ಪಶ್ಚಿಮ ಬಂಗಾಳದ 49 ಸ್ಥಾನಗಳಲ್ಲಿ ಗೆಲುವಿನ ಅಂತರಕ್ಕಿಂತ 'ವಿಚಾರಣಾ ಹಂತ' ವರ್ಗದಲ್ಲಿರುವ ಮತದಾರರ ಸಂಖ್ಯೆ ಹೆಚ್ಚು; ಇದು ಹೇಗಾಯ್ತು?

Photo Credit : PTI
ಮೇ 4 ರಂದು ನಡೆದ ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಬಹುಮತದೊಂದಿಗೆ ಗೆಲುವು ಸಾಧಿಸಿದೆ. ಬಿಜೆಪಿ 294 ಸ್ಥಾನಗಳಲ್ಲಿ 207 ಸ್ಥಾನಗಳನ್ನು ಗೆದ್ದರೆ, ತೃಣಮೂಲ ಕಾಂಗ್ರೆಸ್ (ಟಿಎಂಸಿ) 80 ಸ್ಥಾನಗಳನ್ನು ಪಡೆದುಕೊಂಡಿತು. ರಾಜ್ಯದಲ್ಲಿ ಬಹುಮತ ರಚಿಸಲು ಒಂದು ಪಕ್ಷಕ್ಕೆ 148 ಸ್ಥಾನಗಳು ಬೇಕಾಗುತ್ತವೆ. ಇಲ್ಲಿಯವರೆಗೆ 293 ಕ್ಷೇತ್ರಗಳ ಫಲಿತಾಂಶಗಳನ್ನು ಘೋಷಿಸಲಾಗಿದ್ದು, ಫಾಲ್ಟಾದಲ್ಲಿ ಮರುಮತದಾನವು ಮೇ 21 ರಂದು ನಿಗದಿಯಾಗಿದೆ.
ಚುನಾವಣಾ ಫಲಿತಾಂಶದ ಹಿಂದೆ ಮತದಾರರ ಪಟ್ಟಿಯ ಪರಿಷ್ಕರಣೆಗೆ ಸಂಬಂಧಿಸಿದ ವಾದ-ವಿವಾದಗಳಿವೆ. ಚುನಾವಣೆಗೆ ಮುಂಚಿತವಾಗಿ, ಚುನಾವಣಾ ಆಯೋಗವು ತಿಂಗಳುಗಳ ಕಾಲ ವಿಶೇಷ ತೀವ್ರ ಪರಿಷ್ಕರಣೆ (ಎಸ್ಐಆರ್) ಪ್ರಕ್ರಿಯೆ ನಡೆಸಿತ್ತು. ಇದರಿಂದ 90 ಲಕ್ಷಕ್ಕೂ ಹೆಚ್ಚು ಮತದಾರರ ಹೆಸರುಗಳನ್ನು ಅಳಿಸಲಾಗಿತ್ತು. ಈ ಪೈಕಿ ಸುಮಾರು 27 ಲಕ್ಷಕ್ಕೂ ಹೆಚ್ಚು ಮತದಾರರನ್ನು ಅನರ್ಹರೆಂದು ಗುರುತಿಸಿ, ಅವರನ್ನು ‘ನ್ಯಾಯ ನಿರ್ಣಯದ ಅಡಿಯಲ್ಲಿ’ ಅಥವಾ ‘ವಿಚಾರಣಾ ಹಂತ’ (Under Adjudication) ಎಂಬ ವರ್ಗದಲ್ಲಿ ಇರಿಸಲಾಗಿತ್ತು. ಈ ಮತದಾರರು ತಮ್ಮ ಹೆಸರುಗಳನ್ನು ಮರುಸ್ಥಾಪಿಸಲು ನ್ಯಾಯಾಲಯ ನೇಮಿಸಿದ ನ್ಯಾಯಮಂಡಳಿಗಳಿಗೆ ಮೇಲ್ಮನವಿ ಸಲ್ಲಿಸಿದ್ದರು. ಆದರೆ ಈ ಅರ್ಜಿಗಳಲ್ಲಿ ಶೇ 99 ಕ್ಕೂ ಹೆಚ್ಚು ಪ್ರಕರಣಗಳು ನ್ಯಾಯಮಂಡಳಿಗಳಲ್ಲಿ ಬಾಕಿ ಇರುವಾಗಲೇ ಚುನಾವಣೆ ನಡೆಸಲಾಯಿತು.
