ಯಾದಗಿರಿಯಲ್ಲಿ ವೈದ್ಯರ ದಿನಾಚರಣೆ

ಯಾದಗಿರಿ: ವೈದ್ಯರು ಎರಡನೇ ದೇವರು ಎಂಬ ಭಾವನೆ ಜನರಲ್ಲಿ ಇದೆ. ಚಿಕಿತ್ಸೆಗಾಗಿ ಬರುವ ರೋಗಿಗಳೊಂದಿಗೆ ಪ್ರೀತಿ ಮತ್ತು ವಿಶ್ವಾಸದಿಂದ ಮಾತನಾಡಿದರೆ ಅವರ ಅರ್ಧ ರೋಗವೇ ಕಡಿಮೆಯಾಗುತ್ತದೆ. ಈ ನಿಟ್ಟಿನಲ್ಲಿ ವೈದ್ಯರು ಮಾನವೀಯತೆ ಹಾಗೂ ಸ್ಪಂದನೆಯೊಂದಿಗೆ ಸೇವೆ ಸಲ್ಲಿಸಬೇಕು ಎಂದು ಶಾಸಕ ಚನ್ನಾರೆಡ್ಡಿ ಪಾಟೀಲ್ ತುನ್ನೂರು ಹೇಳಿದರು.
ಭಾರತೀಯ ವೈದ್ಯಕೀಯ ಸಂಘ (ಐಎಂಎ) ಜಿಲ್ಲಾ ಘಟಕ ಭಾನುವಾರ ಸಂಜೆ ನಗರದ ಎನ್ವಿಎಂ ಸಭಾಂಗಣದಲ್ಲಿ ಆಯೋಜಿಸಿದ್ದ ವೈದ್ಯರ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಇಂದು ವೈದ್ಯಕೀಯ ಕ್ಷೇತ್ರದಲ್ಲಿ ಸಾಕಷ್ಟು ಬದಲಾವಣೆಗಳಾಗಿದ್ದು, ಅತ್ಯಾಧುನಿಕ ಉಪಕರಣಗಳು ಲಭ್ಯವಿವೆ. ಬಹುತೇಕ ರೋಗಗಳಿಗೆ ಪರಿಣಾಮಕಾರಿ ಚಿಕಿತ್ಸೆ ನೀಡುವ ಸಾಮರ್ಥ್ಯ ವೈದ್ಯಕೀಯ ಕ್ಷೇತ್ರ ಹೊಂದಿದೆ. ಆದರೆ, ರೋಗಿಗಳ ಬಗ್ಗೆ ವಿಶೇಷ ಕಾಳಜಿ ಮತ್ತು ಮಾನವೀಯತೆಯಿಂದ ಚಿಕಿತ್ಸೆ ನೀಡಿದರೆ ಅದು ಇನ್ನಷ್ಟು ಉಪಕಾರಿಯಾಗುತ್ತದೆ ಎಂದು ಹೇಳಿದರು.
ಪ್ರತಿ ವರ್ಷ ವೈದ್ಯರ ಸಂಖ್ಯೆ ಹೆಚ್ಚುತ್ತಿದ್ದು, ಮುಂದಿನ ದಿನಗಳಲ್ಲಿ ಪ್ರತಿಯೊಂದು ಮನೆಯಲ್ಲೂ ಒಬ್ಬ ವೈದ್ಯರಿರುವಂತಹ ಪರಿಸ್ಥಿತಿ ನಿರ್ಮಾಣವಾಗಬಹುದು. ಮಹಿಳೆಯರು ಕಠಿಣ ಪರಿಶ್ರಮದ ಮೂಲಕ ವೈದ್ಯಕೀಯ ಕ್ಷೇತ್ರದಲ್ಲಿ ಉತ್ತಮ ಸಾಧನೆ ಮಾಡುತ್ತಿದ್ದು, ಹಿರಿಯ ವೈದ್ಯರಾದ ಡಾ. ಸಂಗಮ್ಮ ಹಾಗೂ ಡಾ. ವೀರಬಸವಂತರೆಡ್ಡಿ ಮುದ್ನಾಳ ಅವರು ಯುವ ವೈದ್ಯರಿಗೆ ಮಾದರಿಯಾಗಿದ್ದಾರೆ ಎಂದು ಪ್ರಶಂಸಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಭಾರತೀಯ ವೈದ್ಯಕೀಯ ಸಂಘದ ಜಿಲ್ಲಾಧ್ಯಕ್ಷ ಡಾ. ಚಂದ್ರಶೇಖರ ಪೂಜಾರಿ ಅವರು ಸಂಘದ ವಾರ್ಷಿಕ ಚಟುವಟಿಕೆಗಳ ಕುರಿತು ವಿವರಿಸಿ, ವೈದ್ಯಕೀಯ ಸೇವೆಯನ್ನು ಇನ್ನಷ್ಟು ಜನಪರಗೊಳಿಸಲು ಸಂಘ ಬದ್ಧವಾಗಿದೆ ಎಂದು ತಿಳಿಸಿದರು.
ಅತಿಥಿಗಳಾಗಿ ಸ್ತ್ರೀರೋಗ ತಜ್ಞೆ ಡಾ.ಸಂಗಮ್ಮ ಡಾ.ವೀರಬಸವಂತರೆಡ್ಡಿ ಮುದ್ನಾಳ ಮಾತನಾಡಿದರು. ಹಿರಿಯ ವೈದ್ಯ ಡಾ.ಸುಭಾಷ ಕರಣಗಿ ಅತಿಥಿಗಳಾಗಿ ಭಾಗವಹಿಸಿದ್ದರು. ಡಾ.ಲಕ್ಷ್ಮೀ ಪಾಟೀಲ್ ಮಾತನಾಡಿದರು. ಕಾರ್ಯಕ್ರಮ ನಿರೂಪಿಸಿದ ವೈದ್ಯ ಡಾ.ವೀರೇಶ ಜಾಕಾ, ಜಿಲ್ಲೆಯಲ್ಲಿ ವೈದ್ಯಕೀಯ ಸೌಲಭ್ಯಗಳ ಬಗ್ಗೆ ವಿವರಿಸಿದರು.
ಇದೇ ವೇಳೆ ವೈದ್ಯರಾದ ಡಾ. ಭಗವಂತ ಅನವಾರ್, ಡಾ. ಸಿ.ಎಂ.ಪಾಟೀಲ್, ಡಾ.ಸುರೇಶರೆಡ್ಡಿ, ಡಾ.ಸುರೇಖಾ ಹಾಗೂ ಡಾ.ಶೈಲಜಾ ವರ್ಮಾ ಅವರನ್ನು ವಿಶೇಷವಾಗಿ ಸನ್ಮಾನಿಸಲಾಯಿತು.
ಆರಂಭದಲ್ಲಿ ಡಾ. ಭಗವಂತ ಅನವಾರ್ ಅವರು ವೈದ್ಯರು ಮತ್ತು ರೋಗಿಗಳ ನಡುವೆ ನಡೆಯುವ ದೇಶಿ ಶೈಲಿಯ ಸಂಭಾಷಣೆ ಹಾಸ್ಯದ ಮೂಲಕ ಹೇಳಿ ಸಭಿಕರಿಗೆ ನಗೆಗಡಲಲ್ಲಿ ತೆಲಿಸಿದರು. ಡಾ.ಪ್ರಶಾಂತ ಬಾಸುತಕರ್ ಸೇರಿದಂತೆಯೇ ಇತರರಿದ್ದರು.






