ಗಲ್ಲು ಶಿಕ್ಷೆಯನ್ನು ಸಂವಿಧಾನಬದ್ಧ ವಿಧಾನವೆಂದು ಸುಪ್ರೀಂ ಕೋರ್ಟ್ ಎತ್ತಿಹಿಡಿದಿದ್ದು ಏಕೆ?

ಸುಪ್ರೀಂ ಕೋರ್ಟ್ | Photo Credit ; sci.gov.in
ಬ್ರಿಟಿಷರ ಕಾಲದಲ್ಲಿ ಜಾರಿಗೆ ಬಂದ ಮರಣದಂಡನೆ ನೀಡುವ ವಿಧಾನವು ಸಂವಿಧಾನ ನೀಡಿರುವ ಮಾನವ ಘನತೆಯ ಹಕ್ಕಿಗೆ ಬದ್ಧವಾಗಿದೆಯೇ ಎಂಬ ಪ್ರಶ್ನೆಗೆ, ಸುಪ್ರೀಂ ಕೋರ್ಟ್ ಮಂಗಳವಾರ (ಆಗಸ್ಟ್ 18) ಹೌದು ಎಂದು ಹೇಳಿದೆ. ಪ್ರಸ್ತುತ ಲಭ್ಯವಿರುವ ದಾಖಲೆ ಮತ್ತು ಮಾಹಿತಿಗಳನ್ನು ಆಧರಿಸಿ ನ್ಯಾಯಪೀಠ ಈ ನಿರ್ಧಾರಕ್ಕೆ ಬಂದಿದೆ.
ನ್ಯಾಯಮೂರ್ತಿಗಳಾದ ವಿಕ್ರಮ್ ನಾಥ್ ಮತ್ತು ಸಂದೀಪ್ ಮೆಹ್ತಾ ಅವರನ್ನೊಳಗೊಂಡ ಪೀಠವು ಗಲ್ಲಿಗೇರಿಸುವ ವಿಧಾನದ ಸಾಂವಿಧಾನಿಕ ಸಿಂಧುತ್ವವನ್ನು ಎತ್ತಿಹಿಡಿಯಿತು. ಗಲ್ಲಿಗೇರಿಸುವ ಪದ್ಧತಿಯು ವೈಜ್ಞಾನಿಕವಾಗಿ ಸೂಕ್ತವಲ್ಲ ಮತ್ತು ಇದು 21ನೇ ವಿಧಿ ಅಡಿಯಲ್ಲಿ ಸಿಗುವ ಘನತೆಯಿಂದ ಸಾಯುವ ಹಕ್ಕನ್ನು ಉಲ್ಲಂಘಿಸುತ್ತದೆ ಎಂದು ಆರೋಪಿಸಿ ಸಲ್ಲಿಕೆಯಾಗಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಕೋರ್ಟ್ ವಜಾಗೊಳಿಸಿತು.
ಈ ಅರ್ಜಿಯ ವಿಚಾರಣೆಗೆ ಎರಡು ಪ್ರಮುಖ ಕಾನೂನು ಅಡೆತಡೆಗಳಿವೆ ಎಂದು ಕೋರ್ಟ್ ಗಮನಿಸಿತು. ಮೊದಲನೆಯದಾಗಿ, 1983ರ ದೀನಾ vs ಯೂನಿಯನ್ ಆಫ್ ಇಂಡಿಯಾ ಪ್ರಕರಣದಲ್ಲಿ ಮೂವರು ನ್ಯಾಯಮೂರ್ತಿಗಳ ಪೀಠವು ಗಲ್ಲು ಶಿಕ್ಷೆಯನ್ನು ಸಂವಿಧಾನಬದ್ಧ ಎಂದು ತೀರ್ಪು ನೀಡಿತ್ತು. ಎರಡನೆಯದಾಗಿ, ಸಂಸತ್ತು ಇತ್ತೀಚೆಗೆ 'ಭಾರತೀಯ ನಾಗರಿಕ ಸುರಕ್ಷಾ ಸಂಹಿತೆ' (BNSS) ಕಾಯ್ದೆಯನ್ನು ಜಾರಿಗೆ ತಂದಾಗಲೂ ಗಲ್ಲಿಗೇರಿಸುವ ಪದ್ಧತಿಯನ್ನೇ ಮುಂದುವರಿಸಿದೆ.
