ಇಂಟೆಲಿಜೆನ್ಸ್ ಬ್ಯೂರೋ ಮುಖ್ಯಸ್ಥರಾಗಿ ನೇಮಕಗೊಂಡ ಮಹೇಶ್ ದೀಕ್ಷಿತ್ ಯಾರು?

ಮಹೇಶ್ ದೀಕ್ಷಿತ್ | Photo Credit : X
ಕೇಂದ್ರ ಸರ್ಕಾರವು ಐಪಿಎಸ್ ಅಧಿಕಾರಿ ಮಹೇಶ್ ದೀಕ್ಷಿತ್ ಅವರನ್ನು ಗುಪ್ತಚರ ಇಲಾಖೆಯ (IB) ಮುಂದಿನ ಮುಖ್ಯಸ್ಥರನ್ನಾಗಿ ನೇಮಿಸಿದೆ. ದೀಕ್ಷಿತ್ ಅವರು ಹಾಲಿ ಮುಖ್ಯಸ್ಥ ತಪನ್ ದೇಕಾ ಅವರ ಉತ್ತರಾಧಿಕಾರಿಯಾಗಲಿದ್ದು, ದೇಕಾ ಅವರ ವಿಸ್ತೃತ ಸೇವಾ ಅವಧಿ ಜೂನ್ 30ಕ್ಕೆ ಮುಕ್ತಾಯಗೊಂಡ ನಂತರ ಅಧಿಕಾರ ವಹಿಸಿಕೊಳ್ಳಲಿದ್ದಾರೆ. ಹಿಮಾಚಲ ಪ್ರದೇಶ ಕೆಡರ್ನ 1988ರ ಬ್ಯಾಚ್ನ ಅಧಿಕಾರಿಯಾದ ದೇಕಾ ಅವರನ್ನು 2022ರಲ್ಲಿ ಗುಪ್ತಚರ ಇಲಾಖೆ ಮುಖ್ಯಸ್ಥರನ್ನಾಗಿ ನೇಮಿಸಲಾಗಿತ್ತು. ಆ ಬಳಿಕ ಅವರಿಗೆ ತಲಾ ಒಂದು ವರ್ಷದಂತೆ ಎರಡು ಬಾರಿ ಸೇವಾ ಅವಧಿ ವಿಸ್ತರಣೆ ನೀಡಲಾಗಿತ್ತು.
ಇಂಟೆಲಿಜೆನ್ಸ್ ಬ್ಯೂರೋ ಭಾರತದ ಪ್ರಮುಖ ಆಂತರಿಕ ಗುಪ್ತಚರ ಸಂಸ್ಥೆಯಾಗಿದೆ. ಇದು ದೇಶದಲ್ಲಿ ಭಯೋತ್ಪಾದನೆ, ವಿವಿಧ ಪ್ರದೇಶಗಳಲ್ಲಿನ ಸಂಘರ್ಷಗಳು, ಸರ್ಕಾರದ ನೀತಿಗಳಿಗೆ ಸಂಬಂಧಿಸಿದ ಬೆದರಿಕೆಗಳ ಮೌಲ್ಯಮಾಪನ ಮತ್ತು ಕೌಂಟರ್-ಇಂಟೆಲಿಜೆನ್ಸ್ ಸೇರಿದಂತೆ ಹಲವು ಪ್ರಮುಖ ವಿಷಯಗಳ ಕುರಿತು ಮಾಹಿತಿಯನ್ನು ಸಂಗ್ರಹಿಸುತ್ತದೆ. ಇದರೊಂದಿಗೆ ಇತರ ತನಿಖಾ ಸಂಸ್ಥೆಗಳು ಮತ್ತು ಪೊಲೀಸ್ ಪಡೆಗಳಿಗೂ ಇದು ನೆರವು ನೀಡುತ್ತದೆ.
ಯಾರು ಈ ಮಹೇಶ್ ದೀಕ್ಷಿತ್?
