ತಮಿಳುನಾಡಿನಲ್ಲಿ ವಿಜಯ್ ಪ್ರಮಾಣವಚನ ವಿಳಂಬ: ಅತಂತ್ರ ವಿಧಾನಸಭೆಯಲ್ಲಿ ರಾಜ್ಯಪಾಲರ ಪಾತ್ರವೇನು?

Photo credit: PTI
ಇತ್ತೀಚಿನ ತಮಿಳುನಾಡು ಚುನಾವಣೆಯಲ್ಲಿ ನಟ-ರಾಜಕಾರಣಿ ಅವರ ಪಕ್ಷ ತಮಿಳಗ ವೆಟ್ರಿ ಕಳಗಂ (TVK) ಅತಿ ಹೆಚ್ಚು ಸ್ಥಾನಗಳನ್ನು ಗೆದ್ದ ನಂತರ ವಿಜಯ್, ಮೇ 7 ರಂದು ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ ಎನ್ನಲಾಗಿತ್ತು. ಆದರೆ ವಿಜಯ್ ಪ್ರಮಾಣವಚನ ವಿಳಂಬವಾಗುತ್ತಿದೆ. ರಾಜ್ಯಪಾಲ ರಾಜೇಂದ್ರ ಅರ್ಲೇಕರ್ ರಾಜ್ಯ ವಿಧಾನಸಭೆಯನ್ನು ವಿಸರ್ಜಿಸಿದ್ದರೂ, ಸರ್ಕಾರ ರಚಿಸಲು ಆಹ್ವಾನಿಸುವ ಮೊದಲು ವಿಜಯ್ ಬಹುಮತ ಸಾಬೀತು ಪಡಿಸಬೇಕು ಅವರು ಒತ್ತಾಯಿಸಿದ್ದಾರೆ.
234 ಸದಸ್ಯ ಬಲದ ವಿಧಾನಸಭೆಯಲ್ಲಿ ಟಿವಿಕೆ 108 ಸ್ಥಾನಗಳನ್ನು ಗೆದ್ದಿದ್ದು, ಬಹುಮತಕ್ಕಿರುವ 117 ಸ್ಥಾನಗಳಿಗೆ 10 ಸ್ಥಾನಗಳ ಕೊರತೆಯಿದೆ. ಅಲ್ಲದೆ, ವಿಜಯ್ ಸ್ವತಃ ಎರಡು ಸ್ಥಾನಗಳಿಂದ ಗೆದ್ದಿದ್ದಾರೆ. ಹೀಗಿರುವಾಗ ಅದರಲ್ಲಿ ಒಂದು ಸ್ಥಾನಕ್ಕೆ ಅವರು ರಾಜೀನಾಮೆ ನೀಡಬೇಕಾಗುತ್ತದೆ. ಹಾಗಾದರೆ ಟಿವಿಕೆಗೆ ಸಿಕ್ಕ ಸೀಟುಗಳ ಸಂಖ್ಯೆ 107 ಆಗುತ್ತದೆ. ಈ ಸ್ಥಿತಿಯಲ್ಲಿ ಅವರ ಪಕ್ಷಕ್ಕೆ ಬಹುಮತ ಪಡೆಯಲು ಮಿತ್ರಪಕ್ಷಗಳ ಅಗತ್ಯವಿದೆ ಮತ್ತು ಈ ಮೈತ್ರಿಕೂಟದ ಆಕಾರ ಇನ್ನೂ ಸ್ಪಷ್ಟವಾಗಿಲ್ಲ.
ಒಂದು ವೇಳೆ ವಿಧಾನಸಭಾ ಚುನಾವಣೆಯಲ್ಲಿ ಸ್ಪಷ್ಟ ವಿಜೇತರು ಆಯ್ಕೆಯಾಗದಿದ್ದರೆ ರಾಜ್ಯಪಾಲರ ಪಾತ್ರವೇನು? ಹಿಂದೆಯೂ ಇದೇ ರೀತಿಯ ಸಂದರ್ಭಗಳಲ್ಲಿ ರಾಜ್ಯಪಾಲರು ಹೇಗೆ ನಿರ್ಧಾರ ತೆಗೆದುಕೊಂಡಿದ್ದಾರೆ ಎಂಬುದನ್ನು ನೋಡೋಣ
ತಮಿಳುನಾಡಿನಲ್ಲಿ ಸರ್ಕಾರ ರಚಿಸಲಿರುವ ಸೀಟು ಲೆಕ್ಕಾಚಾರ:
ತಮಿಳುನಾಡಿನಲ್ಲಿ ಹೆಚ್ಚು ಸೀಟು ಪಡೆದ ಪಕ್ಷವಾಗಿದೆ ಟಿವಿಕೆ. ಡಿಎಂಕೆ ನೇತೃತ್ವದ ಮೈತ್ರಿಕೂಟ ಮತ್ತು ಎಡಿಎಂಕೆ ಮೈತ್ರಿಕೂಟಕ್ಕೆ ಬಹುಮತವಿಲ್ಲ. ಡಿಎಂಕೆ 59 ಸೀಟು ಮತ್ತು, ಎಡಿಎಂಕೆ 47 ಸ್ಥಾನಗಳನ್ನು ಹೊಂದಿದೆ. ಕಾಂಗ್ರೆಸ್ 5 ಮತ್ತು ಪಟ್ಟಾಳಿ ಮಕ್ಕಳ್ ಕಚ್ಚಿ 4 ಸ್ಥಾನಗಳನ್ನು ಹೊಂದಿದೆ. ಒಂದರಿಂದ ಎರಡು ಸ್ಥಾನಗಳನ್ನು ಹೊಂದಿರುವ ಇತರ ಸಣ್ಣ ಪಕ್ಷಗಳೂ ಇವೆ.
