ಬಿಜೆಪಿ ಸರಕಾರದ ಅವಧಿಯಲ್ಲಿ ಸುತ್ತೋಲೆ ಉಲ್ಲಂಘಿಸಿ ಪುನರಾವರ್ತಿತ ಕಾಮಗಾರಿ

ಬೆಂಗಳೂರು: ಶುದ್ಧ ಕುಡಿಯುವ ನೀರು ಸೇರಿದಂತೆ ಪ್ರವಾಸೋದ್ಯಮ ಮೂಲಸೌಕರ್ಯ ಸೌಲಭ್ಯಗಳ ಅಭಿವೃದ್ಧಿಗಾಗಿಯೇ ಅನುದಾನವನ್ನು ನಿರ್ದಿಷ್ಟವಾಗಿ ಬಳಸಬೇಕು ಎಂದು ಹೊರಡಿಸಿದ್ದ ಸುತ್ತೋಲೆಯನ್ನು ಹಿಂದಿನ ಬಿಜೆಪಿ ಸರಕಾರವು ಉಲ್ಲಂಘಿಸಿರುವುದನ್ನು ಇಂಡಿಯನ್ ಆಡಿಟ್ ಮತ್ತು ಅಕೌಂಟೆಂಟ್ ಜನರಲ್ ಅವರು ಪತ್ತೆ ಹಚ್ಚಿದ್ದಾರೆ.
ಕೊಪ್ಪಳ ಜಿಲ್ಲೆಯ ಅಂಜನಾದ್ರಿ ಬೆಟ್ಟ ಮತ್ತು ಇದಕ್ಕೆ ಹೊಂದಿಕೊಂಡಿರುವ ಪ್ರವಾಸೋದ್ಯಮ ಸ್ಥಳಗಳಲ್ಲಿ ಮೂಲಸೌಕರ್ಯಗಳನ್ನು ಒದಗಿಸಲು ಕೋಟ್ಯಂತರ ರೂ. ಅನುದಾನ ಒದಗಿಸಿತ್ತು. ಈ ಮೊತ್ತದಲ್ಲಿ ಪುನರಾವರ್ತಿತ ಕಾಮಗಾರಿಗಳನ್ನು ನಡೆಸಿರುವುದನ್ನು ಲೆಕ್ಕ ಪರಿಶೋಧನೆ ವೇಳೆ ಬಯಲಾಗಿದೆ.
ಈ ಕುರಿತು ಇಂಡಿಯನ್ ಆಡಿಟ್ ಆಂಡ್ ಅಕೌಂಟೆಂಟ್ ಜನರಲ್ ಅವರು 2025ರ ಆಗಸ್ಟ್ 14ರಂದು ಪ್ರವಾಸೋದ್ಯಮ ಇಲಾಖೆಗೆ ಆಕ್ಷೇಪ ವ್ಯಕ್ತಪಡಿಸಿ ಪತ್ರ ಬರೆದಿದೆ.
ಈ ಪತ್ರದ ಪ್ರತಿಯು "the-file.in"ಗೆ ಲಭ್ಯವಾಗಿದೆ. ಇಂಡಿಯನ್ ಆಡಿಟ್ ಆಂಡ್ ಅಕೌಂಟೆಂಟ್ ಜನರಲ್ ಅವರು ಆಕ್ಷೇಪ ವ್ಯಕ್ತಪಡಿಸಿರುವ ಅವಧಿಯಲ್ಲಿ ಸಿ.ಟಿ.ರವಿ ಮತ್ತು ಆನಂದ್ ಸಿಂಗ್ ಅವರು ಪ್ರವಾಸೋದ್ಯಮ ಸಚಿವರಾಗಿ ಕಾರ್ಯನಿರ್ವಹಿಸಿದ್ದರು. ಈ ಪತ್ರದಲ್ಲಿ ವ್ಯಕ್ತಪಡಿಸಿರುವ ಆಕ್ಷೇಪಗಳ ಕುರಿತು ಸಚಿವ ಎಚ್.ಕೆ.ಪಾಟೀಲ್ ಅವರೊಂದಿಗೆ ಅಧಿಕಾರಿಗಳು ಚರ್ಚಿಸಿದ್ದಾರೆ ಎಂದು ಗೊತ್ತಾಗಿದೆ.
