ದಕ್ಷಿಣ ಏಷ್ಯಾದಲ್ಲಿ ತಾಪಮಾನ ಇಷ್ಟೊಂದು ಏರಿಕೆಯಾಗುತ್ತಿರುವುದೇಕೆ?

ದಕ್ಷಿಣ ಏಷ್ಯಾವನ್ನು ವ್ಯಾಪಿಸುತ್ತಿರುವ ಶಾಖದ ಅಲೆಯು ತಾಪಮಾನವನ್ನು ಅಪಾಯಕಾರಿ ಗರಿಷ್ಠ ಮಟ್ಟಕ್ಕೆ ತಳ್ಳಿದ್ದು, ಇದು ಲಕ್ಷಾಂತರ ಜನರ ದೈನಂದಿನ ಜೀವನವನ್ನು ಅಸ್ತವ್ಯಸ್ತಗೊಳಿಸಿದೆ. ಭಾರತ, ಪಾಕಿಸ್ತಾನ ಮತ್ತು ಬಾಂಗ್ಲಾದೇಶ ಸೇರಿದಂತೆ ಹಲವು ದೇಶಗಳಲ್ಲಿ ಈ ಬಾರಿ ಸರಾಸರಿಗಿಂತ ಹೆಚ್ಚಿನ ತಾಪಮಾನ ದಾಖಲಾಗಿದೆ. ಕೆಲವು ಪ್ರದೇಶಗಳಲ್ಲಿ ಇದು 45-50 ಡಿಗ್ರಿ ಸೆಲ್ಸಿಯಸ್ (113-122 ಡಿಗ್ರಿ ಫ್ಯಾರನ್ಹೀಟ್) ಸಮೀಪಿಸುತ್ತಿವೆ ಅಥವಾ ಮೀರುತ್ತಿವೆ.
ಪಾಕಿಸ್ತಾನದಲ್ಲಿ ಮಂಗಳವಾರ ಕನಿಷ್ಠ 10 ಜನರು ಅಧಿಕ ಶಾಖದಿಂದಾಗುವ ತೊಂದರೆಗಳಿಂದ ಸಾವನ್ನಪ್ಪಿದ್ದಾರೆ ಎಂದು ಸ್ಥಳೀಯ ತುರ್ತು ಸೇವೆಗಳು ವರದಿ ಮಾಡಿವೆ. ಭಾರತದಲ್ಲಿಯೂ ಶಾಖಕ್ಕೆ ಸಂಬಂಧಿಸಿದ ಅನೇಕ ಸಾವುಗಳು ವರದಿಯಾಗಿವೆ. ದಕ್ಷಿಣ ಏಷ್ಯಾದ ಪೂರ್ವ-ಮಾನ್ಸೂನ್ ಬೇಸಿಗೆಯ ನಿಯಮಿತ ಲಕ್ಷಣವಾಗಿ ಶಾಖದ ಅಲೆಗಳು ಮಾರ್ಪಟ್ಟಿರುವುದರಿಂದ ಈ ಪ್ರದೇಶದಲ್ಲಿ ಇಂತಹ ಪರಿಸ್ಥಿತಿಗಳು ಸಂಪೂರ್ಣವಾಗಿ ಹೊಸದಲ್ಲ. ವಿಜ್ಞಾನಿಗಳು ಮತ್ತು ಹವಾಮಾನ ಸಂಸ್ಥೆಗಳು ಇತ್ತೀಚಿನ ಶಾಖದ ತೀವ್ರತೆ, ಅವಧಿ ಮತ್ತು ಭೌಗೋಳಿಕ ಹರಡುವಿಕೆ ಸಿಕ್ಕಾಪಟ್ಟೆ ಹೆಚ್ಚಿದೆ ಎಂದು ಹೇಳಿದ್ದಾರೆ.
►ವರ್ಷದ ಆರಂಭದಲ್ಲೇ ಶಾಖದ ಅಲೆಗಳು ಏಕೆ ಉಂಟಾಗುತ್ತಿವೆ?