ವಿಚಾರಣೆ ವೇಳೆ ಕೋರ್ಟ್, "ಸಂವಿಧಾನ ನೀಡುವ ಮೂಲಭೂತ ಹಕ್ಕುಗಳ ರಕ್ಷಣೆಯು ಮರಣದಂಡನೆ ನೀಡುವ ಸ್ಥಳದಲ್ಲಿ ಕೊನೆಗೊಳ್ಳುವುದಿಲ್ಲ. ಇದು ಗಲ್ಲು ಶಿಕ್ಷೆಗೆ ಕಾಯುತ್ತಿರುವ ಕೈದಿಗಳಿಗೂ ಅಷ್ಟೇ ಪ್ರಮುಖವಾಗಿ ಅನ್ವಯಿಸುತ್ತದೆ" ಎಂದು ಅಭಿಪ್ರಾಯಪಟ್ಟಿತು.
ಗಲ್ಲು ಶಿಕ್ಷೆಯನ್ನು ಪ್ರಶ್ನಿಸುತ್ತಿರುವುದೇಕೆ?
ಗಲ್ಲಿಗೇರಿಸುವ ವಿಧಾನದಲ್ಲಿ ವ್ಯಕ್ತಿಯ ಎತ್ತರ ಮತ್ತು ತೂಕಕ್ಕೆ ತಕ್ಕಂತೆ 'ಹಗ್ಗದ ಉದ್ದ' ಮತ್ತು 'ಬೀಳುವ ಎತ್ತರ'ವನ್ನು ನಿರ್ಧರಿಸಲಾಗುತ್ತದೆ. ಇದು ಕುತ್ತಿಗೆಯ ಭಾಗದ C2-C3 ಮೂಳೆಗಳನ್ನು ಮುರಿದು, ಕ್ಷಣಾರ್ಧದಲ್ಲಿ ವ್ಯಕ್ತಿಯು ಪ್ರಜ್ಞೆ ತಪ್ಪುವಂತೆ ಮಾಡಲು ವಿನ್ಯಾಸಗೊಳಿಸಲಾದ ಪದ್ಧತಿಯಾಗಿದೆ.
'ದೀನಾ vs ಯೂನಿಯನ್ ಆಫ್ ಇಂಡಿಯಾ' ಪ್ರಕರಣದಲ್ಲಿ ವೈದ್ಯಕೀಯ ಸಾಕ್ಷ್ಯಗಳು, ತಜ್ಞರ ಅಭಿಪ್ರಾಯ ಹಾಗೂ ಇತರ ದೇಶಗಳ ಮರಣದಂಡನೆ ವಿಧಾನಗಳನ್ನು ಪರಿಶೀಲಿಸಿದ ನಂತರ ಸುಪ್ರೀಂ ಕೋರ್ಟ್ ಗಲ್ಲು ಶಿಕ್ಷೆಯ ಸಾಂವಿಧಾನಿಕ ಸಿಂಧುತ್ವವನ್ನು ಎತ್ತಿಹಿಡಿದಿತ್ತು. ಸರಿಯಾದ ಕ್ರಮದಲ್ಲಿ ಜಾರಿಗೊಳಿಸಿದರೆ ಗಲ್ಲಿಗೇರಿಸುವುದು ಅತ್ಯಂತ ವೇಗವಾದ ಮತ್ತು ಖಚಿತವಾದ ವಿಧಾನವಾಗಿದ್ದು, ಇದು ಸಂವಿಧಾನದ 21ನೇ ವಿಧಿಯನ್ನು ಉಲ್ಲಂಘಿಸುವುದಿಲ್ಲ ಎಂದು ಕೋರ್ಟ್ ಹೇಳಿತ್ತು. ಈ ಪ್ರಕ್ರಿಯೆಯು ಇತರ ವಿಧಾನಗಳಿಗಿಂತ ಹೆಚ್ಚಿನ ನೋವನ್ನು ಉಂಟುಮಾಡುವುದಿಲ್ಲ ಹಾಗೂ ಇದು ಕ್ರೂರವಲ್ಲ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿತ್ತು.
