ಶಹಾಪುರ | ಶಾಸಕ ಶರಣಬಸಪ್ಪಗೌಡ ದರ್ಶನಾಪುರರಿಗೆ ಸಚಿವ ಸ್ಥಾನ ನೀಡಲು ಚಾಲಕರ ಒಕ್ಕೂಟದಿಂದ ಆಗ್ರಹ

ಶಹಾಪುರ: ಶಹಾಪುರ ಕ್ಷೇತ್ರದ ಶಾಸಕ ಹಾಗೂ ಮಾಜಿ ಸಚಿವ ಶರಣಬಸಪ್ಪಗೌಡ ದರ್ಶನಾಪುರ ಅವರಿಗೆ ರಾಜ್ಯ ಸಚಿವ ಸಂಪುಟದಲ್ಲಿ ಉನ್ನತ ಸ್ಥಾನಮಾನ ನೀಡಬೇಕು ಎಂದು ಆಗ್ರಹಿಸಿ ಕರ್ನಾಟಕ ಚಾಲಕರ ಒಕ್ಕೂಟದಿಂದ ಪಟ್ಟಣದಲ್ಲಿ ಪ್ರತಿಭಟನೆ ನಡೆಸಲಾಯಿತು.
ನಗರದ ಬಸವೇಶ್ವರ ವೃತ್ತದಲ್ಲಿ ನಡೆದ ಪ್ರತಿಭಟನೆಯಲ್ಲಿ ಕರ್ನಾಟಕ ಚಾಲಕರ ಒಕ್ಕೂಟದ ಜಿಲ್ಲಾ ಅಧ್ಯಕ್ಷ ಬಸವರಾಜ ಎಂ. ಚಟ್ನಳ್ಳಿ ಮಾತನಾಡಿ, ಶರಣಬಸಪ್ಪಗೌಡ ದರ್ಶನಾಪುರ ಅವರು ಐದು ಬಾರಿ ಶಾಸಕರಾಗಿ ಹಾಗೂ ಮೂರು ಬಾರಿ ಸಚಿವರಾಗಿ ಸೇವೆ ಸಲ್ಲಿಸಿದ್ದು, ರಾಜ್ಯದ ಜನರ ಅಭಿವೃದ್ಧಿಗೆ ಮಹತ್ವದ ಕೊಡುಗೆ ನೀಡಿದ್ದಾರೆ. ಹೀಗಾಗಿ ಅವರಿಗೆ ಸಚಿವ ಸಂಪುಟದಲ್ಲಿ ಸೂಕ್ತ ಸ್ಥಾನಮಾನ ನೀಡಬೇಕು ಎಂದು ಒತ್ತಾಯಿಸಿದರು.
ಪ್ರತಿಭಟನೆ ಬಳಿಕ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರಿಗೆ ತಹಸೀಲ್ದಾರ್ ಮೂಲಕ ಮನವಿ ಪತ್ರ ಸಲ್ಲಿಸಲಾಯಿತು.
ಕರ್ನಾಟಕ ಚಾಲಕರ ಒಕ್ಕೂಟದ ತಾಲೂಕು ಅಧ್ಯಕ್ಷ ಹೊನ್ನಪ್ಪ ಜಂಗಳಿ ಮಾತನಾಡಿ, ಕಲ್ಯಾಣ ಕರ್ನಾಟಕ ಭಾಗದ ಅಭಿವೃದ್ಧಿಗೆ ದರ್ಶನಾಪುರ ಅವರ ಕೊಡುಗೆ ಅಪಾರವಾಗಿದೆ. ಸಚಿವರಾಗಿದ್ದ ಅವಧಿಯಲ್ಲಿ ಜಿಲ್ಲೆಗೆ ಹಲವು ಅಭಿವೃದ್ಧಿ ಕಾರ್ಯಗಳನ್ನು ತಂದಿದ್ದು, ಈ ಬಾರಿಯ ಸಚಿವ ಸಂಪುಟದಲ್ಲೂ ಅವರಿಗೆ ಅವಕಾಶ ಕಲ್ಪಿಸಬೇಕು ಎಂದು ಆಗ್ರಹಿಸಿದರು.