ಕುಡಿಯುವ ನೀರಿನ ಸೌಲಭ್ಯಕ್ಕಾಗಿ ಆರ್ಒ ಪ್ಲಾಂಟ್ ಒದಗಿಸುವುದು, ಸ್ನಾನಗೃಹಗಳು ಮತ್ತು ಶೌಚಾಲಯಗಳ ನಿರ್ಮಾಣ, ಪಾರ್ಕಿಂಗ್ ಸೌಲಭ್ಯ, ಪ್ರವಾಸಿ ಸೂಚನಾ ಫಲಕಗಳು, ಕುಳಿತುಕೊಳ್ಳುವ ಸೌಲಭ್ಯಗಳು, ಮೆಟ್ಟಿಲುಗಳು ಮತ್ತು ರೇಲಿಂಗ್ಗಳು, ಪ್ಯಾರಗೋಲಾ, ಪಾದಚಾರಿ ಮಾರ್ಗದ ನಿರ್ಮಾಣಕ್ಕೆ ಸಂಬಂಧಿಸಿದ ಕೆಲಸಗಳನ್ನು ಮಾತ್ರ ಒಳಗೊಂಡಿದೆ ಎಂದು ಪ್ರವಾಸೋದ್ಯಮ ಇಲಾಖೆಯು ಸ್ಪಷ್ಟವಾಗಿ ವ್ಯಾಖ್ಯಾನಿಸಿದೆ. ಈ ಸಂಬಂಧ ಸುತ್ತೋಲೆಯನ್ನೂ (NO.PRAEE/YO-1/12/2019-20 DATED 04-07-2019) ಹೊರಡಿಸಿತ್ತು. ಆದರೆ ಹಿಂದಿನ ಬಿಜೆಪಿ ಸರಕಾರದ ಅವಧಿಯಲ್ಲಿ ಈ ಸುತ್ತೋಲೆಯನ್ನು ಉಲ್ಲಂಘಿಸಲಾಗಿದೆ.
ನಿಯಮಬಾಹಿರವಾಗಿ 1 ಕೋಟಿ ರೂ. ಖರ್ಚು: ಕೊಪ್ಪಳದ ಆನೆಗುಂದಿಯಲ್ಲಿನ ಅಂಜನಾದ್ರಿ ಬೆಟ್ಟವನ್ನು ಪ್ರವಾಸೋದ್ಯಮ ತಾಣವನ್ನಾಗಿ ರೂಪಿಸಿ ಪ್ರವಾಸಿಗರನ್ನು ಆಕರ್ಷಿಸಲು ಇಲಾಖೆಯು ವಿವಿಧ ಯೋಜನೆಗಳನ್ನು ಹಮ್ಮಿಕೊಂಡಿತ್ತು. ವಿಶ್ರಾಂತ ತಂಗುದಾಣ, ಕಾಂಪೌಂಡ್, ಪ್ಲಾಟ್ಫಾರ್ಮ್ ಮತ್ತಿತರ ಮೂಲಸೌಕರ್ಯಗಳನ್ನು ಒದಗಿಸಲು 1 ಕೋಟಿ ರೂ. ಅನುದಾನವನ್ನು ಹಂಚಿಕೆ ಮಾಡಿತ್ತು.
ಪ್ರವಾಸೋದ್ಯಮ ಇಲಾಖೆಯು ಈ ಅನುದಾನವನ್ನು ಮೂಲಸೌಕರ್ಯ ಸೌಲಭ್ಯಗಳ ಅಭಿವೃದ್ಧಿಗಾಗಿಯೇ ಅನುದಾನವನ್ನು ಬಳಸಬೇಕಿತ್ತು. ಆದರೆ ಅನುಷ್ಠಾನ ಏಜೆನ್ಸಿಯು ಅಡುಗೆ ಮನೆ, ಊಟದ ಕೋಣೆಯನ್ನೂ ನಿರ್ಮಾಣ ಮಾಡಿದೆ. ಅನುಷ್ಠಾನ ಏಜೆನ್ಸಿಯು ಮಾಡಿರುವ ಈ ಕಾಮಗಾರಿಯನ್ನು ಒಪ್ಪಲು ಸಾಧ್ಯವಿಲ್ಲ. 2019ರಲ್ಲಿ ಹೊರಡಿಸಿದ್ದ ಸುತ್ತೋಲೆಯನ್ನು ಉಲ್ಲಂಘಿಸಲಾಗಿದೆ ಎಂದಿರುವ ಲೆಕ್ಕ ಪರಿಶೋಧಕರು ಇದು ನಿಯಮಬಾಹಿರವಾಗಿದೆ ಆಕ್ಷೇಪ ವ್ಯಕ್ತಪಡಿಸಿರುವುದು ಪತ್ರದಿಂದ ಗೊತ್ತಾಗಿದೆ. ಅದೇ ರೀತಿ 1 ಕೋಟಿ ರೂ. ವೆಚ್ಚದಲ್ಲಿ ಅಂಜನಾದ್ರಿ ಬೆಟ್ಟದಲ್ಲಿರುವ ಲಖಡಿ ಬಾಬಾ ದೇವಸ್ಥಾನದಲ್ಲಿ ಕಾಂಪೌಡ್, ಪಿಲ್ಲರ್ ಕಾಮಗಾರಿ (7ನೇ ಪ್ಲಾಟ್ಫಾರ್ಮ್ವರೆಗೂ) ಕೈಗೆತ್ತಿಕೊಳ್ಳಲು ಕ್ರಿಡಿಲ್ ಅಂದಾಜು ವೆಚ್ಚ ರೂಪಿಸಿತ್ತು. ಇದಕ್ಕೆ 2020ರ ಜನವರಿ 16ರಂದು ತಾಂತ್ರಿಕ ಅನುಮೋದನೆಯೂ ದೊರೆತಿತ್ತು. ಆದರೆ ಯೋಜನೆಗೆ ವಿರುದ್ಧವಾಗಿ ಭೋಜನ ಭವನವನ್ನು ನಿರ್ಮಾಣ ಮಾಡಿತ್ತು. ಇದನ್ನು ಒಪ್ಪಲು ಸಾಧ್ಯವಿಲ್ಲ ಎಂದು ಲೆಕ್ಕ ಪರಿಶೋಧಕರು ಆಕ್ಷೇಪ ವ್ಯಕ್ತಪಡಿಸಿರುವುದು ತಿಳಿದು ಬಂದಿದೆ.
