'ಸೂರ್ಯ ಮುಳುಗದ ಸಾಮ್ರಾಜ್ಯ'ಕ್ಕೀಗ ಅಸ್ತಿತ್ವದ ಸವಾಲು
ಮೂರು ಪ್ರಾಂತ್ಯಗಳ ನಾಯಕರ ಒಗ್ಗಟ್ಟು; ಬ್ರಿಟನ್ ನಿಂದ ಪ್ರತ್ಯೇಕವಾಗುವ ಬೇಡಿಕೆಗೆ ಹೊಸ ಬಲ

ಲಂಡನ್: ಒಂದು ಕಾಲದಲ್ಲಿ ‘ಬ್ರಿಟಿಷ್ ಸಾಮ್ರಾಜ್ಯದಲ್ಲಿ ಸೂರ್ಯ ಎಂದಿಗೂ ಮುಳುಗುವುದಿಲ್ಲ’ ಎಂಬ ಮಾತು ಬಹಳ ಪ್ರಸಿದ್ಧವಾಗಿತ್ತು. ಜಗತ್ತಿನ ಹಲವು ದೇಶಗಳನ್ನು ತನ್ನ ವಸಾಹತುಗಳನ್ನಾಗಿ ಮಾಡಿಕೊಂಡಿದ್ದ ಬ್ರಿಟನ್, ಅನೇಕ ದೇಶಗಳ ಗಡಿಗಳನ್ನು ತನ್ನ ಅನುಕೂಲಕ್ಕೆ ತಕ್ಕಂತೆ ಬದಲಿಸಿತ್ತು.
ಆದರೆ ಈಗ ಪರಿಸ್ಥಿತಿ ಬದಲಾಗಿದೆ. ಜಗತ್ತಿನ ಇತರ ದೇಶಗಳ ಗಡಿಗಳನ್ನು ನಿರ್ಧರಿಸಿದ್ದ ಬ್ರಿಟನ್, ಇಂದು ತನ್ನದೇ ದೇಶ ಒಡೆಯದಂತೆ ನೋಡಿಕೊಳ್ಳುವ ಸವಾಲು ಎದುರಿಸುತ್ತಿದೆ.
ಯುನೈಟೆಡ್ ಕಿಂಗ್ ಡಮ್ ನ ಭೌಗೋಳಿಕ ವ್ಯಾಪ್ತಿಯೂ ದೊಡ್ಡದಲ್ಲ. ಇಂಗ್ಲೆಂಡ್ ನ ದಕ್ಷಿಣ ತುದಿಯ ಕಾರ್ನ್ವಾಲ್ನ ಲ್ಯಾಂಡ್ಸ್ ಎಂಡ್ನಿಂದ ಸ್ಕಾಟ್ ಲ್ಯಾಂಡ್ ನ ಉತ್ತರ ತುದಿಯ ಜಾನ್ ಓ ಗ್ರೋಟ್ಸ್ ವರೆಗೆ ಸುಮಾರು 837 ಮೈಲುಗಳಷ್ಟು ದೂರವಿದೆ. ಕಾರಿನಲ್ಲಿ ಈ ದೂರವನ್ನು 14ರಿಂದ 15 ಗಂಟೆಗಳಲ್ಲಿ ಕ್ರಮಿಸಬಹುದು. ಒಬ್ಬ ಚಾಲಕ ಒಂದೇ ದಿನದಲ್ಲಿ ಈ ಪ್ರಯಾಣ ಮುಗಿಸಬಹುದು.
ಇಷ್ಟು ಸಣ್ಣ ಭೌಗೋಳಿಕ ಪ್ರದೇಶ ಹೊಂದಿರುವ ಬ್ರಿಟನ್ ಈಗ ತನ್ನದೇ ಒಕ್ಕೂಟವನ್ನು ಉಳಿಸಿಕೊಳ್ಳಲು ಹೋರಾಡುತ್ತಿದೆ.
ಭಾರತಕ್ಕೆ ಸ್ವಾತಂತ್ರ್ಯ ನೀಡುವ ಸಂದರ್ಭದಲ್ಲಿ ಅಂದಿನ ಬ್ರಿಟಿಷ್ ಪ್ರಧಾನಿ ವಿನ್ಸ್ಟನ್ ಚರ್ಚಿಲ್ ಭಾರತವನ್ನು ಕೀಳಾಗಿ ಕಂಡಿದ್ದರು. ಭಾರತವು ಒಂದು ದೇಶವಲ್ಲ, ಕೇವಲ ಒಂದು ಭೌಗೋಳಿಕ ಪ್ರದೇಶ ಎಂದು ಅವರು ಹೇಳಿದ್ದರು. ಭಾರತದಲ್ಲಿ ನೂರಾರು ಭಾಷೆಗಳು, ಹಲವು ಧರ್ಮಗಳು ಮತ್ತು ಅನೇಕ ಜಾತಿ–ಪಂಗಡಗಳಿರುವುದರಿಂದ ಬ್ರಿಟಿಷರು ಹೊರಟ ಬಳಿಕ ಭಾರತ ಒಡೆದುಹೋಗಲಿದೆ ಎಂದು ಲಂಡನ್ ನ ಹಲವು ರಾಜಕಾರಣಿಗಳು ಭಾವಿಸಿದ್ದರು.
