ಕರಾವಳಿ ಜಿಲ್ಲೆಗಳ ಅಭಿವೃದ್ಧಿಯ ರೂವಾರಿ ಯು. ಶ್ರೀನಿವಾಸ ಮಲ್ಯ
ಇಂದು ಯು.ಎಸ್. ಮಲ್ಯ ಜನ್ಮದಿನ

photo: facebook/GSB - Goud Saraswat Brahmin
ಮಹಾನ್ ದೇಶಪ್ರೇಮಿ, ಚತುರ ಸ್ವಾತಂತ್ರ್ಯ ಹೋರಾಟಗಾರ, ಧೀಮಂತ ರಾಜಕಾರಣಿ, ತುಳುನಾಡನ್ನು ಕೇಂದ್ರೀಕರಿಸಿ ಕೊಂಡು ಪಶ್ಚಿಮ ಕರಾವಳಿ ಜಿಲ್ಲೆಗಳ ನವನಿರ್ಮಾಣದ ಹರಿಕಾರ ಉಳ್ಳಾಲ ಶ್ರೀನಿವಾಸ ಮಲ್ಯರ ಹೆಸರು ಈ ನಾಡಿನ ಚರಿತ್ರೆಯಲ್ಲಿ ಚಿರಸ್ಥಾಯಿ.
ಅಸಾಧಾರಣ ಬುದ್ಧಿಮತ್ತೆ, ವ್ಯವಹಾರ ಕುಶಲತೆ ಹೊಂದಿರುವ ಕರಾವಳಿಯ ಸಾರಸ್ವತರು ಮತ್ತು ಗೌಡ ಸಾರಸ್ವತ ಬ್ರಾಹ್ಮಣ ಸಮುದಾಯದವರು ಈ ನಾಡಿನ ಶಿಕ್ಷಣ ಸಂಪರ್ಕ, ಪತ್ರಿಕೋದ್ಯಮ, ಉದ್ಯಮ, ವ್ಯವಹಾರ, ಧಾರ್ಮಿಕ ಮುಂತಾದ ಕ್ಷೇತ್ರಗಳಿಗೆ ಅನನ್ಯ ಕೊಡುಗೆಗಳನ್ನು ನೀಡಿರುವವರು. ಇಂತಹ ಗೌಡಸಾರಸ್ವತ ಪ್ರಮುಖರಲ್ಲೊಬ್ಬರಾದ ಯು. ಶ್ರೀನಿವಾಸ ಮಲ್ಯರು ತನ್ನ ಪ್ರಭಾವೀ ರಾಜಕೀಯ ಹುದ್ದೆಯ ಸಾಮರ್ಥ್ಯವನ್ನು ಸ್ವಂತ ಲಾಭಕ್ಕೋ, ಸ್ವಸಮಾಜದ ಹಿತಕ್ಕೋ ಬಳಸಿಕೊಳ್ಳದೆ ತಾಯ್ನಾಡಿನ ಸರ್ವತೋಮುಖ ಅಭಿವೃದ್ಧಿ ಪಥ ನಿರ್ಮಾಣಕ್ಕಾಗಿ ವಿನಿಯೋಗಿಸಿದವರು. ಸ್ವತಂತ್ರ ಭಾರತದ ಪ್ರಥಮ ಪ್ರಧಾನಿ ಪಂಡಿತ್ ಜವಾಹರಲಾಲ ನೆಹರೂ, ಚಕ್ರವರ್ತಿ ರಾಜಗೋಪಾಲಾಚಾರಿಯವರಿಂದ ಹಿಡಿದು ಎರಡನೇ ಪ್ರಧಾನಿ ಲಾಲ್ ಬಹಾದೂರ್ ಶಾಸ್ತ್ರಿಯವರೆಗೂ ಆಪ್ತವಲಯಲ್ಲಿದ್ದು ಅವರ ಮೆಚ್ಚುಗೆ ಗಳಿಸಿದವರು. ಪಶ್ಚಿಮ ಕರಾವಳಿ ಜಿಲ್ಲೆಗಳು ಮಾತ್ರವಲ್ಲ ಕರ್ನಾಟಕ ರಾಜ್ಯದ ಏಳಿಗೆಯ ಮುಖಾಂತರವೇ ರಾಷ್ಟ್ರದ ಉದ್ಧಾರ ಎಂದು ಟೊಂಕ ಕಟ್ಟಿದವರು. ಅವರ ಅಭಿವೃದ್ಧಿಪರ ಮಿಂಚಿನ ಸಾಧನೆಗಳು ಅವಿಭಜಿತ ದ.ಕ. ಜಿಲ್ಲೆಯ ಹೆಜ್ಜೆ ಹೆಜ್ಜೆಗಳಲ್ಲೂ ಸಾಕ್ಷಿ ನೀಡುತ್ತವೆ.