ಟಿವಿಕೆ ಜೊತೆ ಕೈಜೋಡಿಸುವುದಾಗಿ ಕಾಂಗ್ರೆಸ್ ಘೋಷಿಸಿದೆ. ಆದರೆ ಅವರಿಗೆ ಇನ್ನೂ ಸಣ್ಣ ಪಕ್ಷಗಳ ಬೆಂಬಲ ಬೇಕು. ಬಿಜೆಪಿ ಬೆಂಬಲಿಸುವ ಎಡಿಎಂಕೆ ಕೂಡಾ ಟಿವಿಕೆ ಜತೆ ಮಾತುಕತೆ ನಡೆಸಿತ್ತು. ಹೀಗಿದ್ದರೂ, ಹೊಸ ಸರ್ಕಾರದ ಸಂಯೋಜನೆ ತಾಂತ್ರಿಕವಾಗಿ ಇನ್ನೂ ಸ್ಪಷ್ಟವಾಗಿಲ್ಲ, ಬಿಜೆಪಿ ಮತ್ತು ಕಾಂಗ್ರೆಸ್ ಎರಡೂ ಆಡಳಿತ ಒಕ್ಕೂಟದಲ್ಲಿರಲು ಅವಕಾಶವಿದೆ.
► ರಾಜ್ಯಪಾಲರು ಏನು ಮಾಡಬೇಕು: ಸರ್ಕಾರಿಯಾ ಮತ್ತು ಪುಂಛಿ ಆಯೋಗದ ನಿಯಮಗಳೇನು?
1983 ಜೂನ್ ನಲ್ಲಿ ಕೇಂದ್ರವು ರಾಜ್ಯ ಮತ್ತು ಕೇಂದ್ರ ಸರ್ಕಾರಗಳ ನಡುವಿನ ಸಂಬಂಧವನ್ನು ಪರಿಶೀಲಿಸಲು ನ್ಯಾಯಮೂರ್ತಿ ಆರ್ ಎಸ್ ಸರ್ಕಾರಿಯಾ ಆಯೋಗವನ್ನು ಸ್ಥಾಪಿಸಿತು. ರಾಜ್ಯಪಾಲರ ಪಾತ್ರವನ್ನು ನಿರ್ವಹಿಸಿದ ಆಯೋಗವು, ಮುಖ್ಯಮಂತ್ರಿಯನ್ನು ಆಯ್ಕೆ ಮಾಡುವಲ್ಲಿ ರಾಜ್ಯಪಾಲರು ಈ ಕೆಳಗಿನ ತತ್ವಗಳಿಂದ ಮಾರ್ಗದರ್ಶನ ಪಡೆಯಬೇಕೆಂದು ಸೂಚಿಸಿತು:
- ವಿಧಾನಸಭೆಯಲ್ಲಿ ಅತಿ ಹೆಚ್ಚು ಬೆಂಬಲ ಹೊಂದಿರುವ ಪಕ್ಷ ಅಥವಾ ಪಕ್ಷಗಳ ಮೈತ್ರಿಕೂಟವನ್ನು ಸರ್ಕಾರ ರಚಿಸಲು ಕರೆಯಬೇಕು.
- ರಾಜ್ಯಪಾಲರು ಸರ್ಕಾರ ಸ್ಥಾಪನೆಯಾಗುವುದನ್ನು ಖಚಿತಪಡಿಸಿಕೊಳ್ಳಬೇಕು, ಯಾವುದೇ ರೀತಿಯಲ್ಲಿ ಅದರ ನೀತಿ ನಿರ್ದೇಶನದ ಮೇಲೆ ಪ್ರಭಾವ ಬೀರಲು ಪ್ರಯತ್ನಿಸಬಾರದು.
