ಗಣಪೂರ ಗ್ರಾಮವನ್ನು ಮಾದರಿ ಗ್ರಾಮ ಮಾಡುವೆ : ಶಾಸಕ ಶರಣಗೌಡ ಕಂದಕೂರ

ಯಾದಗಿರಿ: ಗುರುಮಠಕಲ್ ಮತಕ್ಷೇತ್ರದಲ್ಲಿ ಗಣಪೂರ ಗ್ರಾಮವನ್ನು ಮಾದರಿ ಗ್ರಾಮವನ್ನಾಗಿ ಮಾಡುವೆ ಎಂದು ಗುರುಮಠಕಲ್ ಶಾಸಕ ಶರಣಗೌಡ ಕಂದಕೂರ ಹೇಳಿದರು.
ತಾಲೂಕಿನ ಗಣಪೂರ ಗ್ರಾಮದಲ್ಲಿ ಅಕ್ಷರ ಅವಿಷ್ಕಾರದಡಿಯಲ್ಲಿ 3 ಕೋಣೆಗಳ ನಿರ್ಮಾಣ, ಯಲ್ಹೇರಿ ಗ್ರಾಮದಲ್ಲಿ 54ಲಕ್ಷ ರೂ., ಕಂದಕೂರ ಗ್ರಾಮದಲ್ಲಿ 46ಲಕ್ಷ ರೂ., ಗಿಡ್ಡಿಬಂಡಾ ತಾಂಡಾದಲ್ಲಿ 36ಲಕ್ಷ, ಯಲ್ಹೇರಿ ತಾಂಡಾದಲ್ಲಿ 16ಲಕ್ಷರೂ. ಕಾಮಗಾರಿಗಳು ಸೇರಿದಂತೆ 3ಕೋಟಿ ರೂ.ಗೂ ಅಧಿಕ ಕಾಮಗಾರಿಗಳಿಗೆ ಚಾಲನೆ ನೀಡಿ ಮಾತನಾಡಿದರು.
ನಿಮ್ಮೂರಿನ ಋಣ ನನ್ನ ಮ್ಯಾಲಿದೆ, ಕಳೆದ ಹಲವು ದಶಕಗಳಿಂದ ಇರುವ ವ್ಯವಸ್ಥೆಯನ್ನೇ ಬದಲಾಯಿಸಿದ ನಿಮ್ಮೂರಿನ ಜನರನ್ನು ನಾನು ಮರೆಯಲ್ಲ, ಸ್ವಾತಂತ್ರ್ಯ ನಂತರ ಇಲ್ಲಿಯರೆಗೆ ನಡೆಯದ ಅಭಿವೃದ್ಧಿ ಕೆಲಸಗಳನ್ನು ನಾನು ಮಾಡಿ ತೋರಿಸುತ್ತೇನೆ, ಜನ ಬದಲಾವಣೆ ಬಯಸಿದ್ದಾರೆ ಎನ್ನುವುದನ್ನು ಮತ್ತೊಮ್ಮೆ ಸಾಬೀತು ಮಾಡುತ್ತೇನೆ ಎಂದು ಹೇಳಿದರು.
ಇಲ್ಲಿಯವರೆಗೆ ಶಿಕ್ಷಣ, ಆರೋಗ್ಯ ಕ್ಷೇತ್ರಕ್ಕೆ ಹೆಚ್ಚಿನ ಅನುದಾನ ನೀಡಿ ನನ್ನ ಮತಕ್ಷೇತ್ರದಲ್ಲಿ ಅಭಿವೃದ್ಧಿ ಕೈಗೊಂಡಿದ್ದೇನೆ, ಈಗ ಬೇಸಿಗೆ ಪ್ರಾರಂಭವಾಗಿದೆ ಯಾವುದೇ ಕಾರಣಕ್ಕೂ ಜನತೆಗೆ ಕುಡಿಯುವ ನೀರಿನ ಸಮಸ್ಯೆಯಾಗಬಾರದು, ಜಿಲ್ಲಾಡಳಿತ ಮತ್ತು ಜಿಲ್ಲಾ ಪಂಚಾಯತ್ಗೆ ಪತ್ರ ಬರೆದಿದ್ದೇನೆ, ಸ್ಥಳಿಯವಾಗಿ ಪಿಡಿಒಗಳು ಹಾಗೂ ಇಒಗಳು ಯಾವುದೇ ಕಾರಣಕ್ಕೂ ನೀರಿನ ತೊಂದರೆಯಾಗದಂತೆ ನೋಡಿಕೊಳ್ಳಬೇಕು ಎಂದು ಹೇಳಿದರು.