ಆದರೆ, 1983ರ ತೀರ್ಪಿನ ನಂತರ ವೈಜ್ಞಾನಿಕ ತಿಳಿವಳಿಕೆ ಮತ್ತು ಸಾಂವಿಧಾನಿಕ ಹಕ್ಕುಗಳ ವ್ಯಾಖ್ಯಾನ ಬದಲಾಗಿದೆ ಎಂದು ಅರ್ಜಿದಾರರು ವಾದಿಸಿದ್ದಾರೆ. ಗಲ್ಲು ಶಿಕ್ಷೆಯನ್ನು ವಿಧಿಸುವ ಕಾನೂನು ನಿಯಮವು ಅಸಾಂವಿಧಾನಿಕ ಎಂದು ಘೋಷಿಸಬೇಕು ಮತ್ತು 21ನೇ ವಿಧಿ ಅಡಿಯಲ್ಲಿ ಘನತೆಯಿಂದ ಸಾಯುವ ಹಕ್ಕೂ ಸೇರಿದೆ ಎಂದು ಅವರು ಕೋರಿದ್ದಾರೆ. ಗಲ್ಲಿಗೇರಿಸುವಾಗ ತೀವ್ರ ದೈಹಿಕ ಯಾತನೆ ಮತ್ತು ನೋವು ಉಂಟಾಗುತ್ತದೆ. ಅಲ್ಲದೆ ಇದು ಅನಿಶ್ಚಿತತೆಯಿಂದ ಕೂಡಿದೆ. ಎತ್ತರದಿಂದ ಕೆಳಗೆ ಬೀಳುವ ಅಂತರ ಕಡಿಮೆಯಾದರೆ ಉಸಿರುಗಟ್ಟಿ ಸಾವು ಸಂಭವಿಸುತ್ತದೆ, ಅಂತರ ಹೆಚ್ಚಾದರೆ ಶಿರಚ್ಛೇದನವಾಗುವ ಅಪಾಯವಿರುತ್ತದೆ ಎಂದು ಅರ್ಜಿದಾರರು ಹೇಳಿದ್ದರು.
ಇದಕ್ಕೆ ಬೆಂಬಲವಾಗಿ 1882 ಮತ್ತು 1945ರ ನಡುವೆ ಇಂಗ್ಲೆಂಡ್ನಲ್ಲಿ ಗಲ್ಲಿಗೇರಿಸಲಾದ 34 ಜನರ ಅಸ್ಥಿಪಂಜರಗಳ ಕುರಿತು 1992ರಲ್ಲಿ ನಡೆದ ಅಧ್ಯಯನವನ್ನು ಅರ್ಜಿದಾರರು ನ್ಯಾಯಾಲಯದ ಗಮನಕ್ಕೆ ತಂದರು. ಈ ಪೈಕಿ C2-C3 ಮೂಳೆಗಳ ಮುರಿತ ಸಾಮಾನ್ಯವಾಗಿದ್ದರೂ, ಕ್ಷಣಾರ್ಧದಲ್ಲಿ ಸಾವು ತರುವ 'ಹ್ಯಾಂಗ್ಮ್ಯಾನ್ಸ್ ಫ್ರ್ಯಾಕ್ಚರ್' ಕಂಡುಬಂದಿದ್ದು ಕೇವಲ ಮೂರು ಪ್ರಕರಣಗಳಲ್ಲಿ ಮಾತ್ರ. ಉಳಿದ ಆರನೇ ಒಂದು ಭಾಗದಷ್ಟು ಜನರು ಉಸಿರುಗಟ್ಟಿ ಮೃತಪಟ್ಟಿದ್ದರು. ಹೀಗಾಗಿ ಗಲ್ಲು ಶಿಕ್ಷೆಯು ವೇಗವೂ ಅಲ್ಲ, ನಿಯಂತ್ರಿಸಬಹುದಾದ ವಿಧಾನವೂ ಅಲ್ಲ. ಇದು ತೀವ್ರ ಮಾನಸಿಕ ಯಾತನೆಗೆ ಕಾರಣವಾಗುವುದರಿಂದ 21ನೇ ವಿಧಿಯ ಉಲ್ಲಂಘನೆಯಾಗುತ್ತದೆ ಎಂಬುದು ಅರ್ಜಿದಾರರ ವಾದ.
ಇದಕ್ಕೆ ಪ್ರತಿಯಾಗಿ ವಾದಿಸಿದ ಕೇಂದ್ರ ಸರ್ಕಾರ, 2003ರಿಂದೀಚೆಗೆ ಭಾರತದಲ್ಲಿ ಕೇವಲ ಎಂಟು ಗಲ್ಲು ಶಿಕ್ಷೆಗಳು ಮಾತ್ರ ನಡೆದಿವೆ ಮತ್ತು ದೇಶದಲ್ಲಿ ಯಾವುದೇ ಗಲ್ಲು ಶಿಕ್ಷೆ ವಿಫಲವಾದ ಉದಾಹರಣೆಯಿಲ್ಲ ಎಂದು ತಿಳಿಸಿತು. ಇದೇ ವೇಳೆ, ಅಮೆರಿಕದಲ್ಲಿ ಬಳಸಲಾಗುವ 'ವಿಷಕಾರಿ ಚುಚ್ಚುಮದ್ದು' ವಿಧಾನವು ವಿಫಲವಾಗಿರುವ ಅನೇಕ ದಾಖಲಿತ ಘಟನೆಗಳಿವೆ ಎಂದು ಸರ್ಕಾರ ಪೀಠಕ್ಕೆ ವಿವರಿಸಿತು.
ಗಲ್ಲು ಶಿಕ್ಷೆಯ ಬಗ್ಗೆ ಕಾನೂನು ಏನು ಹೇಳುತ್ತದೆ?
