ವ್ಯಾಜ್ಯ ಮತ್ತಿತರ ಕಾರಣ: ಸಾವಿರಾರು ಕೋಟಿ ರೂ. ಕಾಮಗಾರಿಗಳು ನನೆಗುದಿಗೆ; ಸಿಎಜಿ ವರದಿ

ಸಾಂದರ್ಭಿಕ ಚಿತ್ರ PC: freepik
ಬೆಂಗಳೂರು, ಆ.24: ವ್ಯಾಜ್ಯ ಮತ್ತಿತರ ಕಾರಣಗಳಿಂದ ರಾಜ್ಯದಲ್ಲಿ ಸಾವಿರಾರು ಕೋಟಿ ರೂ. ಮೊತ್ತದ ಕಾಮಗಾರಿಗಳು ನನೆಗುದಿಗೆ ಬಿದ್ದಿವೆ. ಅಲ್ಲದೆ ನಿಗದಿಪಡಿಸಿದ್ದ ಗುರಿ ಮತ್ತು ಅವಧಿಯೊಳಗೆ ಹಲವು ಯೋಜನೆಗಳು ಮೂರು ವರ್ಷಗಳಿಗೂ ಹೆಚ್ಚು ಕಾಲದಿಂದ ಅಪೂರ್ಣವಾಗಿಯೇ ಉಳಿದಿವೆ. ಹೀಗೆ ಅಪೂರ್ಣಗೊಂಡಿರುವ ಯೋಜನೆಗಳಲ್ಲಿ ರಾಜ್ಯದ ಬಂಡವಾಳವೂ ಬಂಧಿತವಾಗಿದೆ. ಅಲ್ಲದೆ ವೆಚ್ಚದ ಗುಣಮಟ್ಟದ ಮೇಲೂ ನಕಾರಾತ್ಮಕ ಪರಿಣಾಮವೂ ಬೀರುತ್ತಿರುವುದನ್ನು ಸಿಎಜಿಯು ಪತ್ತೆ ಹಚ್ಚಿದೆ.
2025ರ ಆಗಸ್ಟ್ನಲ್ಲಿ ನಡೆದಿರುವ ರಾಜ್ಯ ವಿಧಾನಮಂಡಲ ಅಧಿವೇಶನದಲ್ಲಿ ಮಂಡನೆಯಾಗಿರುವ ಸಿಎಜಿ ವರದಿಯು, ಅಪೂರ್ಣ ಯೋಜನೆಗಳಲ್ಲಿ ಬಂಧಿತವಾಗಿರುವ ಬಂಡವಾಳದ ಕುರಿತೂ ವಿಶ್ಲೇಷಣೆ ನಡೆಸಿದೆ.
ವಿಶೇಷವೆಂದರೇ ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾಗಿದ್ದ ಮೊದಲ ಮತ್ತು ಎರಡನೇ ಅವಧಿಯ 2023-24ರವರೆಗೆ ಅಪೂರ್ಣಗೊಂಡಿರುವ ಯೋಜನೆಗಳು ಮತ್ತು ಈ ಯೋಜನೆಗಳ ಮೇಲೆ ಹೂಡಿಕೆ ಮಾಡಿರುವ ಬಂಡವಾಳದ ಅಂಕಿ ಅಂಶಗಳ ವರದಿ ಮೇಲೆ ಬೆಳಕು ಚೆಲ್ಲಿದೆ.
ಲೋಕೋಪಯೋಗಿ, ಬಂದರು, ಒಳನಾಡು ಜಲ ಸಾರಿಗೆ ಮತ್ತು ನೀರಾವರಿ ಇಲಾಖೆಗಳಲ್ಲಿಯೇ ಅತೀ ಹೆಚ್ಚು ಯೋಜನೆಗಳು ಅಪೂರ್ಣಗೊಂಡಿವೆ. ಕಾಮಗಾರಿಗಳ ವಿಳಂಬದಿಂದಾಗಿ ಯೋಜನೆಗಳು ಅಪೂರ್ಣಗೊಂಡಿರುವುದಕ್ಕೆ ಈ ಇಲಾಖೆಗಳು ಸಮರ್ಥನೀಯ ಅಂಶ ಅಥವಾ ಯಾವುದೇ ಕಾರಣಗಳನ್ನೂ ಸಿಎಜಿಗೆ ಒದಗಿಸಿಲ್ಲ ಎಂಬುದು ವರದಿಯಿಂದ ಗೊತ್ತಾಗಿದೆ.
