ವಿಶೇಷಚೇತನರ ಬದುಕಿಗೆ ಆಸರೆಯಾದ ಸಮರ್ಥನಂ ಸಂಸ್ಥೆ

ಮೈಸೂರು: ದೃಷ್ಟಿ ಹೀನರು, ವಿಶೇಷಚೇತನರು ಮತ್ತು ಆರ್ಥಿಕವಾಗಿ ಹಿಂದುಳಿದ ವಿದ್ಯಾರ್ಥಿಗಳು ಮತ್ತು ಅವಕಾಶ ವಂಚಿತರ ಸಬಲೀಕರಣಕ್ಕಾಗಿ ಗುಣಮಟ್ಟದ ಶಿಕ್ಷಣ, ವಸತಿ, ಪೌಷ್ಟಿಕ ಆಹಾರ, ವೃತ್ತಿಪರ ತರಬೇತಿ, ಉದ್ಯೋಗಾವಕಾಶ ಮತ್ತು ಪುನರ್ವಸತೀಕರಣದ ಸೌಲಭ್ಯಗಳನ್ನು ಒದಗಿಸಲು 1997 ರಲ್ಲಿ ಸ್ಥಾಪನೆಯಾದ ಸಮರ್ಥನಂ ಅಂಗವಿಕಲರ ಕಲ್ಯಾಣಕ್ಕೆ ಶ್ರಮಿಸುತ್ತಿರುವ ಒಂದು ಸಾಮಾಜಿಕ ಕಳಕಳಿಯ ಸಂಸ್ಥೆಯಾಗಿ ಗಮನ ಸೆಳೆದಿದೆ.
ವಿಶೇಷಚೇತನರ ಶೈಕ್ಷಣಿಕ ಅಭಿವೃದ್ಧಿಯ ಜತೆ ಅವರಿಗೆ ಕ್ರೀಡೆ ಮತ್ತು ಸಾಂಸ್ಕೃತಿಕ ಚಟುವಟಿಕೆಗಳನ್ನು ನೀಡುವ ಮೂಲಕ ಅವರ ಸಮಗ್ರ ಅಭಿವೃದ್ಧಿಗಾಗಿ ಕಾರ್ಯನಿರ್ವಹಿಸುತ್ತಿದೆ.
ಡಾ.ಮಹಾಂತೇಶ್ ಜಿ.ಕೆ. ಮತ್ತು ಅವರ ಸ್ನೇಹಿತರು ಸ್ಥಾಪಿಸಿದ ಸಂಸ್ಥೆಯು ಇಂದು ಅಂತರ್ರಾಷ್ಟ್ರೀಯ ಪುನರ್ವಸತಿ ಕೇಂದ್ರ ಮತ್ತು ವಿಶ್ವ ಅಂಧರ ಒಕ್ಕೂಟದಿಂದ ಮಾನ್ಯತೆ ಪಡೆದಿದೆ. ಬೆಂಗಳೂರಿನ ಎಚ್ಎಸ್ಆರ್ ಬಡಾವಣೆಯಲ್ಲಿ ಕೇಂದ್ರ ಕಚೇರಿ ಹೊಂದಿದ್ದು, ಮೈಸೂರಿನಲ್ಲಿ ವಿಜಯನಗರ ಎರಡನೇ ಹಂತ ಹಾಗೂ ಚಾಮರಾಜ ಜೋಡಿ ರಸ್ತೆಯಲ್ಲಿಯೂ ಈ ಸಂಸ್ಥೆ ಕಾರ್ಯನಿರ್ವಹಿಸುವ ಮೂಲಕ ಈ ಭಾಗದ ವಿಕಲ ಚೇತನರಿಗೆ ಆಸರೆಯಾಗಿ ನಿಂತಿದೆ.