ಎಪ್ರಿಲ್ 13 ರಂದು ಭಾರತದ ಮುಖ್ಯ ನ್ಯಾಯಮೂರ್ತಿ ಸೂರ್ಯ ಕಾಂತ್ ಮತ್ತು ನ್ಯಾಯಮೂರ್ತಿ ಜಾಯ್ಮಾಲ್ಯ ಬಾಗ್ಚಿ ಅವರನ್ನೊಳಗೊಂಡ ನ್ಯಾಯಪೀಠವು ಇನ್ನೂ ಮೇಲ್ಮನವಿ ಬಾಕಿ ಇರುವ ಮತದಾರರ ಅರ್ಜಿಗಳ ವಿಚಾರಣೆ ನಡೆಸಿದಾಗ, ಈ ವಿಷಯವು ಸುಪ್ರೀಂ ಕೋರ್ಟ್ ನ ಗಮನ ಸೆಳೆಯಿತು. ವಿಚಾರಣೆಯ ವೇಳೆ, ಹೊರಗಿಡಲಾದ ಮತದಾರರು ಮತ್ತು ಚುನಾವಣಾ ಫಲಿತಾಂಶಗಳ ನಡುವಿನ ಸಂಬಂಧದ ಬಗ್ಗೆ ನ್ಯಾಯಮೂರ್ತಿ ಬಾಗ್ಚಿ ಗಂಭೀರ ಕಳವಳ ವ್ಯಕ್ತಪಡಿಸಿದರು.
ಬಂಗಾಳದಲ್ಲಿ ಇತರ ರಾಜ್ಯಗಳಲ್ಲಿ ಅನುಸರಿಸಲಾಗುತ್ತಿದ್ದ ಎಸ್ಐಆರ್ ಪ್ರಕ್ರಿಯೆಯಿಂದ ಚುನಾವಣಾ ಆಯೋಗ ವಿಮುಖವಾಗಿದೆ. ಇದು ‘ತಾರ್ಕಿಕ ವ್ಯತ್ಯಾಸ’ದ ಹೊಸ ವರ್ಗವನ್ನು ಪರಿಚಯಿಸಿದೆ ಎಂದು ಎತ್ತಿ ತೋರಿಸಿದ ನ್ಯಾಯಮೂರ್ತಿ ಬಾಗ್ಚಿ, “10% ಮತದಾರರು ಮತ ಚಲಾಯಿಸದಿದ್ದರೆ ಮತ್ತು ಗೆಲುವಿನ ಅಂತರ 10% ಕ್ಕಿಂತ ಹೆಚ್ಚಿದ್ದರೆ ಏನೂ ಸಮಸ್ಯೆಯಾಗುವುದಿಲ್ಲ. ಆದರೆ ಅಂತರವು 2% ಆಗಿದ್ದು, ನಕ್ಷೆ ಮಾಡಲಾದ ಮತದಾರರಲ್ಲಿ 15% ಮಂದಿ ಮತ ಚಲಾಯಿಸಲು ಸಾಧ್ಯವಾಗದಿದ್ದರೆ, ಅದು ನಾವು ಪರಿಗಣಿಸಬೇಕಾದ ಗಂಭೀರ ವಿಷಯವಾಗುತ್ತದೆ. ನಾವು ಯಾರೊಬ್ಬರ ಪರ ವಹಿಸಿಕೊಳ್ಳುತ್ತಿಲ್ಲ. ಆದರೆ ಫಲಿತಾಂಶದ ಮೇಲಿನ ಪರಿಣಾಮವನ್ನು ನಿರ್ಲಕ್ಷಿಸಲು ಸಾಧ್ಯವಿಲ್ಲ. ನಮ್ಮ ಗಮನವು ಪಟ್ಟಿಯಿಂದ ಹೊರಗುಳಿದ ಮತದಾರರ ವೈಯಕ್ತಿಕ ಭಾವನೆಗಳ ಮೇಲೆ ಅಲ್ಲ; ಆ ಕಾಣೆಯಾದ ಮತಗಳು ನಿಜವಾಗಿಯೂ ಯಾರು ಗೆದ್ದರು ಎಂಬುದನ್ನು ಬದಲಾಯಿಸಬಹುದೇ ಎಂಬುದರ ಮೇಲೆ ಇದೆ” ಎಂದು ಹೇಳಿದ್ದರು.