ಆದರೆ ಅವರ ಲೆಕ್ಕಾಚಾರ ತಪ್ಪಾಯಿತು. ಸ್ವಾತಂತ್ರ್ಯ ದೊರೆತು 79 ವರ್ಷಗಳಾದರೂ ಭಾರತ ಅಖಂಡವಾಗಿಯೇ ಉಳಿದಿದೆ. ಬಲಿಷ್ಠ ಒಕ್ಕೂಟ ವ್ಯವಸ್ಥೆ ಹೊಂದಿರುವ ವಿಶ್ವದ ಅತಿ ದೊಡ್ಡ ಪ್ರಜಾಪ್ರಭುತ್ವವಾಗಿ ಭಾರತ ಮುಂದುವರಿದಿದೆ. ಆದರೆ ಭಾರತವನ್ನು ಒಡೆದುಹೋಗಬಹುದು ಎಂದು ಭಾವಿಸಿದ್ದ ಬ್ರಿಟನ್ ಗೇ ಈಗ ತನ್ನ ಒಕ್ಕೂಟವನ್ನು ಉಳಿಸಿಕೊಳ್ಳುವ ಸಮಸ್ಯೆ ಎದುರಾಗಿದೆ.
►ಮೂರು ಪ್ರಾಂತ್ಯಗಳ ನಾಯಕರು ಒಂದಾದರು
ಈ ಬಿಕ್ಕಟ್ಟು ಮತ್ತಷ್ಟು ಗಂಭೀರವಾಗಲು ಕಾರಣವಾದ ಘಟನೆ ವೇಲ್ಸ್ ರಾಜಧಾನಿ ಕಾರ್ಡಿಫ್ ನಲ್ಲಿ ನಡೆದಿದೆ.
ಬ್ರಿಟನ್ ನ ಭಾಗಗಳಾದ ಸ್ಕಾಟ್ ಲ್ಯಾಂಡ್, ವೇಲ್ಸ್ ಮತ್ತು ಉತ್ತರ ಐರ್ಲೆಂಡ್ ನ ನಾಯಕರು ಒಂದೇ ಸಭೆಯಲ್ಲಿ ಭಾಗವಹಿಸಿದ್ದಾರೆ. ಅವರು ಜಂಟಿ ತಿಳುವಳಿಕೆ ಒಪ್ಪಂದಕ್ಕೆ ಸಹಿ ಹಾಕಿದ್ದಾರೆ. ಈ ಮೂರು ಪ್ರಾಂತ್ಯಗಳ ಫಸ್ಟ್ ಮಿನಿಸ್ಟರ್ ಗಳು ಭಾರತದ ರಾಜ್ಯಗಳ ಮುಖ್ಯಮಂತ್ರಿಗಳಂತೆ ಅಲ್ಲಿನ ಸರ್ಕಾರಗಳನ್ನು ಮುನ್ನಡೆಸುತ್ತಾರೆ.
ಸ್ಕಾಟ್ ಲ್ಯಾಂಡ್ ನ ಜಾನ್ ಸ್ವೀನಿ, ವೇಲ್ಸ್ ನ ರೈನ್ ಆಪ್ ಯೋರ್ವರ್ತ್ ಮತ್ತು ಉತ್ತರ ಐರ್ಲೆಂಡ್ ನ ಮಿಚೆಲ್ ಓ’ನೀಲ್ ಅವರು ಬ್ರಿಟನ್ ನಿಂದ ಹೊರಬರುವ ಪ್ರಕ್ರಿಯೆ ಆರಂಭಿಸುವಂತೆ ಪತ್ರಕ್ಕೆ ಸಹಿ ಹಾಕಿದ್ದಾರೆ. ಐರ್ಲೆಂಡ್ ನ ವಿರೋಧ ಪಕ್ಷದ ನಾಯಕಿ ಮೇರಿ ಲೂ ಮೆಕ್ ಡೊನಾಲ್ಡ್ ಕೂಡ ಸಭೆಯಲ್ಲಿ ಭಾಗವಹಿಸಿ ಈ ಬೇಡಿಕೆಗೆ ಬೆಂಬಲ ನೀಡಿದ್ದಾರೆ.
ಮೂರು ಪ್ರಾಂತ್ಯಗಳ ಜನರಿಗೆ ತಮ್ಮ ಭವಿಷ್ಯವನ್ನು ತಾವೇ ನಿರ್ಧರಿಸುವ ಹಕ್ಕಿದೆ ಎಂದು ನಾಯಕರು ಹೇಳಿದ್ದಾರೆ. ಲಂಡನ್ ನ ಬ್ರಿಟಿಷ್ ಸಂಸತ್ತು ಈ ಹಕ್ಕಿಗೆ ಅಡ್ಡಿಪಡಿಸಬಾರದು ಎಂದೂ ಅವರು ಹೇಳಿದ್ದಾರೆ. ಈ ಬೆಳವಣಿಗೆಯನ್ನು ಕೆಲ ರಾಜಕೀಯ ವಿಶ್ಲೇಷಕರು ‘ಕೆಲ್ಟಿಕ್ ಒಕ್ಕೂಟದ ಉದಯ’ ಎಂದು ಕರೆಯುತ್ತಿದ್ದಾರೆ. ಸ್ಕಾಟ್ ಲ್ಯಾಂಡ್, ವೇಲ್ಸ್ ಮತ್ತು ಉತ್ತರ ಐರ್ಲೆಂಡ್ ಮೂರರಲ್ಲೂ ಬ್ರಿಟನ್ ನೊಂದಿಗೆ ಇರುವ ಒಕ್ಕೂಟವನ್ನು ವಿರೋಧಿಸುವ ಪಕ್ಷಗಳು ಸರ್ಕಾರದಲ್ಲಿರುವುದು ಇದೇ ಮೊದಲ ಬಾರಿಗೆ.
