ಸೈದಾಪುರ | ಕೈಗಾರಿಕಾ ತ್ಯಾಜ್ಯದಿಂದ ಹಳ್ಳದಲ್ಲಿ ಮೀನುಗಳ ಸಾವು : ವಾರದ ಗಡುವು ನೀಡಿ ಪ್ರತಿಭಟನೆ ಎಚ್ಚರಿಕೆ

ಸೈದಾಪುರ : ಯಾದಗಿರಿ ತಾಲೂಕಿನ ಕಡೇಚೂರ ಕೈಗಾರಿಕಾ ಪ್ರದೇಶದಲ್ಲಿರುವ ರಾಸಾಯನಿಕ ಕಾರ್ಖಾನೆಗಳಿಂದ ವಿಷಕಾರಿ ದ್ರವ ತ್ಯಾಜ್ಯ ಚರಂಡಿ ಮೂಲಕ ಹರಿದು ಬಾಡಿಯಾಳ ಗ್ರಾಮದ ಹಳ್ಳ, ಅಲ್ಲಿಂದ ಗೂಡೂರ ಹಳ್ಳದ ಮೂಲಕ ಭೀಮಾ ನದಿಗೆ ಸೇರುತ್ತಿದೆ. ಇದರ ಪರಿಣಾಮ ಕಳೆದ ಒಂದು ವಾರದಿಂದ ಹಳ್ಳದಲ್ಲಿ ಮೀನು ಹಾಗೂ ಇತರ ಜಲಚರಗಳು ಸತ್ತು ಕೊಳೆತು ದುರ್ನಾತ ಬೀರುತ್ತಿದ್ದು, ಗ್ರಾಮಸ್ಥರು ಸಾಂಕ್ರಾಮಿಕ ರೋಗದ ಭೀತಿಯಲ್ಲಿ ಬದುಕುವಂತಾಗಿದೆ ಎಂದು ಸಾಮಾಜಿಕ ಹೋರಾಟಗಾರ ಉಮೇಶ ಕೆ. ಮುದ್ನಾಳ್ ಆರೋಪಿಸಿದರು.
ಗ್ರಾಮಸ್ಥರ ದೂರಿನ ಮೇರೆಗೆ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ ಬಳಿಕ ಮಾತನಾಡಿದ ಅವರು, ಒಂದು ವಾರದಿಂದ ಮೀನುಗಳು ಸತ್ತು ದುರ್ನಾತ ಹರಡುತ್ತಿದ್ದರೂ ಸಂಬಂಧಪಟ್ಟ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿಲ್ಲ. ಗ್ರಾಮಸ್ಥರ ಸಮಸ್ಯೆಗಳನ್ನು ಆಲಿಸುವುದು ಹಾಗೂ ಜನ–ಜಾನುವಾರುಗಳ ಆರೋಗ್ಯದ ಬಗ್ಗೆ ಕಾಳಜಿ ವಹಿಸುವಲ್ಲಿ ಅಧಿಕಾರಿಗಳು ಸಂಪೂರ್ಣ ನಿರ್ಲಕ್ಷ್ಯ ತೋರಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಈ ಭಾಗದ ಹಳ್ಳದ ನೀರನ್ನು ಗ್ರಾಮಸ್ಥರು ಹಾಗೂ ಜಾನುವಾರುಗಳು ಕುಡಿಯಲು ಮತ್ತು ಕೃಷಿ ಜಮೀನುಗಳಿಗೆ ನೀರಾವರಿಗಾಗಿ ಬಳಸುತ್ತಿದ್ದರು. ಆದರೆ ಕಡೇಚೂರ ಕೈಗಾರಿಕೆಗಳು ಆರಂಭವಾದ ಬಳಿಕ ಮಳೆ ಬಂದಾಗಲೆಲ್ಲ ಚರಂಡಿ ಮೂಲಕ ಹರಿಯುವ ರಾಸಾಯನಿಕ ತ್ಯಾಜ್ಯ ಹಳ್ಳಕ್ಕೆ ಸೇರುತ್ತಿದ್ದು, ನೀರು ವಿಷಪೂರಿತವಾಗುತ್ತಿದೆ. ಇದರಿಂದ ನೀರು ಬಳಕೆಗೆ ಯೋಗ್ಯವಾಗದೆ ರೈತರು ಹಾಗೂ ಗ್ರಾಮಸ್ಥರು ಸಂಕಷ್ಟ ಅನುಭವಿಸುತ್ತಿದ್ದಾರೆ ಎಂದು ಹೇಳಿದರು.