ವಿಶೇಷಚೇತನರು ಸಮಾಜದಲ್ಲಿ ಘನತೆ ಮತ್ತು ಗೌರವದಿಂದ ಬಾಳುವ ಹಾಗು ತಮ್ಮದೇ ಆದಂತಹ ಕೊಡುಗೆಯನ್ನು ನೀಡುವಲ್ಲಿ ಸಮರ್ಥರಾಗಬಲ್ಲ. ತಾರತಮ್ಯರಹಿತ ಸಮಗ್ರ ಸಮಾಜವನ್ನು ಸೃಷ್ಟಿಸುವುದು ಈ ಸಂಸ್ಥೆಯ ಗುರಿಯಾಗಿದೆ.
ಅಭಿವೃದ್ಧಿಪರ ಸಂಸ್ಥೆಗಳ ಸಹಾಯದಿಂದ ಶೈಕ್ಷಣಿಕ, ಸಾಮಾಜಿಕ, ಆರ್ಥಿಕ, ಸಾಂಸ್ಕೃತಿಕ ಮತ್ತು ತಾಂತ್ರಿಕ ಅಂಶಗಳ ಮೇಲೆ ಹೆಚ್ಚಿನ ಒತ್ತನ್ನು ನೀಡುವ ಮೂಲಕ ಅಂಧರ, ವಿಶೇಷಚೇತನರ ಮತ್ತು ಅವಕಾಶವಂಚಿತರನ್ನು ಸಶಕ್ತಗೊಳಿಸುವುದು ಸಹ ಈ ಸಂಸ್ಥೆಯ ಉದ್ದೇಶವಾಗಿದೆ.
ಮೈಸೂರಿನಲ್ಲಿ ವಿಶೇಷಚೇತನ ಮಕ್ಕಳ ಶಾಲೆ: 6ರಿಂದ 23 ವರ್ಷ ವಯೋಮಾನದ ಸೌಮ್ಯ ಹಾಗೂ ಸಾಧಾರಣ ಬುದ್ಧಿ ವಿಶೇಷಚೇತನರ ಮಕ್ಕಳ ವಿಶೇಷ ಶಾಲೆಯನ್ನು ವಿಜಯನಗರ ಎರಡನೇ ಹಂತದಲ್ಲಿ ಪ್ರಾರಂಭಿಸಲಾಗಿದೆ. ಇಲ್ಲಿ ವಿಶೇಷ ತರಬೇತಿ ಹೊಂದಿದ ಮತ್ತು ನುರಿತ ಶಿಕ್ಷಕರು ಇದ್ದು, ವಿದ್ಯಾರ್ಥಿಗಳಿಗೆ ಸೂಕ್ತ ತರಬೇತಿ ನೀಡುತ್ತಿದ್ದಾರೆ.
ಅಲ್ಲದೇ ಈ ಸಂಸ್ಥೆಯಲ್ಲಿ ದಾಖಲಾಗುತ್ತಿರುವ ಮಕ್ಕಳಿಗೆ ಸಮವಸ್ತ್ರ, ಪಠ್ಯ ಪುಸ್ತಕ, ನೋಟ್ ಬುಕ್, ಬ್ಯಾಗ್ ವಾಹನದ ಸೌಲಭ್ಯ ಜೊತೆಗೆ ಇನ್ನಿತರ ಸೌಲಭ್ಯಗಳನ್ನು ಉಚಿತವಾಗಿ ನೀಡುತ್ತಿದ್ದಾರೆ. ವಿಶೇಷವೆಂದರೆ ಈ ಶಾಲೆಯಲ್ಲಿ ಸಾಂಸ್ಕೃತಿಕ ಚಟುವಟಿಕೆಗೆ ಮತ್ತು ಕ್ರೀಡಾ ಚಟುವಟಿಕೆಗಳಿಗೆ ಆದ್ಯತೆ ನೀಡಲಾಗುತ್ತಿದೆ.
