ರಾಜೀವ್ ಗಾಂಧಿ ಆರೋಗ್ಯ ವಿವಿಯಿಂದ ಅಂದಾಜು ಮೊತ್ತ ಮೀರಿ ವೆಚ್ಚ

PC: fortuneacademics
ಬೆಂಗಳೂರು : ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾನಿಲಯವು ಶಾಸನಾತ್ಮಕ ಕಟಾವಣೆಗಳಾದ ಇಎಂಡಿ ಸಹಿತ ಇನ್ನಿತರ ಮಾಹಿತಿಗಳನ್ನು ಲೆಕ್ಕ ಪರಿಶೋಧನೆಗೆ ಒದಗಿಸಿಲ್ಲ. ಅಲ್ಲದೇ ಅಂದಾಜು ಮೊತ್ತವನ್ನು ಮೀರಿ ವೆಚ್ಚ ಮಾಡಿರುವುದನ್ನು ಲೆಕ್ಕ ಪರಿಶೋಧಕರು ಬಯಲು ಮಾಡಿದ್ದಾರೆ. 2023-24ನೇ ಸಾಲಿಗೆ ಸಂಬಂಧಿಸಿದಂತೆ ಪೂರ್ಣಗೊಂಡಿರುವ ಲೆಕ್ಕ ಪರಿಶೋಧನೆ ವರದಿಯು ವಿಶ್ವವಿದ್ಯಾನಿಲಯದ ನಿರ್ಲಕ್ಷ್ಯಗಳನ್ನು ಬಯಲು ಮಾಡಿದೆ. ಈ ವರದಿಯ ಪ್ರತಿಯು "the-file.in"ಗೆ ಲಭ್ಯವಾಗಿದೆ.
ವಿಶ್ವವಿದ್ಯಾನಿಲಯದ 2023-24ನೇ ಸಾಲಿನ ವಾರ್ಷಿಕ ಲೆಕ್ಕಪತ್ರದ ಪ್ರಕಾರ ಇತರ ಹೊಣೆಗಾರಿಕೆ ಭಾಗವನ್ನೂ ಲೆಕ್ಕ ಪರಿಶೋಧಕರು ಪರಿಶೀಲಿಸಿದ್ದಾರೆ. ಶಾಸನಾತ್ಮಕ ಕಟಾವಣೆಗಳಾದ ಇಎಂಡಿ ಲೆಕ್ಕ ಶೀರ್ಷಿಕೆಯಡಿಯಲ್ಲಿ 23,64,221 ಹಾಗೂ ಡ್ಯೂಟೀಸ್ ಮತ್ತು ಟ್ಯಾಕ್ಸ್ ಲೆಕ್ಕ ಶೀರ್ಷಿಕೆಯಡಿಯಲ್ಲಿ 1,01,30,626 ರೂ.ಯ ಶಿಲ್ಕನ್ನು ಸಂಬಂಧಪಟ್ಟ ಇಲಾಖೆಗಳಿಗೆ ಸಕಾಲದಲ್ಲಿ ಜಮೆ ಮಾಡದೇ ಬಾಕಿ ಉಳಿಸಿಕೊಂಡಿದೆ. ಈ ಬಗ್ಗೆಯೂ ವಿಶ್ವವಿದ್ಯಾನಿಲಯವು ಸಹ ಯಾವುದೇ ಅನುಸರಣೆ ಒದಗಿಸಿಲ್ಲ ಎಂದು ವರದಿಯಲ್ಲಿ ವಿವರಿಸಿರುವುದು ಗೊತ್ತಾಗಿದೆ.
2023-24ನೇ ಸಾಲಿನಲ್ಲಿ 29,912.85 ಲಕ್ಷ ರೂ. ಆದಾಯವನ್ನು ನಿರೀಕ್ಷಿಸಿತ್ತು. 85,189.17 ಲಕ್ಷ ರೂ.ಗೆ ವೆಚ್ಚವನ್ನು ನಿಗದಿಪಡಿಸಿತ್ತು. ಅಂದಾಜಿನ ಪರಿಧಿಯಲ್ಲಿ ವೆಚ್ಚಗಳನ್ನು ಭರಿಸಿರುವುದನ್ನು ಲೆಕ್ಕ ಪರಿಶೋಧನೆಯಲ್ಲಿ ಗಮನಿಸಿದೆ.