ಸಂವಿಧಾನದ 21ನೇ ವಿಧಿ ನೀಡಿರುವ ಜೀವನ ನಡೆಸುವ ಹಕ್ಕಿನಿಂದಲೇ 'ಘನತೆಯಿಂದ ಸಾಯುವ ಹಕ್ಕು' ಕೂಡ ಸೇರಿದೆ. 1996ರ 'ಗ್ಯಾನ್ ಕೌರ್ vs ಪಂಜಾಬ್ ಸರ್ಕಾರ' ಪ್ರಕರಣದಲ್ಲಿ ಸುಪ್ರೀಂ ಕೋರ್ಟ್, ಜೀವನದ ಹಕ್ಕು ಎಂದರೆ ಗೌರವಯುತವಾಗಿ ಜೀವಿಸುವುದು ಮತ್ತು ಘನತೆಯಿಂದ ಸಾಯುವುದನ್ನು ಒಳಗೊಂಡಿರುತ್ತದೆ ಎಂದು ತೀರ್ಪು ನೀಡಿತ್ತು.
ಭಾರತೀಯ ನಾಗರಿಕ ಸುರಕ್ಷಾ ಸಂಹಿತೆಯ ಸೆಕ್ಷನ್ 393(5)ರ ಪ್ರಕಾರ, ಯಾರಿಗಾದರೂ ಮರಣದಂಡನೆ ಶಿಕ್ಷೆಯಾದರೆ, "ಆ ವ್ಯಕ್ತಿಯ ಸಾವು ಸಂಭವಿಸುವವರೆಗೆ ಆತನನ್ನು ಕುತ್ತಿಗೆಗೆ ಹಗ್ಗ ಬಿಗಿದು ಗಲ್ಲಿಗೇರಿಸಬೇಕು" ಎಂದು ನಿರ್ದೇಶಿಸುತ್ತದೆ.
1861ರಲ್ಲಿ ಅಪರಾಧ ಪ್ರಕ್ರಿಯಾ ಸಂಹಿತೆ (CrPC) ಯಲ್ಲಿ ಮೊದಲ ಬಾರಿಗೆ ಸೇರಿಸಲಾದ ಈ ನಿಯಮವು ಹಲವು ತಿದ್ದುಪಡಿಗಳ ನಂತರವೂ ಬದಲಾಗದೆ, ಈಗ ಬಿಎನ್ಎಸ್ಎಸ್ನಲ್ಲೂ ಮುಂದುವರಿದಿದೆ.
ಕಾನೂನು ಆಯೋಗ ಏನು ಹೇಳಿದೆ?
ನ್ಯಾಯಮೂರ್ತಿ ಎಂ. ಜಗನ್ನಾಥ ರಾವ್ ಅಧ್ಯಕ್ಷತೆಯ ಕಾನೂನು ಆಯೋಗವು 2003ರಲ್ಲಿ ಸಲ್ಲಿಸಿದ 187ನೇ ವರದಿಯು ಈ ಅರ್ಜಿಗೆ ಮುಖ್ಯ ಆಧಾರವಾಗಿತ್ತು.
ಭಾರತ ಮತ್ತು ವಿದೇಶಗಳಲ್ಲಿನ ಮರಣದಂಡನೆ ಪದ್ಧತಿಗಳನ್ನು ಪರಿಶೀಲಿಸಿದ ಆಯೋಗವು, "ಮರಣದಂಡನೆಗೆ ಪರ್ಯಾಯವಾಗಿ ವಿಷಕಾರಿ ಚುಚ್ಚುಮದ್ದು ನೀಡುವ ವಿಧಾನವನ್ನು ಸೇರಿಸಲು ಕಾನೂನಿಗೆ ತಿದ್ದುಪಡಿ ತರಬೇಕು" ಎಂದು ಶಿಫಾರಸು ಮಾಡಿತ್ತು.
ಕೋರ್ಟ್ ಮಾರ್ಷಲ್ ಮೂಲಕ ವಿಧಿಸುವ ಮರಣದಂಡನೆಯನ್ನು ಗುಂಡಿಕ್ಕಿ ಕೊಲ್ಲುವ ಮೂಲಕ ಜಾರಿಗೊಳಿಸಬಹುದಾದ ಸೈನ್ಯದ ಕಾನೂನುಗಳನ್ನೂ ಈ ವರದಿ ಉಲ್ಲೇಖಿಸಿತ್ತು. ಗಲ್ಲು ಶಿಕ್ಷೆಯೊಂದೇ ಕಾನೂನುಬದ್ಧ ವಿಧಾನವಾಗಿ ಉಳಿಯಬೇಕಿಲ್ಲ ಎಂದು ವಾದಿಸಲು ಅರ್ಜಿದಾರರು ಈ ನಿಯಮಗಳನ್ನು ಕೋರ್ಟ್ ಮುನ್ನೆಲೆಗೆ ತಂದರು.