ರಸ್ತೆ ಮತ್ತು ಸೇತುವೆಗಳ ಮೇಲಿನ ಬಂಡವಾಳ ಹೂಡಲು ಹಂಚಿಕೆ ಮಾಡಿರುವ ಮೊತ್ತವನ್ನು ಇಳಿಕೆ ಮಾಡಿರುವ ಕಾರಣ, ಈ ವಿಭಾಗಗಳಲ್ಲಿ ಯೋಜನೆಗಳು ಅಪೂರ್ಣಗೊಂಡಿವೆ. ಸರಕಾರದ ಈ ಕ್ರಮದಿಂದಾಗಿ ಈ ಯೋಜನೆಗಳು ಕುಂಠಿತಗೊಂಡಿವೆ. ಇದರಿಂದಾಗಿ ವೆಚ್ಚದಲ್ಲಿಯೂ ಸಹ ಗಣನೀಯ ಏರಿಕೆ ಕಂಡಿದೆ.
ಸಿದ್ದರಾಮಯ್ಯ ಅವರ ನೇತೃತ್ವದಲ್ಲಿ ಅಂದರೆ 2013-14ರಿಂದ 2018-19ರವರೆಗೆ 884 ಕೋಟಿ ರೂ. ವೆಚ್ಚದಲ್ಲಿ 271 ಯೋಜನೆಗಳಿಗೆ ಚಾಲನೆ ನೀಡಿತ್ತು. ಈ ಪೈಕಿ 479 ಕೋಟಿ ರೂ. ವೆಚ್ಚವಾಗಿತ್ತು. ಇದಾದ ನಂತರ ಸಿದ್ದರಾಮಯ್ಯ ಅವರ ನೇತೃತ್ವದಲ್ಲಿ ಕಾಂಗ್ರೆಸ್ ಪಕ್ಷವು ಎರಡನೇ ಬಾರಿಗೆ ಅಧಿಕಾರಕ್ಕೆ ಬಂದ ಆರಂಭಿಕ ವರ್ಷದಲ್ಲೇ 1,236 ಯೋಜನೆಗಳಿಗೆ ಚಾಲನೆ ನೀಡಿತ್ತು. ಈ ಯೋಜನೆಗಳಿಗೆ 3,579 ಕೋಟಿ ರೂ. ವೆಚ್ಚವಾಗಲಿದೆ ಎಂದು ಅಂದಾಜಿಸಿತ್ತು. ಈ ಪೈಕಿ 1,175 ಕೋಟಿ ರೂ. ವೆಚ್ಚವಾಗಿದೆ.
2013-14ರಿಂದ 2023-24ರವರೆಗೆ ಜಾರಿಗೊಂಡಿದ್ದ ಒಟ್ಟು ಯೋಜನೆಗಳ ಪೈಕಿ 3,140 ಯೋಜನೆಗಳು ಅಪೂರ್ಣಗೊಂಡಿವೆ. ಇದರ ಅಂದಾಜು ಮೊತ್ತ 8,920 ಕೋಟಿ ರೂ. ಇದೆ. ಈ ಪೈಕಿ ಈಗಾಗಲೇ 4,482 ಕೋಟಿ ರೂ. ವೆಚ್ಚವಾಗಿದೆ. ಇದರಲ್ಲಿ ರಸ್ತೆ, ಸೇತುವೆ, ನೀರಾವರಿ ಮತ್ತು ಕಟ್ಟಡಗಳಿಗೆ ಸಂಬಂಧಿತ ಕಾಮಗಾರಿಗಳಿವೆ ಎಂದು ವರದಿಯಲ್ಲಿ ವಿವರಿಸಲಾಗಿದೆ.
ವ್ಯಾಜ್ಯ ಇತ್ಯಾದಿ ಕಾರಣಗಳಿಂದ ಸ್ಥಗಿತಗೊಂಡ ಕಾಮಗಾರಿಗಳನ್ನು ಒಳಗೊಂಡಿರುವ ಅಪೂರ್ಣ ಕಾಮಗಾರಿಗಳಲ್ಲಿ ಹಣವು ಬಂಧಿತವಾಗುವುದು ವೆಚ್ಚದ ಗುಣಮಟ್ಟದ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತದೆ ಎಂದು ಸಿಎಜಿಯು ತನ್ನ ವರದಿಯಲ್ಲಿ ಅಭಿಪ್ರಾಯಿಸಿದೆ.