ಆಂಧ್ರಪ್ರದೇಶ ಕೆಡರ್ನ 1993ರ ಬ್ಯಾಚ್ನ ಐಪಿಎಸ್ ಅಧಿಕಾರಿಯಾದ ದೀಕ್ಷಿತ್, ಪ್ರಸ್ತುತ ಗುಪ್ತಚರ ಸಂಸ್ಥೆಯಲ್ಲಿ ಎರಡನೇ ಅತ್ಯುನ್ನತ ಹುದ್ದೆಯಾದ ಸ್ಪೆಷಲ್ ಡೈರೆಕ್ಟರ್ ಆಗಿ ಸೇವೆ ಸಲ್ಲಿಸುತ್ತಿದ್ದಾರೆ. 'ಹಿಂದೂಸ್ತಾನ್ ಟೈಮ್ಸ್' ವರದಿಯ ಪ್ರಕಾರ, ಅವರು ಪ್ರಸ್ತುತ ವಿವಿಧ ವಲಯಗಳ ಪ್ರಮುಖ ಕಾರ್ಯಾಚರಣೆಗಳ ಉಸ್ತುವಾರಿ ನೋಡಿಕೊಳ್ಳುತ್ತಿದ್ದಾರೆ.
ವೃತ್ತಿಪರ ವೈದ್ಯರಾಗಿದ್ದು, ಆನಂತರ ಕಾನೂನು ಜಾರಿ ಅಧಿಕಾರಿಯಾಗಿ ಬದಲಾಗಿರುವ ದೀಕ್ಷಿತ್ ಅವರು ಆಂತರಿಕ ಭದ್ರತೆಯ ಸವಾಲುಗಳನ್ನು ನಿಭಾಯಿಸುವಲ್ಲಿ ವ್ಯಾಪಕ ಕಾರ್ಯಾಚರಣೆ ಮತ್ತು ಗುಪ್ತಚರ ಅನುಭವವನ್ನು ಹೊಂದಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಅವರಿಗೆ ಭಯೋತ್ಪಾದನೆ ನಿಗ್ರಹ ಕಾರ್ಯಾಚರಣೆಗಳಲ್ಲೂ ಉತ್ತಮ ಅನುಭವವಿದೆ. ಗುಪ್ತಚರ ಇಲಾಖೆಯಲ್ಲಿ ಸ್ಪೆಷಲ್ ಡೈರೆಕ್ಟರ್ ಆಗಿ ನೇಮಕಗೊಳ್ಳುವ ಮೊದಲು, ಅವರು ಅತ್ಯಂತ ಸೂಕ್ಷ್ಮವಾದ ಕಾಶ್ಮೀರ ವಿಭಾಗದ ಜವಾಬ್ದಾರಿಯನ್ನು ಹೊತ್ತಿದ್ದರು. ಆರ್ಟಿಕಲ್ 370 ರದ್ದತಿಯ ನಂತರ ಆ ಕೇಂದ್ರಾಡಳಿತ ಪ್ರದೇಶದಲ್ಲಿ ಕಾನೂನು ಮತ್ತು ಸುವ್ಯವಸ್ಥೆಯನ್ನು ಕಾಪಾಡುವಲ್ಲಿ ಅವರು ಪ್ರಮುಖ ಪಾತ್ರ ವಹಿಸಿದ್ದರು. ಇದರೊಂದಿಗೆ, ಈಶಾನ್ಯ ರಾಜ್ಯಗಳು ಮತ್ತು ಲಡಾಖ್ನ ಕಾರ್ಯಾಚರಣೆಗಳಿಂದ ಹಿಡಿದು ನಕ್ಸಲ್ ವಿರೋಧಿ ಘಟಕಗಳವರೆಗೆ ವೈವಿಧ್ಯಮಯ ವಿಭಾಗಗಳನ್ನು ನಿಭಾಯಿಸಿರುವ ಕಾರಣ, ಪ್ರಾದೇಶಿಕ ಭದ್ರತಾ ಬೆದರಿಕೆಗಳನ್ನು ನಿರ್ವಹಿಸುವಲ್ಲಿಯೂ ಅವರಿಗೆ ದೀರ್ಘ ಅನುಭವವಿದೆ ಎಂದು 'ಪಿಟಿಐ' ಸುದ್ದಿ ಸಂಸ್ಥೆ ವರದಿ ಮಾಡಿದೆ.
2019ರ ಆಗಸ್ಟ್ನಲ್ಲಿ ಜಮ್ಮು ಮತ್ತು ಕಾಶ್ಮೀರದಲ್ಲಿ ಆರ್ಟಿಕಲ್ 370 ರದ್ದತಿಗೆ ಸಂಬಂಧಿಸಿದ ಸಿದ್ಧತೆಗಳಲ್ಲಿ ಭಾಗಿಯಾಗಿದ್ದು, ಅವರ ವೃತ್ತಿಜೀವನದ ಅತ್ಯಂತ ಮಹತ್ವದ ಅಧ್ಯಾಯಗಳಲ್ಲಿ ಒಂದಾಗಿದೆ.