ಕಾನೂನು ಆಯೋಗದ ವರದಿಗಳು ಕೇವಲ ಶಿಫಾರಸುಗಳಷ್ಟೇ ಎಂದು ಉಲ್ಲೇಖಿಸಿದ ಸುಪ್ರೀಂ ಕೋರ್ಟ್, ಸಂಸತ್ತು ಬಿಎನ್ಎಸ್ಎಸ್ ಜಾರಿಗೆ ತಂದಾಗಲೂ ಗಲ್ಲಿಗೇರಿಸುವ ಪದ್ಧತಿಯನ್ನೇ ಮುಂದುವರಿಸಿದೆ. ಇದನ್ನು ಪ್ರಸ್ತುತ ಇರುವ ವ್ಯವಸ್ಥೆಗೆ ಶಾಸಕಾಂಗ ನೀಡಿದ ಸಮ್ಮತಿ ಎಂದು ನ್ಯಾಯಾಲಯ ಪರಿಗಣಿಸಿತು.
ಕಾನೂನು ಏನು ಹೇಳುತ್ತದೆ?
ಸಾಮಾನ್ಯ ಜೈಲು ನಿಯಮಗಳ ಪ್ರಕಾರ, ಗಲ್ಲಿಗೇರಿಸುವ ಹಲಗೆಯ ಬಾಗಿಲು ತೆರೆದ ನಂತರ ಮೃತದೇಹವನ್ನು 30 ನಿಮಿಷಗಳ ಕಾಲ ಹಗ್ಗದಲ್ಲೇ ತೂಗಾಡಲು ಬಿಡಲಾಗುತ್ತದೆ. ಮರಣದಂಡನೆ ಜಾರಿಗೊಳಿಸುವ ವಿಧಾನಗಳ ಕುರಿತಾದ ಕಾನೂನು ಚರ್ಚೆಯು ಪ್ರಮುಖವಾಗಿ 'ಸರ್ಕಾರದ ಅಧಿಕಾರ' ಮತ್ತು 'ಮಾನವ ಹಕ್ಕುಗಳ' ನಡುವಿನ ಸಂಘರ್ಷವಾಗಿದೆ. ಸಂವಿಧಾನದ 21ನೇ ವಿಧಿಯು ಜೀವಿಸುವ ಮತ್ತು ವೈಯಕ್ತಿಕ ಸ್ವಾತಂತ್ರ್ಯದ ಹಕ್ಕನ್ನು ನೀಡಿದ್ದು, ಇದು ಸಾಲಿನಲ್ಲಿ ಸಾಯುವಾಗಲೂ ಮಾನವ ಘನತೆಯನ್ನು ಕಾಯ್ದುಕೊಳ್ಳುವ ಹಕ್ಕನ್ನು ಒಳಗೊಂಡಿದೆ ಎಂದು ವ್ಯಾಖ್ಯಾನಿಸಲಾಗಿದೆ.
ಈ ವಿಷಯದಲ್ಲಿ ಪ್ರಮುಖವಾಗಿ ಎರಡು ತರಹದ ಚಿಂತನೆಗಳಿವೆ:
ಮರಣದಂಡನೆ ವಿರೋಧಿ ನಿಲುವು (ಅಬಾಲಿಷನಿಸ್ಟ್): ಗಲ್ಲಿಗೇರಿಸುವಾಗ ಸಣ್ಣ ತಪ್ಪಾದರೂ ಸಾವು ತಡವಾಗಿ, ಅದು ಅತ್ಯಂತ ಕ್ರೂರ ಮತ್ತು ಅಮಾನವೀಯ ಯಾತನೆಗೆ ಕಾರಣವಾಗುತ್ತದೆ ಎಂದು ಸುಧಾರಣಾವಾದಿಗಳು ವಾದಿಸುತ್ತಾರೆ. ಇದರ ಬದಲಿಗೆ ಗುಂಡಿಕ್ಕಿ ಕೊಲ್ಲುವಂತಹ ವಿಧಾನಗಳು ಹೆಚ್ಚು ಪರಿಣಾಮಕಾರಿ ಎಂಬ ಅಭಿಪ್ರಾಯವೂ ಹಿಂದೆ ವ್ಯಕ್ತವಾಗಿತ್ತು.