►ಪ್ರಧಾನಿ ಹೇಳಿಕೆಯಿಂದ ವಿವಾದ
ಬ್ರಿಟನ್ ಪ್ರಧಾನಿ ಆಂಡಿ ಬರ್ನ್ಹ್ಯಾಮ್ ಅವರ ಇತ್ತೀಚಿನ ಹೇಳಿಕೆ ಈ ವಿವಾದಕ್ಕೆ ಮತ್ತಷ್ಟು ಬಲ ನೀಡಿದೆ. ಬ್ರಿಟಿಷ್ ಸಂಸತ್ತಿನಲ್ಲಿ ಪ್ರಧಾನ ಮಂತ್ರಿಗಳ ಪ್ರಶ್ನೋತ್ತರ ಅವಧಿ ನಡೆಯುತ್ತಿತ್ತು. ಆಗ ಸ್ಕಾಟಿಷ್ ನ್ಯಾಷನಲ್ ಪಾರ್ಟಿಯ ಸಂಸದ ಕ್ರಿಸ್ ಲಾ ಅವರು ಸ್ಕಾಟ್ ಲ್ಯಾಂಡ್ ನ ಭವಿಷ್ಯದ ಬಗ್ಗೆ ಪ್ರಧಾನಿಗೆ ಪ್ರಶ್ನೆ ಕೇಳಿದರು.
ಅದಕ್ಕೆ ಉತ್ತರಿಸಿದ ಬರ್ನ್ಹ್ಯಾಮ್, ಉತ್ತರ ಐರ್ಲೆಂಡ್ ನಲ್ಲಿ ಜನಮತಗಣನೆ ನಡೆಸಲು ಇರುವ ಕಾನೂನಿನಂತೆ ಸ್ಕಾಟ್ ಲ್ಯಾಂಡ್ ನಲ್ಲೂ ಜನರ ಬೆಂಬಲ ಸ್ಪಷ್ಟವಾಗಿದ್ದರೆ ಸ್ವಾತಂತ್ರ್ಯದ ಕುರಿತು ಜನಮತಗಣನೆ ನಡೆಸಲು ಅವಕಾಶ ನೀಡುವ ಬಗ್ಗೆ ಸರ್ಕಾರ ಯೋಚಿಸಬಹುದು ಎಂದು ಹೇಳಿದರು.
ಈ ಹೇಳಿಕೆ ಲಂಡನ್ ನಲ್ಲಿ ದೊಡ್ಡ ರಾಜಕೀಯ ಚರ್ಚೆಗೆ ಕಾರಣವಾಯಿತು.
ಸ್ಕಾಟ್ ಲ್ಯಾಂಡ್ ನಲ್ಲಿ ಎರಡನೇ ಸ್ವಾತಂತ್ರ್ಯ ಜನಮತಗಣನೆಗೆ ಅವಕಾಶ ನೀಡುವುದಿಲ್ಲ ಎಂಬುದು ಲಂಡನ್ ಸರ್ಕಾರದ ದಶಕಗಳ ನಿಲುವಾಗಿತ್ತು. ಪ್ರಧಾನಿಯ ಹೇಳಿಕೆಯನ್ನು ಸ್ಕಾಟ್ ಲ್ಯಾಂಡ್ ನ ಫಸ್ಟ್ ಮಿನಿಸ್ಟರ್ ಜಾನ್ ಸ್ವೀನಿ ತಮ್ಮ ಪರವಾಗಿ ಬಳಸಿಕೊಂಡರು.
‘ಜನರ ಅಭಿಪ್ರಾಯವನ್ನು ಗೌರವಿಸುವುದಾದರೆ ಜನಮತಗಣನೆ ನಡೆಸಲು ಕಾನೂನು ಚೌಕಟ್ಟು ರೂಪಿಸಿ ಮಾತುಕತೆ ಆರಂಭಿಸಿ’ ಎಂದು ಅವರು ಪ್ರಧಾನಿಗೆ ಪತ್ರ ಬರೆದರು.
ಇದಾದ ಬಳಿಕ ಬರ್ನ್ಹ್ಯಾಮ್ ತಮ್ಮ ಹೇಳಿಕೆಯಿಂದ ಹಿಂದೆ ಸರಿದರು.
ಸ್ಕಾಟ್ ಲ್ಯಾಂಡ್ ನಲ್ಲಿ ಎರಡನೇ ಸ್ವಾತಂತ್ರ್ಯ ಜನಮತಗಣನೆ ನಡೆಸಲು ಅವಕಾಶವಿಲ್ಲ ಎಂದು ಅವರು ಸ್ಪಷ್ಟಪಡಿಸಿದರು. ಜನರ ಜೀವನ ವೆಚ್ಚ ಕಡಿಮೆ ಮಾಡುವುದು ಮತ್ತು ಆರ್ಥಿಕ ಸುಧಾರಣೆ ತರುವುದು ತಮ್ಮ ಸರ್ಕಾರದ ಆದ್ಯತೆ ಎಂದು ಹೇಳಿದರು. ಆದರೆ ಅಷ್ಟರಲ್ಲಾಗಲೇ ಸ್ವೀನಿ ಸೇರಿದಂತೆ ಪ್ರತ್ಯೇಕತೆಯ ಪರ ಇರುವ ನಾಯಕರು ಪ್ರಧಾನಿಯ ಹೇಳಿಕೆಯನ್ನು ತಮ್ಮ ರಾಜಕೀಯ ಬೇಡಿಕೆಗೆ ಬಳಸಿಕೊಂಡಿದ್ದರು.
ಕಾರ್ಡಿಫ್ ಸಭೆಯ ಬಳಿಕ ಸ್ವೀನಿ, ಬರ್ನ್ಹ್ಯಾಮ್ ಯುನೈಟೆಡ್ ಕಿಂಗ್ ಡಮ್ ನ ಕೊನೆಯ ಪ್ರಧಾನಿಯಾಗಿ ಇತಿಹಾಸದಲ್ಲಿ ದಾಖಲಾಗಬಹುದು ಎಂದು ವ್ಯಂಗ್ಯವಾಡಿದರು.