ಸ್ಥಳದಲ್ಲೇ ಬ್ರಿಡ್ಜ್–ಕಂ–ಬ್ಯಾರೇಜ್ ಬಳಿ ರೈತರೊಂದಿಗೆ ಪ್ರತಿಭಟನೆ ನಡೆಸಿದ ಅವರು, ಜಿಲ್ಲಾಡಳಿತಕ್ಕೆ ಒಂದು ವಾರದ ಗಡುವು ನೀಡಿದರು. ಈ ಅವಧಿಯೊಳಗೆ ಸಮಸ್ಯೆಗೆ ಶಾಶ್ವತ ಪರಿಹಾರ ಕಲ್ಪಿಸದಿದ್ದರೆ ಯಾದಗಿರಿ–ರಾಯಚೂರು ಮುಖ್ಯ ರಸ್ತೆಯನ್ನು ತಡೆದು ಬೃಹತ್ ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಸಿದರು.
ಬಾಡಿಯಾಳ ಗ್ರಾಮದ ಹಳ್ಳಕ್ಕೆ 2013ರಲ್ಲಿ ನಿರ್ಮಿಸಲಾದ ಬ್ರಿಡ್ಜ್–ಕಂ–ಬ್ಯಾರೇಜ್ನ್ನು ಸಣ್ಣ ನೀರಾವರಿ ಇಲಾಖೆ ಸಮರ್ಪಕವಾಗಿ ನಿರ್ವಹಿಸದೆ ನಿರ್ಲಕ್ಷ್ಯ ವಹಿಸಿದೆ. ಸಂಬಂಧಪಟ್ಟ ಅಧಿಕಾರಿಗಳ ವಿರುದ್ಧ ಜಿಲ್ಲಾಧಿಕಾರಿಗಳು ಕಠಿಣ ಕ್ರಮ ಕೈಗೊಂಡು ರೈತರಿಗೆ ಅನುಕೂಲವಾಗುವಂತೆ ಶಾಶ್ವತ ಪರಿಹಾರ ಕಲ್ಪಿಸಬೇಕು ಎಂದು ಸಾಮಾಜಿಕ ಹೋರಾಟಗಾರ ಉಮೇಶ ಕೆ. ಮುದ್ನಾಳ್ ಒತ್ತಾಯಿಸಿದರು.
ಇದೇ ಸಂದರ್ಭದಲ್ಲಿ ವಿಶ್ವನಾಥ್ ಗಂಟೆ ಬಾಡಿಯಲ್, ಮಲ್ಲೇಶಿ, ಗೋವಿಂದ ಡಾಕ್ಟರ್ ಶಾಂತವೀರ ಮಕ್ಥಲ್, ವೆಂಕಟೇಶ್ ಕಾವಲಿ ತಿಮ್ಮಾಜಿ, ಬಸವರಾಜ್ ಚನ್ನು ಕಳೂರ್, ಕೊತ್ತಪಲ್ಲಿ ಶಿವು ಬಾಯ್ಲ್, ದೇವೋಗಂಟಿ, ದೇವಪುತ್ರ ತಿಮ್ಮೊಜಿ, ಶರಣಪ್ಪ ಜಿನ್ಕೆರಿ, ಹಣಮಂತರಾಯ ತಿಮ್ಮಾಜಿ, ಶಿವಶಂಕರ ತಿಮೋಜಿ, ಕಾವಲಿ ಎಲ್ಲಪ್ಪ, ರಾಮಣ್ಣ ಗೂಡೂರ್, ಶಿವಪುತ್ರ ತಿಮೋಜಿ, ಕಾಶೀನಾಥ್, ದೇವು ಚಂದಾಪುರ್, ರಾಮಣ್ಣ, ಸೂಗಪ್ಪ ಬೈನ್, ಯಂಕಪ್ಪ ತಿಮ್ಮಜಿ, ಯಂಕಪ್ಪ ಚಂದಾಪುರ್, ಸಿದ್ದಪ್ಪ ಶಿವಪುರ, ಬನ್ನಪಾನೂರ್, ಅಶೋಕ್ ಗಣಪುರ್, ಮಂಜುನಾಥ್ ಕಾವಲಿ, ಬಸವರಾಜ್ ಕವಲಿ, ಭೀಮು ಗುಡೇಬಲ್ಲೂರ್, ಅಯ್ಯಪ್ಪ ಇರ್ಜನ್, ಬಸವರಾಜ ಇರ್ಜನ್, ಬನ್ನಪ್ಪ ನೀಡುಗುಂದಿ, ಖಾಜಾ ಹುಸೇನ್, ಸೇರಿದಂತೆ ಅನೇಕ ರೈತರು ಇದ್ದರು






