ಪೇಟಿಎಂ ಎಂದರೆ ‘ಪೇ ಟು ಮೋದಿ’ ಎಂದಿದ್ದ ವೀಡಿಯೊ ಮತ್ತೆ ಮುನ್ನೆಲೆಗೆ
UPIಗೆ ಶುಲ್ಕದ ಕುರಿತು ಹತ್ತು ವರ್ಷದ ಹಿಂದೆಯೇ ರಾಹುಲ್ ಗಾಂಧಿ ಎಚ್ಚರಿಸಿದ್ದರೇ?

ಹೊಸದಿಲ್ಲಿ: 2 ಸಾವಿರ ರೂ.ಗಳ ಮೇಲಿನ UPI ಪಾವತಿಗಳಿಗೆ ಶುಲ್ಕ ವಿಧಿಸುವ ಸರಕಾರದ ಕ್ರಮದ ಬಗ್ಗೆ ವಿರೋಧಗಳು ವ್ಯಕ್ತವಾಗುತ್ತಿರುವುದರ ನಡುವೆಯೇ, 2016ರಲ್ಲಿ UPI ಪಾವತಿಗಳ ಕುರಿತು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ನೀಡಿದ್ದ ಹೇಳಿಕೆಗಳು ಮತ್ತೆ ಮುನ್ನೆಲೆಗೆ ಬಂದಿವೆ.
2016ರ ಡಿಸೆಂಬರ್ 8ರಂದು ರಾಹುಲ್ ಗಾಂಧಿ, ನಗದುರಹಿತ ಆರ್ಥಿಕತೆಯ ಕುರಿತು ಪ್ರಧಾನಿ ನರೇಂದ್ರ ಮೋದಿ ಅವರನ್ನು ಟೀಕಿಸುವ ವೇಳೆ “PayTM means Pay To Modi” ಎಂದು ಹೇಳಿದ್ದರು. ನೋಟು ಅಮಾನ್ಯೀಕರಣದಿಂದ ಕೆಲವು ಜನರು ಮತ್ತು ಸಂಸ್ಥೆಗಳು ಹೆಚ್ಚಿನ ಲಾಭ ಪಡೆಯಲಿವೆ ಎಂದು ಆರೋಪಿಸಿದ್ದರು. ಅದಾಗಿ, 10 ವರ್ಷಗಳ ಬಳಿಕ, ಇದೀಗ ಕೇಂದ್ರ ಸರಕಾರವು UPI ವಹಿವಾಟುಗಳಿಗೆ ಶುಲ್ಕ ವಿಧಿಸಿರುವುದು ರಾಹುಲ್ ಗಾಂಧಿ ಅವರು 10 ವರ್ಷಗಳ ಹಿಂದೆ ನೀಡಿದ್ದ ಹೇಳಿಕೆಯನ್ನು ಸಾಬೀತು ಮಾಡಿದೆ ಎಂದು ಹಲವು ಸಾಮಾಜಿಕ ಜಾಲತಾಣ ಬಳಕೆದಾರರು ಅಭಿಪ್ರಾಯಪಟ್ಟಿದ್ದಾರೆ.
ಈ ಹೇಳಿಕೆಯ ಜೊತೆಗೇ ನೆಟ್ಟಿಗರು 2016ರ ನವೆಂಬರ್ ನ ಒಂದು ಬೆಳವಣಿಗೆಯನ್ನೂ ನೆನಪಿಸುತ್ತಿದ್ದಾರೆ. ನೋಟು ಅಮಾನ್ಯೀಕರಣ ಘೋಷಣೆಯ ಮರುದಿನ ಪತ್ರಿಕೆಗಳ ಮುಖಪುಟಗಳಲ್ಲಿ ನರೇಂದ್ರ ಮೋದಿ ಅವರ ಚಿತ್ರವಿರುವ ಪೂರ್ಣಪುಟ ಜಾಹೀರಾತನ್ನು ಪೇಟಿಎಂ ಪ್ರಕಟಿಸಿತ್ತು. ಜಾಹೀರಾತಿನಲ್ಲಿ ನೋಟು ಅಮಾನ್ಯೀಕರಣದ ನಿರ್ಧಾರವನ್ನು Paytm ಅಭಿನಂದಿಸಿತ್ತು. Business Standard ವರದಿ ಪ್ರಕಾರ, ಜಾಹೀರಾತಿನ ಬಳಿಕ Paytmನ ವಹಿವಾಟುಗಳಲ್ಲಿ ತೀವ್ರ ಏರಿಕೆ ಕಂಡುಬಂದಿತ್ತು.
ಈ ಹಳೆಯ ಘಟನೆಗಳನ್ನು ಈಗಿನ UPI ಶುಲ್ಕ ಚರ್ಚೆಯೊಂದಿಗೆ ಜೋಡಿಸಿರುವ ಹಲವು ಪೋಸ್ಟ್ಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ.