ಬಾಲ್ಯ, ಶಿಕ್ಷಣ, ಸ್ವಾತಂತ್ರ್ಯ ಚಳವಳಿ ಪಥ
1902ನೇ ಇಸವಿ ನವೆಂಬರ್ 21ರಂದು ಮಂಗಳೂರು ರಥಬೀದಿ ಸಮೀಪದ ಬಜಿಲಕೇರಿ ಗೌಡ ಸಾರಸ್ವತ ಕುಟುಂಬದಲ್ಲಿ ಮಲ್ಯರ ಜನನ. ತಾಯಿ ಸರಸ್ವತಿ ಬಾಯಿ, ತಂದೆ ಮಂಜುನಾಥ ಮಲ್ಯರು. ಯು.ಪಿ. ಮಲ್ಯ (ಇನ್ನೋರ್ವ ಹೆಸರಾಂತ ಕಾಂಗ್ರೆಸ್ ನಾಯಕರು), ಶ್ರೀನಿವಾಸ ಮಲ್ಯ ಮತ್ತು ಸುಬ್ರಾಯ ಮಲ್ಯರು ಸೇರಿ ಮೂವರು ಗಂಡು ಮಕ್ಕಳು, ಇಬ್ಬರು ಹೆಣ್ಣು ಮಕ್ಕಳ ಕುಟುಂಬ.
ಉಳ್ಳಾಲದಿಂದ ಮಲ್ಯರ ಕುಟುಂಬವು ಮಂಗಳೂರಿಗೆ ಬಂದು ವ್ಯಾಪಾರದ ಬಂಡಸಾಲೆ ನಡೆಸುತ್ತಿತ್ತು. ಬಾಲಕ ಶ್ರೀನಿವಾಸ ಮಲ್ಯರು ಕೆನರಾ ಪ್ರೌಢಶಾಲೆ ಹಾಗೂ ಸಂತ ಅಲೋಶಿಯಸ್ ಕಾಲೇಜಿನಲ್ಲಿ ಶಿಕ್ಷಣ ಪಡೆದರು. ಆ ವೇಳೆಗೆ ಗಾಂಧೀಜಿಯವರ ಸತ್ಯಾಗ್ರಹ ಚಳವಳಿ ರಾಷ್ಟ್ರವ್ಯಾಪಿಯಾಗಿ ಹರಡಿತ್ತು. ಆಗರ್ಭ ಶ್ರೀಮಂತರಾಗಿದ್ದ ಕಾರ್ನಾಡ್ ಸದಾಶಿವರಾಯರು, ದೇಶಸೇವೆಗಾಗಿ ತನ್ನ ಸರ್ವಸ್ವವನ್ನು ತ್ಯಾಗಮಾಡಿ ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಸ್ವಾತಂತ್ರ್ಯ ಸಂಗ್ರಾಮದ ಚುಕ್ಕಾಣಿ ಹಿಡಿದಿದ್ದರು.