ಗುರುಮಠಕಲ್ ಮತಕ್ಷೇತ್ರದಲ್ಲಿ ಯಾವುದೇ ಶಾಲೆಯೂ ಮೂಲಸೌಕರ್ಯದಿಂದ ವಂಚಿತವಾಗಬಾರದು, ಶಿಕ್ಷಣಕ್ಕಾಗಿ ಎಷ್ಟು ಅನುದಾನ ಬೇಕು, ಅಷ್ಟು ಅನುದಾನ ತಂದು ಕೊಡಲು ನಾನು ಸಿದ್ದನಿದ್ದೇನೆ, ಇನ್ನೂ ಬೇರೆ ಬೇರೆ ಯಾವುದೇ ಯೋಜನೆಯಾದರೂ ಪರವಾಗಿಲ್ಲ ಶೌಚಾಲಯ, ಕುಡಿಯುವ ನೀರು ಸೇರಿದಂತೆ ಮೂಲಸೌಕರ್ಯಗಳ ಕೊರತೆಯಾಗದಂತೆ ಕ್ರಮಕೈಗೊಳ್ಳಬೇಕು ಎಂದು ಹೇಳಿದರು.
ಈ ಸಂದರ್ಭದಲ್ಲಿ ಜೆಡಿಎಸ್ ಜಿಲ್ಲಾಧ್ಯಕ್ಷರಾದ ಸುಭಾಶ್ಚಂದ್ರ ಕಟಕಟಿ, ಇಇ ಶಿವರಾಜ ಹುಡೇದ, ಡಾ.ವೀರೇಶ ಜಾಕಾ, ಪಿಎಲ್ಡಿ ಬ್ಯಾಂಕ್ ಅಧ್ಯಕ್ಷರಾದ ರಾಮಣ್ಣ ಕೋಟಗೇರಾ, ಜಿ.ತಮ್ಮಣ್ಣ, ರವಿಪಾಟೀಲ, ಮಲ್ಲಿಕಾರ್ಜುನ ಅರುಣಿ, ಈಶ್ವರ ನಾಯಕ, ನರಸಪ್ಪ ಕವಡೆ, ಗ್ರಾಪಂ ಅಧ್ಯಕ್ಷರಾದ ಬಸಪ್ಪ ದಳಪತಿ, ಪಿಡಿಒ ಮಲ್ಲಿಕಾರ್ಜುನ ಸಜ್ಜನ್ ಸೇರಿದಂತೆ ಗ್ರಾಪಂ ಅಧ್ಯಕ್ಷರು, ಪಿಡಿಗಳು ಇತರರಿದ್ದರು.
ಗುರುಮಠಕಲ್ ಮತಕ್ಷೇತ್ರದ ಶಾಸಕ ಶರಣಗೌಡ ಕಂದಕೂರವರು ಕ್ಷೇತ್ರಭೇಟಿ ಸಮಯದಲ್ಲಿ ಅನಪೂರ ಗ್ರಾಮಕ್ಕೆ ತೆರಳಿದ ಸಂದರ್ಭದಲ್ಲಿ ಗ್ರಾಮದ ಜಯಮ್ಮರವರು ಕಳೆದ 5 ತಿಂಗಳಿಂದ ತಮಗೆ ರೇಷನ್ (ಪಡಿತರ) ಬಂದ್ ಮಾಡಿದ್ದಾರೆ ಎಂದು ಗಮನಕ್ಕೆ ತಂದಿದ್ದರು.
ತಕ್ಷಣವೇ ಸ್ಪಂದಿಸಿದ ಶಾಸಕ ಶರಣಗೌಡ ಕಂದಕೂರ ಆಹಾರ ಮತ್ತು ಪಡಿತರ ಇಲಾಖೆ ಅಧಿಕಾರಿಗಳನ್ನು ಸಂಪರ್ಕಿಸಿ ಕೂಡಲೇ ಜಯಮ್ಮನಿಗೆ ರೇಷನ್ ವಿತರಿಸಲು ಕ್ರಮಕೈಗೊಳ್ಳುವಂತೆ ಸೂಚನೆ ನೀಡಿದ್ದರು.
ಶಾಸಕರ ಆದೇಶಕ್ಕೆ ಸ್ಪಂದಿಸಿದ ಆಹಾರ ಮತ್ತು ಪಡಿತರ ಸರಬರಾಜು ಇಲಾಖೆ ಅಧಿಕಾರಿಗಳು ಅನಪೂರ ಗ್ರಾಮದ ಜಯಮ್ಮನಿಗೆ ಒಂದೇ ದಿನದಲ್ಲಿ ದಾಖಲಾತಿಗಳನ್ನು ಪರಿಶೀಲಿಸಿ, ಜಯಮ್ಮನಿಗೆ ಪಡಿತರ ವಿತರಿಸಿದ್ದಾರೆ.