ವರ್ಷವಾರು ವಿವರ: 2013-14ರವರೆಗೆ ಒಟ್ಟು 269 ಯೋಜನೆಗಳಿಗೆ ಚಾಲನೆ ನೀಡಲಾಗಿತ್ತು. ಈ ಯೋಜನೆಗಳ ಮೇಲೆ 750 ಕೊಟಿ ರೂ. ವೆಚ್ಚ ಎಂದು ಅಂದಾಜಿಸಲಾಗಿತ್ತು. ಈ ಪೈಕಿ 418 ಕೋಟಿ ರೂ. ವೆಚ್ಚವಾಗಿದೆ. 2014-15ರಲ್ಲಿ 28 ಯೋಜನೆಗಳಿಗೆ ಚಾಲನೆ ನೀಡಿದ್ದ ಸರಕಾರವು 82 ಕೋಟಿ ರೂ. ಅಂದಾಜು ವೆಚ್ಚವಾಗಲಿದೆ ಎಂದು ಹೇಳಿತ್ತು. ಆದರೆ ಈ ಅವಧಿಯಲ್ಲಿ 27 ಕೋಟಿ ರೂ. ಮಾತ್ರ ವೆಚ್ಚವಾಗಿದೆ.
2015-16ರಲ್ಲಿ 43 ಯೋಜನೆಗಳಿದ್ದವು. ಇದಕ್ಕೆ 173 ಕೋಟಿ ರೂ. ವೆಚ್ಚವಾಗಲಿದೆ ಎಂದು ಅಂದಾಜಿಸಲಾಗಿತ್ತು. 95 ಕೋಟಿ ರೂ. ಮಾತ್ರ ವೆಚ್ಚವಾಗಿತ್ತು. 2016-17ರಲ್ಲಿ 57 ಯೋಜನೆಗಳಿಗೆ 181 ಕೋಟಿ ರೂ. ವೆಚ್ಚವಾಗಲಿದೆ ಎಂದು ಅಂದಾಜಿಸಿತ್ತು. ಈ ಪೈಕಿ 100 ಕೋಟಿ ರೂ. ವೆಚ್ಚವಾಗಿತ್ತು. 2017-18ರಲ್ಲಿ 68 ಯೋಜನೆಗಳಿಗೆ 221 ಕೋಟಿ ರೂ. ವೆಚ್ಚವೆಂದು ಅಂದಾಜು ಮಾಡಲಾಗಿತ್ತು. 112 ಕೋಟಿ ರೂ. ವೆಚ್ಚವಾಗಿದೆ ಎಂದು ಸಿಎಜಿ ವರದಿಯಲ್ಲಿ ವಿವರಿಸಿರುವುದು ತಿಳಿದು ಬಂದಿದೆ.
2018-19ರಲ್ಲಿ 75 ಯೋಜನೆಗಳಿದ್ದವು. ಈ ಯೋಜನೆಗಳಿಗೆ 227 ಕೋಟಿ ರೂ. ವೆಚ್ಚವಾಗಲಿದೆ ಎಂದು ಅಂದಾಜಿಸಿತ್ತಾದರೂ 145 ಕೋಟಿ ರೂ. ಮಾತ್ರ ವೆಚ್ಚವಾಗಿತ್ತು. 2019-10ರಲ್ಲಿ 153 ಯೋಜನೆಗಳಿಗೆ 524 ಕೋಟಿ ರೂ. ಎಂದು ಅಂದಾಜಿಸಲಾಗಿತ್ತು. ಈ ಪೈಕಿ 378 ಕೋಟಿ ರೂ. ವೆಚ್ಚವಾಗಿದೆ. 2020-21ರಲ್ಲಿ 235 ಯೋಜನೆಗಳಿಗೆ 588 ಕೋಟಿ ರೂ. ವೆಚ್ಚವಾಗಲಿದೆ ಎಂದು ಅಂದಾಜಿಸಲಾಗಿತ್ತು. ಒಟ್ಟು ಅಂದಾಜು ವೆಚ್ಚದಲ್ಲಿ 499 ಕೋಟಿ ರೂ. ವೆಚ್ಚವಾಗಿತ್ತು.