►ಯುನೈಟೆಡ್ ಕಿಂಗ್ ಡಮ್ ಹೇಗೆ ರೂಪುಗೊಂಡಿತು?
ಬ್ರಿಟನ್ ಈಗ ಎದುರಿಸುತ್ತಿರುವ ಸಮಸ್ಯೆಯನ್ನು ಅರ್ಥಮಾಡಿಕೊಳ್ಳಲು ಅದು ಹೇಗೆ ರೂಪುಗೊಂಡಿತು ಎಂಬುದನ್ನು ತಿಳಿಯಬೇಕು.
1536ರಲ್ಲಿ ವೇಲ್ಸ್ ಅನ್ನು ಇಂಗ್ಲೆಂಡ್ ಗೆ ಸೇರಿಸಲಾಯಿತು. 1707ರಲ್ಲಿ ಇಂಗ್ಲೆಂಡ್ ಮತ್ತು ಸ್ಕಾಟ್ ಲ್ಯಾಂಡ್ ಒಕ್ಕೂಟ ಮಾಡಿಕೊಂಡವು. ಇದರಿಂದ ಗ್ರೇಟ್ ಬ್ರಿಟನ್ ರೂಪುಗೊಂಡಿತು. 1801ರಲ್ಲಿ ಇಡೀ ಐರ್ಲೆಂಡ್ ದ್ವೀಪವೂ ಈ ಒಕ್ಕೂಟಕ್ಕೆ ಸೇರಿತು.
ಆದರೆ 1920ರ ದಶಕದಲ್ಲಿ ನಡೆದ ಹಿಂಸಾತ್ಮಕ ಸಂಘರ್ಷದ ಬಳಿಕ ಐರ್ಲೆಂಡ್ ನ ದಕ್ಷಿಣ ಭಾಗ ಬ್ರಿಟನ್ ನಿಂದ ಬೇರ್ಪಟ್ಟು ಸ್ವತಂತ್ರ ರಾಷ್ಟ್ರವಾಯಿತು. ಆರು ಕೌಂಟಿಗಳನ್ನು ಹೊಂದಿರುವ ಉತ್ತರ ಐರ್ಲೆಂಡ್ ಮಾತ್ರ ಬ್ರಿಟನ್ ನಲ್ಲೇ ಉಳಿಯಿತು. ಹೀಗೆ ರೂಪುಗೊಂಡ ಬ್ರಿಟನ್ ಒಕ್ಕೂಟ ಕಳೆದ 25 ವರ್ಷಗಳಿಂದ ನಿಧಾನವಾಗಿ ದುರ್ಬಲವಾಗುತ್ತಿದೆ.
1990ರ ದಶಕದ ಕೊನೆಯಲ್ಲಿ ಬ್ರಿಟನ್ ಸರ್ಕಾರ ಅಧಿಕಾರ ವಿಕೇಂದ್ರೀಕರಣದ ನೀತಿ ಜಾರಿಗೆ ತಂದಿತು. ಅಂದರೆ, ಎಲ್ಲ ಅಧಿಕಾರವನ್ನು ಲಂಡನ್ ನಲ್ಲಿ ಇಟ್ಟುಕೊಳ್ಳದೆ ಸ್ಕಾಟ್ ಲ್ಯಾಂಡ್, ವೇಲ್ಸ್ ಮತ್ತು ಉತ್ತರ ಐರ್ಲೆಂಡ್ಗೂ ಕೆಲವು ಅಧಿಕಾರಗಳನ್ನು ನೀಡಲಾಯಿತು.
ಈ ಮೂರು ಪ್ರಾಂತ್ಯಗಳಿಗೆ ತಮ್ಮದೇ ಸಂಸತ್ತು ಮತ್ತು ಸರ್ಕಾರಗಳನ್ನು ರಚಿಸಿಕೊಳ್ಳಲು ಅವಕಾಶ ನೀಡಲಾಯಿತು. ಇದರಿಂದ ಪ್ರತ್ಯೇಕತೆಯ ಬೇಡಿಕೆ ಕಡಿಮೆಯಾಗಬಹುದು ಎಂದು ಬ್ರಿಟನ್ ಸರ್ಕಾರ ಭಾವಿಸಿತ್ತು. ಆದರೆ ಈಗ ಇದೇ ಪ್ರಾದೇಶಿಕ ಸರ್ಕಾರಗಳು ಬ್ರಿಟನ್ ಒಕ್ಕೂಟದಿಂದ ಹೊರಬರುವ ಬೇಡಿಕೆಗೆ ಪ್ರಮುಖ ವೇದಿಕೆಗಳಾಗಿವೆ.
►ಸ್ಕಾಟ್ ಲ್ಯಾಂಡ್ ಏಕೆ ಸ್ವತಂತ್ರವಾಗಲು ಬಯಸುತ್ತಿದೆ?
ಸ್ಕಾಟ್ ಲ್ಯಾಂಡ್ ನಲ್ಲಿ ಬ್ರಿಟನ್ ನಿಂದ ಬೇರ್ಪಡುವ ಬೇಡಿಕೆ ಹಲವು ವರ್ಷಗಳಿಂದ ಇದೆ. 2014ರಲ್ಲಿ ಸ್ವಾತಂತ್ರ್ಯದ ಕುರಿತು ಜನಮತಗಣನೆ ನಡೆದಿತ್ತು. ಆಗ ಶೇ. 55ರಷ್ಟು ಜನರು ಬ್ರಿಟನ್ ನಲ್ಲೇ ಉಳಿಯಲು ಮತ ಹಾಕಿದರು. ಶೇ. 45ರಷ್ಟು ಜನರು ಸ್ವಾತಂತ್ರ್ಯಕ್ಕೆ ಮತ ಹಾಕಿದರು.
