ಯಾದಗಿರಿ: ಸಚಿವರಿಗೆ ಕರವೇ ಜಿಲ್ಲಾ ಘಟಕದ ವತಿಯಿಂದ ಮುತ್ತಿಗೆ ಹಾಕಿ ಪ್ರತಿಭಟನೆ

ಯಾದಗಿರಿ: ಜಿಲ್ಲೆಯ ಉಳಿದ ತಾಲೂಕುಗಳನ್ನು ಬರಪೀಡಿತ ಎಂದು ಘೋಷಿಸದೆ ಜಿಲ್ಲಾ ಕೆಡಿಪಿ ಸಭೆ ನಡೆಸಲು ಆಗಮಿಸಿದ ಜಿಲ್ಲಾ ಉಸ್ತುವಾರಿ ಸಚಿವ ಡಾ.ಶರಣಪ್ರಕಾಶ ಪಾಟೀಲ ಅವರಿಗೆ ಕರವೇ ಜಿಲ್ಲಾ ಘಟಕವು ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿತು.
ಪ್ರತಿಭಟನೆ ನಂತರ ಮಾತನಾಡಿದ ಕರವೇ ಜಿಲ್ಲಾಧ್ಯಕ್ಷರಾದ ಟಿ.ಎನ್.ಭೀಮುನಾಯಕ ಅವರು, ಜಿಲ್ಲೆಯಲ್ಲಿ ಬರದ ಪರಿಸ್ಥಿತಿ ದಿನದಿಂದ ದಿನಕ್ಕೆ ಗಂಭೀರವಾಗುತ್ತಿದ್ದರೂ, ಜಿಲ್ಲೆಯ ಎಲ್ಲಾ ತಾಲೂಕುಗಳನ್ನು ಬರಪೀಡಿತ ಎಂದು ಘೋಷಿಸದೆ ಕೆಡಿಪಿ ಸಭೆ ನಡೆಸಲು ಮುಂದಾಗಿರುವ ಸರ್ಕಾರದ ಧೋರಣೆಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿದರು.
ಈ ಹಿಂದೆ ಜಿಲ್ಲೆಗೆ ಭೇಟಿ ನೀಡಿದ ಸಂದರ್ಭದಲ್ಲಿ ಜಿಲ್ಲೆಯ ಉಳಿದ ತಾಲೂಕುಗಳನ್ನು ಬರಪೀಡಿತ ಎಂದು ಘೋಷಿಸಿ, ಎರಡನೇ ಪಟ್ಟಿಯಲ್ಲಿ ಸೇರಿಸಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವರು ಜಿಲ್ಲೆಯ ಜನರಿಗೆ ಸ್ಪಷ್ಟ ಭರವಸೆ ನೀಡಿ, ಹಲವು ದಿನಗಳು ಕಳೆದರೂ ಇದುವರೆಗೆ ಯಾವುದೇ ಕ್ರಮ ಕೈಗೊಂಡಿಲ್ಲ. ಜನರಿಗೆ ಭರವಸೆ ನೀಡಿ, ನಂತರ ಅದನ್ನು ಮರೆತುಬಿಡುವುದು ಸರ್ಕಾರದ ಜವಾಬ್ದಾರಿಯುತ ಆಡಳಿತವಲ್ಲವೆಂದು ಅವರು ಆಕ್ರೋಶ ವ್ಯಕ್ತಪಡಿಸಿದರು.
ಜಿಲ್ಲೆಯ ರೈತರು ಬರದ ಹೊಡೆತದಿಂದ ಸಂಕಷ್ಟಕ್ಕೆ ಸಿಲುಕಿದ್ದಾರೆ. ಕೃಷಿ ಚಟುವಟಿಕೆಗಳು ಹಿನ್ನಡೆ ಕಂಡಿವೆ. ಕುಡಿಯುವ ನೀರು, ಜಾನುವಾರುಗಳ ಮೇವಿನ ಸಮಸ್ಯೆ ಹಾಗೂ ಗ್ರಾಮೀಣ ಜನರ ಜೀವನೋಪಾಯದ ಮೇಲೆ ಬರದ ಪರಿಣಾಮ ಬೀರುತ್ತಿದೆ. ಇಂತಹ ಗಂಭೀರ ಪರಿಸ್ಥಿತಿಯಲ್ಲಿ ರೈತರ ಸಮಸ್ಯೆಗಳಿಗೆ ಪರಿಹಾರ ನೀಡದೆ ಕೇವಲ ಕೆಡಿಪಿ ಸಭೆ ನಡೆಸುವುದು ಯಾದಗಿರಿ ಜಿಲ್ಲೆಯ ಜನರ ನೋವಿನೊಂದಿಗೆ ಚೆಲ್ಲಾಟವಾಡಿದಂತಾಗಿದೆಂದು ಆಗ್ರಹಿಸಿದರು.