ಹಲವರು ಸಾಮಾಜಿಕ ಜಾಲತಾಣಗಳಲ್ಲಿ, “2016ರಲ್ಲಿ ರಾಹುಲ್ ಗಾಂಧಿ ಹೇಳಿದ್ದ Pay To Modi ಮಾತು ಈಗ ಅರ್ಥವಾಗುತ್ತಿದೆ” ಎಂಬ ರೀತಿಯಲ್ಲಿ ಪ್ರತಿಕ್ರಿಯಿಸಿದ್ದಾರೆ. ಮತ್ತೊಬ್ಬರು ರಾಹುಲ್ ಗಾಂಧಿಯನ್ನು ರಾಜಕೀಯದ ನಾಸ್ಟ್ರಡಾಮಸ್ (Nostradamus) ಎಂದು ವ್ಯಂಗ್ಯಾತ್ಮಕವಾಗಿ ಕರೆದಿದ್ದಾರೆ. ಇನ್ನೂ ಕೆಲವರು, ರಾಹುಲ್ ಗಾಂಧಿಯವರು ಹಿಂದೆ ನೀಡಿದ್ದ ಹಲವು ಎಚ್ಚರಿಕೆಗಳನ್ನು ನೆನಪಿಸಿಕೊಂಡು, ಅವರಿಗೆ ರಾಜಕೀಯ ಅವಕಾಶ ನೀಡಬೇಕು ಎಂದು ಅಭಿಪ್ರಾಯಪಟ್ಟಿದ್ದಾರೆ.
►ಕೋವಿಡ್ ಸಂದರ್ಭದ ‘ಎಚ್ಚರಿಕೆ’ ನೆನಪಿಸಿದ ನೆಟ್ಟಿಗರು
COVID-19 ಮತ್ತು ಆರ್ಥಿಕತೆಯ ಕುರಿತ ರಾಹುಲ್ ಗಾಂಧಿ ಅವರ ಎಚ್ಚರಿಕೆಗಳೂ ಈ ಹಿಂದೆ ಚರ್ಚೆಯಾಗಿದ್ದವು.
2020ರ ಫೆಬ್ರವರಿ 12ರಂದು, ಭಾರತದಲ್ಲಿ ಕೇವಲ ಮೂರು ಕೋವಿಡ್ ಪ್ರಕರಣಗಳು ದಾಖಲಾಗಿದ್ದ ಸಂದರ್ಭದಲ್ಲಿ, ರಾಹುಲ್ ಗಾಂಧಿ ಕೊರೊನಾ ವೈರಸ್ ಜನರು ಮತ್ತು ಆರ್ಥಿಕತೆಗೆ ಅತ್ಯಂತ ಗಂಭೀರ ಅಪಾಯ ಎಂದು ಎಚ್ಚರಿಸಿದ್ದರು. ಸರ್ಕಾರ ಪರಿಸ್ಥಿತಿಯನ್ನು ಗಂಭೀರವಾಗಿ ಪರಿಗಣಿಸಬೇಕು ಎಂದು ಅವರು ಆಗ ಒತ್ತಾಯಿಸಿದ್ದರು.
ಮಾರ್ಚ್ 17, 2020ರಂದು ಅವರು ಇನ್ನಷ್ಟು ಸ್ಪಷ್ಟವಾಗಿ “ಆರ್ಥಿಕ ಸುನಾಮಿ” ಬರುತ್ತಿದೆ ಎಂದು ಎಚ್ಚರಿಸಿದ್ದರು. ಕೋವಿಡ್ನ ಆರೋಗ್ಯ ಪರಿಣಾಮಗಳ ಜೊತೆಗೆ ಆರ್ಥಿಕ ಹಾನಿಗೂ ದೇಶ ಸಿದ್ಧವಾಗಬೇಕು; ಇಲ್ಲದಿದ್ದರೆ ಮುಂದಿನ ತಿಂಗಳುಗಳಲ್ಲಿ ಜನರು ತೀವ್ರ ಸಂಕಷ್ಟ ಎದುರಿಸಲಿದ್ದಾರೆ ಎಂದು ಅವರು ಹೇಳಿದ್ದರು. ಆ ಸಂದರ್ಭದಲ್ಲಿ ರಾಹುಲ್ ಗಾಂಧಿಯನ್ನು “ರಾಜಕೀಯ ಪಪ್ಪು” ಎಂದು ಬಿಜೆಪಿ ಹಾಗೂ ಬಲಪಂಥೀಯ ಟ್ರೋಲ್ ಪಡೆಗಳು ಮೂದಲಿಸುತ್ತಿದ್ದವು. ಆದರೆ, ರಾಹುಲ್ ಗಾಂಧಿ ನೀಡಿದ್ದ ಎಚ್ಚರಿಕೆಯಂತೆಯೇ ಕೊರೊನಾ ದೇಶದ ಆರ್ಥಿಕ, ಆರೋಗ್ಯ ಕ್ಷೇತ್ರಕ್ಕೆ ಬಹುದೊಡ್ಡ ಹೊಡೆತವನ್ನು ನೀಡಿತ್ತು.