2016ರಲ್ಲಿ ಬ್ರೆಕ್ಸಿಟ್ ನಡೆಯಿತು. ಬ್ರಿಟನ್ ಯೂರೋಪಿಯನ್ ಯೂನಿಯನ್ ನಿಂದ ಹೊರಬರುವ ನಿರ್ಧಾರ ಕೈಗೊಂಡಿತು. ಆದರೆ ಸ್ಕಾಟ್ ಲ್ಯಾಂಡ್ ನಲ್ಲಿ ಶೇ. 62ರಷ್ಟು ಜನರು ಯೂರೋಪಿಯನ್ ಯೂನಿಯನ್ ನಲ್ಲೇ ಉಳಿಯಲು ಮತ ಹಾಕಿದ್ದರು. ಆದರೂ ಇಂಗ್ಲೆಂಡ್ ನ ಜನಸಂಖ್ಯೆ ಹೆಚ್ಚಿರುವುದರಿಂದ ಒಟ್ಟಾರೆ ಬ್ರಿಟನ್ ಯೂರೋಪಿಯನ್ ಯೂನಿಯನ್ ನಿಂದ ಹೊರಬರಬೇಕಾಯಿತು.
ಇದರಿಂದ ಸ್ಕಾಟ್ ಜನರಲ್ಲಿ ಅಸಮಾಧಾನ ಹೆಚ್ಚಾಯಿತು.
‘ಲಂಡನ್ ತೆಗೆದುಕೊಳ್ಳುವ ನಿರ್ಧಾರಗಳು ನಮ್ಮ ಅಭಿಪ್ರಾಯಕ್ಕೆ ವಿರುದ್ಧವಾಗಿದ್ದರೂ ನಮ್ಮ ಮೇಲೆ ಹೇರಲಾಗುತ್ತಿವೆ’ ಎಂಬ ಭಾವನೆ ಅಲ್ಲಿ ಬಲವಾಯಿತು. ಸ್ಕಾಟ್ ಲ್ಯಾಂಡ್ ನಲ್ಲಿ ಉತ್ಪತ್ತಿಯಾಗುವ ತೈಲ ಮತ್ತು ಅನಿಲ ಸಂಪನ್ಮೂಲಗಳ ಲಾಭ ಲಂಡನ್ ಗೆ ಹೋಗುತ್ತಿದೆ ಎಂಬುದು ಸ್ಕಾಟಿಷ್ ನ್ಯಾಷನಲ್ ಪಾರ್ಟಿಯ ಪ್ರಮುಖ ಆರೋಪವಾಗಿದೆ.
ಸ್ಕಾಟ್ ಲ್ಯಾಂಡ್ ಸ್ವತಂತ್ರವಾದರೆ ಯೂರೋಪಿಯನ್ ಯೂನಿಯನ್ ಗೆ ಮತ್ತೆ ಸೇರಬಹುದು. ನಾರ್ವೆ ಅಥವಾ ಡೆನ್ಮಾರ್ಕ್ನಂತಹ ಶ್ರೀಮಂತ ರಾಷ್ಟ್ರವಾಗಬಹುದು ಎಂದು ಸ್ಕಾಟ್ ನಾಯಕರು ಹೇಳುತ್ತಿದ್ದಾರೆ.
ಇತ್ತೀಚಿನ ಸಮೀಕ್ಷೆಗಳ ಪ್ರಕಾರ ಸ್ಕಾಟ್ ಲ್ಯಾಂಡ್ ನಲ್ಲಿ ಸ್ವಾತಂತ್ರ್ಯ ಬಯಸುವವರ ಸಂಖ್ಯೆ ಶೇ. 47 ದಾಟಿದೆ. ಹಲವು ಸಮೀಕ್ಷೆಗಳಲ್ಲಿ ಸ್ವಾತಂತ್ರ್ಯದ ಪರವಾದ ಅಭಿಪ್ರಾಯವೇ ಮುಂದಿದೆ.
ಹೀಗಾಗಿ ಎರಡನೇ ಜನಮತಗಣನೆಗೆ ಲಂಡನ್ ನಿರಾಕರಿಸುವುದು ಪ್ರಜಾಪ್ರಭುತ್ವಕ್ಕೆ ವಿರುದ್ಧ ಎಂದು ಸ್ಕಾಟಿಷ್ ಸರ್ಕಾರ ವಾದಿಸುತ್ತಿದೆ.
►ವೇಲ್ಸ್ ನಲ್ಲೂ ಸ್ವಾತಂತ್ರ್ಯದ ಬೇಡಿಕೆ ಹೆಚ್ಚಳ
ವೇಲ್ಸ್ ನಲ್ಲಿ ಇತ್ತೀಚಿನವರೆಗೂ ಬ್ರಿಟನ್ ನಿಂದ ಬೇರ್ಪಡುವ ಬೇಡಿಕೆ ಹೆಚ್ಚು ಪ್ರಬಲವಾಗಿರಲಿಲ್ಲ. ಆದರೆ ಕಳೆದ ಮೇ ತಿಂಗಳಲ್ಲಿ ನಡೆದ ಸಾರ್ವತ್ರಿಕ ಚುನಾವಣೆಯಲ್ಲಿ ಪ್ಲೈಡ್ ಕುಮ್ರಿ ಪಕ್ಷ ಅತಿ ದೊಡ್ಡ ಪಕ್ಷವಾಗಿ ಹೊರಹೊಮ್ಮಿತು. ಅದು ಲೇಬರ್ ಪಕ್ಷವನ್ನು ಸೋಲಿಸಿತು.