ಈ ಸಂಬಂಧ ವಿಶ್ವವಿದ್ಯಾನಿಲಯವು ಲೆಕ್ಕ ಪರಿಶೋಧನೆಗೆ ಆಯವ್ಯಯ ಅಂದಾಜು ಪಟ್ಟಿಯನ್ನು ಹಾಜರುಪಡಿಸಿತ್ತು. ಇದನ್ನು ಪರಿಶೀಲಿಸಿದ್ದ ಲೆಕ್ಕ ಪರಿಶೋಧಕರು, ಆಯವ್ಯಯ ಅಂದಾಜಿನಲ್ಲಿ ವಿವಿಧ ವಹಿವಾಟು ಶೀರ್ಷಿಕೆಗಳಡಿ ಅವಕಾಶ ಕಲ್ಪಿಸಿರುವ ಮೊತ್ತವನ್ನು ಬಳಸಿಕೊಳ್ಳದಿರುವುದನ್ನು ಹಾಗೂ ಅಂದಾಜಿನ ಪರಿಧಿಯಲ್ಲಿ ಖರ್ಚು ಮಾಡುತ್ತಿರುವುದನ್ನು ಗಮನಿಸಿರುವುದು ತಿಳಿದು ಬಂದಿದೆ.
2023-24ನೇ ಸಾಲಿನ ಆಯವ್ಯಯ ಅಂದಾಯ ಪಟ್ಟಿಯಲ್ಲಿ ನಿಗದಿಪಡಿಸಿರುವ ನಿರೀಕ್ಷಿತ ಆದಾಯ ಹಾಗೂ ವೆಚ್ಚಗಳ ಅಂದಾಜನ್ನು ಪರಿಷ್ಕರಿಸಿ ಪರಿಷ್ಕೃತ ಆಯವ್ಯಯ ಅಂದಾಜು ಸಿದ್ಧಪಡಿಸಿದೆ. ವಾರ್ಷಿಕ ಲೆಕ್ಕಗಳೊಡನೆ ಪರಿಶೀಲಿಸಿದಾಗ ಅಂದಾಜುಗಳ ಮೊತ್ತವನ್ನು ಮೀರಿ ವೆಚ್ಚಗಳನ್ನು ಮಾಡಿದೆ. ಅಲ್ಲದೇ ಅಂದಾಜು ಮೊತ್ತವನ್ನು ಭರಿಸಬೇಕಾದ ಸಂದರ್ಭಗಳಲ್ಲಿ ಹೆಚ್ಚುವರಿ ವೆಚ್ಚ ಭರಿಸಲಾದ ಮೊತ್ತಗಳಿಗೆ ಹಣಕಾಸು ಸಮಿತಿಯ ಶಿಫಾರಸುಗಳೊಂದಿಗೆ ಸಿಂಡಿಕೇಟ್ ಅನುಮೋದನೆ ಅಗತ್ಯವಿದೆ.
ಹೆಚ್ಚುವರಿ ವೆಚ್ಚಗಳು ಅನಿವಾರ್ಯ ಸಂದರ್ಭಗಳಲ್ಲಿ ವ್ಯಯಿಸಲು ಮಾತ್ರ ವಿನಾಯಿತಿ ಇದೆ. ಕೆಲವೊಂದು ಲೆಕ್ಕ ಶೀರ್ಷಿಕೆಯಡಿ ಆಯವ್ಯಯದಲ್ಲಿ ನಿಗದಿಪಡಿಸಲಾದ ಯಾವುದೇ ಮೊತ್ತವನ್ನು ಉಪಯೋಗಿಸಿಕೊಳ್ಳದಿರುವುದನ್ನು ಲೆಕ್ಕ ಪರಿಶೋಧನೆಯಲ್ಲಿ ಗಮನಿಸಲಾಗಿದೆ. ಇದೇ ಕ್ರಮಗಳು ಪುನರಾವರ್ತನೆಯಾದರೆ ಆಯವ್ಯಯ ಅಂದಾಜುಗಳಿಗೆ ಮಾನ್ಯತೆಯೇ ಇಲ್ಲದಂತಾಗುತ್ತದೆ ಎಂದು ಲೆಕ್ಕ ಪರಿಶೋಧನೆ ವರದಿಯಲ್ಲಿ ಅಭಿಪ್ರಾಯಿಸಿರುವುದು ತಿಳಿದು ಬಂದಿದೆ.