ಅದೇ ರೀತಿ ಅನುಮೋದಿತ ಕಾಮಗಾರಿಗಳಲ್ಲಿ ಪರಿವೀಕ್ಷಣಾ ಮಂದಿರ ಮತ್ತು ವಿಶ್ರಾಂತಿ ತಂಗುದಾಣವೂ ಒಳಗೊಂಡಿತ್ತು. ಆದರೆ ಅಂದಾಜು ವೆಚ್ಚದಲ್ಲಿ ಈ ಕಾಮಗಾರಿಗಳಿಗೆ ಅವಕಾಶ ಮಾಡಿಕೊಂಡಿರಲಿಲ್ಲ. ಇದಕ್ಕೆ ವಿರುದ್ಧವಾಗಿ ಕಾಮಗಾರಿಗಳನ್ನು ನಡೆಸಿದೆ ಎಂದು ಪತ್ರದಲ್ಲಿ ವಿವರಿಸಿರುವುದು ಗೊತ್ತಾಗಿದೆ.
ಈ ಕಾಮಗಾರಿ ನಡೆಸಲು ಅಂದಾಜು ವೆಚ್ಚವನ್ನು ಒದಗಿಸಿಲ್ಲ ಮತ್ತು ಅಂದಾಜು ವೆಚ್ಚವನ್ನೂ ಸಿದ್ಧಪಡಿಸಿಲ್ಲ. ಬದಲಿಗೆ ಹಸ್ತಾಂತರ/ಸ್ವಾಧೀನದ ಆಧಾರದ ಮೇಲೆ ಅಂದಾಜುಗಳನ್ನು ಸಿದ್ಧಪಡಿಸಲಾಗಿದೆ ಅಥವಾ ಪುನರಾವರ್ತಿಸಲಾಗಿದೆ ಎಂದು ಲೆಕ್ಕ ಪರಿಶೋಧಕರು ಪತ್ರದಲ್ಲಿ ಅಭಿಪ್ರಾಯಪಟ್ಟಿರುವುದು ತಿಳಿದು ಬಂದಿದೆ.
ಆದರೂ ಈ ಕಾಮಗಾರಿಗಾಗಿ ಮಾಡಿದ್ದ ವೆಚ್ಚದಲ್ಲಿ ಶಾಸನಬದ್ಧ ಕಡಿತಗಳ ವಿವರಗಳನ್ನು ಲೆಕ್ಕ ಪರಿಶೋಧನೆಗೆ ಸಲ್ಲಿಸಿಲ್ಲ ಎಂದು ಪತ್ರದಲ್ಲಿ ಹೇಳಿದೆ. ಪ್ರವಾಸೋದ್ಯಮ ಇಲಾಖೆಯು ಈ ಕಾಮಗಾರಿಗೆ ಸಂಬಂಧಿಸಿ ಹಲವು ಮಾಹಿತಿಗಳನ್ನು ಲೆಕ್ಕ ಪರಿಶೋಧಕರಿಗೆ ಸಲ್ಲಿಸಿಲ್ಲ. ಹೀಗಾಗಿ ಶಾಸನಬದ್ಧ ಕಡಿತಗಳ ನಿಖರತೆ ಮತ್ತು ಸಂಬಂಧಪಟ್ಟ ಮೊತ್ತವು ಸರಕಾರಕ್ಕೆ ಪಾವತಿ ಆಗಿದೆಯೇ ಇಲ್ಲವೇ ಎಂಬುದನ್ನು ಲೆಕ್ಕಪರಿಶೋಧನೆಯು ಖಚಿತಪಡಿಸಿಕೊಂಡಿಲ್ಲ ಎಂದು ತಿಳಿದು ಬಂದಿದೆ.