ಘೋಷಿತ 293 ಸ್ಥಾನಗಳ ವಿಶ್ಲೇಷಣೆಯು 49 ಕ್ಷೇತ್ರಗಳಲ್ಲಿ ಈ ಕಳವಳ ಕಾರ್ಯರೂಪಕ್ಕೆ ಬಂದಿದೆ ಎಂದು ತೋರಿಸಿದೆ. ಈ ಕ್ಷೇತ್ರಗಳಲ್ಲಿ ನ್ಯಾಯ ನಿರ್ಣಯಕ್ಕೆ ಒಳಪಟ್ಟ ಮತದಾರರ ಸಂಖ್ಯೆ ಗೆಲುವಿನ ಅಂತರಕ್ಕಿಂತ ಹೆಚ್ಚಾಗಿದೆ. ಕೆಲವು ಕ್ಷೇತ್ರಗಳಲ್ಲಿ ಈ ಅಂತರವು ಬಹಳ ದೊಡ್ಡದಾಗಿದೆ. ಉದಾಹರಣೆಗೆ, ರಾಜರಹತ್ ನ್ಯೂ ಟೌನ್ ಕ್ಷೇತ್ರದಲ್ಲಿ ಬಿಜೆಪಿ ಕೇವಲ 316 ಮತಗಳ ಅಂತರದಿಂದ ಗೆದ್ದಿದ್ದು, ಅಲ್ಲಿ 24,132 ಮತದಾರರನ್ನು ‘ವಿಚಾರಣಾ ಹಂತ’ ವರ್ಗದಲ್ಲಿ ಇರಿಸಲಾಗಿತ್ತು. ಸಮ್ಸರ್ಗಂಜ್ನಲ್ಲಿ ಟಿಎಂಸಿ 7,587 ಮತಗಳ ಅಂತರದಿಂದ ಗೆದ್ದಿದ್ದರೂ, 74,775 ಮತದಾರರು ತಮ್ಮ ಸೇರ್ಪಡೆ ಕುರಿತು ನಿರ್ಧಾರಕ್ಕಾಗಿ ಇನ್ನೂ ಕಾಯುತ್ತಿದ್ದರು.
►ಗೆಲುವಿನ ಅಂತರ, ಯುಎ ಮತದಾರರ ಸಂಖ್ಯೆ ಮತ್ತು ವಿಜೇತರ ಪಟ್ಟಿ ಇಲ್ಲಿದೆ.
ಈ 49 ಸ್ಥಾನಗಳಲ್ಲಿ 26 ಸ್ಥಾನಗಳನ್ನು ಬಿಜೆಪಿ ಗೆದ್ದುಕೊಂಡಿದೆ. ಟಿಎಂಸಿ 21 ಸ್ಥಾನಗಳನ್ನು ಹಾಗೂ ಕಾಂಗ್ರೆಸ್ 2 ಸ್ಥಾನಗಳನ್ನು ಗಳಿಸಿದೆ.
ಫಲಿತಾಂಶಗಳು ದೊಡ್ಡ ಮಟ್ಟದ ರಾಜಕೀಯ ಬದಲಾವಣೆಯನ್ನು ಪ್ರತಿಬಿಂಬಿಸುತ್ತವೆ. ಈ ಕ್ಷೇತ್ರಗಳಲ್ಲಿ 48 ಕ್ಷೇತ್ರಗಳು 2021ರ ವಿಧಾನಸಭಾ ಚುನಾವಣೆಯಲ್ಲಿ ಟಿಎಂಸಿ ವಶದಲ್ಲಿದ್ದವು. ಡಾರ್ಜಿಲಿಂಗ್ ಮಾತ್ರ ಬಿಜೆಪಿ ವಶದಲ್ಲಿತ್ತು. 2026ರಲ್ಲಿ ಬಿಜೆಪಿ ಡಾರ್ಜಿಲಿಂಗ್ ಅನ್ನು ಉಳಿಸಿಕೊಂಡು ಇನ್ನೂ 25 ಸ್ಥಾನಗಳನ್ನು ಗೆದ್ದಿದೆ. ಕಾಂಗ್ರೆಸ್ ಕೂಡ ಈ ಹಿಂದೆ ಟಿಎಂಸಿ ಅಧಿಕಾರದಲ್ಲಿದ್ದ ಎರಡು ಕ್ಷೇತ್ರಗಳನ್ನು ತನ್ನದಾಗಿಸಿಕೊಂಡಿದೆ. ಒಟ್ಟಾರೆ, ಈ 49 ಸ್ಥಾನಗಳಲ್ಲಿ 27 ಸ್ಥಾನಗಳು ಆಡಳಿತ ವಿರೋಧಿ ಅಲೆಗೆ ಸಾಕ್ಷಿಯಾಗಿವೆ.
