ಸಿಎಂ ಸ್ಥಾನ ಸಿಗುತ್ತೆ ಎಂದರೆ ನಾನು, ಶಾಸಕ ಚೆನ್ನಾರೆಡ್ಡಿ ಇಬ್ಬರೂ ಆರೆಸ್ಸೆಸ್ ಗೀತೆ ಹಾಡುತ್ತೇವೆ : ಸತೀಶ್ ಜಾರಕಿಹೊಳಿ ವ್ಯಂಗ್ಯ

ಸತೀಶ್ ಜಾರಕಿಹೋಳಿ
ಯಾದಗಿರಿ : ʼಆರೆಸ್ಸೆಸ್ ಗೀತೆ ಹಾಡಿದರೆ ಮುಖ್ಯಮಂತ್ರಿ ಸ್ಥಾನ ಸಿಗುತ್ತೆ ಎಂದರೆ ನಾನು, ಶಾಸಕ ಚೆನ್ನಾರೆಡ್ಡಿ ಪಾಟೀಲ್ ಇಬ್ಬರೂ ಹಾಡುತ್ತೇವೆʼ ಎಂದು ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೋಳಿ ವ್ಯಂಗ್ಯವಾಡಿದರು.
ಇಲ್ಲಿನ ಅತಿಥಿ ಗೃಹದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಸಂಸ್ಕೃತ ಭಾಷೆ ಚೆನ್ನಾಗಿ ಬಲ್ಲವರಾಗಿದ್ದಾರೆ. ಸಂದರ್ಭಕ್ಕೆ ಅನುಸಾರವಾಗಿ ಅಧಿವೇಶನದಲ್ಲಿ ಹಾಡಿದ್ದಾರೆ ಅಷ್ಟೇ. ಬಿಜೆಪಿ ನಾಯಕ ಬಿ.ಎಲ್.ಸಂತೋಷ್ ಅವರನ್ನು ಟೀಕಿಸಿದ ಮಹೇಶ್ ತಿಮರೋಡಿ ಅವರನ್ನು ಒದ್ದು ಒಳಗೆ ಹಾಕಿದ್ದೇವೆ ಎಂಬ ಮಾತು ಕೂಡಾ ದೂರು ಬಂದ ಹಿನ್ನಲೆಯಲ್ಲಿ ಹೇಳಿದ್ದಾಗಿದೆ. ಈ ಎರಡನ್ನೂ ಬೇರೆ ರೀತಿಯಲ್ಲಿ ಹೊಲಿಕೆ ಮಾಡುವುದು ಸರಿಯಲ್ಲ ಎಂದರು.
ಮುಂದಿನ ಎರಡು ತಿಂಗಳಲ್ಲಿ ರಾಜ್ಯದಲ್ಲಿ ಕ್ರಾಂತಿ ನಡೆಯುತ್ತಾ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ಅದೆಲ್ಲ ಪಕ್ಷದ ಕೇಂದ್ರ ಸಮಿತಿಗೆ ಬಿಟ್ಟಿದ್ದು ಎಂದರು.
ಮಾಜಿ ಸಚಿವ ರಾಜಣ್ಣ ಅವರು ದಿಲ್ಲಿಗೆ ಹೋಗಿ ನಾಯಕರನ್ನು ಭೇಟಿ ಮಾಡಿರುವ ಘಟನೆಗೆ ಪ್ರತಿಕ್ರಿಯಿಸಿದ ಅವರು, ಇದು ಹೈಕಮಾಂಡ್ಗೆ ಬಿಟ್ಟ ವಿಚಾರ ಎಂದರು.
ಈ ವೇಳೆ ಶಾಸಕ ಚೆನ್ನಾರೆಡ್ಡಿ ಪಾಟೀಲ್ ತುನ್ನೂರು ಇದ್ದರು.
ʼಬೆಳೆ ಹಾನಿʼ ಸಮೀಕ್ಷೆಯ ವರದಿ ಬಂದ ನಂತರ ಪರಿಹಾರ ವಿತರಣೆ :
ಅಕಾಲಿಕ ಮಳೆಯಿಂದ ಹಾನಿಯಾದ ಬೆಳೆ ಬಗ್ಗೆ ಜಿಲ್ಲಾಡಳಿತ ಸಮೀಕ್ಷೆ ನಡೆಸಿ ವರದಿ ಕೊಟ್ಟ ನಂತರ ಪರಿಹಾರ ವಿತರಣೆಯಾಗುತ್ತದೆ. ಹೊಸ ಸೇತುವೆಗಳ ನಿರ್ಮಾಣ, ಶಿಥಿಲಗೊಂಡ ಸೇತುವೆಗಳ ದುರಸ್ತಿ ಕೆಲಸ ಕೈಗೊಳ್ಳಲಾಗುವುದು. ನಕಲಿ ಜಾತಿ ಪ್ರಮಾಣ ನೀಡುವುದನ್ನು ಜಿಲ್ಲಾಧಿಕಾರಿಗಳು ತಡೆಯುತ್ತಾರೆ ಎಂದು ಸಚಿವ ಜಾರಕಿಹೊಳಿ ಹೇಳಿದರು.







