ಯಾದಗಿರಿ: ಒಳಮೀಸಲಾತಿ ಜಾರಿಗೆ ವಿಳಂಬ ಖಂಡಿಸಿ ಮಾದಿಗರ ಬೃಹತ್ ಪ್ರತಿಭಟನೆ
ಕಾಲಹರಣ ಮಾಡಿದರೇ ತಕ್ಕ ಪಾಠ: ನಾದ್ ಇಟಗಿ ಎಚ್ಚರಿಕೆ

ಯಾದಗಿರಿ: ಒಳಮೀಸಲಾತಿ ಜಾರಿಗೊಳಿಸಲು ವಿಳಂಬ ಮಾಡುತ್ತಿರುವ ರಾಜ್ಯ ಸರ್ಕಾರದ ವಿರುದ್ದ ಮತ್ತು ಕೂಡಲೇ ಜಾರಿಗೊಳಿಸುವಂತೆಯೇ ಆಗ್ರಹಿಸಿ ಮಾದಿಗ ಸಮಾಜದ ಜಿಲ್ಲೆಯ ಸಾವಿರಾರು ಜನರು ಶುಕ್ರವಾರ ಬೃಹತ್ ಪ್ರತಿಭಟನಾ ಪಾದಯಾತ್ರೆ ನಡೆಸಿ, ಜಿಲ್ಲಾಧಿಕಾರಿಗಳ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿದರು.
ಅಲೆಮಾರಿ,ಅರೆಅಲೆಮಾರಿ ಅಭಿವೃದ್ಧಿ ನಿಗಮದ ಮಾಜಿ ಅಧ್ಯಕ್ಷ ದೇವೇಂದ್ರನಾಥ ನಾದ್ ಮತ್ತು ನಗರಸಭೆ ಸದಸ್ಯ ಹಣಮಂತ ಇಟಗಿ ನೇತೃತ್ವದಲ್ಲಿ ಬೆಳಗ್ಗೆ ತಹಸಿಲ್ ಕಚೇರಿ ಬಳಿ ಜಮಾಯಿಸಿದ ಮಾದಿಗ ಸಮಾಜದ ಸಾವಿರಾರು ಜನರು ಜೈ ಮಾದಿಗ, ಜೈ ಜೈ ಮಾದಿಗ ಎಂಬ ಘೋಷಣೆಗಳನ್ನು ಕೂಗಿ ಒಳಮೀಸಲಾತಿಗಾಗಿ ಆಗ್ರಹಿಸಿದರು. ಅಲ್ಲಿಂದ ಹೊರಟ ಪ್ರತಿಭಟನಾ ಪಾದಯಾತ್ರೆ ಶಾಸ್ತ್ರಿ ಚೌಕ ಮೂಲಕ ನೇತಾಜಿ ಸರ್ಕಲ್ ಬಳಿ ಬಂದು ಜಮಾಗೊಂಡಿತು.
ಈ ವೇಳೆ ಮಾತನಾಡಿದ ದೇವೇಂದ್ರನಾಥ ನಾದ್, ಹಣಮಂತ ಇಟಗಿ ಅವರು, ಕಳೆದ ಮೂವತ್ತು ವರ್ಷಗಳಿಂದ ನಡೆಸಿದ ವಿವಿಧ ಹಂತದ ಹೋರಾಟಗಳ ಫಲವಾಗಿ ಸುಪ್ರೀಂಕೋರ್ಟ್ ಕಳೆದ ಹಲವಾರು ತಿಂಗಳ ಹಿಂದೆಯೇ ಒಳಮೀಸಲಾತಿ ಜಾರಿ ಮಾಡುವಂತೆಯೇ ಆದೇಶ ನೀಡಿದೆ. ಆದರೇ ಸಿಎಂ ಸಿದ್ದರಾಮಯ್ಯ ಅವರು ಕೆಲವರ ಒತ್ತಡಕ್ಕೆ ಮಣಿದು ಇಲ್ಲದೊಂದು ನೆಪ ಹೇಳಿ ಮುಂದಕ್ಕೆ ಹಾಕುವ ಮೂಲಕ ಮಾದಿಗ ಸಮಾಜಕ್ಕೆ ಘೋರ ಅನ್ಯಾಯ ಮಾಡುತ್ತಿದ್ದಾರೆಂದು ಆರೋಪಿಸಿದರು.
ದೇಶದ ಬೇರೆ, ಬೇರೆ ರಾಜ್ಯಗಳಲ್ಲಿ ಈಗಾಗಲೇ ಒಳಮೀಸಲಾತಿ ಜಾರಿ ಮಾಡಲಾಗಿದೆ. ಅಲ್ಲಿ ಇರದ ತೊಂದರೆ ನಮ್ಮ ರಾಜ್ಯದಲ್ಲಿ ಅಂತಾದ್ದೇನು ತೊಂದರೆ ಇದೆ ಎಂದು ಅವರು ಪ್ರಶ್ನಿಸಿದರು.
