ಖರ್ಗೆ ರ್ಯಾಲಿ ನಡೆಸಿದ 'ಸ್ಥಳ ಶುದ್ಧೀಕರಣ' : ಮಾಜಿ ಸಚಿವ ರಾಜಗೌಡ ಆಕ್ರೋಶ

ಯಾದಗಿರಿ: ಎಐಸಿಸಿ ಅಧ್ಯಕ್ಷ ಡಾ. ಮಲ್ಲಿಕಾರ್ಜುನ ಖರ್ಗೆ ಅವರು ಭಾಷಣ ಮಾಡಿದ ಸ್ಥಳವನ್ನು ಜಾತಿ ಕಾರಣಕ್ಕೆ ಶುದ್ಧೀಕರಣ ಮಾಡಿದ್ದರೆ ಅದು ಅತ್ಯಂತ ಮೂರ್ಖತನದ ಕೃತ್ಯ. ಇಂತಹ ಘಟನೆಗಳು ಸಮಾಜಕ್ಕೆ ತಪ್ಪು ಸಂದೇಶ ನೀಡುತ್ತವೆ. ಯಾರೇ ಈ ಕೃತ್ಯ ಎಸಗಿದ್ದರೂ ಅವರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಬೇಕು ಎಂದು ಬಿಜೆಪಿ ಮಾಜಿ ಸಚಿವ ನರಸಿಂಹ ನಾಯಕ (ರಾಜುಗೌಡ) ಆಗ್ರಹಿಸಿದರು.
ಶುಕ್ರವಾರ ಸಂಜೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಡಾ.ಬಿ.ಆರ್. ಅಂಬೇಡ್ಕರ್ ಅವರು ನೀಡಿದ ಸಂವಿಧಾನದಲ್ಲಿ ಎಲ್ಲರಿಗೂ ಸಮಾನ ಮತದಾನದ ಹಕ್ಕು ಇದೆ. ಹಿಂದೂತ್ವ ಬಲಿಷ್ಠವಾಗಬೇಕಾದರೆ ಎಸ್ಸಿ, ಎಸ್ಟಿ ಸೇರಿದಂತೆ ಎಲ್ಲ ದಲಿತ ಸಮುದಾಯಗಳನ್ನು ಸಮಾನವಾಗಿ ಒಳಗೊಳ್ಳಬೇಕು. ಅವರನ್ನು ದೂರವಿಟ್ಟು ಹಿಂದೂತ್ವದ ಬಗ್ಗೆ ಮಾತನಾಡುವುದರಲ್ಲಿ ಅರ್ಥವಿಲ್ಲ ಎಂದರು.
ದೇವಸ್ಥಾನ ನಿರ್ಮಾಣದ ಸಂದರ್ಭದಲ್ಲಿ ಕಲ್ಲು ಹೊಡೆಯುವುದು, ಗೋಡೆ ಕಟ್ಟುವುದು ಸೇರಿದಂತೆ ಹಲವು ಕೆಲಸಗಳಿಗೆ ದಲಿತರ ಶ್ರಮ ಪಡೆಯಲಾಗುತ್ತದೆ. ಆದರೆ ಅದೇ ಸಂದರ್ಭದಲ್ಲಿ ಜಾತಿಯ ಹೆಸರಿನಲ್ಲಿ ಅವರನ್ನು ದೂರವಿಡುವುದು ಯಾವ ನ್ಯಾಯ ಎಂದು ಪ್ರಶ್ನಿಸಿದರು.
ವಿಜಯನಗರದಲ್ಲಿ ಸ್ವಾತಂತ್ರ್ಯ ದಿನಾಚರಣೆಯ ಧ್ವಜಾರೋಹಣಕ್ಕೆ ಗೈರಾದ ಸಚಿವ ಝಮೀರ್ ಅಹ್ಮದ್ ಖಾನ್ ಅವರನ್ನು ಮುಖ್ಯಮಂತ್ರಿ ಅವರು ಸಚಿವ ಸ್ಥಾನದಿಂದ ವಜಾಗೊಳಿಸಬೇಕು. ಅನಾರೋಗ್ಯ ಅಥವಾ ಅನಿವಾರ್ಯ ಕಾರಣವಿದ್ದರೆ ಬೇರೆ ವಿಚಾರ. ಆದರೆ ಧ್ವಜಾರೋಹಣಕ್ಕೆ ಗೈರಾಗಲು ಸಮಂಜಸ ಕಾರಣವಿಲ್ಲದಿದ್ದರೆ ಮುಖ್ಯಮಂತ್ರಿ ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸಬೇಕು ಎಂದರು.
