ಪಿತೃತ್ವದ ಪ್ರಕರಣದಲ್ಲಿ DNA ಪರೀಕ್ಷೆಯನ್ನು ಸುಪ್ರೀಂ ಕೋರ್ಟ್ ಎತ್ತಿಹಿಡಿದದ್ದು ಏಕೆ? ವೈಯಕ್ತಿಕ ಗೌಪ್ಯತೆಯ ಹಕ್ಕು ಪಿತೃತ್ವದ ಹಕ್ಕಿಗಿಂತ ದೊಡ್ಡದೇ?

ಸಾಂದರ್ಭಿಕ ಚಿತ್ರ | Photo Credit : magnific
ವ್ಯಕ್ತಿಯೊಬ್ಬ ತಾನು ಸ್ವಂತ ಮಗ ಎಂದು ಹಕ್ಕು ಸಾಧಿಸಿ ದಾಖಲಿಸಿದ್ದ ಸಿವಿಲ್ ಮೊಕದ್ದಮೆಯಲ್ಲಿ, ಆತನ ತಂದೆ ಎನ್ನಲಾದ ವ್ಯಕ್ತಿಗೆ DNA ಪರೀಕ್ಷೆಗೆ ಒಳಗಾಗುವಂತೆ ನೀಡಲಾಗಿದ್ದ ಆದೇಶಗಳ ವಿರುದ್ಧ ಸಲ್ಲಿಕೆಯಾಗಿದ್ದ ಸವಾಲನ್ನು ಸುಪ್ರೀಂ ಕೋರ್ಟ್ ಕಳೆದ ತಿಂಗಳು ವಜಾಗೊಳಿಸಿದೆ. ಈ ಮೂಲಕ, ಇಂತಹ ಪರೀಕ್ಷೆಗಳಿಗೆ ನ್ಯಾಯಾಲಯಗಳು ಯಾವಾಗ ಆದೇಶ ನೀಡಬಹುದು ಮತ್ತು ಯಾವಾಗ ನೀಡಬಾರದು ಎಂಬ ಕಾನೂನಿನ ತಿಳುವಳಿಕೆಯನ್ನು ಮತ್ತೊಮ್ಮೆ ಸ್ಪಷ್ಟಪಡಿಸಿದೆ.
ನ್ಯಾಯಮೂರ್ತಿಗಳಾದ ಸಂಜಯ್ ಕರೋಲ್ ಮತ್ತು ಎನ್. ಕೋಟೀಶ್ವರ್ ಸಿಂಗ್ ಅವರ ಪೀಠವು, “ವೈಯಕ್ತಿಕ ಗೌಪ್ಯತೆಯ ಹಕ್ಕಿಗೆ ಸಂಬಂಧಿಸಿದಂತೆ ಹೇಳುವುದಾದರೆ, ಈ ಪ್ರಕರಣದಲ್ಲಿ ನಾವು ಸಿಪಿ (ತಂದೆ ಎನ್ನಲಾದ ವ್ಯಕ್ತಿ) ಅವರ ಗೌಪ್ಯತೆಯ ಹಕ್ಕು ಮತ್ತು ಅವರ ಮಗ ಎನ್ನಲಾದ ವ್ಯಕ್ತಿಯ ಜೀವನದುದ್ದಕ್ಕೂ ಕಾಡುತ್ತಿರುವ ದೊಡ್ಡ ಪ್ರಶ್ನೆಗೆ ಒಂದು ತಾರ್ಕಿಕ ಅಂತ್ಯ ಕಾಣಬೇಕೆಂಬ ಹಂಬಲ ಇವೆರಡರ ನಡುವೆ ಸಮತೋಲನವನ್ನು ಕಾಯ್ದುಕೊಳ್ಳುತ್ತಿದ್ದೇವೆ” ಎಂದು ಅಭಿಪ್ರಾಯಪಟ್ಟಿದೆ.
