ಆರೆಸ್ಸೆಸ್ ಪಥಸಂಚಲನ ದಿನವೇ ಡಿಎಸ್ಸೆಸ್ ಪಥಸಂಚಲನ ಕೇಳಿದ್ದು ತಪ್ಪು : ಸಚಿವ ದರ್ಶನಾಪುರ ಹೇಳಿಕೆಗೆ ಭೀಮ್ ಆರ್ಮಿಯಿಂದ ಖಂಡನೆ

ಪ್ರಭು ಬುಕ್ಕಲ್
ಯಾದಗಿರಿ: ಆರೆಸ್ಸೆಸ್ ಪಥಸಂಚಲನ ದಿನವೇ ಡಿಎಸ್ಸೆಸ್ ಪಥಸಂಚಲನ ಕೇಳಿದ್ದು ತಪ್ಪು ಎಂಬ ಸಚಿವ ಶರಣಬಸಪ್ಪಗೌಡ ದರ್ಶನಾಪುರ ಅವರ ಹೇಳಿಕೆಗೆ ಭೀಮ್ ಆರ್ಮಿಯ ಯಾದಗಿರಿ ಜಿಲ್ಲಾಧ್ಯಕ್ಷ ಪ್ರಭು ಬುಕ್ಕಲ್ ಅವರು ತೀವ್ರವಾಗಿ ಖಂಡಿಸಿದ್ದಾರೆ.
ಮಂಗಳವಾರ ಈ ಕುರಿತು ಪತ್ರಿಕೆ ಹೇಳಿಕೆ ನೀಡಿರುವ ಅವರು, ಸಚಿವ ದರ್ಶನಾಪುರ ಅವರ ಹೇಳಿಕೆಯು ಸ್ಪಷ್ಟ ದಲಿತ ವಿರೋಧಿಯಾಗಿದೆ. ದಲಿತರ ಮತದಿಂದ ಗೆದ್ದು, ಇದೀಗ ಅವರ ಧ್ವನಿಯನ್ನೇ ಕುಂಠಿತಗೊಳಿಸುವ ಕೆಲಸ ಮಾಡಿದ್ದಾರೆ ಎಂದು ಆರೋಪಿಸಿದರು.
ಕೆಂಭಾವಿಯಲ್ಲಿ ನಡೆಯಲಿರುವ ಆರೆಸ್ಸೆಸ್ ಪಥಸಂಚಲನದ ವೇಳೆ ದಲಿತ ಸಂಘಟನೆಗಳು ಅಡ್ಡಿ ಪಡಿಸಿದರೆ ರೌಡಿಶೀಟರ್ ಕೇಸ್ ಹಾಕುತ್ತೇವೆ ಎಂಬ ಬೆದರಿಕೆ ನೀಡಲಾಗಿದೆ. ಇದರಿಂದ ಕೆಲವು ದಲಿತ ಮುಖಂಡರು ಭಯದಿಂದ ಹಿಂದೆ ಸರಿಯಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಇದರ ಹಿಂದೆ ಸಚಿವರ ಹಸ್ತಕ್ಷೇಪ ಸ್ಪಷ್ಟವಾಗಿ ಗೋಚರಿಸುತ್ತಿದೆ ಎಂದು ಹೇಳಿದರು.
ಜಿಲ್ಲಾಧಿಕಾರಿ, ಎಸ್ಪಿ, ಡಿವೈಎಸ್ಪಿ ಸೇರಿದಂತೆ ಎಲ್ಲಾ ಅಧಿಕಾರಿಗಳು ಸಚಿವರ ಸೂಚನೆ ಮೇರೆಗೆ ಕಾರ್ಯನಿರ್ವಹಿಸುತ್ತಿದ್ದಾರೆ. ಉಸ್ತುವಾರಿ ಸಚಿವರ ಕೈ ಗೊಂಬೆಯಾಗಿ ಆಡಳಿತ ಕಾರ್ಯನಿರ್ವಹಿಸುತ್ತಿದ್ದಾರೆ ಎಂದು ತಿಳಿಸಿದ್ದಾರೆ.