ವಾಲ್ಮೀಕಿ ಅಭಿವೃದ್ಧಿ ನಿಗಮದ ಹಣ ಅಕ್ರಮ ವರ್ಗಾವಣೆ ಪ್ರಕರಣದ ತನಿಖೆ ನಡೆಯುತ್ತಿರುವ ಸಂದರ್ಭದಲ್ಲೇ ಮಾಜಿ ಸಚಿವ ಬಿ. ನಾಗೇಂದ್ರ ಅವರನ್ನು ಮತ್ತೆ ಸಚಿವ ಸಂಪುಟಕ್ಕೆ ಸೇರ್ಪಡೆ ಮಾಡಿರುವುದು ನಾಚಿಕೆಗೇಡಿನ ಸಂಗತಿ. ಅವರ ರಾಜೀನಾಮೆ ಪಡೆಯುವವರೆಗೆ ಬಿಜೆಪಿ ಹೋರಾಟ ಮುಂದುವರಿಸಲಿದೆ ಎಂದು ಹೇಳಿದರು.
ಆಗಸ್ಟ್ 17ರಿಂದ ರಾಜ್ಯದ ಎಲ್ಲ ಜಿಲ್ಲಾಧಿಕಾರಿ ಕಚೇರಿಗಳ ಎದುರು ಪ್ರತಿಭಟನೆ ನಡೆಸಲು ತೀರ್ಮಾನಿಸಲಾಗಿದೆ. ಆಗಸ್ಟ್ 23ರಿಂದ ದೇವದುರ್ಗದಿಂದ ಮಾನವಿ ಮೂಲಕ ಬಳ್ಳಾರಿವರೆಗೆ ಪಾದಯಾತ್ರೆ ನಡೆಸುವ ಕುರಿತು ಪಕ್ಷದ ಸಭೆಯಲ್ಲಿ ಚರ್ಚಿಸಲಾಗಿದೆ. ಈ ಹೋರಾಟದಲ್ಲಿ ಭ್ರಷ್ಟಾಚಾರ ಆರೋಪ ಎದುರಿಸುತ್ತಿರುವ ಎಲ್ಲ ಸಚಿವರ ರಾಜೀನಾಮೆಗೂ ಆಗ್ರಹಿಸಬೇಕು ಎಂದು ಹೇಳಿದರು.
ಗೃಹ ಸಚಿವ ಪ್ರಿಯಾಂಕ್ ಖರ್ಗೆ ಅವರು ಆರೆಸ್ಸೆಸ್ ಬೆನ್ನು ಬೀಳುವುದನ್ನು ಬಿಟ್ಟು ರಾಜ್ಯದ ಅಭಿವೃದ್ಧಿಗೆ ಒತ್ತು ನೀಡಬೇಕು ಎಂದು ರಾಜುಗೌಡ ಸಲಹೆ ನೀಡಿದರು.
“ನಾನು ದಲಿತ ಸಂಘರ್ಷ ಸಮಿತಿಯಿಂದ ಬಂದವನು. ಆರೆಸ್ಸೆಸ್ ದಲಿತ ವಿರೋಧಿ ಎಂದು ಆರೋಪಿಸುವುದಾದರೆ ಉದಾಹರಣೆಗಳನ್ನು ನೀಡಿ. ತಪ್ಪಿದ್ದರೆ ನಾವೇ ಪ್ರಶ್ನಿಸುತ್ತೇವೆ. ಆದರೆ ಸುಮ್ಮನೆ ಸಂಘದ ಹೆಸರನ್ನು ಜಪಿಸುವುದು ಬೇಡ” ಎಂದು ಹೇಳಿದರು.
ಯುವ ನಾಯಕರು ಮುಂದಿನ ಪೀಳಿಗೆಗೆ ಮಾರ್ಗದರ್ಶಕರಾಗಬೇಕು. ಅನಗತ್ಯ ಪ್ರಚಾರದ ಬದಲು ಉತ್ತಮ ಕೆಲಸ ಮಾಡಿ, ಆ ಕೆಲಸವೇ ಪ್ರಚಾರ ತರುವಂತೆ ಕಾರ್ಯನಿರ್ವಹಿಸಬೇಕು ಎಂದು ರಾಜುಗೌಡ ಸಲಹೆ ನೀಡಿದರು.