1981ರಲ್ಲಿ ತೀವ್ರವಾಗಿ ವ್ಯಾಪಿಸಿದ ಸ್ವಾತಂತ್ರ್ಯ ಚಳವಳಿಗಳಿಗೆ ಕಾರ್ನಾಡ್ ಸದಾಶಿವರಾಯರ ಅನುಯಾಯಿಯಾಗಿ ಶ್ರೀನಿವಾಸ ಮಲ್ಯರು ಧುಮುಕಿದರು. ಕಾಲೇಜು ಶಿಕ್ಷಣಕ್ಕೆ ತಿಲಾಂಜಲಿಯಿತ್ತರು. 1930ರಲ್ಲಿ ಉಪ್ಪಿನ ಸತ್ಯಾಗ್ರಹದಲ್ಲಿ ಗಾಂಧೀಜಿಯವರ ಜತೆಗೂಡಿದರು. 1942ರ ಕ್ವಿಟ್ಇಂಡಿಯಾ ಚಳವಳಿಯಲ್ಲಿ ಸೆರೆಯಾಳಾಗಿ ಬ್ರಿಟಿಷ್ ಪೊಲೀಸರ ಲಾಠಿಯೇಟು ತಿಂದರು. ಮುಂಬೈ ನಗರದಲ್ಲಿ ಕಸ್ತೂರಿ ನಾಗೇಶ್ ಪೈ ಕುಟುಂಬದ ಕಪೂರ್ ಮಹಲ್ ಎಂಬ ಮನೆ ಮಲ್ಯರ ಅಡಗುದಾಣವಾಗಿತ್ತು. ಜೈಲಿನಲ್ಲಿರುವಾಗ ಕಾಮರಾಜ ಮಾಡಾರ್, ಪಿ.ಸುಬ್ರಹ್ಮಣ್ಯ, ಡಾ. ವೆಂಕಟರಾಮನ್ ಮತ್ತಿತರರು ಸೆರೆವಾಸದ ವೇಳೆ ಮಲ್ಯರ ಸಹವರ್ತಿಗಳಾಗಿದ್ದರು.
1920-22 ಕಾಲದಿಂದಲೇ ಶ್ರೀನಿವಾಸ ಮಲ್ಯರು ಗಾಂಧೀಜಿಯವರ ಕರೆಯಂತೆ ಖಾದಿಧಾರಣೆಗೆ ತೊಡಗಿದ್ದರು. ಸ್ಥಳೀಯ ಮತ್ತು ಪ್ರಾಂತೀಯ ಸಂಘಟನೆಯಲ್ಲಿ ಸಕ್ರಿಯರಾದರು. ಕ್ವಿಟ್ ಇಂಡಿಯಾ ಚಳವಳಿ, ವೈಯಕ್ತಿಕ ಸತ್ಯಾಗ್ರಹ ಹೀಗೆ ರಾಷ್ಟ್ರೀಯ ಆಂದೋಲನದಲ್ಲಿ ಪೂರ್ಣವಾಗಿ ತನ್ನನ್ನು ತೊಡಗಿಸಿಕೊಂಡರು. ಈ ನಡುವೆ ಮನೆತನದ ಕರೆಗೂ ಓಗೊಟ್ಟು ಬಂಟ್ವಾಳದ ಸಾಹುಕಾರ್ ದಾಮೋದರ ಪ್ರಭುಗಳ ಮಗಳಾದ ಇಂದಿರಾ ಬಾಯಿಯವರನ್ನು ವಿವಾಹವಾದರು. ಮದುವೆಯ ನಂತರದಲ್ಲೂ ಮಲ್ಯರು ಸಕ್ರಿಯರಾಗಿದ್ದುದು ಸ್ವಾತಂತ್ರ್ಯ ಚಳವಳಿಯಲ್ಲಿಯೇ. ಆಗ ರಾಷ್ಟ್ರೀಯ ಮಟ್ಟದಲ್ಲಿ ಚಳವಳಿಯ ನೇತೃತ್ವ ಹಿಡಿದಿದ್ದ ಕಾಂಗ್ರೆಸ್ ಪಕ್ಷದ ಪ್ರಾಂತೀಯ ಸಮ್ಮೇಳನ ಮಂಗಳೂರಿನಲ್ಲಿ ಜರುಗುವಲ್ಲಿಯೂ ಪ್ರಮುಖ ಪಾತ್ರವಹಿಸಿದ್ದರು.