ಸ್ಪರ್ಧಾತ್ಮಕ ಪರೀಕ್ಷೆ ಪೂರ್ವ ತರಬೇತಿ: ಪದವಿ ಪೂರೈಸಿದ ವಿಶೇಷಚೇತನ ವಿದ್ಯಾರ್ಥಿಗಳು ಹಾಗೂ ವಿಶೇಷಚೇತನ ಪೋಷಕರ ಮಕ್ಕಳಿಗೆ ಸ್ಪರ್ಧಾತ್ಮಕ ಪರೀಕ್ಷೆ ಪೂರ್ವ ತರಬೇತಿಯನ್ನು ಅಕ್ಕ ಐಎಎಸ್ ಅಕಾಡಮಿ ಕೇಂದ್ರದಲ್ಲಿ ನೀಡುತ್ತಿದ್ದಾರೆ. ಕೇಂದ್ರ ಮತ್ತು ಕರ್ನಾಟಕ ಲೋಕಸೇವಾ ಆಯೋಗದ ಸ್ಪರ್ಧಾತ್ಮಕ ಪರೀಕ್ಷೆಯ ಉಚಿತ ತರಬೇತಿಯನ್ನು ನೀಡುತ್ತಿದ್ದಾರೆ. ಇದು ಸಂಪೂರ್ಣ ಉಚಿತವಾಗಿದ್ದು ಊಟ, ವಸತಿ ಹಾಗೂ ಸಾರಿಗೆ ಸೌಲಭ್ಯವನ್ನೂ ನೀಡಲಾಗುತ್ತಿದೆ.
ಉನ್ನತ ಶಿಕ್ಷಣ ವ್ಯಾಸಂಗ ಮಾಡುತ್ತಿರುವ ವಿಶೇಷಚೇತನ ವಿದ್ಯಾರ್ಥಿಗಳು ಹಾಗೂ ವಿಶೇಷಚೇತನ ಪೋಷಕರ ಮಕ್ಕಳಿಗೆ ವಿದ್ಯಾರ್ಥಿ ವೇತನವನ್ನು ಸಹ ಇಲ್ಲಿ ನೀಡಲಾಗುತ್ತಿದೆ. ದೇಶದಲ್ಲಿ ಒಟ್ಟು 10 ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ನೀಡುತ್ತಿದ್ದು, ಮೈಸೂರು ವಿಭಾಗದಲ್ಲಿ ಸುಮಾರು 500 ಕ್ಕೂ ಹೆಚ್ಚು ವಿದ್ಯಾರ್ಥಿ ವೇತನದ ಸೌಲಭ್ಯವನ್ನು ಪಡೆದುಕೊಂಡಿದ್ದಾರೆ.
ಹೊಸ ಆಲೋಚನೆಗಳನ್ನು ಕಂಡುಹಿಡಿಯಲು ಮಾರ್ಗದರ್ಶನ ಮತ್ತು ವಿದ್ಯಾರ್ಥಿಗಳಿಗೆ ಸೃಜನಾತ್ಮಕವಾಗಿ ಯೋಚಿಸಲು, ತಂತ್ರಗಳನ್ನು ಅಭಿವೃದ್ಧಿಪಡಿಸಲು ಮತ್ತು ಅವರ ಆಸಕ್ತಿಗಳನ್ನು ಅನ್ವೇಷಿಸಲು ವಿವಿಧ ಅವಕಾಶಗಳನ್ನು ನೀಡಲಾಗುತ್ತಿದೆ. ಇದಲ್ಲದೆ ಸಂಸ್ಥೆಯು ಪರಿಸರ, ಕ್ರೀಡೆ, ಆಹಾರ ಮತ್ತು ಪೌಷ್ಟಿಕತೆ, ಪುನರ್ವಸತಿ, ಸೇರಿದಂತೆ ವಿವಿಧ ಕಾರ್ಯಕ್ರಮಗಳ ಮೂಲಕ ವಿಶೇಷಚೇತನರು ಮತ್ತು ಆರ್ಥಿಕವಾಗಿ ಹಿಂದುಳಿದ ಕ್ಷೇಮಾಭಿವೃದ್ಧಿಗೆ ದುಡಿಯುತ್ತಿದೆ.