ಶಹಾಪುರ | ಸಮಾಜದ ಸ್ವಾಸ್ಥ್ಯ ಕಾಪಾಡಲು ಬದ್ಧರಾಗೋಣ : ಶರಣಪ್ಪ ಸಲಾದಪುರ

ಶಹಾಪುರ: ಸಮಾಜದ ಸ್ವಾಸ್ಥ್ಯ ನಿರ್ಮಾಣದಲ್ಲಿ ಧಾರ್ಮಿಕ ಕ್ಷೇತ್ರಗಳ ಪ್ರತಿನಿಧಿಗಳ ಹಾಗೂ ಸ್ವಾಮೀಜಿಗಳ ಪಾತ್ರ ಪ್ರಮುಖವಾಗಿದೆ ಎಂದು ಕರ್ನಾಟಕ ರಾಜ್ಯ ಮದ್ಯಪಾನ ಸಂಯಮ ಮಂಡಳಿ ಅಧ್ಯಕ್ಷ ಶರಣಪ್ಪ ಸಲಾದಪುರ ಹೇಳಿದರು.
ನಗರದಲ್ಲಿ ಗುರುವಾರ ನಾನಾ ಮಠಗಳಿಗೆ ಭೇಟಿ ನೀಡಿ ಬಳಿಕ ಮಾತನಾಡಿದರು.
ಮಠಮಾನ್ಯಗಳಿಗೆ ಭೇಟಿ ನೀಡುವ ಭಕ್ತರಿಗೆ ಶ್ರೀಗಳು ಹೆಚ್ಚಿನ ಮುತುವರ್ಜಿ ವಹಿಸಿ ಆಣೆಪ್ರಮಾಣವನ್ನು ಮಾಡಿಸುವ ಮೂಲಕ ಭಕ್ತರನ್ನು ಮದ್ಯಪಾನ ಸೇರಿ ನಾನಾ ವ್ಯಸನಗಳಿಂದ ಮುಕ್ತರನ್ನಾಗಿಸಬೇಕು. ಇದಲ್ಲದೆ ಜನರು ಸಹ ಸ್ವಯಂ ಜಾಗೃತರಾಗುವ ಮೂಲಕ ಆರೋಗ್ಯವಂತ ಸಮಾಜ ನಿರ್ಮಾಣಕ್ಕೆ ಬದ್ಧರಾಗೋಣ ಎಂದು ಮನವಿ ಮಾಡಿದರು.
ಹಲವು ಮಠಗಳಿಗೆ ಭೇಟಿ :
ಕುಂಬರಗಿರಿ ಮಠದ ಶ್ರೀ ಷಟಸ್ಥಲ ಬ್ರಹ್ಮಿ ಸೂಗುರೇಶ್ವರ ಶಿವಾಚಾರ್ಯರರು, ಹೋತಪೇಟದ ಕೈಲಾಸ ಮಠದ ಶ್ರೀಶಿವಲಿಂಗೇಶ್ವರ ಶರಣರು ಸೇರಿದಂತೆ ಹಲವುಮಠಾಧೀಶರನ್ನು ಭೇಟಿ ಮಾಡಿ ಮಂಡಳಿ ಉದ್ದೇಶ, ಗುರಿಗಳ ಕುರಿತು ಚರ್ಚೆ ನಡೆಸಿದರು.
ಕರ್ನಾಟಕ ರಾಜ್ಯ ಮದ್ಯಪಾನ ಸಂಯಮ ಮಂಡಳಿ ಅಧ್ಯಕ್ಷರಾಗಿ ಶರಣಪ್ಪ ಸಲಾದಪುರ ಪ್ರಪ್ರಥಮ ಬಾರಿಗೆ ತವರೂ ಕ್ಷೇತ್ರ ಶಹಾಪುರಕ್ಕೆ ಭೇಟಿ ನೀಡಿದ ಹಿನ್ನೆಲೆಯಲ್ಲಿ ಮಠಾಧೀಶರು, ಮುಖಂಡರು ಹಾಗೂ ಅಭಿಮಾನಿಗಳು ಸನ್ಮಾನಿಸಿದರು.