ರಾಷ್ಟ್ರ ರಾಜಕಾರಣ
1946ರಲ್ಲಿ ಭಾರತ ಸ್ವತಂತ್ರಗೊಳ್ಳುವ ಪೂರ್ವಭಾವಿಯಾಗಿ ಏರ್ಪಟ್ಟ ನಡುಗಾಲದ ಸರಕಾರ ಹಾಗೂ ಸಂವಿಧಾನ ರಚನಾ ಮಂಡಳಿಯ ಸದಸ್ಯರಾಗಿ ಮಲ್ಯರು ಆಯ್ಕೆಗೊಂಡರು. 1947ರಲ್ಲಿ ರಾಷ್ಟ್ರ ಸ್ವಾತಂತ್ರ್ಯ ಗಳಿಸಿದಾಗ ದೇಶದ ಪ್ರಥಮ ಗೃಹಸಮಿತಿಯ ಸದಸ್ಯರಾದರು. ಪ್ರಧಾನಿ ನೆಹರೂ ಅವರು ಮಲ್ಯರನ್ನು ಕಾಂಗ್ರೆಸ್ ಪಕ್ಷದ ಪ್ರಧಾನ ಕಾರ್ಯದರ್ಶಿಯನ್ನಾಗಿ ಮಾಡಿದರು. ಬಳಿಕ ಪಕ್ಷದ ಮುಖ್ಯ ಸಚೇತಕರಾದರು.
ಮಾತು ಕಡಿಮೆ, ಹೆಚ್ಚು ದುಡಿಮೆ, ವ್ಯವಹಾರ ಕೌಶಲದ ಮಲ್ಯರು ಜಿಲ್ಲೆ, ರಾಜ್ಯದ ಗಡಿಯನ್ನು ಮೀರಿ ರಾಷ್ಟ್ರ ರಾಜಕಾರಣದ ನಿರ್ಣಾಯಕ ಸ್ಥಾನದ ಮುತ್ಸದ್ದಿತನಕ್ಕೆ ಏರುವಲ್ಲಿ ಕಮಲಾದೇವಿ ಚಟ್ಟೋಪಾಧ್ಯಾಯರಂತಹ ಹಲವು ಧುರೀಣರ ಬೆಂಬಲವೂ ಅವರಿಗಿದ್ದುದು ಪೂರಕವಾಗಿತ್ತು.
ಸ್ವಾತಂತ್ರ್ಯಾ ನಂತರ 1952, 1957 ಹಾಗೂ 1962ರಲ್ಲಿ ಜರುಗಿದ ಸಾರ್ವತ್ರಿಕ ಚುನಾವಣೆಗಳಲ್ಲಿ ದಿಲ್ಲಿಯಲ್ಲಿ ಕಾರ್ಯಮಗ್ನ ರಾಗಿದ್ದುಕೊಂಡೇ ಉಡುಪಿ ಲೋಕಸಭಾ ಕ್ಷೇತ್ರದಿಂದ ಮಲ್ಯರು ನಿರಂತರವಾಗಿ ಗೆದ್ದರು. ನೆಹರೂ ಸೇರಿದಂತೆ ಹಲವು ಕಾಂಗ್ರೆಸ್ ಮುಖಂಡರ ನಿಕಟವರ್ತಿಗಳಾಗಿದ್ದ ಮಲ್ಯರು ಕೇಂದ್ರ ಸಚಿವ ಸಂಪುಟದಲ್ಲಿ ಸೇರಲು ಬಂದ ಎಲ್ಲ ಆಹ್ವಾನಗಳನ್ನೂ ನಯವಾಗಿ ತಿರಸ್ಕರಿಸಿದರು. ಕೇಂದ್ರ ಸರಕಾರದ ಮುಖ್ಯ ಸಚೇತಕರಾಗಿದ್ದುಕೊಂಡು ದಕ್ಷಿಣ ಕನ್ನಡ ಜಿಲ್ಲೆಯ ಅಭಿವೃದ್ಧಿಗೆ ಕಾಲಮಿತಿಯ ಹಲವು ಯೋಜನೆಗಳನ್ನು ರೂಪಿಸಿ, ಅವುಗಳ ಅನುಷ್ಠಾನಕ್ಕಾಗಿ ಪಣತೊಟ್ಟರು.