ಮರಣದಂಡನೆ ಬೆಂಬಲಿತ ನಿಲುವು (ರಿಟೆನ್ಷನಿಸ್ಟ್): ಗಲ್ಲಿಗೇರಿಸುವುದು ಸದ್ಯಕ್ಕೆ ಲಭ್ಯವಿರುವ "ಅತ್ಯಂತ ಸುರಕ್ಷಿತ ಮತ್ತು ತ್ವರಿತ" ವಿಧಾನ ಎಂದು ಕೇಂದ್ರ ಸರ್ಕಾರ ವಾದಿಸುತ್ತದೆ. ಅಮೆರಿಕದಲ್ಲಿ 'ವಿಷಕಾರಿ ಚುಚ್ಚುಮದ್ದು' ನೀಡುವ ವಿಧಾನವು ವಿಫಲವಾಗಿರುವ ಅನೇಕ ಉದಾಹರಣೆಗಳನ್ನು ಸರ್ಕಾರ ಎತ್ತಿ ತೋರಿಸಿದೆ. ಇದರ ಜೊತೆಗೆ, ಜೀವ ಉಳಿಸಬೇಕಾದ ವೈದ್ಯರನ್ನು ಮರಣದಂಡನೆ ಪ್ರಕ್ರಿಯೆಯಲ್ಲಿ ಬಳಸುವುದು ನೈತಿಕವಾಗಿ ಸರಿಯಲ್ಲ ಎಂದೂ ಸರ್ಕಾರ ಹೇಳಿದೆ.
ಜಾಗತಿಕವಾಗಿ, ದೇಶಗಳನ್ನು ಅವುಗಳ ಕಾನೂನು ಚೌಕಟ್ಟು ಮತ್ತು ಮರಣದಂಡನೆ ಜಾರಿಗೊಳಿಸುವ ಅಭ್ಯಾಸದ ಆಧಾರದ ಮೇಲೆ ವರ್ಗೀಕರಿಸಲಾಗುತ್ತದೆ. ಆಮ್ನೆಸ್ಟಿ ಇಂಟರ್ನ್ಯಾಷನಲ್ ಸಂಸ್ಥೆಯ ಇತ್ತೀಚಿನ ವರದಿಗಳ ಪ್ರಕಾರ, ಜಗತ್ತಿನ ಹೆಚ್ಚಿನ ದೇಶಗಳು ಮರಣದಂಡನೆಯನ್ನು ರದ್ದುಗೊಳಿಸುವತ್ತ ಒಲವು ತೋರುತ್ತಿವೆ.
ಆಧುನಿಕ ಮರಣದಂಡನೆ ವಿಧಾನಗಳು
ಮಾನವೀಯ ನೆಲೆಗಟ್ಟಿನಲ್ಲಿ ಮರಣದಂಡನೆ ನೀಡುವ ವಿಧಾನಗಳ ಹುಡುಕಾಟವು ಹಲವು ರೀತಿಯ ಪದ್ಧತಿಗಳಿಗೆ ದಾರಿ ಮಾಡಿಕೊಟ್ಟಿದೆ. ಆದರೆ ಈ ಪ್ರತಿಯೊಂದು ವಿಧಾನವೂ ವೈಜ್ಞಾನಿಕ ಮತ್ತು ನೈತಿಕ ವಿವಾದಗಳನ್ನು ಒಳಗೊಂಡಿದೆ. ಭಾರತ, ಸಿಂಗಾಪುರ ಮತ್ತು ಜಪಾನ್ ಸೇರಿದಂತೆ ಬ್ರಿಟಿಷ್ ಕಾನೂನು ವ್ಯವಸ್ಥೆಯನ್ನು ಅನುಸರಿಸುವ ದೇಶಗಳಲ್ಲಿ ಗಲ್ಲಿಗೇರಿಸುವುದು ಅತ್ಯಂತ ಸಾಮಾನ್ಯ ವಿಧಾನವಾಗಿದೆ. ಇತರ ಪ್ರಮುಖ ವಿಧಾನಗಳು ಹೀಗಿವೆ
ವಿಷಕಾರಿ ಚುಚ್ಚುಮದ್ದು: ಅಮೆರಿಕದ ಮರಣದಂಡನೆ ಜಾರಿಯಲ್ಲಿರುವ ಹಲವು ರಾಜ್ಯಗಳಲ್ಲಿ ಹಾಗೂ ಚೀನಾದಲ್ಲಿ ಇದನ್ನು ಪ್ರಮುಖವಾಗಿ ಬಳಸಲಾಗುತ್ತದೆ. ಆಮ್ನೆಸ್ಟಿ ಇಂಟರ್ನ್ಯಾಷನಲ್ ಪ್ರಕಾರ, ಜಗತ್ತಿನ ಇತರ ಎಲ್ಲಾ ದೇಶಗಳಿಗಿಂತ ಚೀನಾದಲ್ಲೇ ಹೆಚ್ಚಿನ ಮರಣದಂಡನೆಗಳು ನಡೆಯುತ್ತವೆ. ಈ ವಿಧಾನದಲ್ಲಿ ಕೈದಿಗೆ ಹಂತ-ಹಂತವಾಗಿ ಮರಗಟ್ಟುವ ಔಷಧ, ಪಾರ್ಶ್ವವಾಯು ಉಂಟುಮಾಡುವ ಔಷಧ ಮತ್ತು ಪೊಟ್ಯಾಸಿಯಮ್ ಕ್ಲೋರೈಡ್ ನೀಡಲಾಗುತ್ತದೆ. ನರಗಳು ಸುಲಭವಾಗಿ ಸಿಗದಿದ್ದಾಗ ಈ ಪ್ರಕ್ರಿಯೆ ವಿಫಲವಾಗುವ ಸಾಧ್ಯತೆಗಳಿರುತ್ತವೆ.