ಹಿಂದಿನ ಜಮ್ಮು ಮತ್ತು ಕಾಶ್ಮೀರ ರಾಜ್ಯವನ್ನು ಜಮ್ಮು-ಕಾಶ್ಮೀರ ಹಾಗೂ ಲಡಾಖ್ ಎಂಬ ಕೇಂದ್ರಾಡಳಿತ ಪ್ರದೇಶಗಳಾಗಿ ಮರುಸಂಘಟಿಸಿದ ನಂತರ, ದೀಕ್ಷಿತ್ ಅವರಿಗೆ ಈ ವಲಯದಲ್ಲಿ ಅತ್ಯಂತ ನಿರ್ಣಾಯಕ ಗುಪ್ತಚರ ಜವಾಬ್ದಾರಿಗಳನ್ನು ವಹಿಸಲಾಗಿತ್ತು. ರಾಜಕೀಯವಾಗಿ ಅತ್ಯಂತ ಸೂಕ್ಷ್ಮವಾಗಿದ್ದ ಆ ಅವಧಿಯಲ್ಲಿ ಸಾರ್ವಜನಿಕರಲ್ಲಿ ವಿಶ್ವಾಸ ಮೂಡಿಸುವ ಜೊತೆಗೆ, ಭಯೋತ್ಪಾದನೆ ಮತ್ತು ಪ್ರತ್ಯೇಕತಾವಾದಿ ಅಂಶಗಳಿಂದ ಎದುರಾದ ಭದ್ರತಾ ಸವಾಲುಗಳನ್ನು ಸಮರ್ಥವಾಗಿ ನಿಭಾಯಿಸಿದ ಕೀರ್ತಿ ಅವರಿಗೆ ಸಲ್ಲುತ್ತದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಅವರು ಜಮ್ಮು ಮತ್ತು ಕಾಶ್ಮೀರದಲ್ಲಿ ಪ್ರಮುಖ ಗುಪ್ತಚರ ಜವಾಬ್ದಾರಿಗಳನ್ನು ನೋಡಿಕೊಳ್ಳುತ್ತಿದ್ದ ಅವಧಿಯಲ್ಲೇ, 2023ರಲ್ಲಿ ಶ್ರೀನಗರದಲ್ಲಿ G20 ಪ್ರವಾಸೋದ್ಯಮ ಕಾರ್ಯಕಾರಿ ಗುಂಪಿನ ಸಭೆ ಯಶಸ್ವಿಯಾಗಿ ನಡೆದಿತ್ತು. ಈ ಜಾಗತಿಕ ಸಭೆಯು ಅಂತರರಾಷ್ಟ್ರೀಯ ಮಟ್ಟದಲ್ಲಿ ಭಾರಿ ಗಮನ ಸೆಳೆದಿತ್ತು. ಈ ಶೃಂಗಸಭೆಯನ್ನು ಯಾವುದೇ ಅಡೆತಡೆಯಿಲ್ಲದೆ ಸುಗಮವಾಗಿ ನಡೆಸಿದ್ದು, ಆ ವಲಯದಲ್ಲಿ ಸುಧಾರಿಸುತ್ತಿರುವ ಭದ್ರತಾ ವಾತಾವರಣವನ್ನು ಜಗತ್ತಿಗೆ ಪ್ರದರ್ಶಿಸುವಲ್ಲಿ ಪ್ರಮುಖ ಮೈಲಿಗಲ್ಲಾಗಿ ಕಂಡುಬಂದಿತ್ತು. ಇದೇ ಅವಧಿಯಲ್ಲಿ ಹಲವು ವಿದೇಶಿ ರಾಜತಾಂತ್ರಿಕ ನಿಯೋಗಗಳು ಕಾಶ್ಮೀರಕ್ಕೆ ಭೇಟಿ ನೀಡಿದ್ದು, ಈ ಪ್ರದೇಶದೊಂದಿಗೆ ಜಾಗತಿಕ ಒಡನಾಟ ಹೆಚ್ಚುತ್ತಿರುವುದನ್ನು ಬಿಂಬಿಸಿತ್ತು. ಅಲ್ಲಿನ ನೈಜ ಪರಿಸ್ಥಿತಿ ಮತ್ತು ಬದಲಾಗುತ್ತಿರುವ ವಿದ್ಯಮಾನಗಳ ಬಗ್ಗೆ ನಿಖರವಾದ ಮೌಲ್ಯಮಾಪನಗಳನ್ನು ಒದಗಿಸುವ ಮೂಲಕ, ರಾಜತಾಂತ್ರಿಕ ಸಂಪರ್ಕವನ್ನು ವಿಸ್ತರಿಸಲು ಮತ್ತು ತಳಮಟ್ಟದ ಬದಲಾವಣೆಗಳ ಬಗ್ಗೆ ವಿಶ್ವಾಸ ಮೂಡಿಸಲು