ಪಕ್ಷದ ಮುಖ್ಯಸ್ಥ ರೈನ್ ಆಪ್ ಯೋರ್ವರ್ತ್ ವೇಲ್ಸ್ ನ ಫಸ್ಟ್ ಮಿನಿಸ್ಟರ್ ಆದ ಬಳಿಕ ಅಲ್ಲಿನ ರಾಜಕೀಯದಲ್ಲಿ ಬದಲಾವಣೆ ಕಂಡುಬಂದಿದೆ. ವೇಲ್ಸ್ ನ ನೀರು, ವಿದ್ಯುತ್ ಮತ್ತು ನೈಸರ್ಗಿಕ ಸಂಪನ್ಮೂಲಗಳನ್ನು ಇಂಗ್ಲೆಂಡ್ ಬಳಸಿಕೊಳ್ಳುತ್ತಿದೆ ಎಂಬ ಭಾವನೆಯನ್ನು ಪ್ಲೈಡ್ ಕುಮ್ರಿ ಪಕ್ಷ ಜನರಲ್ಲಿ ಮೂಡಿಸಿದೆ.
ಈಗ ವೇಲ್ಸ್ ನ ಸುಮಾರು ಶೇ 32ರಷ್ಟು ಜನರು ಸ್ವಾತಂತ್ರ್ಯವನ್ನು ಬೆಂಬಲಿಸುತ್ತಿದ್ದಾರೆ. ಇದು ಅಲ್ಲಿನ ಇತಿಹಾಸದಲ್ಲೇ ಅತ್ಯಂತ ಹೆಚ್ಚಿನ ಪ್ರಮಾಣವಾಗಿದೆ.
►ಉತ್ತರ ಐರ್ಲೆಂಡ್ ನಲ್ಲಿ ಹಳೆಯ ಸಂಘರ್ಷ
ಉತ್ತರ ಐರ್ಲೆಂಡ್ ನ ಸಮಸ್ಯೆ ಇನ್ನಷ್ಟು ಸಂಕೀರ್ಣವಾಗಿದೆ. 1960ರ ದಶಕದಿಂದ 1990ರ ದಶಕದ ಕೊನೆಯವರೆಗೆ ಅಲ್ಲಿ ಭೀಕರ ಸಂಘರ್ಷ ನಡೆಯಿತು. ಬ್ರಿಟನ್ ನಲ್ಲೇ ಉಳಿಯಲು ಬಯಸಿದ ಪ್ರೊಟೆಸ್ಟಂಟ್ ಯೂನಿಯನಿಸ್ಟ್ ಗಳು ಮತ್ತು ಐರ್ಲೆಂಡ್ ನೊಂದಿಗೆ ಸೇರಲು ಬಯಸಿದ ಕ್ಯಾಥೊಲಿಕ್ ರಿಪಬ್ಲಿಕನ್ನರ ನಡುವೆ ಸಂಘರ್ಷ ನಡೆಯಿತು.
‘ದಿ ಟ್ರಬಲ್ಸ್’ ಎಂದು ಕರೆಯಲಾಗುವ ಈ ಸಂಘರ್ಷದಲ್ಲಿ 3,500ಕ್ಕೂ ಹೆಚ್ಚು ಜನರು ಸಾವನ್ನಪ್ಪಿದರು. 1998ರಲ್ಲಿ ಗುಡ್ ಫ್ರೈಡೆ ಒಪ್ಪಂದಕ್ಕೆ ಸಹಿ ಹಾಕಲಾಯಿತು. ಇದರಿಂದ ಸಂಘರ್ಷಕ್ಕೆ ಅಂತ್ಯ ಹಾಡಲು ಸಾಧ್ಯವಾಯಿತು.
ಈ ಒಪ್ಪಂದದಲ್ಲಿ ಒಂದು ಪ್ರಮುಖ ನಿಯಮವಿದೆ.
ಉತ್ತರ ಐರ್ಲೆಂಡ್ ನ ಬಹುಮತದ ಜನರು ಬ್ರಿಟನ್ ನಿಂದ ಹೊರಬಂದು ಐರ್ಲೆಂಡ್ ಗಣರಾಜ್ಯದೊಂದಿಗೆ ಸೇರಲು ಬಯಸಿದರೆ ಜನಮತಗಣನೆ ನಡೆಸಬೇಕು. ಇದನ್ನು ಬಾರ್ಡರ್ ಪೋಲ್ ಎಂದು ಕರೆಯಲಾಗುತ್ತದೆ. ಈಗ ಉತ್ತರ ಐರ್ಲೆಂಡ್ ನಲ್ಲಿ ಐರ್ಲೆಂಡ್ ನೊಂದಿಗೆ ಮತ್ತೆ ಒಂದಾಗಬೇಕು ಎಂದು ಬಯಸುವ ಶಿನ್ ಫೇನ್ ಪಕ್ಷವೇ ಅತಿ ದೊಡ್ಡ ರಾಜಕೀಯ ಶಕ್ತಿಯಾಗಿದೆ.
ಮಿಚೆಲ್ ಓ’ನೀಲ್ ಉತ್ತರ ಐರ್ಲೆಂಡ್ ನ ಫಸ್ಟ್ ಮಿನಿಸ್ಟರ್ ಆಗಿದ್ದಾರೆ. ಐರ್ಲೆಂಡ್ ದ್ವೀಪವನ್ನು ಮತ್ತೆ ಒಂದಾಗಿಸುವುದು ಶಿನ್ ಫೇನ್ ಪಕ್ಷದ ಪ್ರಮುಖ ಗುರಿಯಾಗಿದೆ. ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಇತ್ತೀಚೆಗೆ ಡಬ್ಲಿನ್ ಗೆ ಭೇಟಿ ನೀಡಿದ್ದರು.