ಭಾರತವು "ಅಸಾಮಾನ್ಯ ರೀತಿಯಲ್ಲಿ ಈಗ ಆರಂಭಿಕ ಮತ್ತು ತೀವ್ರವಾದ ಶಾಖದ ಅಲೆಯನ್ನು ಅನುಭವಿಸುತ್ತಿದೆ" ಎಂದು ಅಲ್ ಜಜೀರಾ ಜತೆ ಮಾತನಾಡಿದ ಭಾರತದ ಭಾರತಿ ಇನ್ಸ್ಟಿಟ್ಯೂಟ್ ಆಫ್ ಪಬ್ಲಿಕ್ ಪಾಲಿಸಿ ಥಿಂಕ್ ಟ್ಯಾಂಕ್ನ ಸಂಶೋಧನಾ ನಿರ್ದೇಶಕ ಅಂಜಲ್ ಪ್ರಕಾಶ್ ಹೇಳಿದ್ದಾರೆ. ಅಧಿಕ ಒತ್ತಡದ ವ್ಯವಸ್ಥೆಗಳು ಪ್ರಾಬಲ್ಯ ಹೊಂದಿವೆ. ಇದು ಮೇಲ್ಮೈ ಬಳಿ ಬಿಸಿ ಗಾಳಿಯನ್ನು ಗುಮ್ಮಟದಂತೆ ಹಿಡಿದಿಟ್ಟುಕೊಳ್ಳುತ್ತವೆ. ಅದು ಏರುವುದನ್ನು ಮತ್ತು ತಣ್ಣಗಾಗುವುದನ್ನು ತಡೆಯುತ್ತದೆ. ಇದು ಗಾಳಿಯನ್ನು ಸಂಕುಚಿತಗೊಳಿಸುತ್ತದೆ. ಇದು ಮೋಡಗಳನ್ನು ತಡೆದು ನಿರಂತರ ಸೌರ ತಾಪನವನ್ನು ಅನುಮತಿಸುತ್ತದೆ.
ಹವಾಮಾನಕ್ಕೆ ಸಂಬಂಧಿಸಿದ ಹಲವಾರು ಅಂಶಗಳು ಸಹ ಇದಕ್ಕೆ ಕಾರಣ. ದುರ್ಬಲ ಪೂರ್ವ-ಮಾನ್ಸೂನ್ ಮಳೆಗಳು ಮತ್ತು ದೀರ್ಘಕಾಲೀನ ಎಲ್ ನಿನೊ ತರಹದ ಮಾದರಿಗಳು ತಂಪಾಗಿಸುವಿಕೆಯನ್ನು ಮತ್ತಷ್ಟು ತಡೆಯುತ್ತವೆ ಎಂದು ಅವರು ಹೇಳಿದ್ದಾರೆ.
ನಾಸಾ ಪ್ರಕಾರ, ಪೂರ್ವ ಪೆಸಿಫಿಕ್ನಲ್ಲಿ, ನಿರ್ದಿಷ್ಟವಾಗಿ ದಕ್ಷಿಣ ಅಮೆರಿಕಾದ ಪಶ್ಚಿಮ ಕರಾವಳಿಯ ಬಳಿ, ಸಮುದ್ರ ಮೇಲ್ಮೈ ತಾಪಮಾನವು ಸರಾಸರಿಗಿಂತ ಗಮನಾರ್ಹವಾಗಿ ಏರಿದಾಗ ಎಲ್ ನಿನೊ ಉಂಟಾಗುತ್ತದೆ. ಈ ತಾಪಮಾನ ಏರಿಕೆಯು ಸಾಮಾನ್ಯವಾಗಿ ಏಷ್ಯಾದ ಕಡೆಗೆ ಬೀಸುವ ಪೂರ್ವ ಮಾರುತಗಳ ದುರ್ಬಲಗೊಳ್ಳುವಿಕೆಯೊಂದಿಗೆ ಹೊಂದಿಕೆಯಾಗುತ್ತದೆ. ಇದಕ್ಕೆ ವಿರುದ್ಧವಾಗಿ, ಲಾ ನಿನಾ ಮಾದರಿಯು ಸಾಮಾನ್ಯಕ್ಕಿಂತ ತಂಪಾದ ನೀರಿನಿಂದ ನಿರೂಪಿಸಲ್ಪಟ್ಟಿದೆ. ಇದು ಸಾಮಾನ್ಯವಾಗಿ ಜಾಗತಿಕ ತಾಪಮಾನದ ಮೇಲೆ ಸ್ವಲ್ಪ ತಂಪಾಗಿಸುವ ಪ್ರಭಾವವನ್ನು ಬೀರುತ್ತದೆ.
ಮೇ ನಿಂದ ಜುಲೈವರೆಗಿನ ಅವಧಿಯಲ್ಲಿ ಎಲ್ ನಿನೊ ಪರಿಸ್ಥಿತಿಗಳು ಸಂಭಾವ್ಯವಾಗಿ ರೂಪುಗೊಳ್ಳಬಹುದು ಎಂದು ವಿಶ್ವ ಹವಾಮಾನ ಸಂಸ್ಥೆ ಹೇಳಿದೆ.
ಕಳೆದ ತಿಂಗಳು ವಿಶ್ವ ಹವಾಮಾನ ಸಂಸ್ಥೆಯ ಅಧಿಕಾರಿ ವಿಲ್ಫ್ರಾನ್ ಮೌಫೌಮಾ-ಓಕಿಯಾ, ವರ್ಷದ ಆರಂಭದಲ್ಲಿ ತಟಸ್ಥ ಪರಿಸ್ಥಿತಿಗಳ ಅವಧಿಯ ನಂತರ, ಎಲ್ ನಿನೊ ಹೊರಹೊಮ್ಮುವುದಲ್ಲದೆ ಬಲಗೊಳ್ಳುವುದನ್ನು ಮುಂದುವರಿಸುವ "ಹೆಚ್ಚಿನ ವಿಶ್ವಾಸ" ಇದೆ ಎಂದು ಎಚ್ಚರಿಸಿದ್ದರು.