ಭೌಗೋಳಿಕವಾಗಿ ಈ ಕ್ಷೇತ್ರಗಳು 15 ಜಿಲ್ಲೆಗಳಲ್ಲಿ ಹರಡಿಕೊಂಡಿವೆ. 2011ರ ಜನಗಣತಿಯ ಪ್ರಕಾರ ಮುಸ್ಲಿಂ ಬಹುಸಂಖ್ಯಾತ ಜಿಲ್ಲೆಯಾದ ಮುರ್ಷಿದಾಬಾದ್ ನಲ್ಲಿ ಎಂಟು ಕ್ಷೇತ್ರಗಳಿವೆ. ಉತ್ತರ 24 ಪರಗಣಗಳಲ್ಲಿ ಆರು ಕ್ಷೇತ್ರಗಳಿದ್ದು, ದಕ್ಷಿಣ 24 ಪರಗಣಗಳು ಮತ್ತು ಪುರ್ಬಾ ಬರ್ಧಮಾನ್ ಜಿಲ್ಲೆಗಳಲ್ಲಿ ತಲಾ ಐದು ಕ್ಷೇತ್ರಗಳಿವೆ. ಹೂಗ್ಲಿಯಲ್ಲಿ ನಾಲ್ಕು ಕ್ಷೇತ್ರಗಳಿದ್ದರೆ, ಹೌರಾ, ನಾಡಿಯಾ, ಮಾಲ್ಡಾ ಮತ್ತು ದಕ್ಷಿಣ ದಿನಾಜ್ ಪುರ ಜಿಲ್ಲೆಗಳಲ್ಲಿ ತಲಾ ಮೂರು ಕ್ಷೇತ್ರಗಳಿವೆ. ಉತ್ತರ ದಿನಾಜ್ಪುರ ಮತ್ತು ಪಶ್ಚಿಮ ಬರ್ಧಮಾನ್ ಜಿಲ್ಲೆಗಳಲ್ಲಿ ತಲಾ ಎರಡು ಕ್ಷೇತ್ರಗಳಿದ್ದು, ಡಾರ್ಜಿಲಿಂಗ್, ಕೋಲ್ಕತ್ತಾ ಉತ್ತರ, ಪಶ್ಚಿಮ ಮೇದಿನಿಪುರ ಮತ್ತು ಕೂಚ್ಬೆಹಾರ್ ಜಿಲ್ಲೆಗಳಲ್ಲಿ ತಲಾ ಒಂದು ಕ್ಷೇತ್ರ ಇದೆ.
ಒಟ್ಟಾರೆಯಾಗಿ, ಈ ಅಂಕಿ-ಅಂಶಗಳು 49 ಕ್ಷೇತ್ರಗಳಲ್ಲಿ ವಿಚಾರಣಾ ಹಂತದಲ್ಲಿರುವ ಮತದಾರರ ಸಂಖ್ಯೆ ವಿಜೇತರನ್ನು ನಿರ್ಧರಿಸಿದ ಗೆಲುವಿನ ಅಂತರಕ್ಕಿಂತ ಹೆಚ್ಚಿತ್ತು ಎಂಬುದನ್ನು ತೋರಿಸುತ್ತವೆ. ಇದರಿಂದ ಬಗೆಹರಿಯದ ಮತದಾರರ ಪಟ್ಟಿಯ ವಿವಾದಗಳು ಗಣನೀಯ ಸಂಖ್ಯೆಯ ಕ್ಷೇತ್ರಗಳ ಅಂತಿಮ ಫಲಿತಾಂಶಗಳಿಗೆ ನೇರವಾಗಿ ಸಂಬಂಧಿಸಿದ್ದವು ಎಂಬ ಪ್ರಶ್ನೆ ಮತ್ತೆ ಮುನ್ನೆಲೆಗೆ ಬಂದಿದೆ.






