ಯಾದಗಿರಿ | ವಡಗೇರಾ ಗ್ರಾಮ ಪಂಚಾಯಿತಿಯನ್ನು ಮೇಲ್ದರ್ಜೇಗೇರಿಸುವಂತೆ ಆಗ್ರಹಿಸಿ ಕರವೇ ಪ್ರತಿಭಟನೆ

ವಡಗೇರಾ: ವಡಗೇರಾ ಗ್ರಾಮ ಪಂಚಾಯತಿಯನ್ನು ಕೂಡಲೇ ಪಟ್ಟಣ ಪಂಚಾಯತಿಯನ್ನಾಗಿ ಮೇಲ್ದರ್ಜೇಗೇರಿಸುವಂತೆ ಆಗ್ರಹಿಸಿ ಕರವೇ ತಾಲೂಕು ಘಟಕದ ವತಿಯಿಂದ ಪಟ್ಟಣದ ವಾಲ್ಮೀಕಿ ವೃತ್ತದಲ್ಲಿ ರಸ್ತೆ ತಡೆದು ಬೃಹತ್ ಪ್ರತಿಭಟನೆ ನಡೆಸಲಾಯಿತು.
ಪ್ರತಿಭಟನೆಯಲ್ಲಿ ಮಾತನಾಡಿದ ಕರವೇ ಜಿಲ್ಲಾ ಉಪಾಧ್ಯಕ್ಷ ಚೌಡಯ್ಯ ಬಾವೂರು, ವಡಗೇರಾ ತಾಲೂಕು ಘೋಷಣೆಯಾಗಿ ಸುಮಾರು 10 ವರ್ಷಗಳೇ ಕಳೆದಿದೆ. ಆದರೂ ತಾಲೂಕು ಕೇಂದ್ರದಲ್ಲಿ ಇನ್ನೂ ಗ್ರಾಪಂ ಕಾರ್ಯನಿರ್ವಹಿಸುತ್ತಿರುವುದು ನಾಚಿಕೆಗೇಡಿನ ಸಂಗತಿ. ತಾಲೂಕಾದ ಮೇಲೆ ಬಹಳ ಅಭಿವೃದ್ಧಿಯಾಗುತ್ತದೆ ಎಂದು ಪಟ್ಟಣ ಹಾಗೂ ಗ್ರಾಮೀಣ ಜನರಅಭಿಪ್ರಾಯವಾಗಿತ್ತು. ಆದರೆ ಇಲ್ಲಿ ಯಾವುದೇ ರೀತಿಯ ಅಭಿವೃದ್ಧಿ ಆಗದಿರುವುದು ಇಲ್ಲಿನ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳ ಕಾರ್ಯವೈಖರಿಯನ್ನು ಎತ್ತಿ ತೋರಿಸುತ್ತದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಕರವೇ ತಾಲೂಕಾಧ್ಯಕ್ಷ ಅಬ್ದುಲ್ ಚಿಗಾನೂರ ಮಾತನಾಡಿ, ಹಳೇ ಹೋಬಳಿ ಕೇಂದ್ರವಿದ್ದಾಗ ವಡಗೇರಾ ಹೇಗಿತ್ತೋ ತಾಲೂಕಾಗಿ 10 ವರ್ಷವಾದರೂ ಹಾಗೆಯೇ ಇದೆ. ಹೊಸ ತಾಲೂಕಾದ ಮೇಲೆ ಇಲ್ಲಿನ ಅಭಿವೃದ್ಧಿಗೆ ಕ್ಷೇತ್ರದ ಶಾಸಕರು ಹಾಗೂ ಅಧಿಕಾರಿಗಳು ಹೆಚ್ಚಿನ ಮುತುವರ್ಜಿ ವಹಿಸಬೇಕಿತ್ತು. ಆದರೆ ಇಲ್ಲಿನ ಪರಿಸ್ಥಿತಿ ನೋಡಿದರೆ ಇದ್ಯಾವುದನ್ನು ಮಾಡಲು ಶಾಸಕರಿಗಾಗಲಿ ಅಧಿಕಾರಿಗಳಿಗಾಗಲಿ ಇಚ್ಛಾಶಕ್ತಿ ಇಲ್ಲವೆಂಬುವುದು ಸ್ಪಷ್ಟವಾಗಿ ಘೋಚರಿಸುತ್ತದೆ. ಕೂಡಲೇ ಶಾಸಕರು, ಅಧಿಕಾರಿಗಳು ಎಚ್ಚೆತ್ತುಕೊಂಡು ಪಟ್ಟಣ ಪಂಚಾಯಿತಿಯನ್ನಾಗಿ ಮೇಲ್ದರ್ಜೆಗೇರಿಸಲು ಕ್ರಮ ಕೈಗೊಳ್ಳಬೇಕು. ಒಂದು ವೇಳೆ ನಿರ್ಲಕ್ಷ್ಯ ವಹಿಸಿದ್ದಲ್ಲಿ ಕರ್ನಾಟಕ ರಕ್ಷಣಾ ವೇದಿಕೆ ವತಿಯಿಂದ ಮತ್ತಷ್ಟು ಉಗ್ರ ಹೋರಾಟ ಮಾಡುವುದಾಗಿ ಎಚ್ಚರಿಸಿದರು.
ಇದೇ ಸಮಯದಲ್ಲಿ ಮುಖ್ಯಮಂತ್ರಿಗಳಿಗೆ ಬರೆದ ಮನವಿ ಪತ್ರವನ್ನು ವಡಗೇರಾ ಗ್ರೇಡ್ 2 ತಹಶೀಲ್ದಾರ ಪ್ರಕಾಶ್ ಹೊಸಮನಿರವರ ಮೂಲಕ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಜಿಲ್ಲಾ ಸಂಘಟನಾ ಕಾರ್ಯದರ್ಶಿ ಹಣಮಂತ್ ತೇಕರಾಳ, ಶಿವರಾಜ ನಾಡಗೌಡ, ಬಸಯ್ಯಸ್ವಾಮಿ ಊಳ್ಳೆಸುಗೂರು, ಸಿದ್ದು ಪೂಜಾರಿ, ಸತೀಶ್ ಜಡಿ, ಬಸವರಾಜ ಕೊದ್ದಡ್ಡಿ, ದೇವು ಬುಸೇನಿ, ಶ್ರೀನಿವಾಸ್ ಮಡಿವಾಳ, ಪೀರಸಾಬ್ ಮರಡಿ, ಮಹಮ್ಮದ್ ಕತಾಲಿ, ಮಲ್ಲು ಜಡಿ, ಪಿಡಪ್ಪ ನಾಯಕ್, ಸಾಬರೆಡ್ಡಿ ಹೊರಟೂರ, ದೇವು ವಿಶ್ವಕರ್ಮ, ಬಸ್ಸು ಬುಸೇನಿ, ಶರಣು ತುಮಕೂರು, ಸಿದ್ದು ಸುಣಗಾರ, ಶಿವು ಶಿವಪುರ, ಸುರೇಶ್ ವಿಶ್ವಕರ್ಮ, ಮಾಳಪ್ಪ ಹೈಯ್ಯಾಳ, ಜುಬಲಪ್ಪ ಕಟ್ಟಿಮನಿ, ರಫಿಕ್ ಊಳ್ಳೆಸೂಗುರ್, ಭೀಮರಾಯ ಕ್ಯಾತ್ನಾಳ, ಮಲ್ಲು ಪಾಟೀಲ್ ಟೋಕಾಪುರ ಸೇರಿದಂತೆ ಹಲವರು ಉಪಸ್ಥಿತರಿದ್ದರು.