ಹವಾಮಾನ ಬದಲಾವಣೆಯು ಎಲ್ ನಿನೊ ಘಟನೆಗಳ ಆವರ್ತನ ಅಥವಾ ತೀವ್ರತೆಯನ್ನು ಹೆಚ್ಚಿಸುತ್ತಿದೆ ಎಂಬುದಕ್ಕೆ ಯಾವುದೇ ಪುರಾವೆಗಳಿಲ್ಲದಿದ್ದರೂ, ಅದು ಅವುಗಳ ಪರಿಣಾಮವನ್ನು ಇನ್ನಷ್ಟು ಹದಗೆಡಿಸಬಹುದು ಎಂದು ವಿಶ್ವ ಹವಾಮಾನ ಸಂಸ್ಥೆ ಹೇಳಿದೆ.
►ಯಾವ ದೇಶಗಳಲ್ಲಿ ಶಾಖದ ಅಲೆಗಳು ಹೆಚ್ಚು ಪರಿಣಾಮ ಬೀರುತ್ತವೆ?
►ಭಾರತ
ಭಾರತ ಹವಾಮಾನ ಇಲಾಖೆ (IMD) ದೇಶದ ಹೆಚ್ಚಿನ ಭಾಗಗಳಲ್ಲಿ ಸರಾಸರಿಗಿಂತ ಹೆಚ್ಚಿನ ತಾಪಮಾನವನ್ನು ಮುನ್ಸೂಚನೆ ನೀಡಿದ್ದು, ಈ ತಿಂಗಳು ಪಶ್ಚಿಮ ಪ್ರದೇಶಗಳು ಮತ್ತು ಕರಾವಳಿಯಲ್ಲಿ ತೀವ್ರ ಶಾಖದ ಅಲೆಗಳ ಪರಿಸ್ಥಿತಿ ನಿರೀಕ್ಷಿಸಲಾಗಿದೆ ಎಂದು ಎಚ್ಚರಿಸಿದೆ. ಪೂರ್ವ ಕರಾವಳಿಯಲ್ಲಿ, ಹಿಮಾಲಯದ ತಪ್ಪಲಿನ ಕೆಲವು ಭಾಗಗಳಲ್ಲಿ ಮತ್ತು ಪಶ್ಚಿಮ ರಾಜ್ಯಗಳಾದ ಮಹಾರಾಷ್ಟ್ರ ಮತ್ತು ಗುಜರಾತ್ನಲ್ಲಿ ಸಾಮಾನ್ಯಕ್ಕಿಂತ ಹೆಚ್ಚಾಗಿ ಶಾಖದ ಅಲೆಗಳು ಬೀಸುವ ಸಾಧ್ಯತೆಯಿದೆ ಎಂದು ಅದು ಹೇಳಿದೆ.
ಮೇ ತಿಂಗಳಲ್ಲಿ ಸುಮಾರು ನಾಲ್ಕರಿಂದ ಐದು ದಿನಗಳಲ್ಲಿ ಪೂರ್ವ ಕರಾವಳಿ ರಾಜ್ಯಗಳು ಮತ್ತು ಗುಜರಾತ್ನಲ್ಲಿ ಶಾಖದ ಅಲೆಗಳ ಸಂಖ್ಯೆ ಹೆಚ್ಚಾಗುತ್ತದೆ. ಕೆಲವು ಪ್ರದೇಶಗಳಲ್ಲಿ ತಾಪಮಾನವು ಸಾಮಾನ್ಯಕ್ಕಿಂತ ಮೂರರಿಂದ ಐದು ಡಿಗ್ರಿ ಸೆಲ್ಸಿಯಸ್ (5.4 ರಿಂದ ಒಂಭತ್ತು ಡಿಗ್ರಿ ಫ್ಯಾರನ್ಹೀಟ್) ವರೆಗೆ ಹೆಚ್ಚಾಗಬಹುದು ಎಂದು ಐಎಂಡಿ ಮುಖ್ಯಸ್ಥ ಮೃತ್ಯುಂಜಯ್ ಮೊಹಾಪಾತ್ರ ಹೇಳಿದ್ದಾರೆ.