ಗುಂಡಿಕ್ಕುವುದು: ಚೀನಾ, ಉತ್ತರ ಕೊರಿಯಾ, ಸೊಮಾಲಿಯಾ ಮತ್ತು ಪಶ್ಚಿಮ ಏಷ್ಯಾದ ಕೆಲವು ಭಾಗಗಳಲ್ಲಿ ಈ ಪದ್ಧತಿ ಜಾರಿಯಲ್ಲಿದೆ. ಇದು ನೋಡಲು ಅತ್ಯಂತ ಭಯಾನಕವಾಗಿದ್ದರೂ, ಕ್ಷಣಾರ್ಧದಲ್ಲಿ ಹೃದಯ ಅಥವಾ ನರಮಂಡಲವನ್ನು ನಿಷ್ಕ್ರಿಯಗೊಳಿಸುತ್ತದೆ .
ಶಿರಚ್ಛೇದನ: ಸೌದಿ ಅರೇಬಿಯಾದಲ್ಲಿ ತಲೆಯನ್ನು ಕತ್ತಿಯಿಂದ ಕತ್ತರಿಸುವ ಮೂಲಕ ಮರಣದಂಡನೆ ಜಾರಿಗೊಳಿಸಲಾಗುತ್ತದೆ. ಇದು ತಲೆ ಕತ್ತರಿಸುವ ವ್ಯಕ್ತಿಯ ನಿಖರತೆಯನ್ನು ಹೆಚ್ಚಾಗಿ ನೆಚ್ಚಿಕೊಂಡಿರುತ್ತದೆ.
ನೈಟ್ರೋಜನ್ ಹೈಪೋಕ್ಸಿಯಾ: ಅಮೆರಿಕದಲ್ಲಿ ಇತ್ತೀಚೆಗೆ ಪರಿಚಯಿಸಲಾದ ಈ ವಿಧಾನದಲ್ಲಿ ಶುದ್ಧ ನೈಟ್ರೋಜನ್ ಅನಿಲವನ್ನು ಉಸಿರಾಡುವಂತೆ ಮಾಡಲಾಗುತ್ತದೆ. ಇದು ಉಸಿರುಗಟ್ಟುವ ತೀವ್ರ ಭಯದ ಅನುಭವವಿಲ್ಲದೆ ವ್ಯಕ್ತಿಯನ್ನು ಕೊಲ್ಲಲು ವಿನ್ಯಾಸಗೊಳಿಸಲಾಗಿದೆ. ಆದರೆ ಈ ವಿಧಾನವನ್ನು ಸರಿಯಾಗಿ ಪರೀಕ್ಷಿಸಿಲ್ಲ ಹಾಗೂ ಇದು ಮಾನವರ ಮೇಲೆ ನಡೆಸುವ ಪ್ರಯೋಗದಂತಿದೆ ಎಂದು ವಿಮರ್ಶಕರು ವಾದಿಸುತ್ತಾರೆ.
ಗಲ್ಲು ಶಿಕ್ಷೆಯನ್ನು ಸುಪ್ರೀಂ ಕೋರ್ಟ್ ಎತ್ತಿಹಿಡಿದಿದ್ದು ಏಕೆ?