ಆ ಸಂದರ್ಭದಲ್ಲಿ ಐರ್ಲೆಂಡ್ ಒಂದಾಗುವುದನ್ನು ನೋಡಲು ಬಯಸುತ್ತೇನೆ; ಅದು ಈಗಲೇ ನಡೆದರೆ ಒಳ್ಳೆಯದು ಎಂದು ಅವರು ಹೇಳಿದ್ದರು. ಟ್ರಂಪ್ ಅವರ ಈ ಹೇಳಿಕೆ ಶಿನ್ಫೇನ್ ಪಕ್ಷಕ್ಕೆ ಅಂತರರಾಷ್ಟ್ರೀಯ ಮಟ್ಟದಲ್ಲಿ ಉತ್ತೇಜನ ನೀಡಿದೆ.ದಶಕಗಳಿಂದ ಅಮೆರಿಕ ಕಾಪಾಡಿಕೊಂಡು ಬಂದಿದ್ದ ತಟಸ್ಥ ನಿಲುವಿನಿಂದ ಈ ಹೇಳಿಕೆ ದೂರವಾಗಿದೆ ಎಂಬ ಅಭಿಪ್ರಾಯವೂ ವ್ಯಕ್ತವಾಗಿದೆ.
ಮೌಂಟ್ಬ್ಯಾಟನ್ ಹತ್ಯೆಯ ನೆನಪು
ಈ ಬೆಳವಣಿಗೆಯ ಹಿಂದೆ ಇರುವ ಇತಿಹಾಸವನ್ನು ಅರ್ಥಮಾಡಿಕೊಳ್ಳಲು ಭಾರತದ ಇತಿಹಾಸವೂ ಮುಖ್ಯವಾಗಿದೆ. ಭಾರತದ ಕೊನೆಯ ವೈಸ್ ರಾಯ್ ಲಾರ್ಡ್ ಲೂಯಿಸ್ ಮೌಂಟ್ಬ್ಯಾಟನ್ ಅವರು ಭಾರತದ ವಿಭಜನೆ ಮತ್ತು ಬ್ರಿಟಿಷರ ನಿರ್ಗಮನವನ್ನು ನಿರ್ವಹಿಸಿದ್ದರು.
1979ರ ಆಗಸ್ಟ್ 27ರಂದು ಅವರನ್ನು ಐರ್ಲೆಂಡ್ ನಲ್ಲಿ ಹತ್ಯೆ ಮಾಡಲಾಯಿತು.
ಐರ್ಲೆಂಡ್ ನ ಪಶ್ಚಿಮ ಕರಾವಳಿಯಲ್ಲಿ ಮೀನುಗಾರಿಕಾ ದೋಣಿಯಲ್ಲಿ ತೆರಳುತ್ತಿದ್ದಾಗ ಐರಿಷ್ ರಿಪಬ್ಲಿಕನ್ ಆರ್ಮಿ ಇಟ್ಟಿದ್ದ ಬಾಂಬ್ ಸ್ಫೋಟಗೊಂಡಿತು. ಮೌಂಟ್ಬ್ಯಾಟನ್ ಸಾವನ್ನಪ್ಪಿದರು. ಅವರ 14 ವರ್ಷದ ಮೊಮ್ಮಗ ನಿಕೋಲಸ್ ಮತ್ತು ಸ್ಥಳೀಯ ಬಾಲಕ ಪಾಲ್ ಮ್ಯಾಕ್ಸ್ವೆಲ್ ಕೂಡ ಮೃತಪಟ್ಟರು.
ಬ್ರಿಟಿಷ್ ರಾಜಮನೆತನದ ಆಪ್ತರಾಗಿದ್ದ ಮೌಂಟ್ಬ್ಯಾಟನ್ ಬ್ರಿಟನ್ ನ ಸಾಮ್ರಾಜ್ಯಶಾಹಿ ಶಕ್ತಿಯ ಪ್ರಮುಖ ಸಂಕೇತವಾಗಿದ್ದರು. ಆ ಸಮಯದಲ್ಲಿ ಐರಿಷ್ ರಿಪಬ್ಲಿಕನ್ ಆರ್ಮಿ ಹಿಂಸಾಚಾರದ ಮೂಲಕ ಸಾಧಿಸಲು ಬಯಸಿದ್ದ ಪ್ರಮುಖ ಗುರಿ ಉತ್ತರ ಐರ್ಲೆಂಡ್ ಅನ್ನು ಬ್ರಿಟನ್ ನಿಂದ ಬೇರ್ಪಡಿಸುವುದಾಗಿತ್ತು.
ಇದೇ ಗುರಿಯನ್ನು ಇಂದು ಶಿನ್ಫೇನ್ ಪಕ್ಷ ಚುನಾವಣಾ ರಾಜಕಾರಣದ ಮೂಲಕ ಸಾಧಿಸಲು ಪ್ರಯತ್ನಿಸುತ್ತಿದೆ. ಅಂದಿನ ಹೋರಾಟ ಬಂದೂಕುಗಳ ಮೂಲಕ ನಡೆದಿತ್ತು. ಈಗ ಅದೇ ಬೇಡಿಕೆ ಮತಪೆಟ್ಟಿಗೆ ಮತ್ತು ಸಂವಿಧಾನದ ಮೂಲಕ ಮುಂದುವರಿದಿದೆ. ಮೌಂಟ್ಬ್ಯಾಟನ್ ಹತ್ಯೆಯಿಂದ ಇಂದಿನ ಕಾರ್ಡಿಫ್ ಒಪ್ಪಂದದವರೆಗಿನ ಬೆಳವಣಿಗೆಗಳು ಐರ್ಲೆಂಡ್ ನ ರಾಜಕೀಯ ಇತಿಹಾಸದಲ್ಲಿ ಆಗಿರುವ ದೊಡ್ಡ ಬದಲಾವಣೆಯನ್ನು ತೋರಿಸುತ್ತವೆ.