ವಿಶ್ವವಿದ್ಯಾನಿಲಯದ ಆಯವ್ಯಯ ಅಂದಾಜು ಹಾಗೂ ಪರಿಷ್ಕೃತ ಅಂದಾಜುಗಳೆರಡಲ್ಲಿ ಹಲವು ವಹಿವಾಟು ಶೀರ್ಷಿಕೆಯಡಿ ವೆಚ್ಚ ಭರಿಸುವ ಅಗತ್ಯವಿಲ್ಲ. ಆದರೂ ಸಹ ಅನುದಾನ ಅವಕಾಶ ಕಲ್ಪಿಸಿರುವ ಕ್ರಮವು ಆಯವ್ಯಯದ ಆಶಯಗಳಿಗೆ ವಿರುದ್ಧವಾಗಿ ನಡೆದುಕೊಂಡಿದೆ.
ವಿಶ್ವವಿದ್ಯಾನಿಲಯದ ಎಲ್ಲ ಶಾಖೆಗಳಿಂದ ಆಯವ್ಯಯ ಸಂಬಂಧ ಮಾಹಿತಿಗಳನ್ನು ಪಡೆದುಕೊಂಡು ಕಳೆದ 3 ವರ್ಷಗಳ ಲೆಕ್ಕಗಳ ಅನ್ವಯ ವಿವಿಧ ವಹಿವಾಟು ಶೀರ್ಷಿಕೆಗಳಡಿ ವಾಸ್ತವವಾಗಿ ಸ್ವೀಕೃತವಾಗಿರುವ ರಾಜಸ್ವ ಮತ್ತು ವಾಸ್ತವಿಕವಾಗಿ ಆಗಿರುವ ವೆಚ್ಚಗಳ ಆಧಾರವನ್ನು ಪರಿಗಣಿಸಬೇಕು. ಅಲ್ಲದೇ ವಾಸ್ತವಕ್ಕೆ ಹತ್ತಿರವಿರುವಂತೆ ವಾರ್ಷಿಕ ಆಯವ್ಯಯವನ್ನು ತಯಾರಿಸುವುದು ವಿತ್ತಾಧಿಕಾರಿಗಳು, ಕುಲಸಚಿವರು ಮತ್ತು ಕುಲಪತಿಗಳ ಜವಾಬ್ದಾರಿ. ಆದರೆ ಈ ಜವಾಬ್ದಾರಿಯನ್ನು ನಿರ್ವಹಿಸಿಲ್ಲ ಎಂದು ವರದಿಯಲ್ಲಿ ವಿವರಿಸಿರುವುದು ತಿಳಿದು ಬಂದಿದೆ.
ವಿಶ್ವವಿದ್ಯಾನಿಲಯಕ್ಕೆ ವಿದ್ಯಾರ್ಥಿಗಳಿಂದ ಸಂಗ್ರಹಿಸುವ ಪ್ರವೇಶಾತಿ ಶುಲ್ಕ, ಪರೀಕ್ಷಾ ಶುಲ್ಕ, ಘಟಿಕೋತ್ಸವ ಶುಲ್ಕ, ಅಂಕಪಟ್ಟಿ ಶುಲ್ಕ, ವಿಶ್ವವಿದ್ಯಾನಿಲಯ ವ್ಯಾಪ್ತಿಯಲ್ಲಿನ ಕಾಲೇಜುಗಳಿಂದ ಸಂಗ್ರಹಿಸುವ ಮಾನ್ಯತಾ ಶುಲ್ಕ, ದಂಡ ಶುಲ್ಕ ಹಾಗೂ ವಿಶ್ವವಿದ್ಯಾನಿಲಯಗಳ ಆಸ್ತಿಗಳಿಂದ ಬರುವ ಬಾಡಿಗೆ ಮೊತ್ತ, ಕೇಂದ್ರ ಸರಕಾರದಿಂದ ಎನ್ಎಸ್ಎಸ್ ರೆಗ್ಯುಲರ್, ಎನ್ಎಸ್ಎಸ್ ವಿಶೇಷ ಅನುದಾನ, ಸಾರ್ವಜನಿಕ ದತ್ತಿ, ಕೊಡುಗೆಗಳು, ಪ್ರಮುಖ ನಿಶ್ಚಿತ ಠೇವಣಿಗಳ ಹೂಡಿಕೆಯಿಂದ ಬರುವ ಬಡ್ಡಿಯು ಆಂತರಿಕ ಸಂಪನ್ಮೂಲವಾಗಿದೆ. ಆದರೆ ಈ ಎಲ್ಲವನ್ನೂ ವಿಶ್ವವಿದ್ಯಾನಿಲಯವು ಸರಿಯಾಗಿ ನಿರ್ವಹಿಸಿಲ್ಲ. ವಿಶ್ವವಿದ್ಯಾನಿಲಯದಲ್ಲಿ ಅನುಮೋದಿತ ಸಂಚಯನ ಲೆಕ್ಕ ಪದ್ಧತಿಯಾಗಲೀ, ಸ್ವೀಕೃತಿಗೆ ಸಂಬಂಧಿಸಿದ ನಿರ್ದಿಷ್ಟ ವಹಿಯನ್ನಾಗಲೀ ನಿರ್ವಹಿಸಿಲ್ಲ. ಹೀಗಾಗಿ ವಿಶ್ವವಿದ್ಯಾನಿಲಯಕ್ಕೆ ಹಿಂದಿನ ವರ್ಷಗಳಿಂದ ಬರಬೇಕಾದ ಬಾಕಿ ಸ್ವೀಕೃತಿಗಳನ್ನು ಖಚಿತಪಡಿಸಿಕೊಳ್ಳಲು ಸಾಧ್ಯವಾಗಿಲ್ಲ ಎಂದು ಲೆಕ್ಕ ಪರಿಶೋಧನೆ ವರದಿಯಲ್ಲಿ ವಿವರಿಸಲಾಗಿದೆ.