ವಯಸ್ಕನಾದ ನಂತರ ಅರ್ಜಿದಾರನು ಹೂಡಿದ ಸಿವಿಲ್ ಮೊಕದ್ದಮೆಯಿಂದ ಈ ವಿವಾದ ಉದ್ಭವಿಸಿದೆ. ಆತ ತನ್ನ ಪಿತೃತ್ವದ ಘೋಷಣೆ ಮತ್ತು ತಂದೆಯ ಆಸ್ತಿಯಲ್ಲಿ ಪಾಲನ್ನು ಕೋರಿ ಈ ಮೊಕದ್ದಮೆ ಹೂಡಿದ್ದನು. ಆದರೆ, ಆ ತಂದೆ ಎನ್ನಲಾದ ವ್ಯಕ್ತಿಯು 1999ರಿಂದಲೂ ಆತ ತನ್ನ ಮಗನೆಂಬುದನ್ನು ನಿರಾಕರಿಸುತ್ತಲೇ ಬಂದಿದ್ದರು.
DNA ಪರೀಕ್ಷೆಗೆ ಆದೇಶಿಸಬಹುದೇ ಎಂಬುದನ್ನು ನಿರ್ಧರಿಸಲು ಮೂರು ಪ್ರಮುಖ ಪ್ರಶ್ನೆಗಳು ಆಧಾರವಾಗುತ್ತವೆ ಎಂದು ಪೀಠವು ಗಮನಿಸಿದೆ:
1. ಪಿತೃತ್ವದ ವಿಷಯವು “ನೇರವಾಗಿ ವಿವಾದದಲ್ಲಿದೆಯೇ”?
2. ಅದಕ್ಕೆ ಪರ್ಯಾಯವಾಗಿ ಬಳಸಬಹುದಾದ “ಬೇರೆ ಯಾವುದೇ ಸಾಕ್ಷ್ಯಗಳು ದಾಖಲೆಯಲ್ಲಿ ಲಭ್ಯವಿದೆಯೇ”?
3. ಈ ಪರೀಕ್ಷೆಗೆ ಆದೇಶ ನೀಡುವುದು “ಸಂಬಂಧಿತ ಪಕ್ಷಗಳ ಮತ್ತು/ಅಥವಾ ನ್ಯಾಯದ ಹಿತದೃಷ್ಟಿಯಿಂದ ಸೂಕ್ತವಾಗಿದೆಯೇ”?
ತಂದೆ ಎನ್ನಲಾದ ‘ಸಿಪಿ’ ಅವರು ಕಳೆದ ಎರಡು ದಶಕಗಳಿಗೂ ಹೆಚ್ಚು ಕಾಲದಿಂದ ಪಿತೃತ್ವವನ್ನು ಸತತವಾಗಿ ನಿರಾಕರಿಸುತ್ತಾ ಬಂದಿದ್ದಾರೆ ಮತ್ತು ಈ ಪ್ರಶ್ನೆಗೆ ಉತ್ತರಿಸಲು ದಾಖಲೆಯಲ್ಲಿ ಬೇರೆ ಯಾವುದೇ ಸಾಕ್ಷ್ಯಗಳಿಲ್ಲ ಎಂದು ನ್ಯಾಯಾಲಯ ಹೇಳಿದೆ. ಹೀಗಾಗಿ, ಅವರ ವೈಯಕ್ತಿಕ ಗೌಪ್ಯತೆಯ ಹಕ್ಕು ಹಾಗೂ ಮಗನೆಂದು ಹಕ್ಕು ಸಾಧಿಸುತ್ತಿರುವ ವ್ಯಕ್ತಿಯ ಪಿತೃತ್ವವನ್ನು ಸಾಬೀತುಪಡಿಸುವ ಮತ್ತು ಆಸ್ತಿ ಉತ್ತರಾಧಿಕಾರದ ಹಕ್ಕುಗಳನ್ನು ಪಡೆಯುವ ಹಿತಾಸಕ್ತಿ ಇವೆರಡನ್ನೂ ತೂಗಿ ನೋಡಿದ ನ್ಯಾಯಾಲಯವು, ಪಿತೃತ್ವವನ್ನು ನಿರ್ಧರಿಸಲು ಸಿಪಿ ಅವರಿಗೆ DNA ಪರೀಕ್ಷೆ ನಡೆಸುವುದನ್ನು ಎತ್ತಿಹಿಡಿಯಿತು. ಈ ಸಂದರ್ಭದಲ್ಲಿ ನ್ಯಾಯಾಲಯವು, “ಈ ಪ್ರಶ್ನೆಗೆ ಎಂದಿಗೂ ಸ್ಪಷ್ಟವಾದ ಉತ್ತರ ಸಿಗದಿದ್ದರೆ, ಸಿಪಿ ಅವರ ಮಗನಾಗಿರುವ ಕಾರಣದಿಂದ ಆ ವ್ಯಕ್ತಿಗೆ ಕಾನೂನುಬದ್ಧವಾಗಿ ಸಿಗಬೇಕಾದ ಹಕ್ಕುಗಳು ಆತನಿಗೆ ಶಾಶ್ವತವಾಗಿ ಸಿಗದಂತೆ ನಿರಾಕರಿಸುವ ಸಾಧ್ಯತೆಯಿರುತ್ತದೆ” ಎಂದು ಹೇಳಿದೆ.
