಣ್, ಸ್ನ್ಯಾಪ್ಚಾಟ್ ನೋಡಿಯೇ ಆಕೆಯ ಮನೆ ದಾರಿಯನ್ನು ರಿಕ್ಷಾ ಚಾಲಕನಿಗೆ ತೋರಿಸಿದ್ದನು.
ಒಂದು ವೇಳೆ ಆತ ಈ ಹಿಂದೆ ಮನೆಗೆ ಬಂದಿದ್ದರೆ ಅಥವಾ ಮನೆಯ ದಾರಿ ಗೊತ್ತಿದ್ದರೆ ರಿಕ್ಷಾ ಚಾಲಕನನ್ನು ದಾರಿ ತಪ್ಪಿ ಮುಂದೆ ಹೋಗಲು ಅವಕಾಶ ನೀಡುತ್ತಿರಲಿಲ್ಲ. ಆಕೆ ಮನೆಯಲ್ಲೇ ಇದ್ದುದರಿಂದ ಸ್ನ್ಯಾಪ್ಚಾಟ್ ಸರಿಯಾಗಿಯೇ ಆಕೆಯ ಮನೆ ಇರುವ ಸ್ಥಳವನ್ನು ತೋರಿಸಿದೆ ಮತ್ತು ಮನೆ ಎದುರೇ ರಿಕ್ಷಾ ಚಾಲಕ ಪ್ರವೀಣ್ನನ್ನು ಬಿಟ್ಟು ವಾಪಸ್ ಹೋಗಿದ್ದಾರೆ.
ಏನಿದು ಸ್ನ್ಯಾಪ್ಚಾಟ್?
ಇದು ಮಲ್ಟಿಮಿಡಿಯಾ ಇನ್ಸ್ಟೆಂಟ್ ಮೆಸೇಜಿಂಗ್ ಅಪ್ಲಿಕೇಶನ್. ಇದರಲ್ಲಿ ತಮ್ಮ ಗೆಳೆಯರಿಗೆ ಫೋಟೋ ಸಂದೇಶವನ್ನು ಅಲ್ಪ ಸಮಯಕ್ಕೆ ಕಳುಹಿಸಬಹುದು. ಇಬ್ಬರಲ್ಲೂ ಈ ಅ್ಯಪ್ಲಿಕೇಶನ್ ಇದ್ದರೆ ರಿಕ್ವೆಸ್ಟ್ ಕಳುಹಿಸಿ ಫ್ರೆಂಡ್ಸ್ ಮಾಡಿಕೊಳ್ಳ ಬಹುದು. ಇದರಲ್ಲಿರುವ ಲೋಕೇಶನ್ಗೆ ಹೋದರೆ ತಮ್ಮ ಗೆಳೆಯರು ಯಾವ ಸ್ಥಳದಲ್ಲಿದ್ದಾರೆ ಎಂದು ಕೂಡ ನೋಡಬಹುದು. ತನ್ನ ಲೊಕೇಶನ್ ಗೆಳೆಯರಿಗೆ ತೋರದಂತೆ ಹೈಡ್ ಕೂಡ ಮಾಡಬಹುದು.
ಕುಸ್ತಿಪಟು ಆಗಿದ್ದ ಆರೋಪಿ ಪ್ರವೀಣ್
ಪ್ರವೀಣ್ ಚೌಗುಲೆ ಏರ್ ಇಂಡಿಯಾ ಎಕ್ಸ್ಪ್ರೆಸ್ಗೆ ಸೇರುವ ಮೊದಲು ತನ್ನ ಊರಿನಲ್ಲಿ ಕುಸ್ತಿಪಟು ಆಗಿದ್ದ ಎಂಬ ಮಾಹಿತಿ ದೊರೆತಿದೆ. ಇದರಿಂದ ರಕ್ಷಣಾ ಕಲೆಗಳನ್ನು ಅರಿತಿದ್ದ ಆತ, ದೈಹಿಕವಾಗಿಯೂ ಸದೃಢನಾಗಿದ್ದನು. ಇದರಿಂದಲೇ ಆತ ನಾಲ್ವರನ್ನು ಕೇವಲ 15 ನಿಮಿಷಗಳಲ್ಲಿ ಬರ್ಬರವಾಗಿ ಕೊಂದಿದ್ದನು. ಅಲ್ಲದೆ ತನ್ನ ಬಟ್ಟೆಗಳಿಗೂ ರಕ್ತ ಮೆತ್ತದಂತೆ ನೋಡಿಕೊಂಡು ಪರಾರಿಯಾಗಿದ್ದನು ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಸುಟ್ಟ ಬಟ್ಟೆ, ಸ್ಕೂಟರ್ ವಶ
ಆರೋಪಿ ಪ್ರವೀಣ್ ಕೊಲೆ ಮಾಡಿ ಹೆಜಮಾಡಿಯಿಂದ ಮಂಗಳೂರಿಗೆ ಕಾರಿನಲ್ಲಿ ಹೋಗುವಾಗ ದಾರಿ ಮಧ್ಯೆ ಬಪ್ಪನಾಡು ಸಮೀಪ ತನ್ನ ರಕ್ತಸಿಕ್ತ ಬಟ್ಟೆ ಯನ್ನು ಸುಟ್ಟು ಹಾಕಿದ್ದನು. ಇದೀಗ ಈ ಬಗ್ಗೆ ತನಿಖೆ ನಡೆಸಿದ ಪೊಲೀಸರು, ಸುಟ್ಟ ಬಟ್ಟೆಯ ಕುರುಹುಗಳನ್ನು ವಶಪಡಿಸಿಕೊಂಡಿದ್ದಾರೆಂದು ಮೂಲಗಳು ತಿಳಿಸಿವೆ.