ರಾಮನಗರದ ಅರ್ಚಕರಹಳ್ಳಿಯಲ್ಲಿ ವಿಶ್ವವಿದ್ಯಾನಿಲಯ ಕಟ್ಟಡ ಕಾಮಗಾರಿಗಳಿಗಾಗಿ ಟೆಂಡರ್ ಪೂರ್ವ ಪರಿಶೀಲನಾ ಸಮಿತಿಯು ನೀಡಿದ್ದ ಶಿಫಾರಸನ್ನು ಬದಿಗೊತ್ತಿದ್ದ ವಿಶ್ವವಿದ್ಯಾನಿಲಯವು 400 ಕೋಟಿ ರೂ. ವೆಚ್ಚ ಮಾಡಿತ್ತು. ಇದು ಫಲಪ್ರದವಲ್ಲದ ವೆಚ್ಚ ಎಂದು ಲೆಕ್ಕ ಪರಿಶೋಧಕರು ವರದಿಯಲ್ಲಿ ಉಲ್ಲೇಖಿಸಿದ್ದರು.
ಅದೇ ರೀತಿ ವಿಶ್ವವಿದ್ಯಾನಿಲಯವು ಭೌತಿಕ ಆಸ್ತಿಗಳ ವಿವರಗಳನ್ನೇ ಲೆಕ್ಕ ಪರಿಶೋಧಕರಿಗೆ ಒದಗಿಸಿರಲಿಲ್ಲ.
2023-24ನೇ ಸಾಲಿನಲ್ಲಿ ಕೆಲವೊಂದು ವಹಿವಾಟು ಶೀರ್ಷಿಕೆಯ ಮೊತ್ತವು ವೆಚ್ಚವಾಗಿರುವುದಿಲ್ಲ. ಹೀಗಾಗಿ ವಹಿವಾಟು ಶೀರ್ಷಿಕೆಗಳಿಗೆ ಪರಿಷ್ಕೃತ ಅಂದಾಜು ಪಟ್ಟಿ ತಯಾರಿಸುವಾಗ ಕನಿಷ್ಠ ಅನುದಾನವನ್ನು ನಿಗದಿಪಡಿಸಿಕೊಂಡಿದೆ. ಅಲ್ಲದೇ 2023-24ನೇ ಸಾಲಿನಲ್ಲಿ ಕೆಲವೊಂದು ವಹಿವಾಟು ಶೀರ್ಷಿಕೆಗಳ ಆಯವ್ಯಯ ಅನುದಾನವನ್ನು ಅದೇ ತಿಂಗಳಲ್ಲಿ ವೆಚ್ಚ ಮಾಡಬೇಕಾಗಿತ್ತು. ಲೆಕ್ಕ ಶೀರ್ಷಿಕೆಗೆ ಅನುಗುಣವಾಗಿ ವಾಸ್ತವಿಕ ವೆಚ್ಚವು ವರ್ಗೀಕರಣಗೊಳಿಸಿಲ್ಲ ಎಂಬುದನ್ನು ಲೆಕ್ಕ ಪರಿಶೋಧನೆ ವರದಿಯು ಬಯಲು ಮಾಡಿದೆ.