►ಕಾನೂನು ಚೌಕಟ್ಟು
ಪಿತೃತ್ವದ ವಿವಾದಗಳಲ್ಲಿ, ಭಾರತೀಯ ಸಾಕ್ಷ್ಯ ಕಾಯ್ದೆಯ (The Indian Evidence Act) ಸೆಕ್ಷನ್ 112 ಅನ್ನು ಅನ್ವಯಿಸಲಾಗುತ್ತದೆ. ಇದರ ಪ್ರಕಾರ, ಕಾನೂನುಬದ್ಧ ವಿವಾಹದ ಅವಧಿಯಲ್ಲಿ ಅಥವಾ ವಿವಾಹ ವಿಚ್ಛೇದನವಾದ 280 ದಿನಗಳ ಒಳಗೆ ಜನಿಸುವ ಯಾವುದೇ ಮಗು ಆ ಗಂಡನದ್ದೇ ಕಾನೂನುಬದ್ಧ ಮಗು ಎಂದು ಪರಿಗಣಿಸಲಾಗುತ್ತದೆ. ಆದರೆ, “ಮಗುವಿನ ಜನನಕ್ಕೆ ಕಾರಣವಾಗಬಹುದಾದ ಯಾವುದೇ ಸಮಯದಲ್ಲಿ ವಿವಾಹಿತ ದಂಪತಿಗಳಿಗೆ ಪರಸ್ಪರ ಭೇಟಿಯಾಗಲು (ಸಂಪರ್ಕ ಹೊಂದಲು) ಸಾಧ್ಯವೇ ಇರಲಿಲ್ಲ ಎಂಬುದನ್ನು ಸಾಬೀತುಪಡಿಸಿದರೆ ಮಾತ್ರ” ಇದಕ್ಕೆ ವಿನಾಯಿತಿ ಇರುತ್ತದೆ.
ಈ ಸೆಕ್ಷನ್ ನ ಮುಖ್ಯ ಉದ್ದೇಶವೆಂದರೆ ವಿವಾಹದ ಬಂಧದಲ್ಲಿ ಜನಿಸುವ ಪ್ರತಿಯೊಂದು ಮಗುವಿಗೂ ಕಾನೂನುಬದ್ಧತೆಯನ್ನು ನೀಡುವುದಾಗಿದೆ. ಇಂತಹ ಕಾನೂನುಬದ್ಧತೆಯ ಊಹೆ ಇರುವಾಗ, ಅದನ್ನು ತಳ್ಳಿಹಾಕಬೇಕಾದರೆ ಕೇವಲ ಅನುಮಾನ ಅಥವಾ ಪ್ರತಿಪಾದನೆ ಸಾಕಾಗುವುದಿಲ್ಲ. ಬದಲಿಗೆ, ದಂಪತಿಗಳ ನಡುವೆ ಯಾವುದೇ ಸಂಪರ್ಕವಿರಲಿಲ್ಲ ಎಂಬುದಕ್ಕೆ ಬಲವಾದ ಸಾಕ್ಷ್ಯವನ್ನು ಒದಗಿಸಬೇಕು ಎಂದು ನ್ಯಾಯಾಲಯಗಳು ತೀರ್ಪು ನೀಡಿವೆ.
►ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ ಹಿಂದಿನ ಪ್ರಕರಣಗಳು
ಇಲ್ಲಿಯವರೆಗೆ, DNA ಪರೀಕ್ಷೆಗೆ ಆದೇಶಿಸಲು ನ್ಯಾಯಾಲಯಗಳಿಗೆ ನೇರವಾಗಿ ಅಧಿಕಾರ ನೀಡುವ ಯಾವುದೇ ನಿರ್ದಿಷ್ಟ ಕಾನೂನು ನಿಯಮಗಳು ನಮ್ಮಲ್ಲಿಲ್ಲ. ಈ ನ್ಯಾಯಶಾಸ್ತ್ರವು ಕಾಲಕಾಲಕ್ಕೆ ಎದುರಾದ ಪ್ರಕರಣಗಳ ಆಧಾರದ ಮೇಲೆ ಮತ್ತು ಹಿಂದಿನ ತೀರ್ಪುಗಳ ಮೂಲಕವೇ ರೂಪುಗೊಂಡಿದೆ.
►ಗೌತಮ್ ಕುಂಡು vs ಪಶ್ಚಿಮ ಬಂಗಾಳ ಸರ್ಕಾರ (1993):
ಈ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್, ನ್ಯಾಯಾಲಯಗಳು DNA ಪರೀಕ್ಷೆಯನ್ನು “ಸಾಮಾನ್ಯ ಪ್ರಕ್ರಿಯೆಯಾಗಿ ಆದೇಶಿಸುವಂತಿಲ್ಲ” ಮತ್ತು “ಕೇವಲ ಸತ್ಯದ ಹುಡುಕಾಟದ ನೆಪದಲ್ಲಿ DNA ಪರೀಕ್ಷೆ ಕೋರಿ ಸಲ್ಲಿಸುವ ಅರ್ಜಿಗಳನ್ನು ಪುರಸ್ಕರಿಸಲಾಗುವುದಿಲ್ಲ” ಎಂದು ಹೇಳಿತ್ತು. “ರಕ್ತದ ಮಾದರಿಯನ್ನು ವಿಶ್ಲೇಷಣೆಗೆ ನೀಡುವಂತೆ ಯಾರನ್ನೂ ಒತ್ತಾಯಿಸುವಂತಿಲ್ಲ” ಎಂದೂ ಅದು ಅಭಿಪ್ರಾಯಪಟ್ಟಿತ್ತು. ಅಷ್ಟೇ ಅಲ್ಲದೆ, ಇಂತಹ ಪರೀಕ್ಷೆಗೆ ಆದೇಶಿಸುವುದರಿಂದ “ಮಗುವನ್ನು ಅಕ್ರಮ ಸಂತತಿ ಎಂದು ಮತ್ತು ತಾಯಿಯನ್ನು ದುರ್ನಡತೆಯವಳು ಎಂದು ಬಿಂಬಿಸಿದಂತಾಗುತ್ತದೆಯೇ” ಎಂಬುದನ್ನು ನ್ಯಾಯಾಲಯಗಳು ಯೋಚಿಸಬೇಕು ಎಂದು ಪೀಠ ಹೇಳಿತ್ತು.