ರೈತರ ನೋವನ್ನು ಕಡೆಗಣಿಸಿ, ಬರಪೀಡಿತ ಘೋಷಣೆಯನ್ನು ವಿಳಂಬ ಮಾಡಿದರೆ ಕರವೇ ಹೋರಾಟವನ್ನು ಮತ್ತಷ್ಟು ತೀವ್ರಗೊಳಿಸಲಿದೆ. ಬರಪೀಡಿತ ಘೋಷಣೆ, ರೈತರಿಗೆ ದೊರೆಯಬೇಕಾದ ಪರಿಹಾರ ಹಾಗೂ ಅಗತ್ಯ ಬರ ಪರಿಹಾರ ಕ್ರಮಗಳನ್ನು ಕೈಗೊಳ್ಳುವವರೆಗೆ ಹೋರಾಟದಿಂದ ಹಿಂದೆ ಸರಿಯುವುದಿಲ್ಲವೆಂದು ಎಚ್ಚರಿಸಿದರು,
ಪ್ರತಿಭಟನೆಯ ಬಳಿಕ ಪ್ರತಿಕ್ರಿಯಿಸಿದ ಜಿಲ್ಲಾ ಉಸ್ತುವಾರಿ ಸಚಿವರು, ದಿನಾಂಕ 16 ರ ಒಳಗಾಗಿ 3ನೇ ಪಟ್ಟಿಯಲ್ಲಿ ಜಿಲ್ಲೆಯ ಉಳಿದ ತಾಲೂಕುಗಳನ್ನು ಬರ ಪೀಡಿತ ಪ್ರದೇಶವೆಂದು ಘೋಷಿಸಿ ರೈತರಿಗೆ ಪರಿಹಾರ ನೀಡುತ್ತೇವೆಂದು ಭರವಸೆ ನೀಡಿದರು.
ಈ ಸಂದರ್ಭದಲ್ಲಿ ತಾಲೂಕು ಅಧ್ಯಕ್ಷರಾದ ಮಲ್ಲು ಮಾಳಿಕೇರಿ, ನಿಂಗಪ್ಪ ಗುಡುಗುಡಿ, ವಿಶ್ವರಾಜ್ ಪಾಟೀಲ್, ಅಶೋಕ ನಾಯಕ, ಬಸವರಾಜ ಜಗನ್ನಾಥ್, ರಾಜು ಪಗಲಾಪೂರ, ಸೈದಪ್ಪ ಗೌಡಗೇರಾ, ಸಿದ್ದು ಸಾಹುಕಾರ್ ಶರಣು ತಿಂಥಣಿ, ವಿರುಪಾಕ್ಷ ಸ್ವಾಮಿ, ನಾಗು ತಾಂಡೂರಕರ್, ಭೀಮರಾಯ ಗೌಡಗೇರಾ, ವೆಂಕಟರೆಡ್ಡಿ ಕೌಳೂರು, ಮೋನೇಶ ಮಾದ್ವರ, ದೇವಸಿಂಗ್ ಠಾಕೋರ್, ಮಹೇಶ ಠಾಣಗುಂದಿ, ಹುಲಗಪ್ಪ ಚಟ್ನಳ್ಳಿ, ಗಂಗಣ್ಣ ಪೂಜಾರಿ, ರವಿ ಜಮ್ಮಾರ, ಮಲ್ಲು ಬಿಳ್ಹಾರ, ಮರೆಪ್ಪ ಕಡ್ಡಿ, ಕಾಶಿನಾಥ ನಾನೆಕ ನಾಗಪ್ಪ ಪಿಲ್ಲಿ, ದೇವಪ್ಪ ನಾಯಕ, ಅಂಬ್ರೇಶ ನಾಟೇಕರ್, ತಿಮ್ಮಣ್ಣ ಕಟ್ಟಿಮನಿ, ವಿಶ್ವ ಯಾದಗಿರಿ, ರವಿ ಗಡ್ಡೆಸೂಗುರು, ರಮೇಶ.ಡಿ.ನಾಯಕ, ಹಾಗೂ ಸೇರಿದಂತೆ ಕರವೇ ಕಾರ್ಯಕರ್ತರು ಉಪಸ್ಥಿತರಿದ್ದರು.