ವಾಯುವ್ಯ ಮತ್ತು ಮಧ್ಯ ಭಾರತದ ಕೆಲವು ಭಾಗಗಳಲ್ಲಿ, ಕೆಲವು ಪ್ರದೇಶಗಳಲ್ಲಿ ತಾಪಮಾನವು 46C (114.8F) ಮೀರಿದೆ. ಮಹಾರಾಷ್ಟ್ರದ ಅಕೋಲಾ ಮತ್ತು ಅಮರಾವತಿ ನಗರಗಳು ಎಪ್ರಿಲ್ 26 ರಂದು ಕ್ರಮವಾಗಿ 46.9C (116.4F) ಮತ್ತು 46.8C (116.2F) ತಾಪಮಾನವನ್ನು ದಾಖಲಿಸಿವೆ. ಎಪ್ರಿಲ್ 24 ರಂದು ವಿಶ್ವದ ಅತ್ಯಂತ ಹೆಚ್ಚು ತಾಪಮಾನ ವರದಿಯಾದ ನಗರಗಳಲ್ಲಿ 90 ಕ್ಕೂ ಹೆಚ್ಚು ನಗರಗಳು ಭಾರತದಲ್ಲಿವೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.
ತೀವ್ರವಾದ ಶಾಖದ ಪರಿಸ್ಥಿತಿಗಳು ಪ್ರಾರಂಭವಾದಾಗಿನಿಂದ ಹಲವಾರು ಸಾವುಗಳು ದಾಖಲಾಗಿವೆ. ಎಪ್ರಿಲ್ ಕೊನೆಯ ವಾರದಲ್ಲಿ ಇಬ್ಬರು ಶಾಲಾ ಶಿಕ್ಷಕರು ಶಾಖದ ಹೊಡೆತದಿಂದ ಸಾವನ್ನಪ್ಪಿದರು. ಪಶ್ಚಿಮ ಬಂಗಾಳದಲ್ಲಿ ಶಾಖದ ಅಲೆಯಿಂದ ನಾಲ್ವರು ಸಾವಿಗೀಡಾಗಿದ್ದಾರೆ.
►ಪಾಕಿಸ್ತಾನ
ಪಾಕಿಸ್ತಾನ ಕೂಡ ಶಾಖದ ಅಲೆಯ ಬಿಕ್ಕಟ್ಟನ್ನು ಎದುರಿಸುತ್ತಿದೆ. ಇದು ಹಲವಾರು ದಿನಗಳವರೆಗೆ ಮುಂದುವರಿಯಲಿದೆ ಎಂದು ಅಧಿಕಾರಿಗಳು ಎಚ್ಚರಿಸಿದ್ದಾರೆ.
ಶನಿವಾರ ಪಾಕಿಸ್ತಾನ ಹವಾಮಾನ ಇಲಾಖೆ (PMD) ಸಿಂಧ್ ಪ್ರಾಂತ್ಯದ ಮಧ್ಯ ಮತ್ತು ಮೇಲ್ಭಾಗದಲ್ಲಿ ಶಾಖದ ಅಲೆಯ ಪರಿಸ್ಥಿತಿಗಳು ಮುಂದುವರಿಯುವ ಮುನ್ಸೂಚನೆ ನೀಡಿತ್ತು. ನಾಗರಿಕರು ಹಗಲಿನಲ್ಲಿ ನೇರ ಸೂರ್ಯನ ಬೆಳಕಿಗೆ ಒಡ್ಡಿಕೊಳ್ಳುವುದನ್ನು ತಪ್ಪಿಸಿ ಮತ್ತು ದೇಹದಲ್ಲಿ ನೀರಿನಂಶ ಕಡಿಮೆಯಾಗದಂತೆ ನೋಡಿಕೊಳ್ಳಿ ಎಂದು ಅದು ಸಲಹೆ ನೀಡಿತ್ತು.
ದೇಶದ ಅತ್ಯಂತ ಜನನಿಬಿಡ ನಗರವಾದ ಕರಾಚಿಯಲ್ಲಿ ಸೋಮವಾರ ತಾಪಮಾನವು 44C (111F) ತಲುಪಿದೆ. ಪಿಎಂಡಿ ಪ್ರಕಾರ, ಇದು 2018ರಿಂದ ಅಲ್ಲಿ ದಾಖಲಾದ ಅತ್ಯಧಿಕ ತಾಪಮಾನವಾಗಿದೆ. ತೀವ್ರ ಶಾಖದಿಂದಾಗಿ ಮಂಗಳವಾರ ಕನಿಷ್ಠ 10 ಜನರು ಸಾವನ್ನಪ್ಪಿದ್ದಾರೆ ಎಂದು ಸ್ಥಳೀಯ ತುರ್ತು ಸೇವೆಗಳು ತಿಳಿಸಿವೆ. ಸಿಂಧ್ ನಗರಗಳಾದ ಜಾಕೋಬಾಬಾದ್ ಮತ್ತು ಸುಕ್ಕೂರ್ ಈ ವಾರದ ಕೊನೆಯಲ್ಲಿ 46C (114.8F) ವರೆಗಿನ ತಾಪಮಾನ ಕಾಣುವ ನಿರೀಕ್ಷೆಯಿದೆ.