ಕೇವಲ ಐದಾರು ದಶಕಗಳ ಹಿಂದೆ ಮಂಗಳೂರಿನ ಕಾರವಾರಕ್ಕೆ ಹೋಗಲು 15-16 ಹೊಳೆಗಳು ದಾರಿಗಡ್ಡವಿದ್ದವು. ಹೊಳೆಗಳ ಇಬ್ಬದಿ ಫೆರಿದೋಣಿಗಳಿಗಾಗಿ ಕಾದಿರಬೇಕಾಗುತ್ತಿತ್ತು. ಮಂಗಳೂರಿನಿಂದ ಕುಂದಾಪುರ ತಲುಪಲು ಕರಾವಳಿ ತೀರದಲ್ಲಾದರೆ 5-6 ಹೊಳೆಗಳಿದ್ದವು. 9ರಿಂದ 10 ಗಂಟೆಗಳಷ್ಟು ಕಾಲ ವ್ಯಯವಾಗುತ್ತಿತ್ತು. ಸೇತುವೆಗಳಿರಲಿಲ್ಲ. ಇಂದು ಅದೇ ದೂರವನ್ನು ಬರೀ ಒಂದೂವರೆ ಗಂಟೆಯಲ್ಲಿ ತಲುಪುವ ವ್ಯವಸ್ಥೆ ರೂಪುಗೊಳ್ಳಲು ಮಲ್ಯರ ದೂರದೃಷ್ಟಿಯ ಕಾರ್ಯಕ್ಷಮತೆ ಕಾರಣವಾಯಿತು. ಸೇತುವೆಗಳ ನಿರ್ಮಾಣ, ಹೆದ್ದಾರಿ ನಿರ್ಮಾಣದಂತಹ ಯೋಜನೆಗಳನ್ನು ರೂಪಿಸಿ ಸಾರಿಗೆ ಸಂಪರ್ಕ ಸುಲಲಿತಗೊಳಿಸಿದ ಹರಿಕಾರ ಮಲ್ಯರು. ರಾಷ್ಟ್ರದ ಮೊದಲ ಹಾಗೂ ಎರಡನೆಯ ಪಂಚವಾರ್ಷಿಕ ಯೋಜನೆಗಳ ಕಾಲದಲ್ಲಿ ಕರಾವಳಿ ಜಿಲ್ಲೆಗಳಲ್ಲಿ ನಭೂತೋ ನ ಭವಿಷ್ಯತಿ ಎಂಬಂತಹ ಮಹತ್ವದ ಯೋಜನೆಗಳ ಜಾರಿ, ಧನವಿನಿಯೋಗದ ಹಿಂದೆ ಮಲ್ಯರ ರಾಜಕೀಯ ಸ್ಥಾನಮಾನಗಳ ಪ್ರಭಾವ ಮತ್ತು ಮುತ್ಸದ್ದಿತನ ಕಾರಣವಾಯಿತು.
ಸಿಮೆಂಟ್ ಪೂರೈಕೆ ಕೊರತೆಯಿಂದ ಉಳ್ಳಾಲ ಸೇತುವೆ ನಿರ್ಮಾಣ ಕಾರ್ಯಸ್ಥಗಿತಗೊಂಡಾಗ ವಿತ್ತಖಾತೆಯ ಕಾರ್ಯದರ್ಶಿಯನ್ನು ಸ್ವತಃ ಭೇಟಿ ಮಾಡಿ, ತ್ವರಿತವಾಗಿ ಅವಶ್ಯ ಸಿಮೆಂಟ್ ಚೀಲಗಳ ಒದಗಣೆಯ ಮೂಲಕ ನಿಗದಿತ ವೇಳೆಯಲ್ಲಿ ಕಾಮಗಾರಿ ಪೂರ್ಣಗೊಳ್ಳುವ ವ್ಯವಸ್ಥೆ, ಮಂಗಳೂರು ಪ್ರವಾಸಿ ಮಂದಿರದಲ್ಲಿ ಜನಸಾಮಾನ್ಯರು ಬಂದು ಕುಳಿತುಕೊಳ್ಳಲು ಬೇಕಾದ ಆಸನ ವ್ಯವಸ್ಥೆಯಂತಹ ತಳಮಟ್ಟದ ಸಮರ್ಪಕತೆಯತ್ತಲೂ ತೀವ್ರ ನಿಗಾ ವಹಿಸುತ್ತಿದ್ದವರು ಮಲ್ಯರು.