►ದೀಪಾನ್ವಿತಾ ರಾಯ್ vs ರಣಬ್ರತ ರಾಯ್ (2014):
ಈ ಪ್ರಕರಣದಲ್ಲಿ, ವಿವಾದವನ್ನು ಬಗೆಹರಿಸಲು ತೀರಾ ಅಗತ್ಯವಿದ್ದಾಗ ಮಾತ್ರ ನ್ಯಾಯಾಲಯವು DNA ಪರೀಕ್ಷೆಗೆ ಅನುಮತಿ ನೀಡಿತು. ಆದರೆ, “ಇಂತಹ ಪರೀಕ್ಷೆಯನ್ನು ನಡೆಸುವ ಆದೇಶವನ್ನು ತಪ್ಪಿಸಲು ಸಾಧ್ಯವಿದ್ದರೆ, ಅದನ್ನು ಖಂಡಿತವಾಗಿ ತಪ್ಪಿಸಬೇಕು. ಏಕೆಂದರೆ ಮಗುವಿನ ಕಾನೂನುಬದ್ಧತೆಯನ್ನು ಎಂದಿಗೂ ಅಪಾಯಕ್ಕೆ ಸಿಲುಕಿಸಬಾರದು” ಎಂದು ಅದು ಗಮನಿಸಿತ್ತು.
ಅಪರ್ಣಾ ಅಜಿಂಕ್ಯ ಫಿರೋಡಿಯಾ vs ಅಜಿಂಕ್ಯ ಅರುಣ್ ಫಿರೋಡಿಯಾ (2023):
ನ್ಯಾಯಮೂರ್ತಿಗಳಾದ ವಿ. ರಾಮಸುಬ್ರಮಣಿಯನ್ ಮತ್ತು ಬಿ.ವಿ. ನಾಗರತ್ನ ಅವರ ಪೀಠವು, ಪಕ್ಷಗಳು ಮೊದಲು ಲಭ್ಯವಿರುವ ಸಾಕ್ಷ್ಯಗಳನ್ನು ಒದಗಿಸಬೇಕು ಎಂದು ಹೇಳಿತು. “ಅಂತಹ ಸಾಕ್ಷ್ಯಗಳ ಆಧಾರದ ಮೇಲೆ ಯಾವುದೇ ತೀರ್ಮಾನಕ್ಕೆ ಬರಲು ಅಸಾಧ್ಯ” ಎಂದು ನ್ಯಾಯಾಲಯಕ್ಕೆ ಮನವರಿಕೆಯಾದಾಗ ಮಾತ್ರ DNA ಪರೀಕ್ಷೆಗೆ ಆದೇಶಿಸಬಹುದು. ಈ ಪ್ರಕರಣದಲ್ಲಿ ನ್ಯಾಯಾಲಯವು, “ಕಾನೂನು ನ್ಯಾಯಾಲಯದ ಮುಂದೆ ತಮ್ಮ ಕಾನೂನುಬದ್ಧತೆಯನ್ನು ಯಾವುದೇ ಸಣ್ಣ ಕಾರಣಗಳಿಗಾಗಿ ಪ್ರಶ್ನಿಸದಂತೆ ತಡೆಯುವ ಹಕ್ಕು ಮಕ್ಕಳಿಗೆ ಇದೆ. ಇದು ವೈಯಕ್ತಿಕ ಗೌಪ್ಯತೆಯ ಹಕ್ಕಿನ ಅತ್ಯಗತ್ಯ ಭಾಗವಾಗಿದೆ. ಆದ್ದರಿಂದ, ನ್ಯಾಯಾಲಯಗಳು ಮಕ್ಕಳನ್ನು ಭೌತಿಕ ವಸ್ತುಗಳಂತೆ ನೋಡಬಾರದು ಮತ್ತು ವಿಶೇಷವಾಗಿ ಅವರು ವಿಚ್ಛೇದನ ಪ್ರಕ್ರಿಯೆಯಲ್ಲಿ ಭಾಗಿಯಾಗದಿದ್ದಾಗ, ಅವರನ್ನು ಇಂತಹ ಫೋರೆನ್ಸಿಕ್/DNA ಪರೀಕ್ಷೆಗಳಿಗೆ ಒಳಪಡಿಸಬಾರದು ಎಂಬುದನ್ನು ಅರಿಯಬೇಕು” ಎಂದು ತೀರ್ಪು ನೀಡಿತ್ತು.