►ಬಾಂಗ್ಲಾದೇಶ
ಬಾಂಗ್ಲಾದೇಶದ ರಾಜಧಾನಿ ಢಾಕಾ ಮತ್ತು ಇತರ ಜಿಲ್ಲೆಗಳಾದ ಫರೀದ್ಪುರ, ರಾಜ್ಶಾಹಿ ಮತ್ತು ಪಬ್ನಾ ಎಪ್ರಿಲ್ ಮಧ್ಯದಿಂದ ಕೊನೆಯವರೆಗೆ ತೀವ್ರವಾಗಿ ಬಾಧಿತವಾಗಿದ್ದು, ಇಲ್ಲಿ 37C (98.6F) ಮತ್ತು 38C (100.4F) ನಡುವಿನ ತಾಪಮಾನ ದಾಖಲಾಗಿದೆ. ಬಾಂಗ್ಲಾದೇಶದಲ್ಲಿ ಕೆಲವು ಸಮಯದಿಂದ ತಾಪಮಾನ ಹೆಚ್ಚುತ್ತಿದೆ. 2024ರ ಎಪ್ರಿಲ್ ನಲ್ಲಿ 24 ಶಾಖದ ಅಲೆಯ ದಿನಗಳು ವರದಿಯಾಗಿದ್ದು, ಇದು 75 ವರ್ಷಗಳಲ್ಲಿ ಅತಿ ಹೆಚ್ಚು.
►ಈ ಪ್ರದೇಶದ ಜನರ ಮೇಲೆ ಶಾಖದ ಅಲೆ ಯಾವ ರೀತಿ ಪರಿಣಾಮ ಬೀರಿದೆ?
ತೀವ್ರ ಶಾಖವು ವಿವಿಧ ರೀತಿಯಲ್ಲಿ ಜನರ ಮೇಲೆ ಪರಿಣಾಮ ಬೀರುತ್ತದೆ. ಅದರ ಪರಿಣಾಮಗಳು ಗಂಭೀರವಾಗಿವೆ ಎಂದು ಹಾರ್ವರ್ಡ್ ವಿಶ್ವವಿದ್ಯಾಲಯದ ಮಿತ್ತಲ್ ಸೌತ್ ಏಷ್ಯಾ ಇನ್ಸ್ಟಿಟ್ಯೂಟ್ ನ ರಿಸರ್ಚ್ ಫೆಲೊ ಕಾರ್ತಿಕೇಯ ಭಟೋಟಿಯಾ ಹೇಳಿದ್ದಾರೆ.
ಅತ್ಯಂತ ನೇರ ಹಾನಿ ಶಾರೀರಿಕವಾಗಿದೆ. ಶಾಖದ ಒತ್ತಡವು ದೇಹದ ಥರ್ಮೋರೆಗ್ಯುಲೇಟರಿ ಸಾಮರ್ಥ್ಯವನ್ನು ಅತಿಕ್ರಮಿಸುತ್ತದೆ. ಇದು ಹೃದಯರಕ್ತನಾಳದ ಒತ್ತಡ, ಮೂತ್ರಪಿಂಡದ ಗಾಯ, ಸರಿಯಾಗಿ ನಿದ್ರೆ ಬಾರದಿರುವುದು, ಮಧುಮೇಹ, ಉಸಿರಾಟದ ಕಾಯಿಲೆ ಮತ್ತು ಮಾನಸಿಕ ಆರೋಗ್ಯ ಸ್ಥಿತಿಗಳು ಸೇರಿದಂತೆ ದೀರ್ಘಕಾಲದ ಪರಿಸ್ಥಿತಿಗಳು ಹದಗೆಡಲು ಕಾರಣವಾಗುತ್ತದೆ. ವೃದ್ಧರು, ಗರ್ಭಿಣಿಯರು, ಚಿಕ್ಕ ಮಕ್ಕಳು ಮತ್ತು ಮೊದಲೇ ಕಾಯಿಲೆಯಿಂದ ಬಳಲುತ್ತಿರುವವರು ಹೆಚ್ಚಿನ ಅಪಾಯವನ್ನು ಎದುರಿಸುತ್ತಾರೆ ಎಂದು ಅವರು ಹೇಳಿದ್ದಾರೆ.