1964ರಲ್ಲಿ ಪ್ರಧಾನಿ ನೆಹರೂ ವಿಧಿವಶರಾದಾಗ ಶ್ರೀನಿವಾಸ ಮಲ್ಯರ ನೇತೃತ್ವದಲ್ಲಿ ಪಕ್ಷದ ಸಿಂಡಿಕೇಟ್ ಕೂಟ ಸಭೆ ಸೇರಿತು. ಅಂದಿನ ಕಾಂಗ್ರೆಸ್ ಅಧ್ಯಕ್ಷ ಕಾಮರಾಜ ನಾಡಾರ್, ಆಂಧ್ರಪ್ರದೇಶದ ಸಂಜೀವ ರೆಡ್ಡಿ, ಬಂಗಾಲದ ಅತುಲ್ಯ ಘೋಷ್, ಕರ್ನಾಟಕದ (ಪ್ರಥಮ ಮುಖ್ಯಮಂತ್ರಿ) ನಿಜಲಿಂಗಪ್ಪ ಹಾಗೂ ಮಲ್ಯರ ಈ ಕೂಟ ಮುಂದಿನ ಪ್ರಧಾನಿಯಾಗಿ ಲಾಲ್ ಬಹದ್ದೂರ್ ಶಾಸ್ತ್ರಿ ಅವರನ್ನು ಪಂಥ ಪ್ರಧಾನ ಮತ್ತು ಪ್ರಧಾನ ಮಂತ್ರಿಯಾಗಿ ಆಯ್ಕೆಗೆ ವೇದಿಕೆ ನಿರ್ಮಿಸಿತು. ನೆಹರೂ ಸಂಪುಟದಲ್ಲಿ ಇಂದಿರಾಗಾಂಧಿಯವರು ಸಂಸ್ಕೃತಿ ಸಚಿವೆಯಾಗಿ ಸಂಪುಟ ಸೇರ್ಪಡೆಯಲ್ಲೂ ಸೂತ್ರದಾರಿಕೆ ಶ್ರೀನಿವಾಸ ಮಲ್ಯರದೇ.
ಹೀಗೆ ಒಂದೆಡೆ ರಾಷ್ಟ್ರ ರಾಜಕಾರಣದಲ್ಲಿ ನಿರ್ಣಾಯಕ ಹೊಣೆಗಳ ನಿರ್ವಹಣೆ ಇನ್ನೊಂದೆಡೆ ಕರ್ನಾಟಕ ಅದರಲ್ಲೂ ಮುಖ್ಯವಾಗಿ ದ.ಕ. ಜಿಲ್ಲೆಯ ಸರ್ವಾಂಗೀಣ ಅಭಿವೃದ್ಧಿ ಯೋಜನೆಗಳ ಅನುಷ್ಠಾನದಲ್ಲಿ ನಿರಂತರ ಶ್ರಮಿಸಿದ ಈ ನೇತಾರನ ಷಷ್ಠ್ಯಬ್ದ ಶಾಂತಿ ಸಂದರ್ಭವನ್ನು ಜಿಲ್ಲೆಯ ಅಭಿಮಾನಿಗಳು ಅಭಿನಂದನ ಸಮಾರಂಭವಾಗಿ ರೂಪಿಸಿದ್ದೂ ಹರ ಸಾಹಸದಿಂದಲೇ. ಅದನ್ನು ಒತ್ತಾಯದ ಮೇರೆಗೆ ಮಲ್ಯರು ‘‘ಸಮಾರಂಭದ ವೇಳೆ ಭಾಷಣ ಮಾಡಲು ಹೇಳಬೇಡಿ, ಕೆಲಸವಿದ್ದರೆ ಹೇಳಿ’’ ಎಂದು ಒಪ್ಪಿಕೊಂಡರು
ಅಂದಿನ ಸಮಾರಂಭದಲ್ಲಿ ಟಿ.ಎ.ಪೈ, ಕೆ.ಕೆ.ಶೆಟ್ಟಿ, ನಾಗಪ್ಪ ಆಳ್ವ, ಎಸ್.ಡಿ. ಧರ್ಮಸಾಮ್ರಾಜ್ಯ ಮತ್ತಿತರ ಗಣ್ಯರು ಭಾಗವಹಿಸಿದರು. ಮಲ್ಯರಿಗೆ ಅಭಿನಂದನಾಪತ್ರ ಸಲ್ಲಿಸಲಾಯಿತು. ಜನಸ್ತೋಮವು ಮಲ್ಯರನ್ನು ‘ಕೆನರಾ ಜಿಲ್ಲೆಯ ಶಿಲ್ಪಿ’ ಎಂಬುದಾಗಿ ಕೊಂಡಾಡಿತು.