ಅದೇ ರೀತಿ ಐನಾಝ್ ವಾಸ ಮಾಡಿಕೊಂಡಿದ್ದ ಮಂಗಳೂರಿನ ಬಾಡಿಗೆ ಮನೆ ಸಮೀಪ ನಿಲ್ಲಿಸಿದ್ದ ಹಂತಕ ಪ್ರವೀಣ್ ಚೌಗುಲೆಯ ಸ್ಕೂಟರನ್ನು ಕೂಡ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಇದನ್ನು ಪ್ರವೀಣ್ ಐನಾಝ್ಗೆ ಮಾರಾಟ ಮಾಡಿದ್ದಾನೆಯೇ ಅಥವಾ ಅವನ ಹೆಸರಿನಲ್ಲಿಯೇ ಇದೆಯೇ ಎಂಬುದರ ಬಗ್ಗೆ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.
‘ತಂಗಿಗೆ ಅಫ್ನಾನ್ ಐಫೋನ್ ಗಿಫ್ಟ್ ಕೊಟ್ಟಿದ್ದಳು’
ಸೌದಿಯಲ್ಲಿ ಶಿಕ್ಷಣ ಪಡೆದ ಅಫ್ನಾನ್ ಮತ್ತು ಐನಾಝ್, ಒಮ್ಮೆ ತಾವು ಕಲಿತ ಶಾಲೆಯಲ್ಲಿನ ಕಾರ್ಯಕ್ರಮಕ್ಕೆ ಹೋಗಿದ್ದರು. ಅಲ್ಲಿ ಅಫ್ನಾನ್ನ ಸುಲಲಿತವಾದ ಇಂಗ್ಲಿಷ್ ಭಾಷಣ ಕೇಳಿ, ಅಲ್ಲಿನ ಶಿಕ್ಷಕರು ಆಕೆಯನ್ನು ತಮ್ಮ ಶಾಲೆಗೆ ಶಿಕ್ಷಕಿಯಾಗಿ ಕೆಲಸಕ್ಕೆ ಕಳುಹಿಸುವಂತೆ ಆಕೆಯ ತಂದೆ ನೂರ್ ಮುಹಮ್ಮದ್ರಲ್ಲಿ ಮನವಿ ಮಾಡಿದ್ದರು.
ತಂದೆಯ ಒಪ್ಪಿಗೆಯಂತೆ ಅಫ್ನಾನ್ ಶಿಕ್ಷಕಿಯಾಗಿ ಕೆಲಸ ಸೇರಿದ್ದಳು. ಅಲ್ಲಿ ದುಡಿದ ಹಣದಿಂದ ಆಕೆ ತನ್ನ ತಂಗಿ ಐನಾಝ್ಗಾಗಿ ಐಫೋನ್ ಖರೀದಿಸಿ ಗಿಫ್ಟ್ ನೀಡಿದ್ದಳು. ಊರಿಗೆ ಬಂದ ಮಂಗಳೂರಿನಲ್ಲಿದ್ದ ಇವರಿಬ್ಬರು ಒಂದೇ ಫ್ಲ್ಯಾಟ್ನಲ್ಲಿ ಇರುವಂತೆ ನೂರ್ ಮುಹಮ್ಮದ್ ತಿಳಿಸಿದ್ದರು. ಅದರಂತೆ ಇವರು ಒಂದೇ ಫ್ಲ್ಯಾಟ್ನಲ್ಲಿ ಬಾಡಿಗೆಗೆ ಇದ್ದರು. ಈ ವಿಚಾರವನ್ನು ತಂದೆ ನೂರ್ ಮುಹಮ್ಮದ್ ‘ವಾರ್ತಾಭಾರತಿ’ಗೆ ತಿಳಿಸಿದ್ದಾರೆ.
ಆಘಾತದಿಂದ ಹೊರ ಬಾರದ ಹಾಜಿರ!
ನಾಲ್ವರನ್ನು ಬರ್ಬರವಾಗಿ ಕೊಲೆ ಮಾಡುವು ದನ್ನು ಕಣ್ಣಾರೆ ಕಂಡ ಪ್ರತ್ಯಕ್ಷ ಸಾಕ್ಷಿ ನೂರ್ ಮುಹಮ್ಮದ್ರ ತಾಯಿ ಹಾಜಿರ ಇನ್ನೂ ಆ ಆಘಾತದಿಂದ ಹೊರ ಬಂದಿಲ್ಲ ಎಂದು ತಿಳಿದುಬಂದಿದೆ.
ಹಂತಕನಿಂದ ತಪ್ಪಿಸಿಕೊಂಡು ಬಾತ್ರೂಮಿನಲ್ಲಿ ಚಿಲಕ ಹಾಕಿ ಪ್ರಾಣ ಉಳಿಸಿಕೊಂಡ ಹಾಜಿರಾ, ಮಣಿಪಾಲದಲ್ಲಿ ಚಿಕಿತ್ಸೆ ಪಡೆದು ಬಿಡುಗಡೆಗೊಂಡಿದ್ದು, ಇದೀಗ ಅವರು ತನ್ನ ಮನೆಯಾದ ಕುಂದಾಪುರ ತಾಲೂಕಿನ ಹೈಕಾಡಿಯಲ್ಲಿದ್ದಾರೆ. ಶಾಕ್ನಲ್ಲಿಯೇ ಇರುವ ಅವರು ಅಂದಿನ ಘಟನೆ ಬಗ್ಗೆ ವಿವರಿಸುವಷ್ಟು ಇನ್ನೂ ಚೇತರಿಸಿಕೊಂಡಿಲ್ಲ ಎಂದು ಕುಟುಂಬದ ಮೂಲಗಳು ತಿಳಿಸಿವೆ.







