ದೋರನಹಳ್ಳಿಯಲ್ಲಿ 6.45 ಕೋಟಿ ರೂ. ವೆಚ್ಚದಲ್ಲಿ ಸಮುದಾಯ ಆರೋಗ್ಯ ಕೇಂದ್ರ ಮೇಲ್ದರ್ಜೆಗೆ : ಶಾಸಕ ಚೆನ್ನಾರೆಡ್ಡಿ

ಯಾದಗಿರಿ: ಗ್ರಾಮೀಣ ಜನರ ಆರೋಗ್ಯ ಕಾಪಾಡುವ ನಿಟ್ಟಿನಲ್ಲಿ ಮತ್ತು ಹೆಚ್ಚಿನ ಸೌಲಭ್ಯಗಳು ಸಕಾಲಕ್ಕೆ ಸಿಗುವ ನಿಟ್ಟಿನಲ್ಲಿ ರಾಜ್ಯ ಸರ್ಕಾರವು ಸಮುದಾಯ ಆರೋಗ್ಯ ಕೇಂದ್ರಗಳನ್ನು ಮೇಲ್ದರ್ಜೆಗೇರಿಸುವ ಕೆಲಸ ಮಾಡುತ್ತಿದೆ ಎಂದು ಶಾಸಕ ಚೆನ್ನಾರೆಡ್ಡಿ ಪಾಟೀಲ್ ತುನ್ನೂರು ಹೇಳಿದರು.
ಶಹಾಪುರ ತಾಲೂಕಿನ ಯಾದಗಿರಿ ಮತಕ್ಷೇತ್ರದ ದೋರನಹಳ್ಳಿಯಲ್ಲಿನ 30 ಹಾಸಿಗೆಯುಳ್ಳ ಆಸ್ಪತ್ರೆಯನ್ನು 50 ಹಾಸಿಗೆಯನ್ನಾಗಿ ಮೇಲ್ದರ್ಜೆಗೆರಿಸುವ 6.45 ಕೋಟಿ ರೂ.ವೆಚ್ಚದ ಕಾಮಗಾರಿಗೆ ಸೋಮವಾರ ಭೂಮಿಪೂಜೆ ನೆರವೇರಿಸಿ ಮಾತನಾಡಿದರು.
2024-25 ನೇ ಸಾಲಿನ ಕೆಕೆಆರ್ಡಿಬಿ ಮತ್ತು ಆರೋಗ್ಯ ಇಲಾಖೆಯಡಿ ಈ ಮಹತ್ವದ ಕೆಲಸ ಕೈಗೊಳ್ಳಲಾಗುತ್ತಿದೆ. ಇದರಿಂದ ಈ ಗ್ರಾಮದ ಸುತ್ತಲಿನ ಹತ್ತಾರು ಹಳ್ಳಿಗಳ ಜನರ ಆರೋಗ್ಯ ಸಮಸ್ಯೆ ನಿವಾರಣೆಯಾಗಲಿದೆ ಎಂದರು.
ಉತ್ತಮ ದರ್ಜೆ ಉಪಕರಣಗಳು. ಸುಸಜ್ಜಿತ ಕಟ್ಟಡ ಮತ್ತು ವೈದ್ಯಕೀಯ ತಪಾಸಣೆಗಾಗಿ ಬೇಕಾಗುವ ಎಲ್ಲ ಸೌಲಭ್ಯಗಳು ಇಲ್ಲಿ ಸಿಗಲಿವೆ ಎಂದರು.
ದೊಡ್ಡ ಮೊತ್ತದ ಅನುದಾನದಿಂದ ಈ ಕೆಲಸ ಆರಂಭಿಸಲಾಗಿದೆ. ಕಾಮಗಾರಿ ಗುಣಮಟ್ಟದಲ್ಲಿ ಮತ್ತು ನಿಗದಿತ ಅವಧಿಯಲ್ಲಿ ಮಾಡಿಕೊಡಬೇಕೆಂದು ಸಂಬಂಧಪಟ್ಟ ಅಧಿಕಾರಿಗಳಿಗೆ ಶಾಸಕರು ಸೂಚಿಸಿದರು.
ಕಾರ್ಯಕ್ರಮದಲ್ಲಿ ಎಇಇ ಲಕ್ಷ್ಮೀನಾರಾಯಣ ರೆಡ್ಡಿ, ಎಇ ಬಸರೆಡ್ಡಿ, ಡಿಎಚ್ ಒ ಡಾ.ಮಹೇಶ ಬಿರಾದಾರ್, ಹಿರಿಯ ವೈದ್ಯಾಧಿಕಾರಿ ಡಾ.ಗಂಗಾಧರ ಚಟ್ಟರಕಿ, ಡಾ.ರಾಜೇಶ್ವರಿ ಗುತ್ತೇದಾರ, ಡಾ.ಅಕ್ಷಯ, ಡಾ.ಭಾಗಿ, ಡಾ.ರತ್ನಾ, ಗುತ್ತಿಗೆದಾರ ಉದಯಕುಮಾರ ಹಾಗೂ ಮರೆಪ್ಪ ಬಿಲ್ಹಾರ್, ಷಣ್ಮುಖಪ್ಪ ಕಕ್ಕೇರಿ, ಅಬ್ದುಲ್ ಕರೀಂ ಸಾಬ್, ನಿಂಗಣ್ಣ ಮುರಲ ದೊಡ್ಡಿ, ಬಾಗಣ್ಣ ಕೊಟ್ರಿ, ನಿಜಗುಣ ಪೂಜಾರಿ, ಶ್ರೀನಾಥ್ ಗಣೇರ, ಸೇರಿದಂತೆಯೇ ಇತರರಿದ್ದರು.