► ಯಾವುದೇ ಪಕ್ಷಕ್ಕೆ ಬಹುಮತವಿಲ್ಲದಿದ್ದರೆ, ರಾಜ್ಯಪಾಲರು ಈ ಕೆಳಗಿನವುಗಳನ್ನು ಆಹ್ವಾನಿಸಬೇಕು:
ಎ) ಚುನಾವಣಾ ಪೂರ್ವ ಮೈತ್ರಿ, ಬಿ) ಬಹುಮತದ ಬೆಂಬಲವನ್ನು ಪಡೆಯಲು ಸಾಧ್ಯವಾಗುವ ಅತಿದೊಡ್ಡ ಏಕೈಕ ಪಕ್ಷ, ಸಿ) ಅಗತ್ಯವಿರುವ ಸದಸ್ಯರನ್ನು ಹೊಂದಿರುವ ಚುನಾವಣೋತ್ತರ ಒಕ್ಕೂಟ, ಡಿ) ಪಾಲುದಾರರು ಹೊರಗಿನ ಬೆಂಬಲವನ್ನು ನೀಡಲು ಸಿದ್ಧರಿರುವ ಚುನಾವಣೋತ್ತರ ಒಕ್ಕೂಟ.
ಮುಖ್ಯಮಂತ್ರಿಗಳು ಅಧಿಕಾರ ವಹಿಸಿಕೊಂಡ 30 ದಿನಗಳ ಒಳಗೆ ವಿಧಾನಸಭೆಯಲ್ಲಿ ವಿಶ್ವಾಸ ಮತ ಯಾಚಿಸಬೇಕು ಎಂದು ಆಯೋಗ ಶಿಫಾರಸು ಮಾಡಿದೆ. ಬಹುಮತಕ್ಕೆ ಇರುವ ಏಕೈಕ ಮಾನ್ಯ "ಪರೀಕ್ಷೆ" ಎಂದರೆ ವಿಶ್ವಾಸ ಮತಯಾಚನೆ. ಸರ್ಕಾರದ ನ್ಯಾಯಸಮ್ಮತತೆಯನ್ನು ಖಾಸಗಿಯಾಗಿ ನಿರ್ಧರಿಸದಂತೆ ರಾಜ್ಯಪಾಲರಿಗೆ ಸೂಚಿಸಲಾಗಿದೆ.
ನಂತರ 2007 ರಲ್ಲಿ, ವಿವಿಧ ಹಂತಗಳಲ್ಲಿ ಸರ್ಕಾರಗಳ ಪಾತ್ರಗಳು ಮತ್ತು ಜವಾಬ್ದಾರಿಗಳು ಮತ್ತು ಅವುಗಳ ನಡುವಿನ ಸಂಬಂಧಗಳನ್ನು ಹೊಸದಾಗಿ ಪರಿಶೀಲಿಸಲು ಭಾರತದ ಮಾಜಿ ಮುಖ್ಯ ನ್ಯಾಯಮೂರ್ತಿ ಎಂ ಎಂ ಪುಂಛಿ ನೇತೃತ್ವದಲ್ಲಿ ಆಯೋಗವನ್ನು ಸ್ಥಾಪಿಸಲಾಯಿತು. ರಾಜ್ಯಪಾಲರ ವಿವೇಚನಾ ಅಧಿಕಾರದ ಮೇಲೆ ಕೆಲವು ನಿಯಂತ್ರಣವಿರುವಂತೆ ಮುಖ್ಯಮಂತ್ರಿಗಳ ನೇಮಕಕ್ಕೆ ಸ್ಪಷ್ಟ ಮಾರ್ಗಸೂಚಿಗಳು ಇರಬೇಕು ಎಂದು ಆಯೋಗ ಶಿಫಾರಸು ಮಾಡಿತು.
► ಚುನಾವಣಾ ಪೂರ್ವ ಮೈತ್ರಿಯನ್ನು ಒಂದೇ ರಾಜಕೀಯ ಪಕ್ಷವೆಂದು ಪರಿಗಣಿಸಬೇಕು ಮತ್ತು ಅತಂತ್ರ ವಿಧಾನಸಭೆ ಉಂಟಾದರೆ ರಾಜ್ಯಪಾಲರು ಅನುಸರಿಸಬೇಕಾದ ಪೂರ್ವಾಪೇಕ್ಷಿತ ಕ್ರಮವನ್ನು ಅದು ಹೇಳುತ್ತದೆ:
1) ಅತಿ ಹೆಚ್ಚು ಸಂಖ್ಯೆಯ ಚುನಾವಣಾ ಪೂರ್ವ ಮೈತ್ರಿ ಹೊಂದಿರುವ ಗುಂಪು
2) ಇತರರ ಬೆಂಬಲದೊಂದಿಗೆ ಏಕೈಕ ದೊಡ್ಡ ಪಕ್ಷ
3) ಸರ್ಕಾರಕ್ಕೆ ಸೇರ್ಪಡೆಗೊಳ್ಳುವ ಎಲ್ಲಾ ಪಕ್ಷಗಳೊಂದಿಗೆ ಚುನಾವಣಾ ನಂತರದ ಒಕ್ಕೂಟ
4) ಸರ್ಕಾರಕ್ಕೆ ಸೇರುವ ಕೆಲವು ಪಕ್ಷಗಳು ಮತ್ತು ಸ್ವತಂತ್ರರು ಸೇರಿದಂತೆ ಉಳಿದವು ಹೊರಗಿನಿಂದ ಬೆಂಬಲಿಸುವ ಚುನಾವಣಾ ನಂತರದ ಮೈತ್ರಿ.