►ಇವಾನ್ ರತ್ನಂ vs ಮಿಲನ್ ಜೋಸೆಫ್ (2025):
ನ್ಯಾಯಮೂರ್ತಿಗಳಾದ ಸೂರ್ಯ ಕಾಂತ್ ಮತ್ತು ಉಜ್ಜಲ್ ಭುಯಾನ್ ಅವರ ಪೀಠವು “ಹಿತಾಸಕ್ತಿಗಳ ಸಮತೋಲನ” ಎಂಬ ಪ್ರಕ್ರಿಯೆಯನ್ನು ಪರಿಚಯಿಸಿತು. ಪೀಠವು, “ಯಾರನ್ನಾದರೂ ‘ಅಕ್ರಮ ಸಂತತಿ’ ಎಂದು ಘೋಷಿಸುವುದರಿಂದ ಸಮಾಜದಲ್ಲಿ ಎದುರಾಗುವ ಕಳಂಕವು ಅವರಿಗೆ ಅಪಾರ ಹಾನಿ ಉಂಟುಮಾಡುತ್ತದೆಯೇ ಎಂಬುದನ್ನು ಮೌಲ್ಯಮಾಪನ ಮಾಡುವ ಮೂಲಕ ನ್ಯಾಯಾಲಯಗಳು ವ್ಯಕ್ತಿಗಳ ಗೌಪ್ಯತೆ ಮತ್ತು ಘನತೆಯ ಹಕ್ಕನ್ನು ರಕ್ಷಿಸಬೇಕು. ಇನ್ನೊಂದೆಡೆ, ತನ್ನ ನಿಜವಾದ ತಂದೆ ಯಾರೆಂದು ತಿಳಿಯುವ ಮಗುವಿನ ಕಾನೂನುಬದ್ಧ ಹಿತಾಸಕ್ತಿ ಮತ್ತು ಅಲ್ಲಿ DNA ಪರೀಕ್ಷೆಯ ತುರ್ತು ಅಗತ್ಯವಿದೆಯೇ ಎಂಬುದನ್ನು ನ್ಯಾಯಾಲಯಗಳು ಪರಿಶೀಲಿಸಬೇಕು” ಎಂದು ಹೇಳಿತು. DNA ಪರೀಕ್ಷೆಗೆ ಆದೇಶಿಸಲು, ಲಭ್ಯವಿರುವ ಸಾಕ್ಷ್ಯಗಳು ಸಾಕಾಗುತ್ತಿಲ್ಲ ಮತ್ತು ಈ ಪರೀಕ್ಷೆಯಿಂದ ಸಂಬಂಧಪಟ್ಟವರಿಗೆ ಯಾವುದೇ ಅನಗತ್ಯ ಹಾನಿಯಾಗುವುದಿಲ್ಲ ಎಂಬುದನ್ನು ಪಕ್ಷಗಳು ಸಾಬೀತುಪಡಿಸಬೇಕು ಎಂದು ಪೀಠವು ಅಭಿಪ್ರಾಯಪಟ್ಟಿತು.
►ನಿಖತ್ ಪರ್ವೀನ್ vs ರಫೀಕ್ (ಎಪ್ರಿಲ್ 2026):
ನ್ಯಾಯಮೂರ್ತಿಗಳಾದ ಸಂಜಯ್ ಕರೋಲ್ ಮತ್ತು ಎನ್. ಕೋಟೀಶ್ವರ್ ಸಿಂಗ್ ಅವರ ಪೀಠವು, “ಈ ಎಲ್ಲಾ ತೀರ್ಪುಗಳಲ್ಲಿ ಕಂಡುಬರುವ ಒಂದು ಸಾಮಾನ್ಯ ಅಂಶವೆಂದರೆ DNA ಪರೀಕ್ಷೆಯನ್ನು ನಡೆಸುವಂತೆ ಆದೇಶಿಸಲು ಅಥವಾ ಅಂತಹ ಆದೇಶಗಳಿಗೆ ಒಪ್ಪಿಗೆ ನೀಡಲು ನ್ಯಾಯಾಲಯಗಳು ತೋರ್ಪಡಿಸುವ ಸೂಕ್ತವಾದ ಹಿಂಜರಿಕೆಯಾಗಿದೆ” ಎಂದು ಹೇಳಿತ್ತು.