ಶ್ರೀನಿವಾಸ ಮಲ್ಯ ಇಂದಿರಾ ಬಾಯಿ ದಂಪತಿಗೆ ಸಂತಾನ ಭಾಗ್ಯವಿರಲಿಲ್ಲ. ಷಷ್ಠ್ಯಬ್ದ ಸಂದರ್ಭದಲ್ಲಿ ಮಂಗಳೂರಿನ ರಥಬೀದಿ ಸಮೀಪದ ಅವರ ಸಹೋದರನ ಮನೆಯ ಬಳಿ ಸಂತಾನ ಸಂಕೇತವಾಗಿ ಅಶ್ವತ್ಥದ ಸಸಿಯೊಂದನ್ನು ಮಲ್ಯರು ನೆಟ್ಟರು. ಅದು ಮುಂದೆ ಹೆಮ್ಮರವಾಗಿ ಬೆಳೆದು ಮಲ್ಯರ ಪ್ರತಿನಿಧಿ ಎಂಬಂತೆ ಇಂದಿಗೂ ನೆಳಲಾಶ್ರಯ ನೀಡುತ್ತಿದೆ.
ಕೊನೆಯ ದಿನಗಳು
ಇಂತಹ ಮಹಾನ್ ವ್ಯಕ್ತಿ ಶ್ರೀನಿವಾಸ ಮಲ್ಯರು 1965ರ ಡಿಸೆಂಬರ್ 19ರಂದು ಬೆಳಗ್ಗೆ ದಿಲ್ಲಿಯಿಂದ ಬೆಂಗಳೂರಿನ ಕಾಂಗ್ರೆಸ್ ಸಂಸದೀಯ ಮಂಡಳಿ ಸಭೆ; ಬಳಿಕ ಮಂಗಳೂರಿಗೆ ಹೋಗುವ ಉದ್ದೇಶದಿಂದ ಹೊರಟವರು ಕಾರಿನಲ್ಲಿಯೇ ಬೆಳಗ್ಗಿನ 7:45ಕ್ಕೆ ಹೃದಯಾಘಾತದಿಂದ ಅಸುನೀಗಿದರು.
ಈ ವಾರ್ತೆ ತಲುಪುತ್ತಲೇ ಆಗ ಉತ್ತರ ಪ್ರದೇಶದಲ್ಲಿದ್ದ ಪ್ರಧಾನಿ ಶಾಸ್ತ್ರಿಯವರು ದಿಲ್ಲಿಗೆ ಧಾವಿಸಿ ಬಂದರು. ಭಾರತದ ಪ್ರಧಾನಿಗೆ ರಶ್ಯ ಸರಕಾರವು ಉಡುಗೊರೆಯಾಗಿ ನೀಡಿದ್ದ ಇಲ್ಯೂಶನ್ ಜೆಟ್ ಪವನ್ ಹಂಸ ಎನ್ನುವ ವಿಶೇಷ ವಿಮಾನದಲ್ಲಿ ಮಲ್ಯರ ಪಾರ್ಥಿವ ಶರೀರವನ್ನು ಮಂಗಳೂರಿಗೆ ಕಳುಹಿಸಿಕೊಡಲಾಯಿತು. ಅದು ಭಾರತ-ಪಾಕ್ ಯುದ್ಧ ಕಾಲವಾಗಿದ್ದುದರಿಂದ ಬ್ಲ್ಯಾಕ್ಔಟ್ ಜಾರಿಯಿತ್ತು. ಪಾರ್ಥಿವ ಶರೀರವನ್ನು ನೆಹರೂ ಮೈದಾನದ ಪೆವಿಲಿಯನ್ನಲ್ಲಿ ಸ್ವಲ್ಪಹೊತ್ತು ಸಾರ್ವಜನಿಕ ವೀಕ್ಷಣೆಗೆ ಇರಿಸಿ, ಬಳಿಕ ಮಲ್ಯರ ತಮ್ಮ ಸುಬ್ರಾಯ ಮಲ್ಯರ ಮನೆಗೆ ಕೊಂಡೊಯ್ಯಲಾಯಿತು. ಅಂತಿಮ ಯಾತ್ರೆಯ ಬಳಿಕ ಅವರ ಅಣ್ಣ ಯು.ಪಿ. ಮಲ್ಯರ ಪುತ್ರ ಯು. ಪ್ರಭಾಕರ ಮಲ್ಯರಿಂದ ಅಗ್ನಿಸ್ಪರ್ಶದೊಂದಿಗೆ ಮಹಾನ್ ಚೇತನ ಪಂಚಭೂತಗಳಲ್ಲಿ ಲೀನವಾದರು.