ದೀಕ್ಷಿತ್ ಪ್ರಮುಖ ಪಾತ್ರ ವಹಿಸಿದ್ದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಜಮ್ಮು-ಕಾಶ್ಮೀರ ಮತ್ತು ಲಡಾಖ್ ಮಾತ್ರವಲ್ಲದೆ, ದೇಶದ ಒಳಗಿನಿಂದ ಹಾಗೂ ವಿದೇಶಿ ಮೂಲಗಳಿಂದ ಭಾರತವನ್ನು ಗುರಿಯಾಗಿಸಿಕೊಂಡು ನಡೆಯುವ ಸುಳ್ಳು ಮಾಹಿತಿ ಮತ್ತು ಅಪಪ್ರಚಾರದ ಅಭಿಯಾನಗಳನ್ನು ಮಟ್ಟಹಾಕುವ ಪ್ರಯತ್ನಗಳಲ್ಲಿ ದೀಕ್ಷಿತ್ ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾರೆ. ರಾಷ್ಟ್ರೀಯ ಭದ್ರತೆಗೆ ಎದುರಾಗುವ ಬೆದರಿಕೆಗಳು ಹೆಚ್ಚಾಗಿ ಡಿಜಿಟಲ್ ಕ್ಷೇತ್ರಕ್ಕೂ ವಿಸ್ತರಿಸುತ್ತಿರುವ ಈ ಸಮಯದಲ್ಲಿ, ಇಂತಹ ಮಾಹಿತಿ ಸಮರದ ಸವಾಲುಗಳನ್ನು ನಿಭಾಯಿಸುವಲ್ಲಿ ಅವರಿಗಿರುವ ಅನುಭವವು ಅತ್ಯಂತ ಪ್ರಸ್ತುತವಾಗಿದೆ ಎಂದು ಗುಪ್ತಚರ ಮತ್ತು ಭದ್ರತಾ ತಜ್ಞರು ಅಭಿಪ್ರಾಯಪಟ್ಟಿದ್ದಾರೆ.
ಸರ್ಕಾರದ ಆದೇಶದಲ್ಲೇನಿದೆ?
ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದ ಸಂಪುಟದ ನೇಮಕಾತಿ ಸಮಿತಿಯು ದೀಕ್ಷಿತ್ ಅವರನ್ನು ಎರಡು ವರ್ಷಗಳ ಅವಧಿಗೆ ನೇಮಕ ಮಾಡಲು ಅನುಮೋದನೆ ನೀಡಿದೆ.
ಅವರ ನೇಮಕಾತಿಯ ಕುರಿತಾದ ಸರ್ಕಾರದ ಆದೇಶ ಹೀಗಿದೆ: "ಗುಪ್ತಚರ ಇಲಾಖೆಯ ಸ್ಪೆಷಲ್ ಡೈರೆಕ್ಟರ್ ಆಗಿರುವ ಮಹೇಶ್ ದೀಕ್ಷಿತ್, ಐಪಿಎಸ್ (AP:93) ಅವರನ್ನು ಹಾಲಿ ನಿರ್ದೇಶಕ ತಪನ್ ಕುಮಾರ್ ದೇಕಾ, ಐಪಿಎಸ್ ಅವರ ಸ್ಥಾನಕ್ಕೆ ಗುಪ್ತಚರ ಇಲಾಖೆಯ ನಿರ್ದೇಶಕರನ್ನಾಗಿ ನೇಮಿಸಲು ಸಂಪುಟದ ನೇಮಕಾತಿ ಸಮಿತಿಯು ಅನುಮೋದನೆ ನೀಡಿದೆ. ಅವರು ಅಧಿಕಾರ ವಹಿಸಿಕೊಂಡ ದಿನದಿಂದ ಎರಡು ವರ್ಷಗಳ ಅವಧಿಗೆ ಅಥವಾ ಮುಂದಿನ ಆದೇಶದವರೆಗೆ, ಇವೆರಡರಲ್ಲಿ ಯಾವುದು ಮೊದಲೋ ಅಲ್ಲಿಯವರೆಗೆ ಅವರ ಸೇವಾ ಅವಧಿಯನ್ನು ವಿಸ್ತರಿಸುವ ಮೂಲಕ ಈ ನೇಮಕಾತಿ ಮಾಡಲಾಗಿದೆ."