ಸಂವಿಧಾನಬದ್ದ ಹಕ್ಕು ಪಡೆಯಲು ಮೂರು ದಶಕಗಳ ಕಾಲ ಹೋರಾಟವೇ ಆಗಿದೆ. ಎಷ್ಟೋ ಜನರು ಇದಕ್ಕಾಗಿಯೇ ಜೀವನ ಮುಡುಪಿಟ್ಟು ಇಹಲೋಕ ತ್ಯಜಿಸಿದ್ದಾರೆ. ಇದು ಸಿಎಂ ಸಿದ್ದರಾಮಯ್ಯ ಅವರಿಗೆ ಅರ್ಥ ಆಗಬೇಕು. ದೂರದಲ್ಲಿ ಕುಳಿತಿರುವ ಯಾರೋದೋ ಮಾತು ಕೇಳಿ ಕಾಲಹರಣ ಮಾಡುವ ಮೂಲಕ ಈ ದೊಡ್ಡ ಸಮಾಜಕ್ಕೆ ಮಾಡುತ್ತಿರುವ ಅನ್ಯಾಯಕ್ಕೆ ಮುಂದಿನ ದಿನಗಳಲ್ಲಿ ತಕ್ಕ ಪಾಠ ಕಲಿಸಬೇಕಾಗುತ್ತದೆ ಎಂದು ದೇವೇಂದ್ರನಾಥ ಮತ್ತು ಹಣಮಂತ ಅವರು ಎಚ್ಚರಿಸಿದರು.
ಕಾರಣ, ಇನ್ನೂ ನಮ್ಮ ಸಹನೆಕಟ್ಟೆ ಒಡೆಯುವ ಮುಂಚೆಯೇ ಕೂಡಲೇ ಒಳಮೀಸಲಾತಿ ಜಾರಿ ಮಾಡಿ ನಮ್ಮ ಹಕ್ಕು ನಮಗೆ ಕೊಡಬೇಕೆಂದು ಒತ್ತಾಯಿಸಿದರು.
ದೇವಿಂದ್ರನಾಥ ನಾದ, ಚೆನ್ನಯ್ಯ ಮಾಳಿಕೇರಿ ಹಣಮಂತ ಇಟಗಿ, ಮಲ್ಲಣ್ಣ ದಾಸನ್ನಕೇರಿ, ಭೀಮಾಶಂಕರ್ ಬಿಲ್ಲವ. ವಾಸುದೇವ ಕಟ್ಟಿಮನಿ, ಬಸವರಾಜ್ ಹಗರಟಗಿ, ದಾನಪ್ಪ ಕಟ್ಟಿಮನಿ, ತಾಯಪ್ಪ ಬಡ್ಡೇಪಲ್ಲಿ, ಸಿದ್ದಣ್ಣ ಮೇಲಿನಮನಿ, ಮಲ್ಲಿಕಾರ್ಜುನ ಜಲ್ಲಪ್ಪನೋರ್, ನಿಂಗಪ್ಪ ವಡ್ಡನಲ್ಲಿ, ಆಂಜೆನೇಯ ಬಬಲಾದ, ಭೀಮಾಶಂಪ್ಪ ಗುಡಸೇ,, ಬಸವರಾಜ್ ಮೇತ್ರಿ, ಭೀಮರಾಯ ಬಂದಲ್ಲಿ, ಯಲ್ಲಪ್ಪ ಮಾಳಕೇರಿ, ಮಂಜುನಾಥ್ ದಾಸನ ಕೇರಿ ಸೇರಿದಂತೆಯೇ ಇತರರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.
ಜಿಲ್ಲೆಯ ಸುರಪುರ, ಶಹಾಪುರ, ಯಾದಗಿರಿ, ವಡಗೇರಾ, ಕೊಡೆಕಲ್, ಕೆಂಭಾವಿ, ಗುರುಮಠಕಲ್, ಹುಣಸಗಿ ತಾಲೂಕುಗಳಿಂದ ಅಪಾರ ಸಂಖ್ಯೆಯಲ್ಲಿ ಸಮಾಜದ ಜನರು ಈ ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು. ಜಿಲ್ಲಾಡಳಿತದ ಮೂಲಕ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಿದರು. ಸ್ಥಳಕ್ಕೆ ಆಗಮಿಸಿದ ಡಿಸಿ ಹರ್ಷಲ್ ಭೋಯರ್ ಅವರಿಗೆ ಮುಖಂಡರು ಮನವಿ ಸಲ್ಲಿಸಿದರು.
ಮನವಿ ಸ್ವೀಕರಿಸಿದ ಡಿಸಿ ಕೂಡಲೇ ಸರ್ಕಾರಕ್ಕೆ ಕಳುಹಿಸುವುದಾಗಿ ಹೇಳಿದರು.