ಕಡಿಮೆ ಆದಾಯದ ಕಾರ್ಮಿಕರು ಹೆಚ್ಚಿನ ಸಮಸ್ಯೆಗಳನ್ನು ಎದುರಿಸುತ್ತಾರೆ. ಹೊರಾಂಗಣದಲ್ಲಿ ಕೆಲಸ ಮಾಡುವವರು, ಕಳಪೆ ನಿರೋಧನ ಮತ್ತು ಗಾಳಿಯಾಡದ ಮನೆಗಳಲ್ಲಿರುವವರು, ತಂಪಾಗಿಸುವಿಕೆಗೆ ಪ್ರವೇಶ ಹೊಂದಿರುವವರಿಗಿಂತ ಹೆಚ್ಚಿನ ಶಾಖದ ಒತ್ತಡವನ್ನು ಎದುರಿಸುತ್ತಾರೆ. ಸುಮಾರು 380 ಮಿಲಿಯನ್ ಭಾರತೀಯರು, ಅಂದರೆ ಸುಮಾರು ನಾಲ್ಕನೇ ಮೂರು ಭಾಗದಷ್ಟು ಉದ್ಯೋಗಿಗಳು, ಶಾಖಕ್ಕೆ ಒಡ್ಡಿಕೊಳ್ಳುವ ಕೆಲಸದಲ್ಲಿ ತೊಡಗಿಸಿಕೊಂಡಿದ್ದಾರೆ. ಕೆಲಸದ ಸಮಯ ಕಡಿಮೆಯಾಗುವುದರಿಂದ ಅವರ ದೈನಂದಿನ ವೇತನ ಕಡಿಮೆಯಾಗುತ್ತದೆ. ಪೌಷ್ಟಿಕಾಂಶ ಮತ್ತು ಔಷಧಿಗಳ ಕೊರತೆಯೂ ಜನರಿಗೆ ಸಮಸ್ಯೆಗಳನ್ನುಂಟು ಮಾಡುತ್ತದೆ.
►ಸರ್ಕಾರಗಳು ಹೇಗೆ ಪ್ರತಿಕ್ರಿಯಿಸುತ್ತಿವೆ?
ದೇಶಾದ್ಯಂತ ತಾಪಮಾನ ತೀವ್ರಗೊಳ್ಳುತ್ತಿದ್ದಂತೆ, ಭಾರತದ ವ್ಯಾಪಕವಾಗಿ ಪ್ರಶಂಸಿಸಲ್ಪಟ್ಟ "ಶಾಖ ಸನ್ನದ್ಧತಾ ಮಾದರಿ" ತನ್ನ ಅತ್ಯಂತ ದುರ್ಬಲ ಜನಸಂಖ್ಯೆಯನ್ನು ರಕ್ಷಿಸುವಲ್ಲಿ ವಿಫಲವಾಗಿದೆ. ಭಾರತವು ಶಾಖ ಕ್ರಿಯಾ ಯೋಜನೆಗಳು, ನೀರು ಸರಬರಾಜು, ತಂಪಾಗಿಸುವ ಕೇಂದ್ರಗಳು, ಸಾರ್ವಜನಿಕ ಸಂದೇಶ ಕಳುಹಿಸುವಿಕೆ ಮತ್ತು ಕಡ್ಡಾಯ ವಿಶ್ರಾಂತಿ ವಿರಾಮಗಳೊಂದಿಗೆ ಮುಂಚಿನ ಎಚ್ಚರಿಕೆ ವ್ಯವಸ್ಥೆಗಳನ್ನು ಸಂಯೋಜಿಸುವ ನಗರ ಮಟ್ಟದ ಮಾರ್ಗಸೂಚಿಗಳನ್ನು ಹೊಂದಿದೆ ಎಂದು ಭಟೋಟಿಯಾ ಹೇಳಿದರು.
"ಇವು ಜೀವಗಳನ್ನು ಉಳಿಸುತ್ತವೆ. ಈಗಾಗಲೇ ಔಪಚಾರಿಕ ವ್ಯವಸ್ಥೆಗಳಲ್ಲಿರುವವರನ್ನು ತಲುಪುತ್ತವೆ. ಆದರೆ ಅನೌಪಚಾರಿಕ ಕಾರ್ಮಿಕರು ಮತ್ತು ದಿನಗೂಲಿ ಕಾರ್ಮಿಕರು ಶಾಖಕ್ಕೆ ಹೆಚ್ಚು ಹೆಚ್ಚು ಒಡ್ಡಿಕೊಳ್ಳುವವರಾಗಿದ್ದಾರೆ. ಇವರು ಇಂಥ ಯೋಜನೆಗಳಿಂದ ಹೆಚ್ಚಾಗಿ ಹೊರಗುಳಿಯುತ್ತಾರೆ. ಇಲ್ಲಿ ಯೋಜನೆಯ ಅನುಷ್ಠಾನವನ್ನು ವಿರಳವಾಗಿ ಟ್ರ್ಯಾಕ್ ಮಾಡಲಾಗುತ್ತದೆ ಅಥವಾ ಜಾರಿಗೊಳಿಸಲಾಗುತ್ತದೆ" ಎಂದು ಅವರು ಎಚ್ಚರಿಸಿದರು.