►ಇತ್ತೀಚಿನ ಕೆಲವು ಪ್ರಕರಣಗಳು
ಇತ್ತೀಚಿನ ವರ್ಷಗಳಲ್ಲಿ, ರಾಜ್ಯಪಾಲರು ಅತಂತ್ರ ವಿಧಾನಸಭೆಯ ಸಂದರ್ಭದಲ್ಲಿ ಏಕರೂಪದ ಕ್ರಮವನ್ನು ಅನುಸರಿಸುವುದಿಲ್ಲ, ಇದರಿಂದಾಗಿ ವಿವಾದಗಳು ಉಂಟಾಗುತ್ತವೆ. ಇದು ದೀರ್ಘ ಪ್ರವೃತ್ತಿಯಾಗಿದ್ದರೂ, ಇತ್ತೀಚಿನ ಕೆಲವು ಉದಾಹರಣೆಗಳು ಇಲ್ಲಿವೆ:
2017 ರಲ್ಲಿ, ಗೋವಾ ಮತ್ತು ಮಿಝೋರಾಂ ಎರಡರಲ್ಲೂ, ಸ್ಪಷ್ಟ ಬಹುಮತದ ಕೊರತೆಯಿದ್ದರೂ ಕಾಂಗ್ರೆಸ್ ಏಕೈಕ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿತ್ತು. ರಾಜ್ಯಪಾಲರು (ಕ್ರಮವಾಗಿ ಮೃದುಲಾ ಸಿನ್ಹಾ ಮತ್ತು ನಜ್ಮಾ ಹೆಪ್ತುಲ್ಲಾ) ಇತರ ಸಣ್ಣ ಪಕ್ಷಗಳು ತೋರಿಸಿದ ಬೆಂಬಲ ಪತ್ರಗಳ ಆಧಾರದ ಮೇಲೆ ಬಿಜೆಪಿಯನ್ನು ಸರ್ಕಾರ ರಚಿಸಲು ಆಹ್ವಾನಿಸಿದರು.
2018 ರಲ್ಲಿ ಕರ್ನಾಟಕದಲ್ಲಿ, ಬಿಜೆಪಿ ಏಕೈಕ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿತು. ಆದರೆ ಕಾಂಗ್ರೆಸ್ ಮತ್ತು ಜೆಡಿಎಸ್ ಚುನಾವಣೋತ್ತರ ಮೈತ್ರಿ ಮಾಡಿಕೊಂಡವು. ರಾಜ್ಯಪಾಲರು ಬಿಜೆಪಿ ನಾಯಕ ಬಿಎಸ್ ಯಡಿಯೂರಪ್ಪ ಅವರನ್ನು ಆಹ್ವಾನಿಸಿ, ಅವರು ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದರು. ಆದರೆ ವಿರೋಧ ಪಕ್ಷವು ನ್ಯಾಯಾಲಯದ ಮೆಟ್ಟಿಲೇರಿ 24 ಗಂಟೆಗಳ ಒಳಗೆ ಬಹುಮತವನ್ನು ಸಾಬೀತುಪಡಿಸಲು ಆದೇಶಿಸಿದ ನಂತರ ರಾಜೀನಾಮೆ ನೀಡಿದರು.
2014 ಕ್ಕಿಂತ ಮೊದಲು, ರಾಜ್ಯಪಾಲರು ತಟಸ್ಥರಾಗಿ ಉಳಿಯುವ ಬದಲು ಆಡಳಿತಾರೂಢ ಕಾಂಗ್ರೆಸ್ ಪಕ್ಷದ ರಾಜಕೀಯ ಏಜೆಂಟರಂತೆ ವರ್ತಿಸುತ್ತಿದ್ದರು ಎಂಬ ಆರೋಪ ಆಗಾಗ್ಗೆ ಕೇಳಿಬರುತ್ತಿತ್ತು.
ಕೃಪೆ: indianexpress.com