ರಾಜಕೀಯದಲ್ಲೂ, ಸಾರ್ವಜನಿಕ ಕ್ಷೇತ್ರದಲ್ಲೂ ಮಲ್ಯರ ಜತೆಗೂಡಿ ದುಡಿದವರು ಅನೇಕರು. ಕಮಲಾದೇವಿ ಚಟ್ಟೋಪಾಧ್ಯಾಯ, ಕೆ.ಕೆ.ಶೆಟ್ಟಿ, ಎನ್.ಎಸ್.ಕಿಲ್ಲೆ, ನಾಗಪ್ಪ ಆಳ್ವ, ಕುಡ್ಪಿ ಶ್ರೀನಿವಾಸ ಶೆಟ್ಟಿ, ಪಂಚಮಾಲ್ ನರಸಿಂಗರಾವ್, ವಿ.ಎಸ್.ಕುಡ್ವ, ಹುಂಡಿ ವಿಷ್ಣು ಕಾಮತ್, ಬ್ಯಾರಿಸ್ಟರ್ ನಾಥ ಪೈ, ಕೆ.ಎಸ್. ಹೆಗ್ಡೆ, ಎಸ್. ನಿಜಲಿಂಗಪ್ಪ, ಬಸ್ತಿ ಮಾಧವ ಶೆಣೈ, ಮಾರಪ್ಪ ಪಕ್ಕಳ, ಪಾಂಗಾಳ ನಾಯಕ್ ಸೋದರರು ಹಾಗೂ ಇನ್ನೂ ಅನೇಕರು.
ಯು. ಶ್ರೀನಿವಾಸ ಮಲ್ಯರ ಶಾಶ್ವತ ನೆನಪಿಗಾಗಿ ನವಮಂಗಳೂರು ಬಂದರೆದುರು ಪದುವಾ ಹೈಸ್ಕೂಲು ಮುಂಭಾಗದಲ್ಲಿ ಮುಂತಾದೆಡೆ ಅವರ ಪ್ರತಿಮೆಗಳಿವೆ. ಸುರತ್ಕಲ್ ಎನ್.ಐ.ಟಿ.ಕೆ ಸ್ಮಾರಕ ಭವನ ಮುಂತಾದವು ನಿರ್ಮಾಣಗೊಂಡಿವೆ. 2002ರಲ್ಲಿ ಮಲ್ಯ ಶತಮಾನೋತ್ಸವವನ್ನು ದ.ಕ.ಜಿಲ್ಲಾಡಳಿತದ ನೇತೃತ್ವದಲ್ಲಿ ಅದ್ದೂರಿಯಾಗಿ ಆಚರಿಸುವ ಮೂಲಕ ಆ ಮಹಾನ್ ಚೇತನಕ್ಕೆ ಗೌರವ ಸಲ್ಲಿಸಲಾಯಿತು. 2018ರಲ್ಲಿ ನಗರದ ಪ್ರಮುಖ ರಸ್ತೆಯೊಂದಕ್ಕೆ ಯು. ಶ್ರೀನಿವಾಸ ಮಲ್ಯ ರಸ್ತೆ ಎಂಬುದಾಗಿ ನಾಮಕರಣ ಮಾಡಿ ಪಡೀಲ್ನಲ್ಲಿ ವೃತ್ತ ನಿರ್ಮಿಸಲಾಗಿದೆ.