ಬಿಕ್ಕಟ್ಟನ್ನು ಪರಿಹರಿಸಲು ಸರ್ಕಾರ ಮತ್ತು ಅದರ ಡೊಮೇನ್ ಗಳ ಪ್ರತಿಯೊಂದು ಹಂತವನ್ನು ಅಂದರೆ ವಸತಿ, ನಗರ ಯೋಜನೆ, ಆರೋಗ್ಯ ವ್ಯವಸ್ಥೆಗಳು, ಕಾರ್ಮಿಕ ರಕ್ಷಣೆ ಮತ್ತು ವಿಪತ್ತು ನಿರ್ವಹಣೆಯನ್ನು ವ್ಯಾಪಿಸಬೇಕಾದ ವಿಶಾಲವಾದ "ರಚನಾತ್ಮಕ ಪ್ರತಿಕ್ರಿಯೆ" ಅಗತ್ಯವಿದೆ. ಆರೋಗ್ಯ ವ್ಯವಸ್ಥೆಗಳಿಗೆ ವಿಸ್ತೃತ ಮೂಲಸೌಕರ್ಯ, ತರಬೇತಿ ಪಡೆದ ಕಾರ್ಯಪಡೆ ಮತ್ತು ಕ್ರಿಯಾತ್ಮಕ ಕಣ್ಗಾವಲು ಅಗತ್ಯವಿದೆ. ಇದರಿಂದಾಗಿ ಶಾಖ-ಸಂಬಂಧಿತ ಕಾಯಿಲೆ ಮತ್ತು ಮರಣ ಪ್ರಮಾಣವನ್ನು ವಾಸ್ತವವಾಗಿ ಎಣಿಸಲಾಗುತ್ತದೆ ಎಂದು ಭಟೋಟಿಯಾ ಒತ್ತಿ ಹೇಳಿದರು.
ಹೆಚ್ಚುತ್ತಿರುವ ತಾಪಮಾನದ ವಿರುದ್ಧ ದೀರ್ಘಕಾಲೀನ ಸ್ಥಿತಿಸ್ಥಾಪಕತ್ವವು ಜಾರಿಗೆ ತರಲಾಗುತ್ತಿರುವ ವ್ಯವಸ್ಥಿತ ಸುಧಾರಣೆಗಳ ಮೇಲೆ ಅವಲಂಬಿತವಾಗಿರುತ್ತದೆ. ಕಟ್ಟಡ ಸಂಹಿತೆಗಳು ರಚನೆಗಳನ್ನು ನಿರ್ಮಿಸುವ ಮೊದಲು ನಿಷ್ಕ್ರಿಯ ವಿನ್ಯಾಸ ಮಾನದಂಡಗಳನ್ನು ಕಡ್ಡಾಯಗೊಳಿಸಬೇಕಾಗಿದೆ. ಕಾರ್ಮಿಕ ರಕ್ಷಣೆಗಳನ್ನು ಅನೌಪಚಾರಿಕ ಕಾರ್ಮಿಕರಿಗೂ ಜಾರಿಗೊಳಿಸಬೇಕು. ಅಂತಹ ಬದಲಾವಣೆಗಳಿಲ್ಲದೆ ಶಾಖದ ಅಪಾಯಗಳು ಪ್ರಸ್ತುತ ಪ್ರತಿಕ್ರಿಯೆ ಪ್ರಯತ್ನಗಳನ್ನು ಮೀರಿಸಬಹುದು ಎಂದು ಭಟೋಟಿಯಾ ಹೇಳಿದ್ದಾರೆ.
ಇಸ್ಲಾಮಾಬಾದ್ ಮೂಲದ ಹವಾಮಾನ ತಜ್ಞ ಮತ್ತು ಶೈಕ್ಷಣಿಕ ಫಹಾದ್ ಸಯೀದ್, ತೀವ್ರಗೊಳ್ಳುತ್ತಿರುವ ಶಾಖದ ಅಲೆಗಳ ಹಿನ್ನೆಲೆಯಲ್ಲಿ ಪಾಕಿಸ್ತಾನದ ಸನ್ನದ್ಧತೆ ಮತ್ತು ಪಾರದರ್ಶಕತೆಯ ಬಗ್ಗೆ ಕಳವಳ ವ್ಯಕ್ತಪಡಿಸಿದ್ದಾರೆ. ಸರ್ಕಾರವು ಮೊದಲು ಸರಿಯಾದ ಸಂಖ್ಯೆಗಳನ್ನು ನೀಡುವುದು, ನೈಜ ಡೇಟಾವನ್ನು ಸಂಗ್ರಹಿಸುವುದು ಮತ್ತು ನಂತರ ಅದು ವಿಪತ್ತು ಎಂದು ಜಗತ್ತಿಗೆ ತಿಳಿಸುವುದು ಕಡ್ಡಾಯವಾಗಿದೆ ಎಂದಿದ್ದಾರೆ ಅವರು.