ಅತ್ಯುನ್ನತ ಹುದ್ದೆಯಲ್ಲಿ ಸೇವೆ ಸಲ್ಲಿಸಲು ಅನುಕೂಲವಾಗುವಂತೆ, ಫಂಡಮೆಂಟಲ್ ರೂಲ್ (FR) 56(d) ಮತ್ತು ಆಲ್ ಇಂಡಿಯಾ ಸರ್ವಿಸಸ್ (ಡೆತ್-ಕಮ್-ರಿಟೈರ್ಮೆಂಟ್ ಬೆನಿಫಿಟ್ಸ್) ರೂಲ್ಸ್, 1958ರ ರೂಲ್ 16(1A) ಅಡಿಯಲ್ಲಿ ಸರ್ಕಾರವು ದೀಕ್ಷಿತ್ ಅವರಿಗೆ ಸೇವಾ ಅವಧಿ ವಿಸ್ತರಣೆಯನ್ನು ನೀಡಿದೆ ಎಂದು 'ಎಎನ್ಐ' ಸುದ್ದಿ ಸಂಸ್ಥೆ ವರದಿ ಮಾಡಿದೆ.
ಹಾಲಿ ಮುಖ್ಯಸ್ಥ ದೇಕಾ ಅವರ ಅಧಿಕಾರಾವಧಿಯಲ್ಲಿ, ಇಲಾಖೆಯು ಮುಖ್ಯವಾಗಿ ಭಯೋತ್ಪಾದನೆ ನಿಗ್ರಹ ಕಾರ್ಯಾಚರಣೆಗಳು, ಗುಪ್ತಚರ ಸಮನ್ವಯತೆ ಮತ್ತು ಹೊಸ ಭದ್ರತಾ ಬೆದರಿಕೆಗಳ ಮೇಲೆ ಹೆಚ್ಚಿನ ಗಮನ ಹರಿಸಿತ್ತು ಎಂದು ಎಎನ್ಐ ತಿಳಿಸಿದೆ.
ಭಯೋತ್ಪಾದನೆ, ತೀವ್ರಗಾಮಿತ್ವದಿಂದ ಹಿಡಿದು ಸೈಬರ್ ಬೆದರಿಕೆಗಳು ಮತ್ತು ಗಡಿಯಾಚೆಗಿನ ಸುಳ್ಳು ಮಾಹಿತಿಯ ಅಭಿಯಾನಗಳವರೆಗೆ ಭಾರತವು ವೈವಿಧ್ಯಮಯ ಮತ್ತು ಹೊಸ ಭದ್ರತಾ ಸವಾಲುಗಳನ್ನು ಎದುರಿಸುತ್ತಿರುವ ಈ ನಿರ್ಣಾಯಕ ಸಮಯದಲ್ಲಿ ಈ ನೇಮಕಾತಿ ನಡೆದಿದೆ. ಗುಪ್ತಚರ ಇಲಾಖೆಯ ಹೊಸ ಮುಖ್ಯಸ್ಥರಾಗಿ ದೀಕ್ಷಿತ್ ಅವರು ಆಂತರಿಕ ಭದ್ರತೆಯನ್ನು ಬಲಪಡಿಸುವ ಮತ್ತು ವಿವಿಧ ಭದ್ರತಾ ಹಾಗೂ ಗುಪ್ತಚರ ಸಂಸ್ಥೆಗಳ ನಡುವೆ ಸಮನ್ವಯತೆಯನ್ನು ಹೆಚ್ಚಿಸುವ ಕಾರ್ಯಾಚರಣೆಗಳ ಉಸ್ತುವಾರಿ ವಹಿಸಿಕೊಳ್ಳಲಿದ್ದಾರೆ.
ದಿನದಿಂದ ದಿನಕ್ಕೆ ಜಟಿಲವಾಗುತ್ತಿರುವ ಭದ್ರತಾ ವಾತಾವರಣವನ್ನು ನಿಭಾಯಿಸಲು, ಅನುಭವವಿರುವ ಗುಪ್ತಚರ ನಾಯಕತ್ವಕ್ಕೆ ಆದ್ಯತೆ ನೀಡುವ ಸರ್ಕಾರದ ನಿರಂತರ ನಿಲುವಿನ ಭಾಗವಾಗಿ ಅವರ ಈ ಪದೋನ್ನತಿಯನ್ನು ನೋಡಲಾಗುತ್ತಿದೆ.