1983ರ 'ದೀನಾ ಪ್ರಕರಣ'ದ ತೀರ್ಪನ್ನು ಮರುಪರಿಶೀಲಿಸಲು ಯಾವುದೇ ಬಲವಾದ ಕಾರಣಗಳಿಲ್ಲ ಎಂದು ನ್ಯಾಯಪೀಠ ಸ್ಪಷ್ಟಪಡಿಸಿತು. ಅರ್ಜಿದಾರರು ನ್ಯಾಯಾಲಯದ ಮುಂದೆ ಕೆಲವು ವೈಜ್ಞಾನಿಕ ಮಾಹಿತಿಗಳನ್ನು ನೀಡಿದ್ದರೂ, ಅವು ದೀನಾ ಪ್ರಕರಣದ ತೀರ್ಪಿಗೆ ಆಧಾರವಾಗಿದ್ದ ವಿಷಯಗಳನ್ನು ತಳ್ಳಿಹಾಕುವಂತಿಲ್ಲ ಎಂದು ಕೋರ್ಟ್ ಗಮನಿಸಿತು. ಅಲ್ಲದೆ, ವಿಷಕಾರಿ ಚುಚ್ಚುಮದ್ದು, ವಿದ್ಯುತ್ ಆಘಾತ, ವಿಷಕಾರಿ ಅನಿಲ ಅಥವಾ ಗುಂಡಿಕ್ಕಿ ಕೊಲ್ಲುವ ವಿಧಾನಗಳು ಗಲ್ಲು ಶಿಕ್ಷೆಗಿಂತ ಉತ್ತಮವೇನೂ ಅಲ್ಲ ಎಂಬುದನ್ನು ಈ ಮಾಹಿತಿಗಳು ನಿರೂಪಿಸುವುದಿಲ್ಲ ಎಂದು ಪೀಠ ಅಭಿಪ್ರಾಯಪಟ್ಟಿತು.
ದೀನಾ ಪ್ರಕರಣದ ತೀರ್ಪನ್ನು ಉಲ್ಲೇಖಿಸಿದ ಕೋರ್ಟ್, ಎತ್ತರದಿಂದ ಕೆಳಗೆ ಬೀಳಿಸುವ ಪದ್ಧತಿಯು (long-drop method) ಕುತ್ತಿಗೆಯ ಮೂಳೆಯನ್ನು ಮುರಿದು ತಕ್ಷಣವೇ ವ್ಯಕ್ತಿಯು ಪ್ರಜ್ಞೆ ತಪ್ಪುವಂತೆ ಮಾಡಲು ವಿನ್ಯಾಸಗೊಳಿಸಲಾಗಿದೆ ಎಂದು ವಿವರಿಸಿತು. ಪ್ರಸ್ತುತ ಇರುವ ಈ ಗಲ್ಲಿಗೇರಿಸುವ ವಿಧಾನವು ಮರಣದಂಡನೆಯನ್ನು ಯಾವುದೇ 'ಕ್ರೂರ ಅಥವಾ ಘನತೆಗೆ ಕುಂದುಬಾರದಂತೆ' ಗೌರವಯುತವಾಗಿ ಜಾರಿಗೆ ತರುವ ಸರ್ಕಾರದ ಹೊಣೆಗಾರಿಕೆಯನ್ನು ಪೂರೈಸುತ್ತದೆ ಎಂದು ಕೋರ್ಟ್ ಹೇಳಿತು.
ಅರ್ಜಿಯನ್ನು ವಜಾಗೊಳಿಸಿದ ಪೀಠವು, ಈ ವಿಷಯವನ್ನು ಶಾಶ್ವತವಾಗಿ ಮುಕ್ತಾಯಗೊಂಡಿದೆ ಎಂದು ಪರಿಗಣಿಸಲಾಗುವುದಿಲ್ಲ ಎಂದು ಸ್ಪಷ್ಟಪಡಿಸಿತು. ಸಾಂವಿಧಾನಿಕ ಕಾನೂನುಗಳು ಸಮಯಕ್ಕೆ ತಕ್ಕಂತೆ ಬದಲಾಗುತ್ತವೆ. ಭವಿಷ್ಯದಲ್ಲಿ ದೀನಾ ಪ್ರಕರಣದ ತೀರ್ಪಿಗೆ ಆಧಾರವಾಗಿದ್ದ ಅಂಶಗಳನ್ನು ಬದಲಾಯಿಸುವಂತಹ ಹೊಸ ವೈಜ್ಞಾನಿಕ, ವೈದ್ಯಕೀಯ ಅಥವಾ ನಿಖರ ಸಾಕ್ಷ್ಯಾಧಾರಗಳು ಲಭ್ಯವಾದರೆ ಈ ವಿಷಯವನ್ನು ಮತ್ತೆ ಪ್ರಶ್ನಿಸಬಹುದು ಎಂದು ಪೀಠ ಅಭಿಪ್ರಾಯಪಟ್ಟಿತು. ಜತೆಗೆ, ಮರಣದಂಡನೆಗೆ ಪರ್ಯಾಯ ವಿಧಾನಗಳನ್ನು ಪರಿಶೀಲಿಸುವ ಅವಕಾಶವನ್ನು ಕೇಂದ್ರ ಸರ್ಕಾರಕ್ಕೆ ಮುಕ್ತವಾಗಿರಿಸಿತು.
ಕೃಪೆ: indianexpress.com