►ಲಂಡನ್ ಗೆ ದೊಡ್ಡ ಸವಾಲು
ಈಗ ಬ್ರಿಟಿಷ್ ಸರ್ಕಾರದ ಮುಂದೆ ಕಠಿಣ ಪರಿಸ್ಥಿತಿ ನಿರ್ಮಾಣವಾಗಿದೆ. ಸ್ಕಾಟ್ ಲ್ಯಾಂಡ್, ವೇಲ್ಸ್ ಮತ್ತು ಉತ್ತರ ಐರ್ಲೆಂಡ್ ನ ಬೇಡಿಕೆಯನ್ನು ಪ್ರಧಾನಿ ಬರ್ನ್ಹ್ಯಾಮ್ ಸಂಪೂರ್ಣವಾಗಿ ತಿರಸ್ಕರಿಸಿದರೆ, ಬ್ರಿಟನ್ ಜನರ ಸ್ವಯಂ ನಿರ್ಧಾರದ ಹಕ್ಕನ್ನು ತಡೆಯುತ್ತಿದೆ ಎಂಬ ಟೀಕೆ ಎದುರಿಸಬೇಕಾಗಬಹುದು.
ಜನಮತಗಣನೆಗೆ ಅವಕಾಶ ನೀಡಿದರೆ ಯುನೈಟೆಡ್ ಕಿಂಗ್ ಡಮ್ ವಿಭಜನೆಯಾಗುವ ಅಪಾಯವಿದೆ. ಇದರ ನಡುವೆ ಬ್ರಿಟನ್ ಆರ್ಥಿಕ ಸಮಸ್ಯೆಗಳನ್ನು ಎದುರಿಸುತ್ತಿದೆ. ಜೀವನ ವೆಚ್ಚ ಹೆಚ್ಚಾಗಿದೆ. ಜಾಗತಿಕ ರಾಜಕೀಯದಲ್ಲೂ ಬ್ರಿಟನ್ ನ ಪ್ರಭಾವ ಕಡಿಮೆಯಾಗುತ್ತಿದೆ.
ಇಂತಹ ಸಂದರ್ಭದಲ್ಲಿ ಸಾಂವಿಧಾನಿಕ ಬಿಕ್ಕಟ್ಟು ಬ್ರಿಟನ್ ಗೆ ಮತ್ತೊಂದು ದೊಡ್ಡ ಸಮಸ್ಯೆಯಾಗಿದೆ. ಯುನೈಟೆಡ್ ಕಿಂಗ್ ಡಮ್ ಇನ್ನೆಷ್ಟು ಕಾಲ ಒಂದಾಗಿ ಉಳಿಯಲಿದೆ ಎಂಬ ಪ್ರಶ್ನೆ ಈಗ ಜಾಗತಿಕ ಮಟ್ಟದಲ್ಲಿ ಚರ್ಚೆಯಾಗುತ್ತಿದೆ.
ಸ್ಕಾಟ್ ಲ್ಯಾಂಡ್, ವೇಲ್ಸ್ ಮತ್ತು ಉತ್ತರ ಐರ್ಲೆಂಡ್ ಲಂಡನ್ ನ ನಿಯಂತ್ರಣದಿಂದ ಹೊರಬರಲು ಒಂದಾಗಿ ಹೆಜ್ಜೆ ಇಟ್ಟಿರುವುದು ಕೇವಲ ಇಂದಿನ ರಾಜಕೀಯ ಬೆಳವಣಿಗೆಯಲ್ಲ. ಬ್ರಿಟನ್ ನ ದೀರ್ಘಕಾಲದ ಆಡಳಿತ ವ್ಯವಸ್ಥೆಯ ಪರಿಣಾಮವೂ ಇದರಲ್ಲಿ ಇದೆ ಎಂಬ ವಾದವಿದೆ.
ಒಂದು ಕಾಲದಲ್ಲಿ ಜಗತ್ತಿನ ಹಲವು ದೇಶಗಳನ್ನು ಆಳಿದ್ದ ಲಂಡನ್, ಇಂದು ತನ್ನದೇ ಒಕ್ಕೂಟವನ್ನು ಉಳಿಸಿಕೊಳ್ಳುವ ಸವಾಲು ಎದುರಿಸುತ್ತಿದೆ. ಕಾರ್ಡಿಫ್ ಒಪ್ಪಂದ ಈ ಬಿಕ್ಕಟ್ಟಿಗೆ ಹೊಸ ತಿರುವು ನೀಡಿದೆ. ಬೆಳವಣಿಗೆಗಳು ಇದೇ ರೀತಿ ಮುಂದುವರಿದರೆ, ‘ಯುನೈಟೆಡ್ ಕಿಂಗ್ ಡಮ್’ ಎಂಬ ಹೆಸರು ಮುಂದೊಂದು ದಿನ ಇತಿಹಾಸದ ಪುಸ್ತಕಗಳಲ್ಲಿ ಮಾತ್ರ ಉಳಿಯಬಹುದೇ ಎಂಬ ಪ್ರಶ್ನೆಯೂ ಈಗ ಎದ್ದಿದೆ.