2021-22ರಲ್ಲಿ 323 ಯೋಜನೆಗಳಿಗೆ 792 ಕೋಟಿ ರೂ. ವೆಚ್ಚವಾಗಲಿದೆ ಎಂದು ಅಂದಾಜಿಸಿತ್ತು. ಈ ಪೈಕಿ 543 ಕೋಟಿ ರೂ. ವೆಚ್ಚವಾಗಿತ್ತು. 2022-23ರಲ್ಲಿ 653 ಯೋಜನೆಗಳಿಗೆ 1,803 ಕೋಟಿ ರೂ. ಅಂದಾಜು ವೆಚ್ಚದ ಪೈಕಿ 990 ಕೋಟಿ ರೂ. ವೆಚ್ಚವಾಗಿತ್ತು. 2023-24ರಲ್ಲಿ 1,236 ಯೋಜನೆಗಳಿಗೆ 3,529 ಕೋಟಿ ರೂ. ವೆಚ್ಚವಾಗಲಿದೆ ಎಂದು ಅಂದಾಜಿಸಲಾಗಿತ್ತು. ಇದರಲ್ಲಿ 1,175 ಕೋಟಿ ರೂ. ಮಾತ್ರ ವೆಚ್ಚವಾಗಿತ್ತು ಎಂದು ಸಿಎಜಿ ವರದಿಯಲ್ಲಿ ವಿವರಿಸಿರುವುದು ತಿಳಿದು ಬಂದಿದೆ.
ಒಂದು ಕೋಟಿಗೂ ಮೀರಿದ ಮೌಲ್ಯದ ಅಪೂರ್ಣ ಯೋಜನೆಗಳ ಮೇಲೂ ಸಿಎಜಿಯು ಬೆಳಕು ಚೆಲ್ಲಿದೆ.
2013-14ರಲ್ಲಿ ರಸ್ತೆ ಮತ್ತು ಸೇತುವೆಗಳಿಗೆ ಸಂಬಂಧಿಸಿದಂತೆ 2,104 ಯೋಜನೆಗಳಿದ್ದವು. ಈ ಯೋಜನೆಗಳಿಗೆ 6,236 ಕೋಟಿ ರೂ. ಅಂದಾಜು ವೆಚ್ಚವಾಗಲಿದೆ ಎಂದು ಹೇಳಲಾಗಿತ್ತು. ಆದರೆ 3,047 ಕೋಟಿ ರೂ. ಮಾತ್ರ ವೆಚ್ಚವಾಗಿತ್ತು. ನೀರಾವರಿಗೆ ಸಂಬಂಧಿಸಿದಂತೆ 694 ಯೋಜನೆಗಳಿಗೆ 1,709 ಕೋಟಿ ರೂ. ವೆಚ್ಚವಾಗಲಿದೆ ಎಂದು ಅಂದಾಜಿಸಿತ್ತು. ಈ ಪೈಕಿ 921 ಕೋಟಿ ರೂ. ಮಾತ್ರ ವೆಚ್ಚವಾಗಿದೆ. ಕಟ್ಟಡಗಳಿಗೆ ಸಂಬಂಧಿಸಿದಂತೆ 208 ಯೋಜನೆಗಳಿದ್ದವು. ಇವಕ್ಕೆ 590 ಕೋಟಿ ರೂ. ವೆಚ್ಚವಾಗಲಿದೆ ಎಂದು ಅಂದಾಜಿಸಿತ್ತಾದರೂ 337 ಕೋಟಿ ರೂ. ಖರ್ಚಾಗಿತ್ತು. ಇತರ ವಿಭಾಗಗಳಲ್ಲಿ 134 ಯೋಜನೆಗಳಿಗೆ 385 ಕೋಟಿ ರೂ. ಎಂದು ಅಂದಾಜಿಸಲಾಗಿತ್ತು. ಈ ಪೈಕಿ 176 ಕೋಟಿ ರೂ. ಮಾತ್ರ ವೆಚ್ಚವಾಗಿತ್ತು.