ವರದಿ ಮಾಡದಿರುವುದು ಆಡಳಿತದ ಕಾಳಜಿಗಳಿಗೆ ಭಾಗಶಃ ಕಾರಣ. ರಾಜಕೀಯ ಪರಿಣಾಮಗಳನ್ನು ತಪ್ಪಿಸಲು ಅಧಿಕಾರಿಗಳು ಬಿಕ್ಕಟ್ಟನ್ನು ಕಡಿಮೆ ಮಾಡುತ್ತಿರಬಹುದು. ಆದರೆ "ನಷ್ಟ ಮತ್ತು ಹಾನಿ"ಯ ಪ್ರಮಾಣವನ್ನು ಒಪ್ಪಿಕೊಳ್ಳುವುದು ನಿರ್ಣಾಯಕವಾಗಿದೆ. ಇದು ಸಾರ್ವಜನಿಕ ಜಾಗೃತಿ ಮೂಡಿಸಲು ಮಾತ್ರವಲ್ಲದೆ ಅಂತರರಾಷ್ಟ್ರೀಯ ಹವಾಮಾನ ನಿಧಿಗಳನ್ನು ಪ್ರವೇಶಿಸಲು ಮತ್ತು ಪರಿಣಾಮಕಾರಿ ಪ್ರತಿಕ್ರಿಯೆ ವ್ಯವಸ್ಥೆಗಳನ್ನು ಅಭಿವೃದ್ಧಿಪಡಿಸಲು ಸಹಕಾರಿ. ನಿಖರವಾದ ಡೇಟಾ ಇಲ್ಲದೆ ಅರ್ಥಪೂರ್ಣ ಹೊಂದಾಣಿಕೆಯ ಕ್ರಮಗಳನ್ನು ಕೈಗೊಳ್ಳಲು ಸಾಧ್ಯವಿಲ್ಲ ಎಂದು ಸಯೀದ್ ಎಚ್ಚರಿಸಿದರು.
►ಭವಿಷ್ಯದಲ್ಲಿ ಶಾಖದ ಅಲೆಗಳು ಇನ್ನಷ್ಟು ತೀವ್ರವಾಗಬಹುದೇ?
ಹೊರಸೂಸುವಿಕೆಯನ್ನು ಮಧ್ಯಮ ಮಟ್ಟದಲ್ಲಿ ಇರಿಸಿದರೂ ಸಹ, ಮುಂದಿನ ದಶಕಗಳಲ್ಲಿ ದಕ್ಷಿಣ ಏಷ್ಯಾದಾದ್ಯಂತ ತೀವ್ರತರವಾದ ಉಷ್ಣತೆಯು ಮತ್ತಷ್ಟು ತೀವ್ರವಾಗಿರುತ್ತದೆ ಎಂದು ಹವಾಮಾನ ಮುನ್ಸೂಚನೆಗಳು ಸೂಚಿಸುತ್ತವೆ ಎಂದು ಭಟೋಟಿಯಾ ಹೇಳಿದ್ದಾರೆ.
ಇತ್ತೀಚಿನ ದಶಕಗಳಲ್ಲಿ ಭಾರತವು ಜಾಗತಿಕ ಸರಾಸರಿಗಿಂತ ನಿಧಾನವಾಗಿ ಬೆಚ್ಚಗಾಗಿದ್ದರೂ, ವಾಯು ಮಾಲಿನ್ಯ ಮತ್ತು ವ್ಯಾಪಕ ನೀರಾವರಿಯಿಂದ ಉಂಟಾದ ತಾತ್ಕಾಲಿಕ ತಂಪಾಗಿಸುವ ಪರಿಣಾಮಗಳಿಂದಾಗಿ ಇದು ಭಾಗಶಃ ಸಂಭವಿಸಿದೆ. ಮುಂಬರುವ ವರ್ಷಗಳಲ್ಲಿ ಇವೆರಡೂ ದುರ್ಬಲಗೊಳ್ಳುವ ಸಾಧ್ಯತೆಯಿದೆ. ಇದು ಐತಿಹಾಸಿಕ ದಾಖಲೆಗಳು ಸೂಚಿಸುವುದಕ್ಕಿಂತ ಹೆಚ್ಚಿನ ತಾಪಮಾನ ಏರಿಕೆಗೆ ಕಾರಣವಾಗಬಹುದು.
ಸರಿಯಾದ ಕ್ರಮಗಳನ್ನು ಜಾರಿಗೆ ತಂದರೆ ತಾಪಮಾನ ಏರಿಕೆಯು ಅಗತ್ಯವಾಗಿ ಹೆಚ್ಚುತ್ತಿರುವ ಹಾನಿಯನ್ನು ಅರ್ಥೈಸುವುದಿಲ್ಲ. ಉತ್ತಮ ಯೋಜನೆ, ಪೂರ್ವಭಾವಿ ಕ್ರಮ ಮತ್ತು ಪೂರ್ವ-ಅಧಿಕೃತ ಪ್ರತಿಕ್ರಿಯೆಗೆ ಸಂಬಂಧಿಸಿದ ಮುಂಚಿನ ಎಚ್ಚರಿಕೆ ವ್ಯವಸ್ಥೆಗಳು ತಾಪಮಾನ ಹೆಚ್ಚಾದಾಗಲೂ ಹಾನಿಯನ್ನು ಗಣನೀಯವಾಗಿ ಕಡಿಮೆ ಮಾಡಬಹುದು ಎಂದು ಭಟೋಟಿಯಾ ಹೇಳಿದ್ದಾರೆ.