ಆಟೋ ಚಾಲಕರ ಒಕ್ಕೂಟದ ಜಿಲ್ಲಾ ಅಧ್ಯಕ್ಷ ಮಲ್ಲಿಕಾರ್ಜುನ್ ಸಾಂಗ್ಲಿಯಾನ ಮಾತನಾಡಿ, ಸಂಕಷ್ಟದ ಸಂದರ್ಭಗಳಲ್ಲಿ ಚಾಲಕರ ನೆರವಿಗೆ ನಿಂತ ಜನನಾಯಕ ದರ್ಶನಾಪುರ ಅವರು ಈ ಭಾಗದ ಅಭಿವೃದ್ಧಿ ಹಾಗೂ ಜನಸೇವೆಗೆ ಸದಾ ಆದ್ಯತೆ ನೀಡಿದ್ದಾರೆ. ಇಂತಹ ಜನಪ್ರಿಯ ನಾಯಕರಿಗೆ ಸಚಿವ ಸ್ಥಾನ ನೀಡುವ ಮೂಲಕ ಸರ್ಕಾರ ಗೌರವ ನೀಡಬೇಕು ಎಂದು ಒತ್ತಾಯಿಸಿದರು.
ಪ್ರತಿಭಟನೆಯಲ್ಲಿ ಚಾಲಕರ ಒಕ್ಕೂಟದ ಪದಾಧಿಕಾರಿಗಳು, ಆಟೋ ಚಾಲಕರು ಹಾಗೂ ಬೆಂಬಲಿಗರು ಭಾಗವಹಿಸಿ ಶರಣಬಸಪ್ಪಗೌಡ ದರ್ಶನಾಪುರ ಅವರಿಗೆ ಸಚಿವ ಸ್ಥಾನ ನೀಡುವಂತೆ ಆಗ್ರಹಿಸಿದರು.
ಈ ಸಂದರ್ಭದಲ್ಲಿ ಗೊಡ್ಸ್ ಚಾಲಕರ ಒಕ್ಕೂಟ ಜಿಲ್ಲಾ ಅಧ್ಯಕ್ಷರ ಮಹಿಫಲಾರೆಡ್ಡಿ, ಜಿಲ್ಲಾ ಉಪಾಧ್ಯಕ್ಷ ಚಿಕ್ಕಣ್ಣ ಕಂಬಾರ, ತಾಲೂಕ ಕರ್ನಾಟಕ ಚಾಲಕರ ಒಕ್ಕೂಟ ಶಹಾಪೂರ ಉಪಾಧ್ಯಕ್ಷ ಹಣಮಂತ ಕೋರ್ನೆ, ಮಹ್ಮದ್ ಇಸ್ಮಾಯಿಲ್, ಪ್ರಭು ಕೊರವರ್, ಸಂತೋಷ ಮದ್ರಿಕಿ, ಲಾಲು ದೋರನಹಳ್ಳಿ, ಶಿವು ಕಾಡಂಗೇರಾ, ಮಲ್ಲು ಬಾಂತಹಾಳ, ಬಸವರಾಜ ಹೀರೆಗೌಡ್ರು, ಅಂದು ಕನ್ಯಕೋಳೂರು, ಮಾಹಾದೇವಪ್ಪ ಹೊಸ್ಮನಿ, ಧರ್ಮಸಿಂಗ್, ಮಂಜುನಾಥ ಬಿ.ಗುಡಿ, ಸುರಪುರ ತಾಲೂಕ ಅಧ್ಯಕ್ಷ ದೇವ ನಾಯಕ, ಅಭಿವೃದ್ಧಿ ಜಾದವ, ಸಿದ್ದಣ್ಣ ಆಲ್ದಾಳ, ಎಚ್ ಎಮ್ ಪಾಟೀಲ್, ರವಿ ಕಾಂಗ್ರೆಸ್, ಅಂಬಣ್ಣ ಮುಂತಾದ ಚಾಲಕರು ಇದ್ದರು.






