ಯಾದಗಿರಿ ಜಿಲ್ಲೆಯನ್ನು ಬರ ಪೀಡಿತ ಜಿಲ್ಲೆ ಘೋಷಿಸಲು ಸೆ. 7 ರಂದು ರಸ್ತೆ ಬಂದ್: ಅಯ್ಯಣ್ಣ

ಸುರಪುರ: ಸಂಪೂರ್ಣ ಯಾದಗಿರಿ ಜಿಲ್ಲೆಯನ್ನು ಬರಪೀಡಿತ ಎಂದು ಘೋಷಿಸಲು ಆಗ್ರಹಿಸಿ ಸೆ. 7 ರಂದು ತಾಲೂಕಿನ ದೇವಪುರ ಕ್ರಾಸ್ ಹೆದ್ದಾರಿ ಬಂದ್ ಮಾಡಿ ಪ್ರತಿಭಟನೆ ನಡೆಸಲಾಗುವುದು ಎಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಸಾಮೂಹಿಕ ನಾಯಕತ್ವ ಸಂಘಟನೆಯ ಜಿಲ್ಲಾಧ್ಯಕ್ಷ ಅಯಣ್ಣ ಹಾಲಬಾವಿ ತಿಳಿಸಿದರು.
ಪಟ್ಟಣದ ಟೈಲರ್ ಮಂಜಿಲ್ ಪ್ರವಾಸಿ ಮಂದಿರದಲ್ಲಿ ಸಂಘಟನೆಯ ಸಭೆ ನಡೆಸಿ ಮಾತನಾಡಿ, ಈ ವರ್ಷ ಮಳೆ ಇಲ್ಲದೆ ಸಂಪೂರ್ಣ ಬರಗಾಲ ಆವರಿಸಿರುವುದರಿಂದ ಹಲವಾರು ಬಾರಿ ಸಂಬಂಧಪಟ್ಟ ಅಧಿಕಾರಿಗಳಿಗೆ, ತಹಶೀಲ್ದಾರರಿಗೆ,ಕೃಷಿ ಇಲಾಖೆ ಅಧಿಕಾರಿಗಳಿಗೆ ಮತ್ತು ಜಿಲ್ಲಾ ಉಸ್ತುವಾರಿ ಸಚಿವರಿಗೆ, ಶಾಸಕರಿಗೆ ಯಾದಗಿರಿ ಜಿಲ್ಲೆಯನ್ನು ಬರಗಾಲ ಪೀಡಿತ ಎಂದು ಘೋಷಣೆ ಮಾಡಿ ಎಂದು ಮನವಿ ಪತ್ರ ಕೊಟ್ಟರು ಕೂಡ ಯಾದಗಿರಿ ಜಿಲ್ಲೆಯಲ್ಲಿ ಬರವಂತ ಶಹಾಪುರ ಮಾತ್ರ ಬರಗಾಲ ಎಂದು ಘೋಷಣೆ ಆಗಿರುತ್ತದೆ. ಆದರೆ ಇನ್ನುಳಿದ ತಾಲೂಕುಗಳಲ್ಲಿ ಅಧಿಕಾರಿಗಳು, ಜಿಲ್ಲಾ ಉಸ್ತುವಾರಿ ಅವರ ಗಮನಕ್ಕೆ ತಂದರು ಕೂಡ ಇದರಲ್ಲಿ ತಾರತಮ್ಯ ಮಾಡಿರುತ್ತಾರೆ .ಇದೇ ಮೂರು ನಾಲ್ಕು ವರ್ಷಗಳಿಂದ ಅತಿವೃಷ್ಟಿಯ ಅನಾವೃಷ್ಟಿ ಯಿಂದ ರೈತರು ಸಂಕಷ್ಟದಲ್ಲಿ ಇದ್ದಾರೆ. ಆದ್ದರಿಂದ ಕೂಡಲೇ ಪುನಃ ಸರ್ವೇ ಮಾಡಿ ಸರ್ಕಾರ ಇಡೀ ಜಿಲ್ಲೆಯನ್ನು ಬರಗಾಲ ಪೀಡಿತ ಎಂದು ಘೋಷಣೆ ಮಾಡಬೇಕೆಂದು ನಮ್ಮ ಸಂಘಟನೆ ಒತ್ತಾಯಿಸುತ್ತಿದೆ. ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ತಾಲೂಕು ಬಂದ್ ಕಾರ್ಯಕ್ರಮ, ಜಿಲ್ಲಾ ಬಂದ್ ಕಾರ್ಯಕ್ರಮದ ಹೋರಾಟಗಳನ್ನು ಹಮ್ಮಿಕೊಳ್ಳುವುದು ಅನಿವಾರ್ಯವಾಗುತ್ತದೆ. ಆದ್ದರಿಂದ ತಾವು ಕೂಡಲೇ ರೀ ಸರ್ವೆ ಮಾಡಿಸಿ ಬರಗಾಲ ಘೋಷಣೆ ಮಾಡಬೇಕೆಂದು ಕೇಳಿಕೊಳ್ಳುತ್ತೇವೆ.
ಸೆಪ್ಟೆಂಬರ್ 7 ರಂದು ಬೆಳಿಗ್ಗೆ ನಡೆಯುವ ರಸ್ತೆ ತಡೆಯಲ್ಲಿ ನಮ್ಮ ಸಂಘಟನೆಯ ಜಿಲ್ಲಾ ಸಮಿತಿಯ ಪದಾಧಿಕಾರಿಗಳು, ಸದಸ್ಯರು,ತಾಲೂಕ ಸಮಿತಿಯ ಅಧ್ಯಕ್ಷರು ಸದಸ್ಯರು, ಹೋಬಳಿ ಸಮಿತಿಯ ಅಧ್ಯಕ್ಷರು ಸದಸ್ಯರು, ಗ್ರಾಮ ಸಮಿತಿಯ ಅಧ್ಯಕ್ಷರು ಸದಸ್ಯರು ಹಾಗೂ ಇನ್ನುಳಿದ ಎಲ್ಲ ಸಂಘಟನೆಯ ಮುಖಂಡರುಗಳು ಈ ಹೋರಾಟದಲ್ಲಿ ಭಾಗವಹಿಸಿ ಹೋರಾಟವನ್ನು ಯಶಸ್ವಿಗೊಳಿಸಬೇಕೆಂದು ಮನವಿ ಮಾಡುವುದಾಗಿ ತಿಳಿಸಿದರು.
ಸಭೆಯಲ್ಲಿ ತಾಲೂಕು ಅಧ್ಯಕ್ಷ ಹನುಮಂತರಾಯ ಚಂದ್ಲಾಪುರ, ವೆಂಕಟೇಶಗೌಡ ಕುಪಗಲ್,ಸಾಹೇಬಗೌಡ ಮದಲಿಂಗನಾಳ, ಭೀಮಣ್ಣ ತಿಪ್ಪನಟಿಗಿ, ತಿಪ್ಪಣ್ಣ ಜಂಪಾ, ಮಲ್ಲಣ್ಣ ಹಾಲಬಾವಿ, ಹನುಮಗೌಡ ನಾರಾಯಣಪುರ,ಪ್ರಭು ದೋರಿ ಹರಳಹಳ್ಳಿ, ಭೀಮರಾಯ ವಕ್ಕಲಿಗ, ಶಿವನಗೌಡ ರುಕ್ಮಾಪುರ ಸೇರಿದಂತೆ ಅನೇಕರು ಭಾಗವಹಿಸಿದ್ದರು.