‘ಮಾರ್ಚ್ 2024 ಅಥವಾ ಅದಕ್ಕೂ ಮೊದಲು ಪೂರ್ಣಗೊಳ್ಳಲು ನಿಗದಿಪಡಿಸಲಾಗಿದ್ದ 3,140 ಕಾಮಗಾರಿಗಳಿಗೆ ಸಂಬಂಧಿಸಿದಂತೆ ಆರಂಭಿಕ ಆಯವ್ಯಯ ಅಂದಾಜಿನ ಮೊತ್ತ 8,920 ಕೋಟಿ ರೂ. ಗೆ ಪ್ರತಿಯಾಗಿ ಈವರೆಗಿನ ವೆಚ್ಚವು 4,4482 ಕೋಟಿ ರೂ. ಆಗಿದೆ.
2024ರ ಮಾರ್ಚ್ ಅಂತ್ಯಕ್ಕೆ 3,410 ಯೋಜನೆಗಳಲ್ಲಿ ಶೇ.30ರಷ್ಟು ಯೋಜನೆಗಳು ಮೂರು ವರ್ಷಗಳಿಗೂ ಹೆಚ್ಚು ಕಾಲದಿಂದ ಅಪೂರ್ಣವಾಗಿ ಉಳಿದಿವೆ. ಹಣಕಾಸು ನಿರ್ವಹಣಾ ಸಮೀಕ್ಷೆ ಸಲಹೆ ಪ್ರಕಾರ ಸಮಯ ಮತ್ತು ವೆಚ್ಚದ ಹೆಚ್ಚಳವನ್ನು ಕಡಿಮೆ ಮಾಡಲು ಪೂರ್ಣಗೊಳ್ಳುತ್ತಿರುವ ಯೋಜನೆಗಳಿಗೆ ಆದ್ಯತೆ ಮೇಲೆ ಹಣವನ್ನು ಒದಗಿಸಬೇಕು. ಆದರೂ ಅಪೂರ್ಣ ಯೋಜನೆಗಳ ಸಂಖ್ಯೆಯು 2023ರ ಮಾರ್ಚ್ 31ರಂದು ಇದ್ದ 1,864ರಿಂದ 2024ರ ಮಾರ್ಚ್ ಅಂತ್ಯಕ್ಕೆ 3,140ಕ್ಕೆ ಏರಿದೆ ಎಂದು ಲೆಕ್ಕ ಪರಿಶೋಧನೆಯು ಗಮನಿಸಿರುವುದು ವರದಿಯಿಂದ ಗೊತ್ತಾಗಿದೆ.
ರಸ್ತೆಗಳು, ಸೇತುವೆಗಳ ಮೇಲಿನ ಬಂಡವಾಳ ವೆಚ್ಚದಲ್ಲಿನ ಹಂಚಿಕೆಯಲ್ಲಿನ ಇಳಿಕೆಯೂ ಸಹ ಇದಕ್ಕೆ ಪ್ರಮುಖ ಕಾರಣವಾಗಿದೆ. ಅಲ್ಲದೆ ರಸ್ತೆ ಮತ್ತು ಸೇತುವೆಗಳಿಗೆ ಸಂಬಂಧಿಸಿದಂತೆ 12.05 ಕೋಟಿ ರೂ. ಉಳಿತಾಯವಾಗಿದೆ. ಸಂಪೂರ್ಣ ಹಂಚಿಕೆಯನ್ನು ಸಹ ಬಂಡವಾಳ ಸೃಷ್ಟಿಗೆ ವೆಚ್ಚ ಮಾಡಲು ಸಾಧ್ಯವಾಗಲಿಲ್ಲ ಎಂಬುದು ವರದಿಯಿಂದ ಕಂಡು ಬಂದಿದೆ. ಈ ಎಲ್ಲಾ ಯೋಜನೆಗಳನ್ನು ಸಮಯ ಮೀರಿದ ಕಾರಣ ಮತ್ತು ಹೆಚ್ಚಿನ ವೆಚ್ಚವನ್ನು ತಪ್ಪಿಸಲು ವಿಳಂಬವಿಲ್ಲದೇ ಪೂರ್ಣಗೊಳಿಸಲು ಪರಿಣಾಮಕಾರಿ ಕ್ರಮಗಳನ್ನು ತೆಗೆದುಕೊಳ್ಳಬೇಕು ಎಂದು ಸಿಎಜಿ ವರದಿಯು ಶಿಫಾರಸು ಮಾಡಿದೆ.







